ಕನ್ನಡ ಚಿತ್ರರಂಗದ ಜನಪ್ರಿಯ ನಟ ಡಾಲಿ ಧನಂಜಯ್ ಪ್ರೇಕ್ಷಕರಿಗೆ ಉತ್ತಮ ಸಿನಿಮಾಗಳನ್ನು ಕೊಡುವ ಮೂಲಕ ಯಶಸ್ವಿ ವೃತ್ತಿಜೀವನ ನಡೆಸುತ್ತಿದ್ದಾರೆ. ಡಾಲಿ ಕೇವಲ ನಟನಾಗಿ ಮಾತ್ರವಲ್ಲದೇ, ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ ಚಲನಚಿತ್ರ ನಿರ್ಮಾಣ ಸಂಸ್ಥೆಯ ಹೆಸರು 'ಡಾಲಿ ಪಿಕ್ಷರ್ಸ್'. ಈ ತಂಡದ ಮೂರನೇ ಪ್ರಯತ್ನವೇ 'ಟಗರು ಪಲ್ಯ'. ಸೆಟ್ಟೇರಿದ ದಿನದಿಂದಲೂ ಭಾರೀ ಸದ್ದು ಮಾಡುತ್ತಿರುವ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಉಮೇಶ್ ಕೆ.ಕೃಪ ಆ್ಯಕ್ಷನ್ ಕಟ್ ಹೇಳಿರುವ 'ಟಗರು ಪಲ್ಯ'ಗೆ ಸ್ಯಾಂಡಲ್ವುಡ್ನ ಪ್ರತಿಭಾವಂತ ನಟ ನಾಗಭೂಷಣ್ ನಾಯಕನಾಗಿದ್ದಾರೆ. ಈ ಸಿನಿಮಾ ಮೂಲಕ ಕನ್ನಡಿಗರಿಗೆ ನಾಯಕ ನಟಿಯಾಗಿ ಅಮೃತಾ ಪ್ರೇಮ್ ಪರಿಚಿತರಾಗಲಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ಚಿತ್ರೀಕರಣ ಆರಂಭಿಸಿದ್ದು, ಇತ್ತೀಚೆಗಷ್ಟೇ ಶೂಟಿಂಗ್ ಪೂರ್ಣಗೊಳಿಸಿತ್ತು. ಬಿಡುಗಡೆಗೆ ತಯಾರಿ ಆರಂಭಗೊಂಡಿದ್ದು, ಸಿನಿಮಾ ಪ್ರಮೋಶನ್ ಕೂಡ ಶುರುವಾಗಿದೆ. 'ಟಗರು ಪಲ್ಯ' ಇದೇ 27ಕ್ಕೆ ಬಿಡುಗಡೆಯಾಗಲಿದ್ದು, ಡಾಲಿ ಧನಂಜಯ್ ಅವರು ಸಿಎಂ ಸಿದ್ದರಾಮಯ್ಯರನ್ನು ಚಿತ್ರ ವೀಕ್ಷಣೆಗೆ ಆಹ್ವಾನಿಸಿದ್ದಾರೆ. ಈ ವೇಳೆ ನಟಿ ತಾರಾ ಜೊತೆಗಿದ್ದರು.
ಎಕ್ಸ್ನಲ್ಲಿ ಡಾಲಿ ಭೇಟಿಯ ಕುರಿತು ಫೋಟೋಗಳನ್ನು ಹಂಚಿಕೊಂಡಿರುವ ಸಿಎಂ, "ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಅವರು ಇಂದು ನನ್ನನ್ನು ಭೇಟಿ ಮಾಡಿ "ಟಗರು ಪಲ್ಯ" ಸಿನಿಮಾ ವೀಕ್ಷಣೆಗೆ ಆಗಮಿಸುವಂತೆ ಆಹ್ವಾನಿಸಿದರು. ನಟಿ ತಾರಾ ಅವರು ಈ ವೇಳೆ ಜೊತೆಗಿದ್ದರು" ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಧನಂಜಯ್, "ತುಂಬು ಹೃದಯದ ಧನ್ಯವಾದಗಳು ಸರ್. ತಮ್ಮ ಆಗಮನಕ್ಕಾಗಿ ಇಡೀ ತಂಡ ಕಾಯುತ್ತಿದೆ" ಎಂದಿದ್ದಾರೆ.