ಕರ್ನಾಟಕ

karnataka

ಹಾಸ್ಟೆಲ್​ ಹುಡುಗರ ಸಕ್ಸಸ್​ ಪಾರ್ಟಿಗೆ ಹ್ಯಾಟ್ರಿಕ್​ ಹೀರೋ ಶಿವರಾಜ್ ಕುಮಾರ್​ ಸಾಥ್​

By

Published : Jul 22, 2023, 6:18 PM IST

HHB: ಇಂದು ಶಿವರಾಜ್​ ಕುಮಾರ್ ಅವರ ನಾಗವಾರ ನಿವಾಸದಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಸಕ್ಸಸ್ ಮೀಟ್ ಹಮ್ಮಿಕೊಳ್ಳಲಾಗಿತ್ತು.

Hostel hudugaru bekagiddare
'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ'

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಶೀರ್ಷಿಕೆಯಿಂದ ಗಮನ ಸೆಳೆಯುತ್ತಿರುವ ಚಿತ್ರ 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ'. ಯುವ ಪ್ರತಿಭೆಗಳ ಈ ಸಿನಿಮಾ ಶುಕ್ರವಾರ (ನಿನ್ನೆ) ಬಿಡುಗಡೆಗೊಂಡು ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಪಡೆದುಕೊಂಡಿದೆ. ಎರಡನೇ ದಿನವೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ​ಕುಮಾರ್ ಸಾಥ್​ ನೀಡಿದ್ದಾರೆ. ಆರಂಭದಿಂದಲೂ ನಾನಾ ಬಗೆಯಲ್ಲಿ ಪ್ರಚಾರ ಮಾಡಿ, ಇಡೀ ಸ್ಯಾಂಡಲ್​ವುಡ್​ ಸಾಥ್​ ಕೊಟ್ಟಿರುವ ಈ ಚಿತ್ರವು ಎಲ್ಲ ವರ್ಗದ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡ

ಹಾಸ್ಟೆಲ್ ಹುಡುಗರ ಮಸ್ತ್​ ಮಜಾ ಕಥೆಯನ್ನು ನಿನ್ನೆ ಗೀತಾ ಶಿವರಾಜ್ ​ಕುಮಾರ್ ಅವರು ಮಗಳು ನಿವೇದಿತಾ ಜೊತೆಗೆ ನರ್ತಕಿ ಚಿತ್ರಮಂದಿರದಲ್ಲಿ ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ. ಇಂದು ಶಿವರಾಜ್ ​ಕುಮಾರ್ ಅವರ ನಾಗವರ ನಿವಾಸದಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಸಕ್ಸಸ್ ಮೀಟ್ ಹಮ್ಮಿಕೊಳ್ಳಲಾಗಿತ್ತು. ಹೊಸಬರ ಹೊಸ ಪ್ರಯತ್ನಕ್ಕೆ ಶಿವಣ್ಣ ದಂಪತಿ ಶುಭಹಾರೈಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕರುನಾಡ ಚಕ್ರವರ್ತಿ ಶಿವಣ್ಣ ಮಾತನಾಡಿ, "ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಇಡೀ ತಂಡಕ್ಕೆ ಗುಡ್ ಲಕ್. ನಿನ್ನೆ ನಾನು ಸಿನಿಮಾ ನೋಡಬೇಕಿತ್ತು. ವರುಣ್​ಗೆ ಹೇಳಿದ್ದೇ ನಾನು ಫಸ್ಟ್ ಡೇ ನೋಡುತ್ತೇನೆ ಎಂದು. ಆದರೆ, ಜಾಹೀರಾತು ಶೂಟ್ ಇದ್ದಿದ್ದರಿಂದ ಆಗಲಿಲ್ಲ. ಅದಕ್ಕೆ ಗೀತಾ ಬಂದಿದ್ದರು. ಮೋರಲ್ ಸಪೋರ್ಟ್ ಆಗಿರುತ್ತದೆ ಎಂದಿದ್ದೆ. ಸಿನಿಮಾ ಚೆನ್ನಾಗಿದ್ದರೆ ಮೋರಲ್ ಸಪೋರ್ಟ್​ಗಿಂತ ನಾವು ನೋಡಿ ತೃಪ್ತಿಪಡಬಹುದು. ನನ್ನ ಪರವಾಗಿ, ನನ್ನ ಚಿಕ್ಕ ಮಗಳು ನಿವೇದಿತಾ ಸಿನಿಮಾ ನೋಡಿದರು" ಎಂದರು.

ಹಾಸ್ಟೆಲ್​ ಹುಡುಗರ ಸಕ್ಸಸ್​ ಪಾರ್ಟಿಗೆ ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​ ಸಾಥ್​

ಮುಂದುವರೆದು, "ವರುಣ್ ನನಗೆ 15 ವರ್ಷದಿಂದ ಗೊತ್ತು. ಆ ಸಮಯದಿಂದ ನೋಡುತ್ತಿದ್ದೇನೆ. ತುಂಬಾ ಕಷ್ಟಪಟ್ಟು ಮೇಲೆ ಬಂದವರು. ಯಾವುದೇ ಕೆಲಸ ಮಾಡಿದರೂ ಬಹಳ ಶಿಸ್ತಿನಿಂದ ಮಾಡುತ್ತಾನೆ. ಅವರ ಬಳಿ ಸಿನ್ಸಿಯಾರಿಟಿ ಇದೆ. ಅದು ನನಗೆ ತುಂಬಾ ಇಷ್ಟ. ಸಾಂಗ್ಸ್ ಎಲ್ಲಾ ನೋಡಿದಾಗ ತುಂಬಾ ಇಂಟ್ರೆಸ್ಟಿಂಗ್ ಅನಿಸಿತು. ಒನ್ಸ್ ನೋಡಿದಾಗ ಒಂದು ಸ್ಟೈಕ್ ಆಯ್ತು. ಜನ ಥಿಯೇಟರ್​ಗೆ ಬರದ ಸಮಯದಲ್ಲೂ ಜನ ಥಿಯೇಟರ್​ಗೆ ಬಂದು ಸಪೋರ್ಟ್ ಮಾಡಿದ್ದಾರೆ. ಇಡೀ ಸ್ಯಾಂಡಲ್​ವುಡ್ ಈ ಸಿನಿಮಾಗೆ ಸಾಥ್ ಕೊಟ್ಟಿದೆ. ಇಂಡಸ್ಟ್ರೀ ಅಂದರೆ ಒಂದು ಫ್ಯಾಮಿಲಿ. ಫ್ಯಾಮಿಲಿ ಅಂದಾಗ ಯಾರದ್ದೇ ಸಿನಿಮಾವಾಗಲಿ ಪ್ರೋತ್ಸಾಹ ಮಾಡಬೇಕು" ಎಂದು ಹೇಳಿದರು.

ರಮ್ಯಾ ವಿವಾದದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, "ಯಾರ ಬಗ್ಗೆ ಏನು ಕಮೆಂಟ್ ಮಾಡುವುದು ಬೇಡ. ಎಲ್ಲದಕ್ಕಿಂತ ಕೊನೆಗೆ ಗೆಲುವು ಮುಖ್ಯ. ಸಿನಿಮಾ ಬರೋಕು ಮೊದಲು ಒಳ್ಳೆ ರಿಪೋರ್ಟ್ ಇತ್ತು. ಒಳ್ಳೆ ಮನಸ್ಸಿನಿಂದ ಮಾಡಿದರೆ ಅದಕ್ಕೆ ಯಾವುದೇ ತಡೆ ಬರಲ್ಲ. ಅದಕ್ಕೆ ಇದೇ ಉತ್ತಮ ಉದಾಹರಣೆ. ಅಭಿಮಾನಿ ದೇವರುಗಳು ಒಳ್ಳೆ ಸಿನಿಮಾ ಕೈ ಬಿಡಲ್ಲ. ಸತ್ಯ ಇದ್ದರೆ ಜಯ ಇದ್ದೇ ಇರುತ್ತೆ. ಅವರವರು ತಿಳಿದುಕೊಳ್ಳಬೇಕು. ಯಾಕೆ ಈಗಾಯ್ತು ಅನ್ನೋದು ಗೊತ್ತಾಗ್ತಿಲ್ಲ. ನಮ್ಮ ಇಂಡಸ್ಟ್ರಿ ಬೆಳೆಯಬೇಕು ಅಷ್ಟೆ. ಅದನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಹೊಸಬರು ಬಂದಾಗ ಎಲ್ಲರೂ ಸಪೋರ್ಟ್ ಮಾಡಬೇಕು. ಆ ವಿಚಾರವನ್ನು ಈಗ ದೊಡ್ಡದು ಮಾಡುವುದು ಬೇಡ" ಎಂದರು.

ಬಳಿಕ ಗೀತಾ ಶಿವರಾಜ್ ​ಕುಮಾರ್ ಮಾತನಾಡಿ, "ಈ ತರ ಸಿನಿಮಾ ನೋಡಿ ಬಹಳ ವರ್ಷವಾಗಿತ್ತು. ವರುಣ್ ನಮ್ಮ ಕುಟುಂಬದವರು. ನಿರ್ದೇಶಕರಿಂದ ಹಿಡಿದು ಎಲ್ಲರೂ ಹೊಸಬರೇ. ಎಲ್ಲವೂ ಹೊಸತನದಿಂದ ಕೂಡಿದೆ. ಹಾಸ್ಟೆಲ್ ಲೈಫ್ ಹೀಗೆ ಇತ್ತೇನೋ ಅನಿಸುವಷ್ಟು ಬಹಳ ಸ್ವಾಭಾವಿಕವಾಗಿತ್ತು. ಎಲ್ಲ ಫ್ಯಾಮಿಲಿ ಕುಳಿತು ನೋಡಬಹುದು. ಈ ತರ ಸಿನಿಮಾಗಳು ಮತ್ತಷ್ಟು ಬರಬೇಕು. ಆರಂಭದಿಂದ ಕೊನೆ ತನಕ ಎಲ್ಲಿಯೂ ಬೋರ್ ಆಗುವುದಿಲ್ಲ. ನಾನು ಸಿನಿಮಾ ಎಂಜಾಯ್ ಮಾಡಿದೆ. ಇಡೀ ತಂಡಕ್ಕೆ ಒಳ್ಳೆದಾಗಲಿ" ಎಂದು ಶುಭಹಾರೈಸಿದರು.

ಕೃಷ್ಣಮೂರ್ತಿ ಚೊಚ್ಚಲ ನಿರ್ದೇಶನ ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಿದೆ. ಸಿನಿಮಾಗೆ ದಿಗಂತ್, ರಿಷಬ್ ಶೆಟ್ಟಿ, ಶೈನಿ ಶೆಟ್ಟಿ, ಪವನ್ ಕುಮಾರ್, ರಮ್ಯಾ ಸಾಥ್ ಕೊಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮದೇ ಪರವಃ ಬ್ಯಾನರ್ ನಡಿ ಈ ಚಿತ್ರವನ್ನು ಅರ್ಪಿಸಿದ್ದಾರೆ. ಬಹುತೇಕ ಹೊಸ ಪ್ರತಿಭೆಗಳು ನಟಿಸಿ ಸೈ ಎನಿಸಿಕೊಂಡಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರವನ್ನು ವರುಣ್ ಗೌಡ ಹಾಗೂ ಪ್ರಜ್ವಲ್ ನಿರ್ಮಿಸಿದ್ದಾರೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.

ಇದನ್ನೂ ಓದಿ:'ರಾಮನ ಅವತಾರ'ದಲ್ಲಿ ರಿಷಿ... ಸೆಕೆಂಡ್​ ಇನ್ನಿಂಗ್ಸ್ ಶುರು ಮಾಡಿದ ಪ್ರಣಿತಾ ಸುಭಾಷ್

ABOUT THE AUTHOR

...view details