ಕರ್ನಾಟಕ

karnataka

ನಿರ್ದೇಶಕ ಪಿ.ಸಿ. ಶೇಖರ್​​ಗೆ ಬೆದರಿಕೆ ಆರೋಪ: ಲವ್ ಬರ್ಡ್ಸ್ ಸಿನಿಮಾ ನಿರ್ಮಾಪಕ ಕಡ್ಡಿಪುಡಿ ಚಂದ್ರು ವಿರುದ್ಧ ಎಫ್ಐಆರ್

By

Published : May 20, 2023, 5:06 PM IST

ಲವ್ ಬರ್ಡ್ಸ್ ಸಿನಿಮಾದ ನಿರ್ಮಾಪಕ ಕಡ್ಡಿಪುಡಿ ಚಂದ್ರು ವಿರುದ್ಧ ನಿರ್ದೇಶಕ ಪಿ.ಸಿ ಶೇಖರ್​ ಅವರು ಸಂಭಾವನೆ ಕೊಡುವುದರಲ್ಲಿ ವಂಚಿಸಿದ್ದಾರೆ ಎಂದು ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದಾರೆ.

fir-against-love-birds-movie-producer-kaddipudi-chandru
ನಿರ್ದೇಶಕ ಪಿ.ಸಿ. ಶೇಖರ್​​ಗೆ ಬೆದರಿಕೆ ಆರೋಪ; ಲವ್ ಬರ್ಡ್ಸ್ ಸಿನಿಮಾ ನಿರ್ಮಾಪಕ ಕಡ್ಡಿಪುಡಿ ಚಂದ್ರು ವಿರುದ್ಧ ಎಫ್ಐಆರ್

ಬೆಂಗಳೂರು:ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅಭಿನಯದ ಲವ್ ಬರ್ಡ್ಸ್ ಸಿನಿಮಾದ ನಿರ್ಮಾಪಕ ಕಡ್ಡಿಪುಡಿ ಚಂದ್ರು ಸಂಭಾವನೆ ಕೊಡುವುದರಲ್ಲಿ ವಂಚಿಸಿ, ಬೆದರಿಕೆ ಹಾಕಿರುವುದಾಗಿ ಚಿತ್ರದ ನಿರ್ದೇಶಕ ಪಿ.ಸಿ ಶೇಖರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ನಿರ್ಮಾಪಕ ಕಡ್ಡಿಪುಡಿ ಚಂದ್ರು, ನಟ ಡಾರ್ಲಿಂಗ್​ ಕೃಷ್ಣ ಹಾಗೂ ನಿರ್ದೇಶಕ ಪಿ.ಸಿ ಶೇಖರ್​​

ಲವ್ ಬರ್ಡ್ಸ್ ಸಿನಿಮಾದ ಕತೆ ಚಿತ್ರಕತೆ ಬರೆದು ನಿರ್ದೇಶನವನ್ನೂ ಸಹ ಪಿ.ಸಿ ಶೇಖರ್ ಮಾಡಿದ್ದು, ಪ್ರತಿಯಾಗಿ 20 ಲಕ್ಷ ಸಂಭಾವನೆ ಪಡೆಯುವುದಾಗಿ ಮಾತುಕತೆಯಾಗಿತ್ತು. ಸಿನಿಮಾದ ಎಡಿಟಿಂಗ್ ಕೆಲಸಕ್ಕೆ ಪ್ರತ್ಯೇಕವಾಗಿ 5 ಲಕ್ಷದಂತೆ ಒಟ್ಟು 25 ಲಕ್ಷ ಸಂಭಾವನೆ ನೀಡುವುದಾಗಿ ನಿರ್ಮಾಪಕ ಕಡ್ಡಿಪುಡಿ ಚಂದ್ರು ಒಪ್ಪಿಕೊಂಡಿದ್ದರು. ಆದರೆ, ಕೇವಲ 6.5 ಲಕ್ಷ ಹಣ ನೀಡಿದ್ದು, ಬಾಕಿ ಹಣ ಕೇಳಿದ್ರೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪಿ.ಸಿ‌ ಶೇಖರ್ ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೆ ತಮ್ಮ ಸಹಿಯನ್ನ ನಕಲುಗೊಳಿಸಿ ಚಿತ್ರದ ಹಕ್ಕನ್ನ ತಾವು ಪಡೆದಿರೋದಾಗಿ ಪಿ.ಸಿ ಶೇಖರ್ ಆರೋಪಿಸಿದ್ದು, ಪೋನ್ ಮಾಡಿ ಹಣ ಕೇಳಿದಾಗ ನಿರ್ಮಾಪಕರು ಧಮ್ಕಿ ಹಾಕಿ ಹಣ ಕೊಡಲ್ಲ ಏನು ಬೇಕಿದ್ದರು ಮಾಡಿಕೊಳ್ಳಿ ಎಂದು ಬೆದರಿಕೆ ಹಾಕಿರುವುದಾಗಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಲವ್ ಬರ್ಡ್ಸ್ ಚಿತ್ರದ ಪೋಸ್ಟರ್​​​

ಚೆಕ್​ ಬೌನ್ಸ್​​ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಗುರುಪ್ರಸಾದ್​​: ಈ ಹಿಂದೆ ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾಗಿದ್ದ 'ಮಠ ಮತ್ತು ಎದ್ದೇಳು ಮಂಜುನಾಥ' ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಅವರನ್ನು ಪೊಲೀಸರು ಬಂಧಿಸಿದ್ದರು. ನಂತರ ನ್ಯಾಯಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಚೆಕ್ ಬೌನ್ಸ್ ಪ್ರಕರಣದ ಆರೋಪಿ ಗುರುಪ್ರಸಾದ್ ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾಗಿದ್ದರು. ಹೀಗಾಗಿ ನ್ಯಾಯಾಲಯವು ಜಾಮೀನು ರಹಿತ ಬಂಧನದ ವಾರಂಟ್​ ಹೊರಡಿಸಿದ್ದರಿಂದ ಗಿರಿನಗರ ಠಾಣೆ ಪೊಲೀಸರು ಗುರುಪ್ರಸಾದ್ ಅವರನ್ನು ಬಂಧಿಸಿದ್ದರು. ಬಳಿಕ 21ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ, ನ್ಯಾಯಾಧೀಶರು ಆರೋಪಿಯಿಂದ ಶ್ಯೂರಿಟಿ ಪಡೆದು ಜಾಮೀನು ಮಂಜೂರು ಮಾಡಿದ್ದರು.

ನಿರ್ದೇಶಕ ರಮೇಶ್ ಕಿಟ್ಟಿ ಬಂಧನ: ನಟ ಕಿಚ್ಚ ಸುದೀಪ್​ಗೆ ಅನಾಮಧೇಯ ಬೆದರಿಕೆ ಪತ್ರಗಳನ್ನು ಕಳುಹಿಸಿ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ನಿರ್ದೇಶಕ ರಮೇಶ್ ಕಿಟ್ಟಿ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೆಲ ಕಾಲ ಸುದೀಪ್ ಆಪ್ತವಲಯದಲ್ಲಿದ್ದ ಆರೋಪಿ, ಕಿಚ್ಚ ಸುದೀಪ್ ಚಾರಿಟಬಲ್‌ ಟ್ರಸ್ಟ್ ಅಧ್ಯಕ್ಷನಾಗಿಯೂ ಕೆಲಸ ನಿರ್ವಹಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಹಣಕಾಸು ವಿಚಾರವಾಗಿ ಅವರಿಬ್ಬರ ಮಧ್ಯೆ ವೈಷಮ್ಯ ಉಂಟಾಗಿತ್ತು.

ಈ ಕಾರಣಕ್ಕೆ ದೂರವಾಗಿದ್ದ ರಮೇಶ್​​, ಸುದೀಪ್ ಅವರಿಗೆ ಬೆದರಿಕೆ ಪತ್ರ ಕಳುಹಿಸಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣದ ತನಿಖೆ ಆರಂಭಿಸಿದ ಸಿಸಿಬಿ ಪೊಲೀಸರಿಗೆ ಆರೋಪಿ ರಮೇಶ್ ಕಿಟ್ಟಿ ಈ ಕೃತ್ಯ ಎಸಗಿರುವುದರ ಕುರಿತು ಪುರಾವೆಗಳು ಸಿಗುತ್ತಿದ್ದಂತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ವಿಚಾರಣೆಗೆ ಹಾಜರಾಗಿದ್ದ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಇದನ್ನೂ ಓದಿ:ಪ್ರಮಾಣ ವಚನ ಸಮಾರಂಭ: ಬೀದಿ ಬದಿ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರ

ABOUT THE AUTHOR

...view details