ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ನೋಡಿದವರು, ಈ ಚಿತ್ರದಲ್ಲಿ ಕಿಚ್ಚ ಸುದೀಪ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಾ ಎಂಬ ಪ್ರಶ್ನೆ ಹುಟ್ಟಿಸುತ್ತೆ. ಆದರೆ, ನಿಮ್ಮ ಊಹೆ ತಪ್ಪು. ಥ್ರಿಲ್ಲಿಂಗ್ ಆ್ಯಕ್ಷನ್ ಜೊತೆಗೆ ಅಡ್ವೆಂಚರ್ ಕಥೆ ಆಧರಿಸಿರೋ ಫ್ಯಾಂಟಸಿ ಸಿನಿಮಾ ವಿಕ್ರಾಂತ್ ರೋಣ ಆಗಿದೆ. ಕಮರೊಟ್ಟು ಎಂಬ ಊರಿನ ದಟ್ಟ ಕಾಡಿನಲ್ಲಿ ಹೋಗಬೇಕಾದರೆ ಮುಖ್ಯವಾಗಿ ಮಕ್ಕಳನ್ನ ಅಪಹರಿಸಿ, ಯಾಕೆ ಸಾಯಿಸಲಾಗುತ್ತಿದೆ ಅನ್ನೋದು ವಿಕ್ರಾಂತ್ ರೋಣ ಸಿನಿಮಾದ ಕಥೆ.
ಈ ಮಕ್ಕಳ ಸಾವಿನ ರಹಸ್ಯ ಕಂಡು ಹಿಡಿಯಲು ಬರುವವರೇ, ಬಹಳ ಧೈರ್ಯವಂತ ಹಾಗೂ ಬುದ್ಧಿವಂತ ಪೊಲೀಸ್ ಆಫೀಸರ್ ವಿಕ್ರಾಂತ್ ರೋಣ ಅಂದ್ರೆ ಕಿಚ್ಚ ಸುದೀಪ್. ಈ ಚಿತ್ರದಲ್ಲಿ ಕಿಚ್ಚನ ಎಂಟ್ರಿ ನಿಜಕ್ಕೂ, ಸುದೀಪ್ ಅಭಿಮಾನಿಗಳನ್ನ ಹುಚ್ಚು ಎದ್ದು ಕುಣಿಯುವಂತೆ ಮಾಡುತ್ತದೆ. ಯಾಕಂದ್ರೆ ಸುದೀಪ್ ತಮ್ಮ ಸಿನಿಮಾಗಳಿಗಿಂತ ಸಖತ್ ಹಂಕ್ ಲುಕ್ನಲ್ಲಿ ಕಾಣಿಸಿಕೊಂಡಿರೋದು ನಿಜಕ್ಕೂ ಹೊಸತನದಿಂದ ಕೂಡಿದೆ.
ಕಿಚ್ಚನ ಜೊತೆ ನಿರೂಪ್ ಭಂಡಾರಿ ಹಾಗೂ ನೀತು ಅಶೋಕ್ ಪಾತ್ರದಲ್ಲಿ ಸಸ್ಪೆನ್ಸ್ ಇದೆ. ಅದು ಏನು ಅಂತಾ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ರಿವೀಲ್ ಆಗುತ್ತದೆ. ಇದು ವಿಕ್ರಾಂತ್ ರೋಣ ಹೈಲೆಟ್ಸ್. ನಿರ್ದೇಶಕ ಅನೂಪ್ ಭಂಡಾರಿ ಬಳಿಕ ಚಿತ್ರವನ್ನ ಹೆಗಲ ಮೇಲೆ ಹೊತ್ತಿರುವವರು ಕಲಾ ನಿರ್ದೇಶಕ ಶಿವಕುಮಾರ್ ಹಾಗೂ ಕ್ಯಾಮರಮ್ಯಾನ್ ಡೇವಿಡ್ ವಿಲಿಯಂ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವಿಕ್ರಾಂತ್ ರೋಣ ಚಿತ್ರದ ಹಿಂದೆ ಇರುವ ಕೈಗಳು ಎಂದರೆ ತಪ್ಪಿಲ್ಲ.