ಕರ್ನಾಟಕ

karnataka

ಉಕ್ರೇನ್​ ಮೇಲೆ ಮುಂದುವರಿದ ರಷ್ಯಾ ಆಕ್ರಮಣ... ಇತರ ದೇಶಗಳ ಮೇಲೂ ಬೀರಿತು ಭಾರಿ ಪರಿಣಾಮ!

By

Published : Mar 2, 2022, 7:31 AM IST

Updated : Mar 2, 2022, 7:39 AM IST

ಕಳೆದ ವಾರದಿಂದ ರಷ್ಯಾ - ಉಕ್ರೇನ್ ಮಧ್ಯೆ ಭೀಕರ ಸಂಘರ್ಷ ನಡೆಯುತ್ತಿದ್ದು, ಯುದ್ಧದಿಂದ ಇತರೆ ದೇಶಗಳ ಮೇಲೆ ಭಾರಿ ಪರಿಣಾಮ ಬೀರಿದೆ.

Russia Ukraine war
ಉಕ್ರೇನ್ ರಷ್ಯಾ ಯುದ್ಧ

ಉಕ್ರೇನ್​ ಮೇಲೆ ರಷ್ಯಾ ಆಕ್ರಮಣ ಮುಂದುವರಿದಿದೆ. ಭಾರತೀಯರು ಸೇರಿದಂತೆ ಅನೇಕರು ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿದ್ದಾರೆ. ಅವರನ್ನು ಕರೆತರುವ ಕೆಲಸವೂ ಆಗುತ್ತಿದೆ. ಉಕ್ರೇನ್​ ರಷ್ಯಾ ಯುದ್ಧದಿಂದ ಇತರೆ ದೇಶಗಳ ಮೇಲೆ ಭಾರಿ ಪರಿಣಾಮ ಬೀರಿದೆ.

ಮೆಕ್ಸಿಕೋ:ಉಕ್ರೇನ್‌ನ ಮೇಲೆ ರಷ್ಯಾ ಆಕ್ರಮಣಕ್ಕೆ ಸಂಬಂಧಿಸಿದಂತೆ ತನ್ನ ಸರ್ಕಾರವು ರಷ್ಯಾದ ಮೇಲೆ ಯಾವುದೇ ಆರ್ಥಿಕ ನಿರ್ಬಂಧಗಳನ್ನು ವಿಧಿಸುವುದಿಲ್ಲ ಎಂದು ಮೆಕ್ಸಿಕೋ ಅಧ್ಯಕ್ಷ ಆಂಡ್ರ್ಸ್ ಮ್ಯಾನುಯೆಲ್ ಲ್ಪೆಝ್ ಒಬ್ರಡಾರ್ ಹೇಳಿದ್ದಾರೆ. ಈ ಬಗ್ಗೆ ಮಂಗಳವಾರದಂದು ಮಾತನಾಡಿದ ಅವರು, ನಾವು ವಿಶ್ವದ ಎಲ್ಲಾ ಸರ್ಕಾರಗಳೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸುತ್ತೇವೆ ಎಂದಿದ್ದಾರೆ. ಸಂಘರ್ಷದ ಉಭಯ ರಾಷ್ಟ್ರಗಳೊಂದಿಗೆ ಮಾತನಾಡಲು ಸಾಧ್ಯವಾಗುವ ಪರಿಸ್ಥಿತಿಯಲ್ಲಿರಲು ನಾವು ಬಯಸುತ್ತೇವೆ ಎಂದು ತಿಳಿಸಿದ್ದಾರೆ.

ಒಕ್ಲಹೋಮ ಸಿಟಿ: ಯುಎಸ್‌ನಾದ್ಯಂತ ರಾಜಕಾರಣಿಗಳು ಅಧ್ಯಕ್ಷ ಜೋ ಬಿಡನ್ ಅವರ ದೇಶೀಯ ಇಂಧನ ನೀತಿಗಳ ಬಗ್ಗೆ ಟೀಕಿಸುತ್ತಿದ್ದಾರೆ ಮತ್ತು ದೇಶೀಯ ಉತ್ಪಾದನೆಯನ್ನು ಅಳವಡಿಸಿಕೊಳ್ಳಲು ಅವರ ಆಡಳಿತವನ್ನು ಒತ್ತಾಯಿಸುತ್ತಿದ್ದಾರೆ. ಒಕ್ಲಹೋಮ ಗವರ್ನರ್ ಕೆವಿನ್ ಸ್ಟಿಟ್ ಮತ್ತು ಓಹಿಯೋದ ಯುಎಸ್ ಸೆನೆಂಟ್ ರಾಬ್ ಪೋರ್ಟ್‌ಮ್ಯಾನ್ ಇಬ್ಬರೂ ಯುಎಸ್‌ಗೆ ರಷ್ಯಾದ ತೈಲ ಆಮದುಗಳನ್ನು ನಿಲ್ಲಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಂಗಳವಾರ ಬಿಡೆನ್ ಅವರನ್ನು ಒತ್ತಾಯಿಸಿದರು

ವಾಷಿಂಗ್ಟನ್: ತಮ್ಮ ಆಕ್ರಮಣಶೀಲತೆಗೆ ಬೆಲೆ ನೀಡದ ಸರ್ವಾಧಿಕಾರಿಗಳು ಹೆಚ್ಚಿನ ಅವ್ಯವಸ್ಥೆಯನ್ನು ಉಂಟುಮಾಡುತ್ತಾರೆ ಎಂದು ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಮಂಗಳವಾರದಂದು, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ನಿಂದ ಉಕ್ರೇನ್‌ ಮೇಲಿನ ಆಕ್ರಮಣವು ಪೂರ್ವಯೋಜಿತ ಎಂದು ಬಿಡೆನ್ ಹೇಳಿದ್ದಾರೆ. ಪುಟಿನ್ ಅವರು ನ್ಯಾಟೋ ಮೈತ್ರಿಯನ್ನು ವಿಭಜಿಸಬಹುದು ಎಂದು ಅಂದುಕೊಂಡಿದ್ದಾರೆ, ಆದರೆ ಇದು ಅವರ ತಪ್ಪು ಗ್ರಹಿಕೆ ಎಂದು ಹೇಳಿದರು.

ವಿಶ್ವಸಂಸ್ಥೆ: ಯುಎನ್ ಜನರಲ್ ಅಸೆಂಬ್ಲಿ ಇಂದು ಮಧ್ಯಾಹ್ನ ಉಕ್ರೇನ್ ವಿರುದ್ಧ ಬಲಪ್ರಯೋಗವನ್ನು ರಷ್ಯಾ ತಕ್ಷಣವೇ ನಿಲ್ಲಿಸಬೇಕು ಮತ್ತು ತನ್ನ ಎಲ್ಲಾ ಮಿಲಿಟರಿ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸುವ ನಿರ್ಣಯದ ಮೇಲೆ ಮತ ಚಲಾಯಿಸಲಿದೆ. ತನ್ನ ಪರಮಾಣು ಪಡೆಗಳ ಸಿದ್ಧತೆಯನ್ನು ಹೆಚ್ಚಿಸಲಿರುವ ಮಾಸ್ಕೋದ ನಿರ್ಧಾರವನ್ನು ಸಹ ಖಂಡಿಸಲಿದೆ..

ಭಾರತ:ಭಾರತೀಯ ವಿದ್ಯಾರ್ಥಿಗಳು, ನಾಗರಿಕರು ಉಕ್ರೇನ್​​ನಲ್ಲಿ ಸಿಲುಕಿದ್ದು, ಅವರನ್ನು ಕರೆತರಲು ಕೇಂದ್ರ ಸರ್ಕಾರ ಎಲ್ಲ ರೀತಿಯಲ್ಲೂ ಕೆಲಸ ಮಾಡ್ತಿದೆ. ಆದ್ರೆ ನಿನ್ನೆ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಸರ್ಕಾರ ತನ್ನ ಕ್ರಮಗಳನ್ನು ಮತ್ತಷ್ಟು ಚುರುಕುಗೊಳಿಸಿದೆ. ಇನ್ನೂ ಯುದ್ಧದಲ್ಲಿರುವ ಎರಡೂ ದೇಶಗಳಿಗೆ ಯಾವುದೇ ರೀತಿಯ ಶಸ್ತ್ರಾಸ್ತ್ರ ಬೆಂಬಲ ನೀಡದೇ ತಟಸ್ಥ ನಿಲುವು ತೆಗೆದುಕೊಂಡಿದೆ. ಆದ್ರೆ ಮಾನವೀಯ ನೆರವು ನೀಡಲು ಭಾರತ ಬದ್ಧವಾಗಿದೆ.

ರಷ್ಯಾ-ಉಕ್ರೇನ್ ನಡುವಿನ ಭೀಕರ ಸಂಘರ್ಷ ಮುಂದುವರಿದಿದೆ. ಈಗಾಗಲೇ ಸಾವಿರಾರು ಯೋಧರು, ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಲಕ್ಷಾಂತರ ಜನರು ನಿರಾಶ್ರಿತರಾಗಿ ಉಕ್ರೇನ್​​ನಿಂದ ನೆರೆ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಇದೆಲ್ಲದರ ಮಧ್ಯೆ ರಷ್ಯಾ- ಉಕ್ರೇನ್​ ನಡುವೆ ಇಂದು ಎರಡನೇ ಸುತ್ತಿನ ಕದನ ವಿರಾಮ ಮಾತುಕತೆ ಆಯೋಜನೆಗೊಂಡಿದೆ.

ಇದನ್ನೂ ಓದಿ:ರಷ್ಯಾ-ಉಕ್ರೇನ್ ಸಂಘರ್ಷ: ನಾಳೆ ಮತ್ತೊಂದು ಸುತ್ತಿನ ಮಹತ್ವದ ಕದನ ವಿರಾಮ ಮಾತುಕತೆ

ತನ್ನ ದೇಶದಲ್ಲಿ ಆಕ್ರಮಣ ನಡೆಸುತ್ತಿರುವ ಮಿಲಿಟರಿಯನ್ನು ರಷ್ಯಾ ವಾಪಸ್​ ಪಡೆದುಕೊಂಡು ಕದನ ವಿರಾಮ ಘೋಷಣೆ ಮಾಡುವಂತೆ ಉಕ್ರೇನ್‌ ಈ ಮೊದಲೇ ಒತ್ತಾಯಿಸಿದೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ರಷ್ಯಾ, ಉಕ್ರೇನ್​​​ ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಜೊತೆಗೆ, ಮಿಲಿಟರಿ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಕೈಗೆ ಕೊಡಬೇಕೆಂದು ತಿಳಿಸುತ್ತಿದೆ.


Last Updated : Mar 2, 2022, 7:39 AM IST

ABOUT THE AUTHOR

...view details