ಕರ್ನಾಟಕ

karnataka

ತೆರೆ ಮೇಲೆ ಚಾಮರಾಜನಗರ ಆಮ್ಲಜನಕ ದುರಂತ: ಲಾಭಾಂಶದ ಒಂದು ಭಾಗ ಸಂತ್ರಸ್ತರಿಗೆ

By

Published : Sep 28, 2022, 4:04 PM IST

ಚಾಮರಾಜನಗರ ಆಕ್ಸಿಜನ್ ದುರಂತ ಶೀಘ್ರವೇ ಸಿನಿಮಾ ಆಗಿ ತೆರೆ ಮೇಲೆ ಬರಲಿದೆ. ಚಿತ್ರದ ಲಾಭದ ಶೇ.30ರಷ್ಟನ್ನು 36 ಕುಟುಂಬಗಳಿಗೆ ಸಹಾಯ ಮಾಡಲು ಚಿತ್ರತಂಡ ನಿರ್ಧರಿಸಿದೆ.

movie on Chamarajanagar oxygen tragedy
ತೆರೆ ಮೇಲೆ ಚಾಮರಾಜನಗರ ಆಮ್ಲಜನಕ ದುರಂತ

ಚಾಮರಾಜನಗರ: 2021ರ ಕೋವಿಡ್ 2ನೇ ಅಲೆಯಲ್ಲಿ 36 ಜನರ ಸಾವಿಗೆ ಕಾರಣವಾದ ಚಾಮರಾಜನಗರ ಆಕ್ಸಿಜನ್ ದುರಂತ ಶೀಘ್ರವೇ ಸಿನಿಮಾ ಆಗಿ ತೆರೆ ಮೇಲೆ ಬರಲಿದೆ. ಈ ಹಿಂದೆ ಬೆಳಕಿನ ನಡೆಗೆ ಎಂಬ ಮಕ್ಕಳ ಚಿತ್ರವನ್ನು ನಿರ್ದೇಶಿಸಿದ್ದ ಯುವ ನಿರ್ಮಾಪಕ ಅಜಯ್‌ಕುಮಾರ್ ಅವರು ಈ ಚಾಮರಾಜನಗರ ಆಮ್ಲಜನಕ ದುರಂತ ಘಟನೆಯನ್ನು ಬೆಳ್ಳಿ ತೆರೆ ಮೇಲೆ ತರಲು ಪ್ರಯತ್ನಿಸಿದ್ದು, ಚಿತ್ರ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.

ಸಂತ್ರಸ್ತರ ಕುಟುಂಬಗಳ ಸಂಕಟದ ಜೊತೆಗೆ ಸರ್ಕಾರ ಮತ್ತು ಅಧಿಕಾರಶಾಹಿಯ ಲೋಪದೋಷಗಳ ಮೇಲೆ ಚಿತ್ರ ಬೆಳಕು ಚೆಲ್ಲುತ್ತದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಈಗಾಗಲೇ ಚಾಮರಾಜನಗರ ಆಸ್ಪತ್ರೆಯಲ್ಲಿ ಶೇ.70ಕ್ಕೂ ಹೆಚ್ಚು ಚಿತ್ರೀಕರಣ ನಡೆಸಿರುವ ಚಿತ್ರತಂಡ ಸಂತ್ರಸ್ತರ ಕುಟುಂಬಗಳೊಂದಿಗೆ ಸಂವಾದ ನಡೆಸಿದೆ. ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್‌ನ ಒಂದು ಭಾಗವನ್ನು ಈ ಕುಟುಂಬಗಳಿಗೆ ಸಹಾಯ ಹಸ್ತವಾಗಿ ನೀಡಲು ಚಿತ್ರತಂಡ ನಿರ್ಧರಿಸಿದೆ.

ನಿರ್ದೇಶಕ ಅಜಯ್ ಕುಮಾರ್ ಚಿತ್ರಕ್ಕೆ ಲಾಕ್‌ಡೌನ್ ಎಂಬ ಹೆಸರಿಟ್ಟಿದ್ದಾರೆ. ಆಕ್ಸಿಜನ್ ದುರಂತದ ನಂತರ ಹಲವು ಕುಟುಂಬಗಳು ಛಿದ್ರವಾಗಿವೆ. ತಮ್ಮ ಕುಟುಂಬದ ಆಧಾರ ಸ್ತಂಭಗಳನ್ನು ಕಳೆದುಕೊಂಡಿವೆ. ಹಾಗಾಗಿ ಚಿತ್ರದ ಲಾಭದ ಶೇ.30ರಷ್ಟನ್ನು 36 ಕುಟುಂಬಗಳಿಗೆ ಸಹಾಯ ಮಾಡಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಲಾಕ್‌ಡೌನ್ ಪ್ರೋಮೋ ಈಗಾಗಲೇ ಎಲ್ಲರನ್ನೂ ಸೆಳೆಯುತ್ತಿದೆ. ಸಮಯಕ್ಕೆ ಸರಿಯಾಗಿ ಆಮ್ಲಜನಕ ಪೂರೈಕೆ ಮಾಡಿದ್ದರೆ ದುರಂತವನ್ನು ತಪ್ಪಿಸಬಹುದಿತ್ತು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ದುರಂತವನ್ನು ವರದಿ ಮಾಡಿದ ಪತ್ರಕರ್ತರನ್ನು ಭೇಟಿ ಮಾಡಿ, ದುರಂತದ ಬಗ್ಗೆ ವಿಭಿನ್ನ ದೃಷ್ಟಿಕೋನಗಳನ್ನು ಕಲೆ ಹಾಕಲು ಯತ್ನಿಸಿರುವುದಾಗಿ ಅಜಯ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ:ಸಿನಿಮಾ ಪ್ರಚಾರಕ್ಕೆ ಬಂದ ನಟಿಯರನ್ನು ಎಳೆದಾಡಿದ ಯುವಕರು..​ ಪೊಲೀಸರಿಂದ ತಲಾಶ್​ - Video

ಅಧಿಕಾರಿಗಳ ನಡುವೆ ಜಟಾಪಟಿ - ಸರ್ಕಾರದ ನಿರ್ಲಕ್ಷ್ಯ: ಚಾಮರಾಜನಗರ ಡಿಸಿ ಆಗಿದ್ದ ಡಾ.ಎಂ.ಆರ್.ರವಿ ಹಾಗೂ ಮೈಸೂರು ಡಿಸಿ ಆಗಿದ್ದ ರೋಹಿಣಿ ಸಿಂಧೂರಿ ದುರಂತದ ತಪ್ಪನ್ನು ಒಬ್ಬರಿಗೊಬ್ಬರ ಮೇಲೆ ಹೊರಿಸಿ ಕೆಸರು ಎರಚಾಡಿಕೊಂಡಿದ್ದರು.‌ ಸರ್ಕಾರದ ನಡೆಗೆ ಕೋರ್ಟ್ ಕೂಡ ಛೀಮಾರಿ ಹಾಕಿ ನ್ಯಾಯಾಂಗ ತನಿಖೆಗೆ ಆದೇಶಿಸಿ ತಂಡ ರಚಿಸಿತ್ತು.‌

ದುರಂತ ನಡೆದು ಒಂದೂವರೆ ವರ್ಷವಾದರೂ ಇನ್ನೂ ಕೂಡ ಸಂತ್ರಸ್ತರಿಗೆ ಪರಿಹಾರ ಸಿಗದಿರುವುದು, ಮೃತರ ಸಂಖ್ಯೆ ಏರುಪೇರು ಮುಂದುವರೆದಿರುವುದು ಮತ್ತೊಂದು ವಿಪರ್ಯಾಸವಾಗಿದೆ. ತೆರೆ ಮೇಲೆ ಬರಲಿರುವ ಆಮ್ಲಜನಕ ದುರಂತದ ಚಿತ್ರ ಇವೆಲ್ಲದರ ಮೇಲೆ ಬೆಳಕು ಚೆಲ್ಲಲಿದೆ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details