ಕರ್ನಾಟಕ

karnataka

ನಟ ಸುದೀಪ್​ಗೆ ಬೆದರಿಕೆ ಪತ್ರ ಪ್ರಕರಣ: ನಿರ್ದೇಶಕ ರಮೇಶ್ ಕಿಟ್ಟಿ ಅರೆಸ್ಟ್​

By

Published : May 6, 2023, 11:31 AM IST

ನಟ ಸುದೀಪ್​ಗೆ ಬೆದರಿಕೆ ಪತ್ರಗಳನ್ನು ಕಳುಹಿಸಿ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ನಿರ್ದೇಶಕ ರಮೇಶ್ ಕಿಟ್ಟಿ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

sudeep
ನಟ ಸುದೀಪ್​ಗೆ ಬೆದರಿಕೆ ಪತ್ರ

ಬೆಂಗಳೂರು: ನಟ ಕಿಚ್ಚ ಸುದೀಪ್​ಗೆ ಅನಾಮಧೇಯ ಬೆದರಿಕೆ ಪತ್ರಗಳನ್ನು ಕಳುಹಿಸಿ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ನಿರ್ದೇಶಕ ರಮೇಶ್ ಕಿಟ್ಟಿ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೆಲ ಕಾಲ ಸುದೀಪ್ ಆಪ್ತವಲಯದಲ್ಲಿದ್ದ ಆರೋಪಿ, ಕಿಚ್ಚ ಸುದೀಪ್ ಚಾರಿಟಬಲ್‌ ಟ್ರಸ್ಟ್ ಅಧ್ಯಕ್ಷನಾಗಿಯೂ ಕೆಲಸ ನಿರ್ವಹಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಹಣಕಾಸು ವಿಚಾರವಾಗಿ ಅವರಿಬ್ಬರ ಮಧ್ಯೆ ವೈಷಮ್ಯ ಉಂಟಾಗಿತ್ತು.

ಈ ಕಾರಣಕ್ಕೆ ದೂರವಾಗಿದ್ದ ರಮೇಶ್​​, ಸುದೀಪ್ ಅವರಿಗೆ ಬೆದರಿಕೆ ಪತ್ರ ಕಳುಹಿಸಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣದ ತನಿಖೆ ಆರಂಭಿಸಿದ ಸಿಸಿಬಿ ಪೊಲೀಸರಿಗೆ ಆರೋಪಿ ರಮೇಶ್ ಕಿಟ್ಟಿ ಈ ಕೃತ್ಯ ಎಸಗಿರುವುದರ ಕುರಿತು ಪುರಾವೆಗಳು ಸಿಗುತ್ತಿದ್ದಂತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ವಿಚಾರಣೆಗೆ ಹಾಜರಾಗಿದ್ದ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಮೇಶ್​ ಜೊತೆ ಸುದೀಪ್ ಮನಸ್ತಾಪ:​ ಕಿಚ್ಚ ಸುದೀಪ್ ಅವರ ಅಭಿಮಾನಿಯಾಗಿದ್ದ ರಮೇಶ್ ಕಿಟ್ಟಿ, ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್​ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸ್ವತಃ ತಾವೇ 2 ಕೋಟಿಯನ್ನು ಟ್ರಸ್ಟ್​ನಲ್ಲಿ ಹೂಡಿಕೆ ಮಾಡಿದ್ದರಂತೆ. ಆದರೆ ಹಣವನ್ನು ಸುದೀಪ್ ಹಿಂತಿರುಗಿಸದ ಕಾರಣ ಸಿಟ್ಟಾಗಿದ್ದ ರಮೇಶ್ ಟ್ರಸ್ಟ್‌ನಿಂದ ಹೊರ ಬಂದಿದ್ದರು ಎನ್ನಲಾಗಿದೆ. ಸದ್ಯ ಹಣದ ವ್ಯವಹಾರದ ಕುರಿತು ಯಾವುದೇ ದಾಖಲೆಗಳಿಲ್ಲ, ತನಿಖೆಗೆ ಅಗತ್ಯವೆನಿಸಿದರೆ ಸುದೀಪ್​ರ ಹೇಳಿಕೆಯನ್ನೂ ಪಡೆಯಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಸುದೀಪ್​ಗೆ ಬೆದರಿಕೆ ಪತ್ರ: ಲೆಟರ್ ಪೋಸ್ಟ್‌ ಮಾಡಲು ನಕಲಿ ನಂಬರ್ ಪ್ಲೇಟ್ ಅಳವಡಿಸಿದ ಕಾರು ಬಳಕೆ

ಏನಿದು ಪ್ರಕರಣ?: ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ಅಭಿನಯ ಚಕ್ರವರ್ತಿ ಕಳೆದ ಕೆಲವು ದಿನಗಳಿಂದ ಎರಡು ವಿಚಾರವಾಗಿ ಭಾರಿ ಸುದ್ದಿಯಲ್ಲಿದ್ದಾರೆ. ಜೀವ ಬೆದರಿಕೆ ಪ್ರಕರಣ ಒಂದೆಡೆಯಾದರೆ, ಇನ್ನೊಂದೆಡೆ ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಕಳೆದ ತಿಂಗಳು ಮಾರ್ಚ್ 10 ರಂದು ಸುದೀಪ್ ನಿವಾಸಕ್ಕೆ ಬೆದರಿಕೆ ಪತ್ರಗಳನ್ನು ಕಳುಹಿಸಲಾಗಿದೆ ಎಂದು ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜು ಮಾರ್ಚ್ 29 ರಂದು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.

ಈ ಬಗ್ಗೆ ನಟ ಸುದೀಪ್ ಅವರೇ ಪ್ರತಿಕ್ರಿಯೆ ನೀಡುವ ಮೂಲಕ ಅಂತೆ ಕಂತೆಗಳಿಗೆ ತೆರೆ ಎಳೆದಿದ್ದರು. ''ಈ ಬೆದರಿಕರ ಪತ್ರಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ, ಚಿತ್ರರಂಗದವರಿಂದಲೇ ಈ ಎಲ್ಲ ವಿಷಯಗಳು ನಡೆದಿದೆ'' ಎಂದು ತಿಳಿಸಿದ್ದರು. ಅಲ್ಲದೇ ಸೂಕ್ತ ಮಾರ್ಗದಲ್ಲಿ ಸರಿಯಾದ ಉತ್ತರ ಕೊಡುತ್ತೇನೆ. ಕಾನೂನು ಪ್ರಕಾರವೇ ಮುಂದೆ ಹೆಜ್ಜೆ ಇಡುತ್ತೇನೆ ಎಂದಿದ್ದರು. ಇದೀಗ ಅವರ ಆಪ್ತರಾಗಿದ್ದ ನಿರ್ದೇಶಕ ರಮೇಶ್ ಕಿಟ್ಟಿ ಈ ಪ್ರಕರಣದ ಆರೋಪಿ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಕಿಚ್ಚ ಸುದೀಪ್​ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ:ಜೂ. 1ರಂದು ಕಿಚ್ಚ ಸುದೀಪ್​​ ಸಿನಿಮಾ ಲಾಂಚ್: ಪ್ರಚಾರದ ನಡುವೆಯೇ ಅಭಿಮಾನಿಗಳಿಗೆ ಗುಡ್​ನ್ಯೂಸ್

ABOUT THE AUTHOR

...view details