ಕರ್ನಾಟಕ

karnataka

ನೇಪಾಳ ಭೂಕಂಪದಲ್ಲಿ ಮೃತರ ಸಂಖ್ಯೆ 157ಕ್ಕೆ ಏರಿಕೆ: ಮತ್ತೆ ನಡುಗಿದ ಭೂಮಿ

By ETV Bharat Karnataka Team

Published : Nov 5, 2023, 6:00 PM IST

Earthquakes hit Nepal: ನೇಪಾಳದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತರ ಸಂಖ್ಯೆ 157ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ, ಇಂದು ಬೆಳಗಿನ ಜಾವ ಮತ್ತೆ ಭೂಕಂಪದ ಅನುಭವವಾಗಿದೆ.

Another earthquake of 3.6 magnitude strikes Nepal after Friday's tremors kill 157 people
ನೇಪಾಳ ಭೂಕಂಪದಲ್ಲಿ ಮೃತರ ಸಂಖ್ಯೆ 157ಕ್ಕೆ ಏರಿಕೆ: ಮತ್ತೆ ನಡುಗಿದ ಭೂಮಿ

ಕಠ್ಮಂಡು (ನೇಪಾಳ): ನೆರೆಯ ನೇಪಾಳದಲ್ಲಿ ಪ್ರಬಲ ಭೂಕಂಪದಿಂದ 157ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಬೆನ್ನಲ್ಲೇ ಇಂದು ಮತ್ತೆ ಭೂಮಿ ನಡುಗಿದೆ. ಶುಕ್ರವಾರ ತಡರಾತ್ರಿ ಹಿಮಾಲಯದ ರಾಷ್ಟ್ರದಲ್ಲಿ 6.4 ತೀವ್ರತೆಯ ಭೂಕಂಪ ಉಂಟಾಗಿತ್ತು. ಇದರ ಬೆನ್ನಲ್ಲೇ ಇವತ್ತು ಬೆಳಗಿನ ಜಾವ 3.6 ತೀವ್ರತೆಯ ಮತ್ತೊಂದು ಭೂಕಂಪದ ಅನುಭವವಾಗಿದೆ.

ಇಂದು ಬೆಳಗ್ಗೆ 4:38ರ ಸುಮಾರಿಗೆ ರಾಜಧಾನಿ ಕಠ್ಮಂಡುವಿನಿಂದ ವಾಯುವ್ಯಕ್ಕೆ 169 ಕಿಮೀ ದೂರ, 10 ಕಿಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಆದರೆ, ಈ ಭೂಕಂಪದಲ್ಲಿ ಯಾವುದೇ ಸಾವು-ನೋವು, ಹಾನಿಯ ಬಗ್ಗೆ ವರದಿಯಾಗಿಲ್ಲ.

ಮನೆ-ಮಠ ಕಳೆದುಕೊಂಡ ಸಾವಿರಾರು ಜನ: ಶುಕ್ರವಾರ ರಾತ್ರಿ ಸಂಭವಿಸಿದ ಹಠಾತ್ ಭೂಕಂಪದಿಂದ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ನೂರಾರು ಮನೆಗಳು ನೆಲಸಮವಾಗಿದೆ. ಜನತೆ ರಾತ್ರಿಗಳನ್ನು ಬಯಲಲ್ಲೇ ಕಳೆಯುವಂತೆ ಆಗಿದೆ. ಜಾಜರ್‌ಕೋಟ್ ಜಿಲ್ಲೆಯ ಹಳ್ಳಿಗಳಲ್ಲಿನ ಹೆಚ್ಚಿನ ಮನೆಗಳು ಕುಸಿದು ಬಿದ್ದಿವೆ. ಮತ್ತಷ್ಟು ತೀವ್ರವಾಗಿ ಹಾನಿಗೊಳಗಾಗಿವೆ. ಪಟ್ಟಣ ಪ್ರದೇಶದಲ್ಲಿ ಕಾಂಕ್ರೀಟ್​​ ಮನೆಗಳು ಸಹ ಹಾನಿಯಾಗಿವೆ.

ದುರಂತದಲ್ಲಿ ಇದುವರೆಗೆ ಮೃತರ ಒಟ್ಟು 157ಕ್ಕೆ ಏರಿಕೆಯಾಗಿದೆ. ಈ ಪೈಕಿ 120 ಮಂದಿಯ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಸುಮಾರು 253 ಜನರು ಗಾಯಗೊಂಡಿದ್ದಾರೆ. ಸಂತ್ರಸ್ತರ ಸಂಬಂಧಿಕರು ಸಾಮೂಹಿಕ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದಾರೆ. ನಮ್ಮ ಗ್ರಾಮಸ್ಥರ ಶವಗಳನ್ನು ಅಂತ್ಯಸಂಸ್ಕಾರ ಮಾಡಲು ನಾವು ಕಾಯುತ್ತಿದ್ದೇವೆ. ಜೊತೆಗೆ ಗಾಯಗೊಂಡವರನ್ನೂ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಚಿಯುರಿ ಗ್ರಾಮದ ನಿವಾಸಿ ಲಾಲ್ ಬಹದ್ದೂರ್ ಬಿಕಾ, ಭಾನುವಾರ ಅಂತ್ಯಕ್ರಿಯೆಗೆ ಮಾಡಲು ಬಿಳಿ ಬಟ್ಟೆಯಲ್ಲಿ ಸುತ್ತಿ ಇರಿಸಿದ್ದ 13 ಶವಗಳನ್ನು ತೋರಿಸುತ್ತಾ ಹೇಳಿದರು.

ಮೃತರ ಪೈಕಿ ಹೆಚ್ಚಿನವರ ದೇಹಗಳು ಭಗ್ನಾವಶೇಷಗಳಿಂದ ಛಿದ್ರಗೊಂಡಿವೆ. ಮನೆಗಳು ಸಾಮಾನ್ಯವಾಗಿ ಕಲ್ಲುಗಳು ಮತ್ತು ಮರದ ದಿಮ್ಮಿಗಳಿಂದ ಕೂಡಿರುವುದರಿಂದ ತೀವ್ರತರವಾದ ಹಾನಿಯಾಗಿವೆ. ರಾತ್ರಿ ಚಳಿಯಿಂದ ರಕ್ಷಿಸಿಕೊಳ್ಳಲು ಪ್ಲಾಸ್ಟಿಕ್ ಶೀಟ್‌ಗಳು ಮತ್ತು ಹಳೆ ಬಟ್ಟೆಗಳು ಸೇರಿ ಸಿಕ್ಕಿದ್ದನ್ನು ನಿರಾಶ್ರಿತರು ಬಳಸಿದ್ದಾರೆ. ಮತ್ತೊಂದೆಡೆ, ರಕ್ಷಣಾ ಪಡೆಗಳು ನೆರವು ಕಲ್ಪಿಸಲು ಹರಸಾಹಸ ಪಡುವಂತಾಗಿದೆ. ಅನೇಕ ಪರ್ವತ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲಿ ಮಾತ್ರ ತಲುಬಹುದಾಗಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಭೂಕುಸಿತದಿಂದ ರಸ್ತೆಗಳು ಸಹ ಬಂದ್​ ಆಗಿವೆ.

ತಲಾ 2 ಲಕ್ಷ ರೂ. ಪರಿಹಾರ:ಪ್ರಧಾನಿ ಪುಷ್ಪ ಕಮಲ್ ದಹಾಲ್ ಭಾನುವಾರ ಸಚಿವ ಸಂಪುಟ ಸಭೆ ನಡೆದಿದ್ದಾರೆ. ಈ ಸಂದರ್ಭದಲ್ಲಿ ಭೂಕಂಪದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ ತಲಾ 2 ಲಕ್ಷ ರೂ. ನಗದು ಪರಿಹಾರ ಘೋಷಿಸಲಾಗಿದೆ. ಗಾಯಾಳುಗಳಿಗೆ ಎಲ್ಲ ವೈದ್ಯಕೀಯ ಚಿಕಿತ್ಸೆ ಕಲ್ಪಿಸಲಾಗುತ್ತಿದೆ ಎಂದು ಸಚಿವ ಸಂಪುಟ ಆರೋಗ್ಯ ಸಚಿವ ಮೋಹನ್ ಬಹದ್ದೂರ್ ಬಾಸ್ನೆಟ್ ತಿಳಿಸಿದ್ದಾರೆ. ಜೊತೆಗೆ ಹಾನಿಗೊಳಗಾದ ಪ್ರದೇಶಗಳಿಗೆ ಆಹಾರ ಮತ್ತು ಇತರ ಪರಿಹಾರ ಸಾಮಗ್ರಿಗಳನ್ನು ಪೂರೈಸಲು ಸರ್ಕಾರ ನಿರ್ಧರಿಸಿದೆ.

ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ಪೊಲೀಸರು ಸೇರಿ 4,000 ಸಿಬ್ಬಂದಿಯನ್ನು ಜಾಜರ್‌ಕೋಟ್ ಮತ್ತು ರುಕುಮ್ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ನೇಪಾಳ ರೆಡ್ ಕ್ರಾಸ್ ಸೊಸೈಟಿ ಮತ್ತು ಇತರ ಸಂಸ್ಥೆಗಳಿಂದ ಹತ್ತಾರು ಸ್ವಯಂಸೇವಕರು ಕೂಡ ನೆರವಿಗೆ ಧಾವಿಸಿದ್ದಾರೆ.

ಇದನ್ನೂ ಓದಿ:ನೇಪಾಳದಲ್ಲಿ ಪ್ರಬಲ ಭೂಕಂಪ: ಸಾವಿನ ಸಂಖ್ಯೆ 140ಕ್ಕೆ ಏರಿಕೆ

ABOUT THE AUTHOR

...view details