ಕರ್ನಾಟಕ

karnataka

ರಾಲಿಯಾ ಅಭಿನಯದ 'ಬ್ರಹ್ಮಾಸ್ತ್ರ 2' 2026ರಲ್ಲಿ ತೆರೆಗೆ: ಮತ್ತೆ ತಪ್ಪು ಮಾಡಲ್ಲವೆಂದ ನಿರ್ದೇಶಕ

By

Published : Mar 31, 2023, 8:50 PM IST

ಸೂಪರ್​ ಹಿಟ್ ಬ್ರಹ್ಮಾಸ್ತ್ರ ಚಿತ್ರದ ಸೀಕ್ವೆಲ್​ ಬಗ್ಗೆ ನಿರ್ದೇಶಕ ಅಯಾನ್ ಮುಖರ್ಜಿ ಮಾಹಿತಿ ಹಂಚಿಕೊಂಡಿದ್ದಾರೆ.

brahmastra 2 and 3
ರಾಲಿಯಾ ಅಭಿನಯದ ಬ್ರಹ್ಮಾಸ್ತ್ರ 2

ನಿರ್ದೇಶಕ ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ' ಕಳೆದ ಸೆಪ್ಟೆಂಬರ್​ನಲ್ಲಿ ತೆರೆಕಂಡು ಸೂಪರ್​ ಹಿಟ್ ಆಗಿ ಹೊರಹೊಮ್ಮಿತ್ತು. ರಣ್​​​ಬೀರ್ ಕಪೂರ್, ಆಲಿಯಾ ಭಟ್, ಅಮಿತಾಭ್ ಬಚ್ಚನ್, ನಾಗಾರ್ಜುನ್, ಮೌನಿ ರಾಯ್​ ಮುಖ್ಯಭೂಮಿಕೆಯಲ್ಲಿ ತೆರೆಕಂಡ ಈ ಚಿತ್ರದಲ್ಲಿ ಶಾರುಖ್ ಖಾನ್ ಕೂಡ ಅತಿಥಿ ಪಾತ್ರ ನಿರ್ವಹಿಸಿದ್ದರು. ರಾಲಿಯಾ ನಟನೆ ಸಿನಿ ರಸಿಕರ ಮನ ಗೆದ್ದಿತ್ತು. ಇದೀಗ ಅದರ ಮುಂದುವರಿದ ಭಾಗದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಅಯಾನ್ ಮುಖರ್ಜಿ ಗುರುವಾರದಂದು ತಮ್ಮ ಬ್ಲಾಕ್‌ಬಸ್ಟರ್ ಚಿತ್ರ 'ಬ್ರಹ್ಮಾಸ್ತ್ರ'ದ ಮುಂದುವರಿದ ಭಾಗಗಳ ಅಪ್​ಡೇಟ್ಸ್ ಹಂಚಿಕೊಂಡಿದ್ದಾರೆ. ಸಭೆಯೊಂದರಲ್ಲಿ ಮಾತನಾಡಿದ ಅವರು, ಬ್ರಹ್ಮಾಸ್ತ್ರದ ಎರಡು ಭಾಗಗಳ ಕೆಲಸವನ್ನು ಏಕಕಾಲದಲ್ಲಿ ಮಾಡಲು ಯೋಜಿಸುತ್ತಿರುವುದಾಗಿ ತಿಳಿಸಿದರು. ರಣ್​​ಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಎರಡನೇ ಅಧ್ಯಾಯವು 2026ರಲ್ಲಿ ತೆರೆಕಾಣಲಿದೆ ಎಂದು ಕೂಡ ಮಾಹಿತಿ ಹಂಚಿಕೊಂಡರು.

ಬ್ರಹ್ಮಾಸ್ತ್ರದ ಮುಂದುವರಿದ ಭಾಗಗಳನ್ನು ಬರೆಯಲು ಸ್ವಲ್ಪ ಸ್ವಲ್ಪ ಸಮಯ ತೆಗೆದುಕೊಳ್ಳಲಿದ್ದೇವೆ. ಈ ಚಿತ್ರದ ಸೀಕ್ವೆಲ್ ಸಂಬಂಧ ಸಾಕಷ್ಟು ನಿರೀಕ್ಷೆ ಇದೆ ಎಂದು ನನಗೆ ತಿಳಿದಿದೆ. ಸಿನಿ ರಸಿಕರು ಶೀಘ್ರದಲ್ಲೇ ಚಿತ್ರ ಬಿಡುಗಡೆಯಾಗಬೇಕೆಂದು ಬಯಸುತ್ತಾರೆ. ಆದರೆ ನಾವು ಚಿತ್ರದ ಕಥೆ ಸಂಬಂಧ ಯಾವುದೇ ರಾಜಿ ಮಾಡಿಕೊಳ್ಳದೇ ಬರೆಯಬೇಕು. ಸುಮಾರು ಮೂರು ವರ್ಷ ಸಮಯ ಹಿಡಿಯಲಿದೆ ಎಂದು ತಿಳಿಸಿದರು.

ಬ್ರಹ್ಮಾಸ್ತ್ರ ಭಾಗ ಒಂದು: ಶಿವ 2022ರ ಸೆಪ್ಟೆಂಬರ್ 9ರಂದು ಬಿಗ್ ಬಜೆಟ್ ಫ್ಯಾಂಟಸಿ ಸಾಹಸ ಮಹಾಕಾವ್ಯವಾಗಿ ಹೊರಹೊಮ್ಮಿತು. ಕಥೆಯು ಶಿವ (ರಣ್​ಬೀರ್ ಕಪೂರ್) ಸುತ್ತ ಸುತ್ತಿದೆ. ಆತ ತನ್ನ ವಿಶೇಷ ಶಕ್ತಿಗಳ ಮೂಲವನ್ನು ಹುಡುಕಲು ಪ್ರಯಾಣ ಬೆಳೆಸುತ್ತಾನೆ. ಇಶಾ (ಆಲಿಯಾ ಭಟ್) ಜೊತೆ ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುತ್ತಾನೆ. ಇದು ಚಿತ್ರದ ಕಥೆ. ಸ್ಟಾರ್ ಸ್ಟುಡಿಯೋಸ್ ಮತ್ತು ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದ ಚಲನಚಿತ್ರದಲ್ಲಿ ಹಿರಿಯ ನಟ ಅಮಿತಾಭ್​​ ಬಚ್ಚನ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಶಾರುಖ್ ಖಾನ್ ಮತ್ತು ನಾಗಾರ್ಜುನ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಪರಿಣಿತಿ-ರಾಘವ್ ಮದುವೆ ಖಚಿತಪಡಿಸಿದ ಗಾಯಕ ಹಾರ್ಡಿ ಸಂಧು

ಬ್ರಹ್ಮಾಸ್ತ್ರ ಭಾಗ 1:ಶಿವ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 400 ಕೋಟಿಗೂ ಹೆಚ್ಚು ಕಲೆಕ್ಷನ್​ ಮಾಡಿ ಯಶಸ್ವಿಯಾಗಿದ್ದರೂ ಕೂಡ ಚಲನಚಿತ್ರವು ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದಿದೆ. ಚಿತ್ರಕ್ಕೆ ಬಂದ ಟೀಕೆಗಳನ್ನು ತಾನು ಗಮನಿಸಿದ್ದೇನೆ. ಮುಂದಿನ ಹಂತದಲ್ಲಿ ತಪ್ಪುಗಳನ್ನು ಪುನರಾವರ್ತಿಸದಿರಲು ಪ್ರಯತ್ನಿಸುತ್ತೇನೆ ಎಂದು ಅಯಾನ್​ ಮುಖರ್ಜಿ ತಿಳಿಸಿದರು.

ಇದನ್ನೂ ಓದಿ:ಪರಿಣಿತಿ ನಿಶ್ಚಿತಾರ್ಥ ವದಂತಿ ಬೆನ್ನಲ್ಲೇ ಪುತ್ರಿಯೊಂದಿಗೆ ಮೊದಲ ಬಾರಿ ತವರಿಗೆ ಬಂದ ಪ್ರಿಯಾಂಕಾ ಚೋಪ್ರಾ

ನಮ್ಮ ಚಿತ್ರವು ನಿಜವಾಗಿಯೂ ಉತ್ತಮ ಕಲೆಕ್ಷನ್​ ಮಾಡಿದೆ. ಮೆಚ್ಚುಗೆಯನ್ನೂ ಗಳಿಸಿದೆ. ಬಹಳಷ್ಟು ವೀಕ್ಷಕರು ಚಲನಚಿತ್ರವನ್ನು ಸ್ವೀಕರಿಸಿದ್ದಾರೆ. ಜೊತೆಗೆ ಟೀಕೆಗಳನ್ನೂ ಕೇಳಿದ್ದೇವೆ. ನಾನು ಅದರಲ್ಲಿ ಕೆಲವನ್ನು ಒಪ್ಪಿಕೊಳ್ಳುತ್ತೇನೆ. ಕೆಲ ಟೀಕೆಗಳು 'ಬ್ರಹ್ಮಾಸ್ತ್ರ'ದ ಬರವಣಿಗೆ ಮತ್ತು ಕಥೆಯ ಕೆಲವು ಅಂಶಗಳಿಗೆ ಬಂದಿವೆ. ನಾನು ಅದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಭಾಗ ಎರಡರಲ್ಲಿ ಅದನ್ನು ಉತ್ತಮಗೊಳಿಸಬೇಕು ಎಂದು ನಿರ್ದೇಶಕರು ಹೇಳಿದರು.

ABOUT THE AUTHOR

...view details