ಕರ್ನಾಟಕ

karnataka

Explained: ಇಂಡೋನೇಷ್ಯಾ ತನ್ನ ರಾಜಧಾನಿ ಬದಲಾಯಿಸುತ್ತಿರೋದೇಕೆ?

By

Published : Mar 9, 2023, 4:08 PM IST

ಇಂಡೋನೇಷ್ಯಾದ ರಾಜಧಾನಿ ಜಕಾರ್ತಾ ನಿದಾನವಾಗಿ ಸಮುದ್ರದಲ್ಲಿ ಮುಳುಗುತ್ತಿದೆ. ಹೀಗಾಗಿ ದೇಶಕ್ಕೆ ಹೊಸ ರಾಜಧಾನಿ ನಿರ್ಮಾಣ ಮಾಡಲು ಇಂಡೋನೇಷ್ಯಾ ಸರ್ಕಾರ ಮುಂದಾಗಿದೆ.

Why is Indonesia moving its capital from Jakarta to Borneo?
Why is Indonesia moving its capital from Jakarta to Borneo

ಜಕಾರ್ತಾ : ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ಜನದಟ್ಟಣೆ ವಿಪರೀತವಾಗಿದ್ದು, ಮಾಲಿನ್ಯವೂ ಹೆಚ್ಚಾಗಿದೆ. ಇದರ ಜೊತೆಗೆ ಈ ನಗರ ಆಗಾಗ ಭೂಕಂಪಗಳಿಗೆ ಗುರಿಯಾಗುತ್ತಿರುತ್ತದೆ ಮತ್ತು ಇಡೀ ನಗರವನ್ನು ನಿಧಾನವಾಗಿ ಸಮುದ್ರ ಆವರಿಸಿಕೊಳ್ಳುತ್ತಿದೆ. ಹೀಗಾಗಿ ಸದ್ಯ ರಾಜಧಾನಿಯನ್ನು ಬದಲಾಯಿಸಲು ಇಂಡೋನೇಷ್ಯಾ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರದ ಭಾಗವಾಗಿ ಜಕಾರ್ತಾವನ್ನು ತೊರೆಯುವ ಹಾಗೂ ರಾಜಧಾನಿಯನ್ನು ಬೋರ್ನಿಯೊ ದ್ವೀಪಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ. ಹೊಸ ಮಹಾನಗರವು ಸುಸ್ಥಿರ ಅರಣ್ಯ ನಗರವಾಗಲಿದೆ ಎಂದು ಇಂಡೋನೇಷ್ಯಾದ ಅಧಿಕಾರಿಗಳು ಹೇಳುತ್ತಾರೆ. ಇದು ಪರಿಸರ ಸಂರಕ್ಷಣೆಯನ್ನು ಕೇಂದ್ರವಾಗಿಟ್ಟುಕೊಂಡು ಅಭಿವೃದ್ಧಿಯ ರೀತಿಯಲ್ಲಿ ಇರಲಿದೆ ಮತ್ತು 2045 ರ ವೇಳೆಗೆ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಮಟ್ಟಕ್ಕೆ ಇಳಿಸುವ ಗುರಿಯನ್ನು ಹೊಂದಿದೆ.

ಆದರೆ, ಹೊಸ ರಾಜಧಾನಿಯ ನಿರ್ಮಾಣದಿಂದ ಬೃಹತ್ ಅರಣ್ಯನಾಶವಾಗಲಿದೆ, ಒರಾಂಗುಟಾನ್‌ಗಳಂತಹ ಅಳಿವಿನಂಚಿನಲ್ಲಿರುವ ಪ್ರಭೇದಗಳ ಆವಾಸಸ್ಥಾನಗಳಿಗೆ ಕುತ್ತು ಎದುರಾಗಲಿದೆ ಮತ್ತು ಸ್ಥಳೀಯ ಸಮುದಾಯಗಳ ವಾಸಸ್ಥಾನಗಳಿಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಪರಿಸರವಾದಿಗಳು ಎಚ್ಚರಿಸಿದ್ದಾರೆ. ಹೊಸ ರಾಜಧಾನಿಯ ಪ್ರದೇಶಕ್ಕೆ ಎಲ್ಲರಿಗೂ ಈಗ ಅವಕಾಶ ನೀಡಲಾಗಿಲ್ಲ.

ಆದಾಗ್ಯೂ ಕೆಲವೇ ಕೆಲ ಅಂತಾರಾಷ್ಟ್ರೀಯ ಮಾಧ್ಯಮ ಪ್ರತಿನಿಧಿಗಳಿಗೆ ಇತ್ತೀಚೆಗೆ ಒಳಗೆ ಪ್ರವೇಶ ನೀಡಲಾಗಿತ್ತು. ರಾಜಧಾನಿಯನ್ನು ಏಕೆ ಬದಲಾಯಿಸಲಾಗುತ್ತಿದೆ, ಸರ್ಕಾರದ ಯೋಜನೆಗಳು ಮತ್ತು ಇದು ಪರಿಸರ ಅಳಿವಿನಂಚಿನಲ್ಲಿರುವ ಪ್ರಭೇದಗಳು ಮತ್ತು ಯೋಜನಾ ಸ್ಥಳದ ಸಮೀಪದಲ್ಲಿರುವ ಸ್ಥಳೀಯ ಸಮುದಾಯಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಒಂದು ಸಂಕ್ಷಿಪ್ತ ವರದಿ ಇಲ್ಲಿದೆ.

ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಏಕೆ ಬದಲಾಯಿಸುತ್ತಿದೆ? : ಜಕಾರ್ತಾವು ಸುಮಾರು 10 ಮಿಲಿಯನ್ ಜನರ ಆವಾಸಸ್ಥಾನವಾಗಿದೆ ಮತ್ತು ಇದಕ್ಕೂ ಮೂರು ಪಟ್ಟು ಹೆಚ್ಚಿನ ಜನ ಅದರ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇದು ವಿಶ್ವದ ಅತ್ಯಂತ ವೇಗವಾಗಿ ಮುಳುಗುತ್ತಿರುವ ನಗರ ಎಂದು ಹೆಸರಾಗಿದೆ. 2050 ರ ವೇಳೆಗೆ ನಗರದ ಮೂರನೇ ಒಂದು ಭಾಗದಷ್ಟು ಪ್ರದೇಶ ಸಮುದ್ರದ ನೀರಿನಿಂದ ಆವೃತವಾಗಬಹುದು ಎಂದು ಅಂದಾಜಿಸಲಾಗಿದೆ.

ಅನಿಯಂತ್ರಿತ ಅಂತರ್ಜಲ ಹೊರತೆಗೆಯುವಿಕೆಯೇ ಜಕಾರ್ತಾ ನಗರ ಮುಳುಗಲು ಮುಖ್ಯ ಕಾರಣವಾಗಿದೆ. ಇದರ ಜೊತೆಗೆ ಹವಾಮಾನ ಬದಲಾವಣೆಯಿಂದ ಜಾವಾ ಸಮುದ್ರ ಮಟ್ಟ ಹೆಚ್ಚಾಗುತ್ತಿರುವುದು ಕೂಡ ಪರಿಣಾಮ ಬೀರುತ್ತಿದೆ. ಜಕಾರ್ತಾದ ಗಾಳಿ ಮತ್ತು ಅಂತರ್ಜಲ ವಿಪರೀತ ಕಲುಷಿತಗೊಂಡಿದೆ. ನಗರದಲ್ಲಿ ಪದೇ ಪದೆ ಪ್ರವಾಹಗಳು ಉಂಟಾಗುತ್ತಿವೆ ಮತ್ತು ಬೀದಿಗಳು ಯಾವಾಗಲೂ ಸಂಚಾರ ದಟ್ಟಣೆಯಿಂದ ಬಂದ್ ಆಗಿರುತ್ತವೆ. ಸಂಚಾರ ದಟ್ಟಣೆಯಿಂದ ದೇಶದ ಆರ್ಥಿಕತೆಗೆ ವರ್ಷಕ್ಕೆ USD 4.5 ಶತಕೋಟಿ ಹಾನಿಯಾಗುತ್ತಿದೆ.

ಹೊಸ ರಾಜಧಾನಿ ಹೇಗಿರುತ್ತದೆ? : ಹೊಸ ರಾಜಧಾನಿಯ ಹೆಸರು ನುಸಂತಾರಾ. ಹಳೆಯ ಜಾವಾ ಭಾಷೆಯಲ್ಲಿ ನುಸಂತಾರಾ ಎಂದರೆ ದ್ವೀಪಸಮೂಹ ಎಂದರ್ಥ. ಇಲ್ಲಿ ಸರ್ಕಾರಿ ಕಟ್ಟಡಗಳು ಮತ್ತು ವಸತಿ ಸಮುಚ್ಚಯಗಳನ್ನು ಹೊಸದಾಗಿ ನಿರ್ಮಾಣ ಮಾಡಲಾಗುವುದು. ಆರಂಭಿಕ ಅಂದಾಜಿನ ಪ್ರಕಾರ 1.5 ಮಿಲಿಯನ್ ಸರ್ಕಾರಿ ನೌಕರರನ್ನು ಹೊಸ ನಗರಕ್ಕೆ ಸ್ಥಳಾಂತರಿಸಲಾಗುವುದು. ಈ ನಗರ ಜಕಾರ್ತಾದಿಂದ ಈಶಾನ್ಯಕ್ಕೆ ಸುಮಾರು 2,000 ಕಿಲೋಮೀಟರ್ (1,240 ಮೈಲುಗಳು) ದೂರದಲ್ಲಿದೆ. ಆದರೂ ಈ ನಗರಕ್ಕೆ ಎಷ್ಟು ಜನರನ್ನು ಸ್ಥಳಾಂತರಸಬೇಕು ಎಂಭ ಬಗ್ಗೆ ಸಚಿವಾಲಯಗಳು ಮತ್ತು ಸರ್ಕಾರಿ ಏಜೆನ್ಸಿಗಳು ಪರಿಶೀಲನೆ ಮಾಡುತ್ತಿವೆ.

ನುಸಂತಾರಾ ನ್ಯಾಷನಲ್ ಕ್ಯಾಪಿಟಲ್ ಅಥಾರಿಟಿಯ ಮುಖ್ಯಸ್ಥ ಬಾಂಬಾಂಗ್ ಸುಸಾಂಟೊನೊ ಮಾತನಾಡಿ, ಹೊಸ ರಾಜಧಾನಿಯು ಅರಣ್ಯ ನಗರ ಪರಿಕಲ್ಪನೆಯನ್ನು ಹೊಂದಲಿದೆ. ಇದರ 65 ಪ್ರತಿಶತದಷ್ಟು ಪ್ರದೇಶವನ್ನು ಮರು ಅರಣ್ಯೀಕರಣಗೊಳಿಸಲಾಗುವುದು. ಇಂಡೋನೇಷ್ಯಾದ ಸ್ವಾತಂತ್ರ್ಯ ದಿನಾಚರಣೆಯೊಂದಿಗೆ ಮುಂದಿನ ವರ್ಷ ಆಗಸ್ಟ್ 17 ರಂದು ನಗರವನ್ನು ಉದ್ಘಾಟಿಸುವ ನಿರೀಕ್ಷೆಯಿದೆ. ಆದಾಗ್ಯೂ, ನಗರದ ನಿರ್ಮಾಣದ ಅಂತಿಮ ಹಂತಗಳು 2045 ರವರೆಗೂ ಪೂರ್ಣಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಸ್ಥಳೀಯ ಸಮುದಾಯಗಳ ಮೇಲಾಗುವ ಪರಿಣಾಮವೇನು?: ತಲಾ 100 ಕ್ಕೂ ಹೆಚ್ಚು ಸ್ಥಳೀಯ ಬಾಲಿಕ್ ಜನರನ್ನು ಹೊಂದಿರುವ ಕನಿಷ್ಠ ಐದು ಗ್ರಾಮಗಳು ರಾಜಧಾನಿ ನಿರ್ಮಾಣದ ಕಾರಣದಿಂದ ಸ್ಥಳಾಂತರಗೊಳ್ಳುತ್ತಿವೆ. ಕಟ್ಟಡ ನಿರ್ಮಾಣ ವಿಸ್ತಾರವಾದಂತೆ ಹೆಚ್ಚಿನ ಹಳ್ಳಿಗಳನ್ನು ಬೇರುಸಮೇತ ಕಿತ್ತುಹಾಕುವ ಸಾಧ್ಯತೆಯಿದೆ. ಹೊಸ ರಾಜಧಾನಿಯ ನಿರ್ಮಾಣಕ್ಕೆ ಸ್ಥಳೀಯ ಸಮುದಾಯದ ಮುಖಂಡರು ಬೆಂಬಲ ನೀಡಿದ್ದಾರೆ ಮತ್ತು ನಗರಕ್ಕಾಗಿ ಭೂಮಿಯನ್ನು ನೀಡಿರುವ ಜನರಿಗೆ ಪರಿಹಾರ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ : ಜಕಾರ್ತಾ ವಿಮಾನ ದುರಂತ: ಕಾಕ್​​​ಪಿಟ್​​​ ವಾಯ್ಸ್​ ರೆಕಾರ್ಡರ್​​ ಡೌನ್ಲೋಡ್​​​ ಯಶಸ್ವಿ

ABOUT THE AUTHOR

...view details