ಕರ್ನಾಟಕ

karnataka

India vs Bharat row : ನೀವು ಭಾರತೀಯರು ಎಂಬುದನ್ನು ಮರೆಯಬೇಡಿ: ಜಾಕಿ ಶ್ರಾಫ್ ಪ್ರತಿಕ್ರಿಯೆ

By ETV Bharat Karnataka Team

Published : Sep 6, 2023, 9:01 AM IST

ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಗಣ್ಯರ ಔತಣಕೂಟದ ಆಮಂತ್ರಣ ಪತ್ರದಲ್ಲಿ 'ರಿಪಬ್ಲಿಕ್​ ಆಫ್​​ ಇಂಡಿಯಾ' ಬದಲಿಗೆ 'ರಿಪಬ್ಲಿಕ್​ ಆಫ್​ ಭಾರತ್' ಎಂಬ ಹೆಸರು ನಮೋದಿಸಿರುವ ಬಗ್ಗೆ ವರದಿ ಆಗುತ್ತಿದ್ದಂತೆ ದೇಶಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ಕುರಿತು ನಟ ಜಾಕಿ ಶ್ರಾಫ್ ಪ್ರತಿಕ್ರಿಯೆ ನೀಡಿದ್ದಾರೆ.

Jackie Shroff
ಜಾಕಿ ಶ್ರಾಫ್

ನವದೆಹಲಿ : ಸದ್ಯಕ್ಕೆ ದೇಶದಲ್ಲಿ ಹೊಸ ಚರ್ಚೆಯೊಂದು ಪ್ರಾರಂಭವಾಗಿದೆ. 'ಇಂಡಿಯಾ' ಬದಲಿಗೆ 'ಭಾರತ್' (Bharat) ಎಂಬ ಹೆಸರು ಅಧಿಕೃತವಾಗಿ ಬಳಕೆ ಮಾಡುವ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸೆ. 18 ರಿಂದ 22ರ ವರೆಗೆ ನಡೆಯುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ. ಈ ಕುರಿತಂತೆ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಬಾಲಿವುಡ್​ ಬಿಗ್​ ಬಿ ಅಮಿತಾಬ್ ಬಚ್ಚನ್ ಬಳಿಕ ನಟ ಜಾಕಿ ಶ್ರಾಫ್ ಅವರು 'ಇಂಡಿಯಾ' ಬದಲಿಗೆ 'ಭಾರತ' ಹೆಸರು ಬಳಸಲು ಮುಂದಾದ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ನಿನ್ನೆ ರಾಷ್ಟ್ರ ರಾಜಧಾನಿಯಲ್ಲಿ ನವದೆಹಲಿಯಲ್ಲಿ ನಡೆದ 'ಪ್ಲಾನೆಟ್ ಇಂಡಿಯಾ' ಅಭಿಯಾನ ಕಾರ್ಯಕ್ರಮದಲ್ಲಿ ಜಾಕಿ ಶ್ರಾಫ್ ಮತ್ತು ದಿಯಾ ಮಿರ್ಜಾ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಜಾಕಿ ಶ್ರಾಫ್, "ಮೊದಲು ನಮ್ಮ ದೇಶವನ್ನು ಭಾರತ (Bharat) ಎಂದು ಕರೆಯಲಾಗುತ್ತಿತ್ತು. ನನ್ನ ಹೆಸರು ಜಾಕಿ (Jackie), ಕೆಲವರು ನನ್ನನ್ನು (Jocky) ಜೋಕಿ ಎಂದು ಕರೆಯುತ್ತಾರೆ ಮತ್ತೆ ಕೆಲವರು(Jaki) ಜಕಿ ಎಂದು ಕರೆಯುತ್ತಾರೆ. ಜನರು ನನ್ನ ಹೆಸರನ್ನು ಬದಲಾಯಿಸುತ್ತಿರಬಹುದು, ಆದರೆ ನಾನು ಬದಲಾಗುವುದಿಲ್ಲ. ಕೇವಲ ಹೆಸರು ಮಾತ್ರ ಬದಲಾಗುತ್ತದೆ. ಹಾಗೆಯೇ, ನೀವುಗಳು ದೇಶದ ಹೆಸರು ಬದಲಾಯಿಸುತ್ತಲೇ ಇರುತ್ತೀರಿ. ಆದರೆ ನೀವು ಭಾರತೀಯರು ಎಂಬುದನ್ನು ಮರೆಯಬೇಡಿ" ಎಂದರು.

ಅಮಿತಾಬ್ ಬಚ್ಚನ್ ಟ್ವೀಟ್ :ಎಕ್ಸ್​ ಆ್ಯಪ್​ನಲ್ಲಿ ಪೋಸ್ಟ್​ವೊಂದನ್ನು ಮಾಡಿರುವ ನಟ ಅಮಿತಾಬ್ ಬಚ್ಚನ್, ಹಿಂದಿಯಲ್ಲಿ "ಭಾರತ್ ಮಾತಾ ಕಿ ಜೈ" ಎಂದು ಬರೆದಿದ್ದಾರೆ. ಇಂಡಿಯಾ ಮತ್ತು ಭಾರತ ಹೆಸರಿಗೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಬಿಗ್ ಬಿ, ಈ ರೀತಿ ಟ್ವೀಟ್ ಮಾಡಿರುವುದರಿಂದ ದೇಶದ ಹೆಸರು ಬದಲಾವಣೆಯ ಪರವಾಗಿ ತಮ್ಮ ಬೆಂಬಲವನ್ನು ಪ್ರದರ್ಶಿಸಿದಂತಿದೆ.

ನವದೆಹಲಿಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯ ಅಧಿಕೃತ ಔತಣಕೂಟದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಗಳ ಮುಖ್ಯಸ್ಥರು, ಸರ್ಕಾರಗಳು ಮತ್ತು ರಾಜ್ಯಗಳ ಮುಖ್ಯಮಂತ್ರಿಗಳಿಗೆ ನೀಡಿದ ಆಹ್ವಾನ ಪತ್ರಿಕೆಯಲ್ಲಿ "ಇಂಡಿಯಾ" ಪದವನ್ನು "ಭಾರತ್" ಎಂದು ಬದಲಿಸಿದ್ದರಿಂದ ಚರ್ಚೆ ಶುರುವಾಗಿದೆ.

ಇದನ್ನೂ ಓದಿ :ಇಂಡಿಯಾ ಬದಲು ಭಾರತದ ಪ್ರಧಾನಿ ಎಂದು ಉಲ್ಲೇಖ.. ಇಂಡೋನೇಷ್ಯಾದ ಅಧಿಕೃತ ಆಹ್ವಾನ ಪತ್ರ ಹಂಚಿಕೊಂಡ ಬಿಜೆಪಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು, "ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಎಂಬ ಹೆಸರಿನ ಬಗ್ಗೆ ಭಯ ಪಡುತ್ತಿದ್ದಾರೆ. ವಿರೋಧ ಪಕ್ಷಗಳು ತಮ್ಮ ಬಣಕ್ಕೆ INDIA ಎಂದು ಹೆಸರಿಸಲು ನಿರ್ಧರಿಸಿದ ದಿನದಿಂದಲೂ ಮೋದಿ ಅವರಿಗೆ 'ಇಂಡಿಯಾ' ಎಂಬ ಹೆಸರಿನ ಮೇಲೆ ದ್ವೇಷ ಹೆಚ್ಚಾಗಿದೆ." ಎಂದು ವಾಗ್ದಾಳಿ ನಡೆಸಿದ್ದಾರೆ.

"ಪ್ರಧಾನಿಯವರಿಗೆ ಬ್ರಿಟಿಷರ ವಿರುದ್ಧ ಅಷ್ಟೊಂದು ದ್ವೇಷವಿದ್ದರೆ ಅವರ ಕಾಲದಲ್ಲಿ ನಿರ್ಮಿಸಲಾದ ರಾಷ್ಟ್ರಪತಿ ಭವನ ಮತ್ತು ಇತರ ಪ್ರಮುಖ ಸರ್ಕಾರಿ ಕಟ್ಟಡಗಳನ್ನು ಕೇಂದ್ರವು ತೆರವು ಮಾಡಬೇಕು. ವೈಸರಾಯ್ ಮನೆಯಾಗಿದ್ದ ರಾಷ್ಟ್ರಪತಿ ಭವನವನ್ನು ತ್ಯಾಗ ಮಾಡಬೇಕು, ಉತ್ತರ ಮತ್ತು ದಕ್ಷಿಣ ಬ್ಲಾಕ್‌ಗಳನ್ನು ಖಾಲಿ ಮಾಡುವ ಮೂಲಕ ಎಲ್ಲಾ ಕಟ್ಟಡಗಳನ್ನು ಧ್ವಂಸ ಮಾಡಿ" ಎಂದು ಹೇಳಿದ್ದಾರೆ. (ಎಎನ್​ಐ)

ABOUT THE AUTHOR

...view details