ಕರ್ನಾಟಕ

karnataka

ಅಣ್ಣಾವ್ರ ಕೀರ್ತಿ ಬೆಳಗಿಸಿದ ಪುತ್ರರು.. ಕನ್ನಡ ಚಿತ್ರಂಗದ ಕಳಸಪ್ರಾಯದಂತಿರುವ 'ದೊಡ್ಮನೆ'ಯ ಸಿನಿ ಜರ್ನಿ..

By

Published : Oct 29, 2021, 6:09 PM IST

ಡಾ.ರಾಜ್​​ಕುಮಾರ್ ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅವರ ಕುಟುಂಬದ ಇನ್ನಿತರರು ಇಂದು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ ಎಂದರೆ ಅದಕ್ಕೆ ಅಣ್ಣಾವ್ರು ಹಾಕಿಕೊಟ್ಟ ಮಾರ್ಗದರ್ಶನವೇ ಕಾರಣ..

interesting story about dr.Rajkumar family
ಇದು 'ದೊಡ್ಮನೆ'ಯ ಸಿನಿ ಯಶೋಗಾಥೆ

ಕನ್ನಡಿಗರ ಕಣ್ಮಣಿ, ನಟ ಸಾರ್ವಭೌಮ, ರಸಿಕರ ರಾಜ, ಗಾನ ಗಂಧರ್ವ, ಯೋಗ ರಾಜ, ಕನ್ನಡದ ಮಾಣಿಕ್ಯ ಹೀಗೆ ಲೆಕ್ಕವಿಲ್ಲದಷ್ಟು ಬಿರುದುಗಳನ್ನು ಹೊಂದಿರುವ ಡಾ. ರಾಜ್​​​​​​​​​ಕುಮಾರ್ ಇಂದಿಗೂ ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ನೆಲೆಸಿದ್ದಾರೆ.

ಆಡು ಮುಟ್ಟದ ಸೊಪ್ಪು ಇಲ್ಲ ಎನ್ನುವಂತೆ ಡಾ. ರಾಜ್​​​​​​​​​​​​​​​​​​​ಕುಮಾರ್ ಮಾಡಿರದ ಪಾತ್ರಗಳಿಲ್ಲ ಎಂಬ ಮಾತನ್ನು ಅಣ್ಣಾವ್ರು ನಿಜ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರ ಜೊತೆಗೆ ಅವರ ಕುಟುಂಬದಿಂದ ದೊಡ್ಡ ಕೊಡುಗೆ ಇದೆ.

ಡಾ.ರಾಜ್​​​​​​​​​​​​​​​​​​​ಕುಮಾರ್ ಅಂದಾಕ್ಷಣ ಅವರ ಸರಳ ವ್ಯಕ್ತಿತ್ವ ಹಾಗೂ ಅವರು ಅಭಿನಯಿಸಿರುವ ಸಿನಿಮಾಗಳ ನೆನಪಾಗುತ್ತದೆ. ನಟನಾಗಿ, ಗಾಯಕನಾಗಿ, ಕನ್ನಡ ಹೋರಾಟಗಾರನಾಗಿ ಗುರುತಿಸಿಕೊಂಡಿರುವ ನಟಸಾರ್ವಭೌಮ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ.

ಅಣ್ಣಾವ್ರ ನಂತರ ಅವರ ಕುಟುಂಬ ಕನ್ನಡ ಚಿತ್ರರಂಗದಲ್ಲಿ ಆಲದ ಮರದಂತೆ ವಿಶಾಲವಾಗಿ ಹಬ್ಬಿದೆ. ಡಾ. ರಾಜ್​​ಕುಮಾರ್ ಕುಟುಂಬವನ್ನು ಅಭಿಮಾನಿಗಳು ದೊಡ್ಮನೆ ಎಂದು ಕರೆಯಲು ಕಾರಣ ಡಾ.ರಾಜ್​ಕುಮಾರ್ ವಂಶವೃಕ್ಷ.

ಪಾರ್ವತಮ್ಮ ರಾಜ್​ಕುಮಾರ್

ಡಾ.ರಾಜ್​​ಕುಮಾರ್ ಸಿನಿಮಾ ಹೀರೋ ಆಗೋದಿಕ್ಕೆ ಮುಖ್ಯ ಕಾರಣ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ. ಇವರು ನಾಟಕಗಳಲ್ಲಿ ನಾಯಕನಾಗಿ ಪಾತ್ರ ಮಾಡುತ್ತಿದ್ದರು. ಅವರ ಬಳಿಕ ಪುತ್ರ ಮುತ್ತುರಾಜ್ ಕೂಡ ನಾಟಕಗಳಲ್ಲಿ ನಟಿಸುವ ಮೂಲಕ 'ಬೇಡರ ಕಣ್ಣಪ್ಪ' ಚಿತ್ರದಿಂದ ಸಿನಿಮಾರಂಗಕ್ಕೆ ಬಂದರು.

ಅಲ್ಲಿಂದ ಅವರು ಡಾ. ರಾಜ್​ಕುಮಾರ್ ಆಗಿ ಬದಲಾಗಿದ್ದು ಇತಿಹಾಸ. ಡಾ. ರಾಜ್​​ ಕುಟುಂಬದಲ್ಲಿ ಅವರನ್ನೂ ಸೇರಿಸಿ ನಾಲ್ವರು ಸ್ಟಾರ್​​​ಗಳಿದ್ರೆ ಒಬ್ಬರು ನಿರ್ಮಾಪಕ ಹಾಗೂ ಒಬ್ಬ ನಟರಿದ್ದಾರೆ. ಡಾ. ರಾಜ್​ ಸಹೋದರ ವರದಪ್ಪ ಕೂಡ ಸಿನಿಮಾದಲ್ಲಿ ನಟಿಸಿದ್ದರು. ಅಣ್ಣಾವ್ರು, ಶಿವರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್, ಪುನೀತ್ ರಾಜ್​ಕುಮಾರ್ ಸ್ಟಾರ್​​ ನಟರಾಗಿ ಹೆಸರು ಮಾಡಿದ್ದರೆ, ಪಾರ್ವತಮ್ಮ ರಾಜ್​ಕುಮಾರ್ ನಿರ್ಮಾಪಕಿಯಾಗಿ ಹೆಸರಾಗಿದ್ದಾರೆ.

ಪಾರ್ವತಮ್ಮ ರಾಜ್​​​​​​​​​​​​ಕುಮಾರ್ 1975ರಲ್ಲಿ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದರು. ತಮ್ಮ ಬ್ಯಾನರ್​​​​​​​​​​​​​​​​ನಲ್ಲಿ ನಿರ್ಮಿಸಿದ ಮೊದಲ ಸಿನಿಮಾ ಡಾ. ರಾಜ್​​​​​ಕುಮಾರ್ ಅಭಿನಯದ 'ತ್ರಿಮೂರ್ತಿ' ಅಲ್ಲಿಂದ ಪಾರ್ವತಮ್ಮ ರಾಜ್​​​​​ಕುಮಾರ್ ಸುಮಾರು 90ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಪಾರ್ವತಮ್ಮ ರಾಜ್ ಕುಮಾರ್ ಅವರು ತಮ್ಮ ಸಹೋದರರಾದ ಶ್ರೀನಿವಾಸ್, ಚಿನ್ನೇಗೌಡ ಹಾಗೂ ಎಸ್​​​.ಎ. ಗೋವಿಂದರಾಜ್ ಅವರನ್ನು ನಿರ್ಮಾಪಕರಾಗಿ ಬೆಳೆಸಿದರು. 70ರ ದಶಕದಲ್ಲಿ ಪಾರ್ವತಮ್ಮ ರಾಜ್​​​​​ಕುಮಾರ್ ಸಹೋದರ ಶ್ರೀನಿವಾಸ್ ಪ್ರೊಡಕ್ಷನ್ ಕೆಲಸಗಳನ್ನು ಮಾಡುವ ಮೂಲಕ ನಿರ್ಮಾಪಕರಾದ್ರು. ತಾಯಿಗೆ ತಕ್ಕ ಮಗ, ಶ್ರೀನಿವಾಸ ಕಲ್ಯಾಣ, ವಸಂತ ಗೀತ, ಎರಡು ಕನಸು, ಹೊಸ ಬೆಳಕು ಹೀಗೆ ಸಾಕಷ್ಟು ಸಿನಿಮಾಗಳನ್ನು ಶ್ರೀನಿವಾಸ್ ನಿರ್ಮಾಣ ಮಾಡಿದ್ದಾರೆ. ಆದರೆ, ಶ್ರೀನಿವಾಸ್ ಮಕ್ಕಳು ಚಿತ್ರರಂಗಕ್ಕೆ ಬರುವ ಮನಸ್ಸು ಮಾಡಲಿಲ್ಲ.

ಪುನೀತ್, ಶಿವರಾಜ್​ ಕುಮಾರ್, ರಾಘವೇಂದ್ರ ರಾಜ್​ಕುಮಾರ್

ಚಿನ್ನೇಗೌಡ ಹಾಗೂ ಎಸ್​​.ಎ. ಗೋವಿಂದ್ ರಾಜ್ ಇವತ್ತಿಗೂ ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣ ಮಾಡುವ ಮೂಲಕ ಬ್ಯುಸಿಯಾಗಿದ್ದಾರೆ. ಅದರಲ್ಲಿ ಚಿನ್ನೇಗೌಡ್ರು ಕೂಡ ಪಾರ್ವತಮ್ಮ ರಾಜ್ ಕುಮಾರ್ ಕಟ್ಟಿ ಬೆಳೆಸಿದ ವಜ್ರೇಶ್ವರಿ ಕಂಬೆನ್ಸ್​​​​ ಸಂಸ್ಥೆ ಮೂಲಕ ಪ್ರೊಡಕ್ಷನ್ಸ್​​​​​​​​​​ ಕೆಲಸಗಳನ್ನು ಮಾಡುತ್ತಾ ನಿರ್ಮಾಪಕರಾಗಿದ್ದಾರೆ.

ಮನ ಮೆಚ್ಚಿದ ಹುಡುಗಿ, ರೂಪಾಯಿ ರಾಜ, ಶ್ರೀ ಹರಿಕಥೆ, ಮಿಂಚಿನ ಓಟ ಹೀಗೆ ಹಲವು ಚಿತ್ರಗಳನ್ನು ಚಿನ್ನೇಗೌಡ ನಿರ್ಮಾಣ ಮಾಡಿದ್ದಾರೆ. ಅಷ್ಟೇ ಅಲ್ಲ, 2019ರಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಕೂಡ ಚಿನ್ನೇಗೌಡ ಕಾರ್ಯ ನಿರ್ವಹಿಸಿದ್ರು.

ಚಿನ್ನೇಗೌಡ ಅವರ ಕುಟುಂಬದಿಂದ ಅವರ ದೊಡ್ಡ ಮಗ ವಿಜಯ ರಾಘವೇಂದ್ರ ಬಾಲ ನಟ ಹಾಗೂ ಪೂರ್ಣ ಪ್ರಮಾಣದ ಹೀರೋ ಆಗಿ ಚಿತ್ರರಂಗದಲ್ಲಿ ಸಕ್ಸಸ್ ಕಂಡಿದ್ದಾರೆ. ವಿಜಯ ರಾಘವೇಂದ್ರ ಸಹೋದರ ಶ್ರೀಮುರಳಿ ಕೂಡ ಸಕ್ಸಸ್ ಫುಲ್ ಹೀರೋ ಆಗಿ ಚಿತ್ರರಂಗದಲ್ಲಿ ಸ್ಟಾರ್ ಡಮ್ ಗಿಟ್ಟಿಸಿಕೊಂಡಿದ್ದಾರೆ. ಇನ್ನು, ಶ್ರೀಮುರಳಿ ಹೀರೋ ಆದ್ರೆ, ಅವರ ಪತ್ನಿ ವಿದ್ಯಾ ಕೂಡ ಸಿನಿಮಾ ಕಾಸ್ಟ್ಯೂಮ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ.

ಪಾರ್ವತಮ್ಮ ಅವರ ಮತ್ತೊಬ್ಬ ಸಹೋದರ ಎಸ್​​​.ಎ. ಗೋವಿಂದರಾಜ್ ಭಕ್ತ ಪ್ರಹ್ಲಾದ, ಜ್ವಾಲಾಮುಖಿ, ಒಲವು ಗೆಲವು, ಹೊಸ ಬೆಳಕು ಹೀಗೆ ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ಅವರ ಮಕ್ಕಳು ಚಿತ್ರರಂಗಕ್ಕೆ ಬರುವ ಮನಸ್ಸು ಮಾಡಿಲ್ಲ.

ಕನ್ನಡ ಚಿತ್ರರಂಗದಲ್ಲಿ ನೂರು ಸಿನಿಮಾಗಳ ಸರದಾರ ಅಂತಾ ಕರೆಸಿಕೊಂಡಿರುವ ನಟ ಶಿವರಾಜ್ ಕುಮಾರ್. ಸದ್ಯಕ್ಕೆ ಶಿವಣ್ಣ ಕನ್ನಡ ಚಿತ್ರರಂಗದ ಸಾರಥಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಶಿವಣ್ಣನ ಚಿಕ್ಕ ಮಗಳು ನಿವೇದಿತಾ ಅಪ್ಪನ ಜೊತೆ 'ಅಂಡಮಾನ್' ಚಿತ್ರದಲ್ಲಿ ಮಿಂಚಿದ್ರು. ಈಗ ನಿವೇದಿತಾ ವೆಬ್ ಸೀರಿಸ್​​​​​ಗಳನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಶಿವಣ್ಣ ಪತ್ನಿ ಗೀತಾ ಕಾಸ್ಟ್ಯೂಮ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನು ಗೀತಾ ಶಿವರಾಜ್​​​​​​ಕುಮಾರ್ ಕುಟುಂಬದಿಂದ ಇಬ್ಬರು ಸಹೋದರರಾದ ಕುಮಾರ್​​​​​ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರೋದು ತಿಳಿದ ವಿಚಾರ.

ಶಿವರಾಜ್ ಕುಮಾರ್ ಬಳಿಕ, ರಾಘವೇಂದ್ರ ರಾಜ್​​​​​​​​​​​​ಕುಮಾರ್ ನಟನಾಗಿ, ನಿರ್ಮಾಪಕನಾಗಿ ಸಕ್ಸಸ್ ಕಂಡವರು. ಈಗ ಅವರ ಮೊದಲ ಮಗ ವಿನಯ್ ರಾಜ್ ಕುಮಾರ್ ಈಗಾಗ್ಲೇ ಇಂಡಸ್ಟ್ರಿಯಲ್ಲಿ ನಟನಾಗಿ ಗಮನ ಸೆಳೆದಿದ್ದಾರೆ. ಎರಡನೇ ಮಗ ಯುವ ರಾಜ್​​​​​​​​​​​​​​​​​​​ಕುಮಾರ್ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ನೀಡಲು ವೇದಿಕೆ ಸಿದ್ಧವಾಗಿದೆ.

ಗೀತಾ, ಪುನೀತ್ ಮತ್ತು ಶಿವಣ್ಣ

ಇವರ ಬಳಿಕ ಪವರ್ ಸ್ಟಾರ್ ಪುನೀತ್ ರಾಜ್​​​​​​​​​​​​​​​​​​​​​​​​​​​​​​​​​ಕುಮಾರ್ ಬಾಲನಟನಾಗಿ, ಸ್ಟಾರ್ ಹೀರೋ ಆಗಿ, ನಿರ್ಮಾಪಕರಾಗಿ, ಗಾಯಕರಾಗಿ, ನಿರೂಪಕರಾಗಿ ಕೂಡ ಹೆಸರು ಮಾಡಿದ್ದಾರೆ. ಪುನೀತ್ ಈಗ ತಮ್ಮದೇ ಆದ ಪಿಆರ್​ಕೆ ಪ್ರೊಡಕ್ಷನ್ಸ್ ಬ್ಯಾನರ್​ ನಿರ್ಮಿಸಿದ್ದಾರೆ. ಆ ಮೂಲಕ ಪತ್ನಿ ಅಶ್ವಿನಿ, ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಕವಲುದಾರಿ, ಲಾ, ಫ್ರೆಂಚ್ ಬಿರ್ಯಾನಿ ಸೇರಿ ಕೆಲ ಸಿನಿಮಾಗಳನ್ನು ತಮ್ಮ ಬ್ಯಾನರ್ ಮೂಲಕ ನಿರ್ಮಿಸಿದ್ದಾರೆ.

ಡಾ.ರಾಜ್​​​​​​ಕುಮಾರ್ ಹಾಗೂ ಪಾರ್ವತಮ್ಮ ರಾಜ್​​​​​​​​​​​​​​​​​​​ಕುಮಾರ್ ಎರಡನೇ ಮಗಳಾದ ಪೂರ್ಣಿಮಾ ಮದುವೆ ಆಗಿರುವುದು ನಟ ರಾಮ್ ಕುಮಾರ್ ಅವರನ್ನು. ರಾಮ್ ಕುಮಾರ್ ಒಂದು ಕಾಲದ ಸ್ಟಾರ್ ಹೀರೋ ಆಗಿ ಮಿಂಚಿದವರು. ಈಗ ಇವರ ಕುಟುಂಬದಿಂದ ಮಕ್ಕಳಾದ ಧೀರೆನ್ ರಾಮ್ ಕುಮಾರ್ ಮತ್ತು ಧನ್ಯಾ ರಾಮ್ ಕುಮಾರ್ ಸಿನಿಮಾ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ್ದಾರೆ.

ಡಾ.ರಾಜ್​​ಕುಮಾರ್ ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅವರ ಕುಟುಂಬದ ಇನ್ನಿತರರು ಇಂದು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ ಎಂದರೆ ಅದಕ್ಕೆ ಅಣ್ಣಾವ್ರು ಹಾಕಿಕೊಟ್ಟ ಮಾರ್ಗದರ್ಶನವೇ ಕಾರಣ.

ಓದಿ:ಮೊದಲ ಚಿತ್ರದ ಸಂಗೀತ ನಿರ್ದೇಶಕನ ಪಾರ್ಟಿಯೇ 'ಅಪ್ಪು' ಕೊನೆಯ ಪ್ರೋಗ್ರಾಂ..

ABOUT THE AUTHOR

...view details