ಕರ್ನಾಟಕ

karnataka

ಭಾರತೀಯ ಸಿನಿಮಾಗಳು ಕೇವಲ ವ್ಯಾಪಾರ, ಮನರಂಜನೆಗೆ ಸೀಮಿತವಾಗಿಲ್ಲ: ರಾಷ್ಟ್ರಪತಿ ದ್ರೌಪದಿ ಮುರ್ಮು

By PTI

Published : Oct 17, 2023, 10:31 PM IST

ಜಾಗೃತಿ ಮತ್ತು ಸೂಕ್ಷ್ಮತೆಯನ್ನು ಹರಡಲು ಸಿನಿಮಾ ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

President Droupadi Murmu talks in 69th National Film Awards ceremony
ಭಾರತೀಯ ಸಿನಿಮಾಗಳು ಕೇವಲ ವ್ಯಾಪಾರ ಮತ್ತು ಮನರಂಜನೆಗೆ ಸೀಮಿತವಾಗಿಲ್ಲ: ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ:ಚಲನಚಿತ್ರಕಲಾವಿದರು ಸಿನಿಮಾಗಳ ಮೂಲಕ ಜನರನ್ನು ಬದಲಾಯಿಸುವ ಏಜೆಂಟ್‌ಗಳಾಗುತ್ತಾರೆ ಮತ್ತು ಜಾಗೃತಿಯನ್ನು ಹರಡಲು ಸಿನಿಮಾ ಅತ್ಯಂತ ಪರಿಣಾಮಕಾರಿ ಮಾಧ್ಯಮ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ನವದೆಹಲಿಯಲ್ಲಿ ನಡೆದ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದರು.

ಬಾಲಿವುಡ್​ ಹಿರಿಯ ನಟಿ ವಹೀದಾ ರೆಹಮಾನ್​ ಅವರಿಗೆ ದಾದಾ ಸಾಹೇಬ್​ ಫಾಲ್ಕೆ ಗೌರವ ಸೇರಿದಂತೆ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಖ್ಯಾತ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಿದ ನಂತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಚಲನಚಿತ್ರಗಳು ಕೇವಲ ವ್ಯಾಪಾರ ಮತ್ತು ಮನರಂಜನೆಗೆ ಸೀಮಿತವಾಗಿಲ್ಲ ಎಂದರು.

"ಸಿನಿಮಾ ನಮ್ಮ ಸಮಾಜವನ್ನು ಸುಧಾರಿಸುವ ಮಾಧ್ಯಮ. ನೀವು ಕಲಾವಿದರು ಮತ್ತು ಬದಲಾವಣೆಗಳ ಏಜೆಂಟ್​ಗಳು. ನೀವು ದೇಶದ ಬಗ್ಗೆ ಜನರಿಗೆ ತಿಳಿಸುವುದು ಮಾತ್ರವಲ್ಲದೆ ಅವರನ್ನು ಪರಸ್ಪರ ಸಂಪರ್ಕಿಸುತ್ತೀರಿ. ಜಾಗೃತಿ ಮತ್ತು ಸೂಕ್ಷ್ಮತೆಯನ್ನು ಹರಡಲು ಸಿನಿಮಾ ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿದೆ" ಎಂದು ಹೇಳಿದರು.

ಹವಾಮಾನ ಬದಲಾವಣೆ, ಹೆಣ್ಣು ಮಕ್ಕಳ ಕಳ್ಳಸಾಗಣೆ, ಮಹಿಳೆಯರ ಮೇಲಿನ ದಬ್ಬಾಳಿಕೆ, ಭ್ರಷ್ಟಾಚಾರ ಮತ್ತು ಸಾಮಾಜಿಕ ಶೋಷಣೆಯಂತಹ ವಿವಿಧ ಸಮಸ್ಯೆಗಳನ್ನು ಈ ವರ್ಷ ಗೆದ್ದ ಚಲನಚಿತ್ರಗಳು ಜನರಿಗೆ ತೋರಿಸಿವೆ ಎಂದು ಅಭಿಪ್ರಾಯಪಟ್ಟರು. "ಬುಡಕಟ್ಟು ಸಮುದಾಯಗಳ ಪ್ರಕೃತಿ ಮತ್ತು ಕಲೆಯ ಮೇಲಿನ ಪ್ರೀತಿ, ಮಹಾತ್ಮ ಗಾಂಧಿಯವರ ಆದರ್ಶ, ಪ್ರತಿಕೂಲತೆಗಳ ನಡುವೆ ಅದಮ್ಯ ಮನೋಭಾವದಿಂದ ಹೋರಾಡುವುದು, ಶಿಕ್ಷಣದ ಪರಿವರ್ತಕ ಶಕ್ತಿ ಮತ್ತು ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗಳಂತಹ ವಿವಿಧ ವಿಷಯಗಳ ಮೇಲೆ ಉತ್ತಮ ಚಲನಚಿತ್ರಗಳನ್ನು ನಿರ್ಮಿಸಲಾಗಿದೆ" ಎಂದು ನುಡಿದರು.

ಇದನ್ನೂ ಓದಿ:69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ: ಯಾರಿಗೆ ಯಾವ ಪ್ರಶಸ್ತಿ? ವಿಜೇತರ ವಿವರ

"ಭಾರತೀಯ ಚಲನಚಿತ್ರಗಳು ದೇಶದ ಸಾಮಾಜಿಕ ವೈವಿಧ್ಯತೆ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸಬೇಕು. ಅಂತಹ ಚಿತ್ರಗಳು ದೇಶ ಮತ್ತು ಸಮಾಜಕ್ಕೆ ಪ್ರಯೋಜನಕಾರಿಯಾಗುವುದಲ್ಲದೆ, ವಾಣಿಜ್ಯಿಕವಾಗಿಯೂ ಯಶಸ್ವಿಯಾಗುತ್ತವೆ ಎಂಬ ವಿಶ್ವಾಸ ನನಗಿದೆ. ಅಭಿವೃದ್ಧಿ ಭಾರತವನ್ನು ನಿರ್ಮಿಸುವಲ್ಲಿ ಚಲನಚಿತ್ರಗಳು ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಉತ್ತಮ ಹೆಸರು ಮಾಡುತ್ತಿದೆ" ಎಂದು ಸಂತಸ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್, "ಸಿನಿಮಾ ಕಥೆಯು ಚೆನ್ನಾಗಿದ್ದರೆ, ಜಾಗತಿಕವಾಗಿ ಪ್ರೇಕ್ಷಕರನ್ನು ಸೆಳೆಯುತ್ತದೆ. ಆ ಕೆಲಸ ನಿಮ್ಮಿಂದ ಆಗಿದೆ" ಭಾರತೀಯ ಚಿತ್ರರಂಗದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ಚಲನಚಿತ್ರ ಪೈರಸಿಯನ್ನು ಎದುರಿಸುವಲ್ಲಿ ಸರ್ಕಾರವು ಉದ್ಯಮದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ. ಸಿನಿಮಾಟೋಗ್ರಾಫ್ ಕಾಯಿದೆಯನ್ನು ತಂದಿದ್ದು, ಇದು ಈ ಬೆದರಿಕೆಯನ್ನು ನಿಗ್ರಹಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: 'ಚಾರ್ಲಿ 777'ಗೆ ಕನ್ನಡದ ಅತ್ಯುತ್ತಮ ಚಿತ್ರದ ಗರಿಮೆ

ABOUT THE AUTHOR

...view details