ಕರ್ನಾಟಕ

karnataka

ಮೇಕೆದಾಟು ಹೋರಾಟಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ

By

Published : Jan 7, 2022, 1:02 PM IST

Updated : Jan 7, 2022, 2:12 PM IST

ಮೇಕೆದಾಟು ಹೋರಾಟಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ನೀಡುತ್ತದೆ ಎಂದು ಪ್ರಮುಖ ನಟ -ನಟಿಯರು ಹೇಳಿದ್ದಾರೆ.

mukhyamantri chandru
ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ನಮ್ಮ ಹೋರಾಟ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ವಿರುದ್ಧ ಅಲ್ಲ. ನಮ್ಮ ನೀರಿಗಾಗಿ ಹೋರಾಟ ಅಷ್ಟೆ. ಮೇಕೆದಾಟು ಪಾದಯಾತ್ರೆ ಹಾಗೂ ಹೋರಾಟಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ನೀಡುತ್ತದೆ. ಈ ಹೋರಾಟಕ್ಕೆ ಪಕ್ಷಭೇದ ಇಲ್ಲ, ನಾವೆಲ್ಲರೂ ಬೆಂಬಲ ನೀಡುತ್ತೇವೆ ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹೇಳಿಕೆ ನೀಡಿದ್ದಾರೆ.

ಕುಡಿಯುವ ನೀರಿಗಾಗಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮಾಡುತ್ತಿರುವ ಹೋರಾಟಕ್ಕೆ ಈಗಾಗಲೇ ಹಲವು ರೈತಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಕೆಲವು ದಿನಗಳ ಹಿಂದಷ್ಟೇ ಡಿಕೆಶಿ ಅವರು ಚಿತ್ರೋದ್ಯಮದಿಂದ ಈ ಹೋರಾಟಕ್ಕೆ ಬೆಂಬಲ ಕೇಳಿದ್ದರು. ಹೀಗಾಗಿ ಈ ಬಗ್ಗೆ ಅಧ್ಯಕ್ಷ ಜಯರಾಜ್ ನೇತೃತ್ವದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿ ಚಂದ್ರು, ನಟಿಯಾರಾದ ಜಯಮಾಲ, ಉಮಾಶ್ರೀ, ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದ್ ಸೇರಿದಂತೆ ಇತರರು ಸಭೆಯಲ್ಲಿ ಭಾಗಿಯಾಗಿದ್ದರು.

ಹಿರಿಯ ನಟಿ ಹಾಗೂ ಶಾಸಕಿ ಉಮಾಶ್ರೀ

ಬಳಿಕ ಮಾತನಾಡಿದ ಚಂದ್ರು, ಸರ್ಕಾರದ ನಿಯಮಗಳನ್ನ ಅನುಸರಿಸಿ ನಾವು ಬೆಂಬಲ ಕೊಡುತ್ತೇವೆ. ಪಾದಯಾತ್ರೆಗೆ ಬರುವವರಿಗೆ ವ್ಯವಸ್ಥೆ ಮಾಡಿಕೊಡುತ್ತೇವೆ. ಸಾಮೂಹಿಕವಾಗಿ ಬಂದು ಈ ಹೋರಾಟದಲ್ಲಿ ಬಂದು ಭಾಗವಹಿಸೋಕೆ ಆಗುತ್ತಿಲ್ಲ. ಆದರೆ, ನೀರಿಗಾಗಿ ಹೋರಾಡುತ್ತಿರೋರ ಬೆಂಬಲಕ್ಕೆ ನಮ್ಮ ಇಡೀ ಚಿತ್ರರಂಗ ಬೆಂಬಲ ಕೊಡುತ್ತೆ. ಹೋರಾಟದ ಸಮಯದಲ್ಲಿ ನೂಕುನುಗ್ಗಲು ಹೆಚ್ಚಾಗುವ ಕಾರಣ ಕಲಾವಿದರು ಒಟ್ಟಿಗೆ ಹೋಗುವ ಬದಲಾಗಿ ವೈಯಕ್ತಿಕವಾಗಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ನಾವು ಜನರ ಋಣ ಸಂದಾಯ ಮಾಡಬೇಕು - ಉಮಾಶ್ರೀ

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ನಟಿ ಹಾಗೂ ಶಾಸಕಿ ಉಮಾಶ್ರೀ, ಮೇಕೆದಾಟು ಪಾದಯಾತ್ರೆ ಬಗ್ಗೆ ನಿಮಗೆಲ್ಲ ಗೊತ್ತಿದೆ. ಒಂದು ವಾರದಿಂದ ಈ ಹೋರಾಟಕ್ಕೆ ತಯಾರಿ ನಡೆದಿದೆ. ಇಂತಹ ಸಂದರ್ಭದಲ್ಲಿ ನಾವು ಜನರ ಋಣ ಸಂದಾಯ ಮಾಡಬೇಕು.

ಈಗ ಅವರಿಗೋಸ್ಕರ ನಮ್ಮ ಹೋರಾಟ ಇರಬೇಕು. ಹೇಗೆಲ್ಲ ಸಾಧ್ಯವಾಗುತ್ತೋ ಹಾಗೆ ನಮ್ಮ ಹೋರಾಟ ನೀಡಬೇಕು. ನಟ - ನಟಿಯರು, ಹಿರಿಯ ಕಲಾವಿದರು ಎಲ್ಲರೂ ಸಾಧ್ಯವಾದಷ್ಟು ಬೆಂಬಲ ಕೊಡಿ. ಪಾದಯಾತ್ರೆಗೆ ಬರಲು ಆಗಿಲ್ಲ ಎಂದರೆ ಮುಂದಿನ‌ ವಾರ ಹೋರಾಟಕ್ಕೆ ಬರಲೇಬೇಕು. ಎರಡು‌ ದಿನ ಕರ್ಫ್ಯೂ ಇರುತ್ತೆ ಅದು ಮುಗಿದ ಬಳಿಕ ಬೆಂಬಲ ಕೊಡಿ ಎಂದು ಕರೆ ನೀಡಿದ್ದಾರೆ.

ಈ ಹೋರಾಟ ಪಕ್ಷಾತೀತವಾಗಿರೋದ್ರಿಂದ ನಾವೆಲ್ಲಾ ಭಾಗಿ - ಜಯರಾಜ್

ಡಾ ರಾಜ್ ಕುಮಾರ್ ಕಾಲದಿಂದಲೂ ನೆಲ, ಜಲದ ಬಗ್ಗೆ ಫಿಲಂ ಚೇಂಬರ್ ಜೊತೆಯಾಗುತ್ತಾ ಬಂದಿದೆ. ಸದ್ಯ ಡಿಕೆ ಶಿವಕುಮಾರ್ ನೇತೃತ್ವದ ಮೇಕೆದಾಟು ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಬೆಂಬಲ ಕೊಡೋದು ನಮ್ಮ ಹಕ್ಕು. ಈ ಹೋರಾಟ ಪಕ್ಷಾತೀತ ಆಗಿರೋದ್ರಿಂದ ನಾವು ಭಾಗಿ ಆಗಬೇಕು ಎಂದು ಜಯರಾಜ್ ಹೇಳಿಕೆ ನೀಡಿದ್ದಾರೆ.

ತಮಿಳುನಾಡಿಗೆ 128 ಟಿಎಂಸಿ ಬಿಡಬೇಕು ಆದರೆ 400 ಟಿಎಂಸಿ ನೀರು ಹರಿಯುತ್ತಿದೆ. ಹೆಚ್ಚುವರಿಯಾಗಿ ಹರಿಯುತ್ತಿರುವ ನೀರಿಗಾಗಿ ನಾವು ಹೋರಾಡಬೇಕಿದೆ. ಇದು ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಹೋರಾಟ. ಬೆಂಗಳೂರು ಬೃಹದಾಕಾರವಾಗಿ ಬೆಳೆಯುತ್ತಿದೆ.

ಕುಡಿಯುವ ನೀರಿನ ಅವಶ್ಯಕತೆ ಹೆಚ್ಚುತ್ತಿದೆ ಇದನ್ನು ನೀಗಿಸಲು ಮೇಕೆದಾಟು ಯೋಜನೆ ಅನುಕೂಲವಾಗಲಿದೆ. ಇನ್ನು ಕೊರೊನಾ ನಿಯಮಗಳು ಇರುವುದರಿಂದ ಭೌತಿಕವಾಗಿ ನಾವೆಲ್ಲರೂ ಒಂದೇ ಬಾರಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಆದರೆ, ಒಂದೊಂದು ದಿನ ಅವರವರ ಅನುಕೂಲಕ್ಕೆ ತಕ್ಕಹಾಗೆ ಹೋರಾಟದಲ್ಲಿ ಭಾಗಿಯಾಗುತ್ತೇವೆ ಜಯರಾಜ್ ತಿಳಿಸಿದರು.

ಹಿರಿಯ ನಟಿ ಜಯಮಾಲ

ಇದನ್ನೂ ಓದಿ:‘ಕೈಲಾಗದ ಕಾಂಗ್ರೆಸ್ ನಾಯಕ ಮೈ ಪರಚಿಕೊಂಡ’...ಸುಳ್ಳು ಸಿದ್ದಯ್ಯನ ವರಸೆ ಹಾಗಿದೆ: ಟ್ವೀಟ್​ನಲ್ಲಿ ಜೆಡಿಎಸ್‍ ವಾಗ್ದಾಳಿ

ನಮ್ಮ ಹೋರಾಟ ಸರ್ಕಾರದ ಕಣ್ಣು ತೆರೆಸುವ ಹೋರಾಟ - ಜಯಮಾಲ

ಇನ್ನು ಹಿರಿಯ ನಟಿ ಜಯಮಾಲ ಮಾತನಾಡಿ, ಕಲಾವಿದರು ತಂತ್ರಜ್ಞರು ಸಾಹಿತಿಗಳು ಎಲ್ಲರೂ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯ ಸರ್ಕಾರ ಕರುಣೆ ನೆಪ ಹೇಳಿ ಹೋರಾಟ ತಡೆಯುವ ಪ್ರಯತ್ನ ಮಾಡುತ್ತಿದೆ. ರಾಜ್ಯ ಸರ್ಕಾರ ರಾಜಕೀಯ ಮಾಡುವುದು ಬಿಟ್ಟು ಹೋರಾಟಕ್ಕೆ ಬೆಂಬಲಿಸಲಿ.

ಜನಪರ ಕಾಳಜಿ ಇದ್ದರೆ ಯೋಜನೆಯನ್ನು ಬೇಗನೆ ಜಾರಿ ಮಾಡಲಿ. ನಮ್ಮ ಹೋರಾಟ ಸರ್ಕಾರದ ಕಣ್ಣು ತೆರೆಸುವ ಹೋರಾಟ. ಮೇಕೆದಾಟು ಯೋಜನೆಗೆ ಯಾವುದೇ ಅಡೆತಡೆಗಳಿಲ್ಲ. ಕೋರ್ಟಿನಲ್ಲಿ ಯಾವುದೇ ಕೇಸುಗಳು ಇಲ್ಲ ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಯೋಜನೆಯ ಅನುಷ್ಠಾನಕ್ಕೆ ಮುಂದಾಗಬೇಕು. ನಮ್ಮ ನೀರನ್ನ ನಮಗೆ ಬಿಡಿ ಎಂದು ಹೋರಾಡುವ ಪರಿಸ್ಥಿತಿ ಬಂದಿದೆ. ನೀವು ನಮ್ಮನ್ನ ಬಂಧಿಸಲು ಹೊರಟಿದ್ದೀರ. ಆದರೆ ಅದು ನಮಗೆ ಶ್ರೀರಕ್ಷೆಯಾಗಲಿದೆ ಎಂದರು.

ಎಲ್ಲ ಕಲಾವಿದರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ - ಸಾರಾ ಗೋವಿಂದ್

ಸಾರಾ ಗೋವಿಂದ್ ಮಾತನಾಡಿ, ಕಳೆದ ಡಿಸೆಂಬರ್ 31 ರಂದು ಡಿಕೆ ಶಿವಕುಮಾರ್ ಫಿಲಂ ಚೇಂಬರ್​ಗೆ ಬಂದು ಬೆಂಬಲ ಕೇಳೀದ್ದರು. ಇದು ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿ. ಕುಡಿಯುವ ನೀರಿನ ಹಾಹಾಕಾರ ಇದೆ. ಕೇಂದ್ರ ಸರ್ಕಾರ ಯಾವುದೇ ಒತ್ತಡಗಳಿಗೆ ಮಣಿಯದೆ ಮೇಕೆದಾಟು ಯೋಜನೆಯನ್ನು ಜಾರಿಗೆ ತರಬೇಕು.

ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಕಲಾವಿದರ ಸಂಘದ ಅಧ್ಯಕ್ಷ ರಾಕ್ ಲೈನ್ ವೆಂಕಟೇಶ್ ಅವರ ಮೂಲಕ ಎಲ್ಲ ಕಲಾವಿದರಿಗೂ ಹೋರಾಟದಲ್ಲಿ ಭಾಗಿಯಾಗಲು ಪತ್ರವನ್ನು ಕಳಿಸಲಾಗಿದೆ. ಎಲ್ಲ ಕಲಾವಿದರು ಹೋರಾಟಕ್ಕೆ ಬೆಂಬಲವನ್ನು ಸೂಚಿಸಿದ್ದಾರೆ.

ಕೊರೊನಾ ನಿಯಮಗಳು ಇರುವುದರಿಂದ ಅವರ ಅನುಕೂಲಕ್ಕೆ ತಕ್ಕಹಾಗೆ ಭಾಗಿಯಾಗುತ್ತಾರೆ. ಜನವರಿ 19ರಂದು ಸಮಾರೋಪ ಸಮಾರಂಭದಲ್ಲಿ ಎಲ್ಲಾ ಕಲಾವಿದರು, ತಂತ್ರಜ್ಞರು ಭಾಗಿಯಾಗುತ್ತೇವೆ. ಒಂಬತ್ತು ದಿನಗಳಲ್ಲಿ ಒಂದು ದಿನ ಭಾಗಿಯಾಗುತ್ತೇವೆ. ಹೋರಾಟಕ್ಕೆ ಮಾನಸಿಕವಾಗಿ ಭೌತಿಕವಾಗಿ ನಮ್ಮ ಬೆಂಬಲ ಇದೆ ಅಂದರು.

Last Updated :Jan 7, 2022, 2:12 PM IST

ABOUT THE AUTHOR

...view details