ಕರ್ನಾಟಕ

karnataka

'ಟಗರು ಪಲ್ಯ' ಟ್ರೇಲರ್​ ಬಿಡುಗಡೆ: ಡಾಲಿ ಪಿಕ್ಚರ್ಸ್​ನಡಿ ನನಗೂ ಅವಕಾಶ ಕೊಡಿ- ದರ್ಶನ್​

By ETV Bharat Karnataka Team

Published : Oct 19, 2023, 3:30 PM IST

ಡಾಲಿ ಧನಂಜಯ್​ ನಿರ್ಮಾಣದ 'ಟಗರು ಪಲ್ಯ' ಚಿತ್ರದ ಟ್ರೇಲರ್​ ಅನ್ನು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಬಿಡುಗಡೆಗೊಳಿಸಿದರು.

Tagaru palya movie trailer released by darshan
'ಟಗರು ಪಲ್ಯ' ಟ್ರೇಲರ್​ ಬಿಡುಗಡೆಗೊಳಿಸಿದ ದರ್ಶನ್​

ಬೆಂಗಳೂರು: ಡಾಲಿ ಧನಂಜಯ್​ ನಿರ್ಮಾಣದ ಮೂರನೇ ಸಿನಿಮಾ 'ಟಗರು ಪಲ್ಯ'ದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನ ಕಲಾವಿದರ ಸಂಘದಲ್ಲಿ ಹಮ್ಮಿಕೊಳ್ಳಲಾಗಿತ್ತು. ಟ್ರೇಲರ್​ ಬಿಡುಗಡೆಗೊಳಿಸಿದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಚಿತ್ರತಂಡಕ್ಕೆ ಶುಭ ಹಾರೈಸಿದರು. ಹಿರಿಯ ನಟರಾದ ತಾರಾ, ರಂಗಾಯಣ ರಘು, ಅಮೃತಾ, ನಾಗಭೂಷಣ್ ಸೇರಿದಂತೆ ನೀನಾಸಂ ಸತೀಶ್ ಹಾಗೂ ನೆನಪಿರಲಿ ಪ್ರೇಮ್ ಭಾಗಿಯಾಗಿದ್ದರು.

'ಟಗರು ಪಲ್ಯ' ಚಿತ್ರತಂಡ

ದರ್ಶನ್ ಮಾತನಾಡಿ​, "ಟಗರು ಪಲ್ಯ ತಂಡಕ್ಕೆ ಶುಭಾಶಯ. ಟ್ರೇಲರ್ ನೋಡಿದಾಗ ಖುಷಿ ಆಯಿತು. ಅಮೃತಾ ಅವರಿಗೆ ಕನ್ನಡ ಚಿತ್ರರಂಗಕ್ಕೆ ಸ್ವಾಗತ. ಇದು ನಮ್ಮ ಮಣ್ಣಿನ ಸೊಗಡಿನ ಸಿನಿಮಾ. ಟ್ರೇಲರ್‌ನಲ್ಲಿ ಸಿನಿಮಾ ಏನು ಅನ್ನೋದು ಗೊತ್ತಾಗುತ್ತದೆ. ಪ್ರತಿಯೊಂದು ಸೀನ್​ನಲ್ಲೂ ನಗು ಇದೆ. ಸಿನಿಮಾ ಚೆನ್ನಾಗಿ ಆಗಲಿ. ಹೀರೋಗಳು ಏನ್​ ಮಾಡ್ತಿದ್ದಾರಯ್ಯ ಅಂತ ತುಂಬಾ ಜನ ಕೇಳ್ತಾರೆ. ನಾವು ಒಂದು ಸಿನಿಮಾವನ್ನು ಪ್ರೊಡ್ಯೂಸ್​ ಮಾಡುತ್ತೇವೆ. ಆ ಸಾಲಿನಲ್ಲಿ ಡಾಲಿ ಮೊದಲು ನಿಲ್ಲುತ್ತಾರೆ. ಇದು ಧನಂಜಯ್ ನಿರ್ಮಾಣದ ಮೂರನೇ ಸಿನಿಮಾ. ಡಾಲಿ ಪಿಕ್ಚರ್ಸ್ ದೊಡ್ಡ ಪ್ರೊಡಕ್ಷನ್ ಆಗಿ ಬೆಳೆಯಲಿ. ನಾಗಭೂಷಣ್ ಫ್ಯಾನ್ ನಾನು. ನಾವು ಚಿಕ್ಕ ಕಲಾವಿದರು. ನಿಮ್ಮ ಬ್ಯಾನರ್ ಅಡಿ ನನಗೂ ಅವಕಾಶ ಕೊಡಿ" ಎಂದು ದರ್ಶನ್​ ಅವರು ಧನಂಜಯ್​ ಕಾಲೆಳೆದರು.

"ಎಲ್ಲಾ ಸಂಬಂಧಗಳನ್ನು ನೆನಪಿಸುವ ಸಿನಿಮಾವೇ 'ಟಗರು ಪಲ್ಯ'. ಇಡೀ ತಂಡಕ್ಕೆ ಧನ್ಯವಾದ ಹೇಳಬೇಕು. ನನಗೆ ಉಮೇಶ್ ಅವರು ಕಥೆ ಹೇಳಿದಾಗ ತುಂಬಾ ಇಷ್ವವಾಯಿತು. ಒಳ್ಳೆ ಪ್ರತಿಭೆಗಳಿಗೆ ಬಂಡವಾಳ ಹಾಕುವ ಖುಷಿ ನನಗಿದೆ. ಅವರವರ ಪ್ರತಿಭೆಗಳು ಅವರನ್ನು ಮೇಲೆ ಕರೆದುಕೊಂಡು ಬರುತ್ತಿದೆ. ಇಡೀ ತಂಡ ನನಗೆ ಅದ್ಭುತವಾಗಿ ಬೆಂಬಲ ನೀಡಿದ್ದಾರೆ. ನಾಗಭೂಷಣ್ ಯಾವುದೇ ಪಾತ್ರ ಕೊಟ್ಟರೂ ತೂಗಿಸಿಕೊಂಡು ಹೋಗುವ ನಟ. ಅಮೃತಾ ಲುಕ್ ಟೆಸ್ಟ್ ಮಾಡಿದಾಗ ಸ್ಯಾಂಡಲ್​ವುಡ್ ಮಹಾಲಕ್ಷ್ಮೀ ತರ ಕಾಣಿಸ್ತಾರೆ ಅನಿಸ್ತು. ಚಿತ್ರರಂಗದ ಮಹಾಲಕ್ಷ್ಮಿ ಆಗಿ ಬೆಳಗಲಿ ಎಂದು ಹಾರೈಸಿದ್ದೇವೆ. ಖಂಡಿತ ಆಗೇ ಆಗ್ತಾರೆ. ಸೂರ್ಯಕಾಂತಿ ಸಾಂಗ್ ಹಿಟ್ ಆಗಿದೆ" ಎಂದು ನಟ ಧನಂಜಯ್ ಹೇಳಿದರು.

ಇದನ್ನೂ ಓದಿ:'ಟಗರು ಪಲ್ಯ'ದ ಎರಡನೇ ಹಾಡು ಬಿಡುಗಡೆ: 'ಸೂರ್ಯಕಾಂತಿ ನಾನು..' ಎಂದು ಕುಣಿದ ಅಮೃತಾ ಪ್ರೇಮ್​

"ನಾನು ಲೀಡ್ ಕ್ಯಾರೆಕ್ಟರ್ ಮಾಡಬೇಕು ಎಂದು ಇಂಡಸ್ಟ್ರಿಗೆ ಬಂದವನಲ್ಲ. ಕ್ಯಾರೆಕ್ಟರ್ ಆರ್ಟಿಸ್ಟ್ ಆಗಬೇಕು ಎಂದು ಬಂದವನು. ನನ್ನ ಪುಣ್ಯ. ಅಂದು ಇಕ್ಕಟ್ ಸಿನಿಮಾ, ಈಗ ಟಗರು ಪಲ್ಯ ಸಿಕ್ಕಿದೆ. ಟಗರು ಪಲ್ಯ ಸಿನಿಮಾದ ಪಾತ್ರ ನನಗೆ ತೃಪ್ತಿಕೊಟ್ಟ ಪಾತ್ರ. ನಾನು ಒಬ್ಬ ಹಳ್ಳಿ ಹುಡುಗ. ನಾನು ಬೆಳೆದು ಬಂದ ಪರಿಸರವನ್ನು ಪ್ರತಿನಿಧಿಸುವುದು, ನಮ್ಮೂರು ಕಥೆ ಇರುವುದರಿಂದ ಈ ಸಿನಿಮಾ ಮತ್ತಷ್ಟು ಕನೆಕ್ಟ್ ಆಗಿದೆ. ಹಲವು ವರ್ಷಗಳಿಂದ ಒಂದು ಮಾತು ಹೇಳುತ್ತಿದ್ದೀರಾ. ಬೇರೆ ಭಾಷೆಯಲ್ಲಿ ಬರುವಂತೆ ಕನ್ನಡದಲ್ಲಿ ಕಡಿಮೆ ಬಜೆಟ್​ನಲ್ಲಿ, ಒಳ್ಳೊಳ್ಳೆ ಕಂಟೆಂಟ್ ಸಿನಿಮಾ ಬರ್ತಿಲ್ಲ ಅಂತ. ಅದಕ್ಕೆಲ್ಲ ಉತ್ತರ ಟಗರು ಪಲ್ಯ" ಅನ್ನೋದು ನಟ ನಾಗಭೂಷಣ್​ ಮಾತು.

ಬಳಿಕ ಮಾತನಾಡಿದ ನಟಿ ಅಮೃತಾ ಪ್ರೇಮ್​, "ದರ್ಶನ್ ಸರ್ ಕಡೆಯಿಂದ ನನ್ನ ಮೊದಲ ಚಿತ್ರದ ಟ್ರೇಲರ್ ಬಿಡುಗಡೆಯಾಗಿರುವುದು ಬಹಳ ಖುಷಿ ಇದೆ. ಈ ಕ್ಷಣ ಲೈಫ್ ಲಾಂಗ್ ನೆನಪಿರುತ್ತದೆ. ಡಾಲಿ ಪಿಕ್ಚರ್ಸ್ ಅಡಿ ನನಗೆ ಅವಕಾಶ ಸಿಕ್ಕಿರುವುದು ಎಷ್ಟು ಖುಷಿ ಇದೆಯೋ, ಅದರ ಜತೆ ದರ್ಶನ್ ಸರ್ ಟ್ರೇಲರ್ ಲಾಂಚ್ ಮಾಡಿರುವುದು ತುಂಬಾನೇ ಖುಷಿ ಇದೆ. ದರ್ಶನ್ ಸರ್ ನಮ್ಮ ಫ್ಯಾಮಿಲಿಗೆ ಹತ್ತಿರದವರು. ಅಪ್ಪನ ಸಿನಿಮಾ ಜರ್ನಿಯಿಂದ ಜೊತೆಯಲಿದ್ದಾರೆ. ನನ್ನನ್ನು ಈ ಪಾತ್ರಕ್ಕೆ ಚ್ಯೂಸ್ ಮಾಡಿದ ನಿರ್ದೇಶಕರಿಗೆ, ಡಾಲಿ ಸರ್​ಗೆ ಧನ್ಯವಾದ. 'ಡಾಲಿ ಪಿಕ್ಚರ್ಸ್' ಈ ಪ್ರೊಡಕ್ಷನ್ ಬಗ್ಗೆ ಹೇಳೋದಾದರೆ, ಯಾರೇ ಹೊಸಬರು ಬರುವಾಗ ಡಾಲಿ ಪಿಕ್ಚರ್ಸ್ ಎಂದೇ ಬರುತ್ತಾರೆ. ಹೋಗುವಾಗ ನಮ್ಮದೇ ಪಿಕ್ಚರ್ಸ್ ಎಂದು ಹೋಗುತ್ತಾರೆ. ಈ ಸಂಸ್ಥೆ ಆ ರೀತಿ ಎಲ್ಲರನ್ನೂ ಸ್ವೀಕರಿಸುತ್ತದೆ" ಎಂದು ನುಡಿದರು.

'ಟಗರು ಪಲ್ಯ' ಟ್ರೇಲರ್​ ಬಿಡುಗಡೆಗೊಳಿಸಿದ ದರ್ಶನ್​

ಡಾಲಿ ಪಿಕ್ಚರ್ಸ್​ನಡಿ ಡಾಲಿ ಧನಂಜಯ್​ ನಿರ್ಮಿಸುತ್ತಿರುವ 'ಟಗರು ಪಲ್ಯ' ಸಿನಿಮಾಗೆ ಉಮೇಶ್​.ಕೆ ಕೃಪ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಚಿತ್ರದಲ್ಲಿ ನಾಗಭೂಷಣ್​, ಅಮೃತಾ ಪ್ರೇಮ್​ ಜೊತೆಗೆ ರಂಗಾಯಣ ರಘು ತಾರಾ, ಶರತ್ ಲೋಹಿತಾಶ್ವ, ವೈಜನಾಥ್ ಬಿರಾದಾರ್, ವಾಸುಕಿ ವೈಭವ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಅಕ್ಟೋಬರ್ 27ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

ಇದನ್ನೂ ಓದಿ:'ಬರ್ಕಳಿ ಡೇಟು, ಹತ್ತಿ ಕೆಂಪ್ ಬಸ್ಸು': ಟಗರು ಪಲ್ಯ ರಿಲೀಸ್​ ಡೇಟ್​ ಅನೌನ್ಸ್

ABOUT THE AUTHOR

...view details