ಕರ್ನಾಟಕ

karnataka

'ಮುಂಗಾರು ಮಳೆ' ಚಿತ್ರೀಕರಣದ ​ಮನೆಯಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಪೂಜಾ ಗಾಂಧಿ

By ETV Bharat Karnataka Team

Published : Dec 12, 2023, 10:58 PM IST

ನಟಿ ಪೂಜಾ ಗಾಂಧಿ 'ಮುಂಗಾರು ಮಳೆ' ಚಿತ್ರದ ಶೂಟಿಂಗ್​ ಮನೆಗೆ ಭೇಟಿ ನೀಡಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

Actress Pooja gandhi in mungaru male movie shooting home
'ಮುಂಗಾರು ಮಳೆ' ಚಿತ್ರೀಕರಣದ ​ಮನೆಯಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಪೂಜಾ ಗಾಂಧಿ

'ಮುಂಗಾರು ಮಳೆ' ಸ್ಯಾಂಡಲ್​ವುಡ್​ನಲ್ಲಿ ಹೊಸ ಅಲೆ ಸೃಷ್ಟಿಸಿದ ಸಿನಿಮಾ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್​ನಲ್ಲಿ ಮೂಡಿಬಂದ ಬ್ಲಾಕ್​ಬಸ್ಟರ್​ ಚಿತ್ರವಿದು. ಲವ್ ಸ್ಟೋರಿ, ಪಂಚಿಂಗ್ ಡೈಲಾಗ್, ಪಾತ್ರಧಾರಿಗಳ ನಟನೆ, ಮಳೆ, ಅದ್ಭುತವಾದ ಸಂಗೀತಕ್ಕೆ ಪ್ರೇಕ್ಷಕರು ತಲೆಬಾಗಿದ್ದರು. 2006ರ ಡಿಸೆಂಬರ್ 29ರಂದು ಸಿನಿಮಾ ಬಿಡುಗಡೆಯಾಗಿತ್ತು. ಇದೇ ತಿಂಗಳು 29ಕ್ಕೆ ಈ ಚಿತ್ರ ತೆರೆ ಕಂಡು 15 ವರ್ಷ ಆಗುತ್ತಿದೆ. ಗೋಲ್ಡನ್ ಗಣೇಶ್ ಸಿನಿಮಾ ಕೆರಿಯರ್​ಗೆ ದೊಡ್ಡ ತಿರುವು ಕೊಟ್ಟು, ಸ್ಟಾರ್ ಪಟ್ಟ ತಂದುಕೊಟ್ಟ ಸಿನಿಮಾ‌ ಇದು.

ಚಿತ್ರದಲ್ಲಿ ಪಂಜಾಬಿ ಮೂಲದ ಪೂಜಾ ಗಾಂಧಿ ಗಣೇಶ್​ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪೂಜಾ ಗಾಂಧಿಗೆ ಇದು ಚೊಚ್ಚಲ ನಟನೆಯ ಸಿನಿಮಾ. ಮೊದಲ ಸಿನಿಮಾದಲ್ಲೇ ದೊಡ್ಡ ಯಶಸ್ಸು ಗಳಿಸಿ ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಪ್ರೀತಮ್ ಮತ್ತು ನಂದಿನಿಯ ನವಿರಾದ ಪ್ರೇಮಕಥೆಗೆ ಚಿತ್ರಪ್ರೇಮಿಗಳು ಮನಸೂರೆಗೊಂಡಿದ್ದರು. ಈಗ ಕಾಕತಾಳೀಯ ಎಂಬಂತೆ ಪೂಜಾ ಗಾಂಧಿ ಅವರು ಮುಂಗಾರು ಮಳೆ ಚಿತ್ರ ಶೂಟಿಂಗ್​ ಮಾಡಿದ್ದ ಮನೆಗೆ ಭೇಟಿ ಕೊಟ್ಟಿದ್ದಾರೆ.

ಕೆಲವು ದಿನಗಳ ಹಿಂದೆ ಗೆಳೆಯ ವಿಜಯ್ ಘೋರ್ಪಡೆ ಜೊತೆ ಪೂಜಾ ಗಾಂಧಿ ಮದುವೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೂಜಾ ಗಾಂಧಿ ಪತಿ ವಿಜಯ್ ಜೊತೆ ತೀರ್ಥಹಳ್ಳಿ ತಾಲೂಕಿನ ಕವಿಶೈಲಕ್ಕೆ ಭೇಟಿ ನೀಡಿ ಸುಮಾರು ಗಂಟೆಗಳ ಕಾಲ ಕವಿಶೈಲದಲ್ಲಿ ಪತಿ ವಿಜಯ್ ಘೋರ್ಪಡೆ, ಗೆಳೆಯರಾದ ಕಡಿದಾಳ್ ಪ್ರಕಾಶ್ ಕುಟುಂಬದವರ ಜೊತೆ ಸಮಯ ಕಳೆದಿದ್ದರು.

ಆ ಬಳಿಕ ಪೂಜಾ ಗಾಂಧಿ ದಂಪತಿ ಹೋಗಿದ್ದು ಮುಂಗಾರು ಮಳೆ ಚಿತ್ರದ ಶೂಟಿಂಗ್ ಮಾಡಿದ ಮನೆಗೆ. ಪೂಜಾ ಗಾಂಧಿ ಈಗ ಕರ್ನಾಟಕದ ಮನೆ ಮಗಳು ಆಗೋದಕ್ಕೆ ಕಾರಣವಾದ ಮುಂಗಾರು ಮಳೆ ಸಿನಿಮಾಕ್ಕಾಗಿ ಚಿತ್ರೀಕರಣ ಮಾಡಿದ ಮನೆಗೆ ಹೋಗಿ ಸ್ವತಃ ಪೂಜಾ ಗಾಂಧಿ ಆ ಚಿತ್ರದಲ್ಲಿ ಶೂಟಿಂಗ್ ಮಾಡಿದ ಸ್ಥಳಗಳನ್ನು ತೋರಿಸುತ್ತಾ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಅದರ ಬಗ್ಗೆ ಒಂದು ವಿಡಿಯೋ ಮಾಡಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೊದಲಿಗೆ ಆ ಮನೆಯ ಮುಂಭಾಗದ ಹೊರಾಂಗಣ, ಬಳಿಕ ಡೈನಿಂಗ್ ಹಾಲ್, ಆ ನಂತರ ಅನಂತ್ ನಾಗ್ ಸರ್ ಡ್ರಿಂಕ್ಸ್ ಮಾಡುವ ಸ್ಥಳ, ಮದುವೆಗೆ ರೆಡಿಯಾದ ಆ ಮನೆಯ ಮೆಟ್ಟಿಲುಗಳ‌ ಹತ್ತಿರ ಕುಳಿತು ಮಾತನಾಡಿದ ಸನ್ನಿವೇಶ ಎಲ್ಲವನ್ನೂ ವಿಡಿಯೋದಲ್ಲಿ ಸೆರೆ ಹಿಡಿದು ತೋರಿಸಿದ್ದಾರೆ.

ಈ ಸಂದರ್ಭದಲ್ಲಿ, ತಾವು ಕರ್ನಾಟಕದಲ್ಲಿ ನೆಲೆಸೋದಿಕ್ಕೆ ಕಾರಣವಾದ ಮುಂಗಾರು ಮಳೆ ಸಿನಿಮಾದಲ್ಲಿ ಅಭಿನಯಿಸಿದ, ಗಣೇಶ್ ‌ಸರ್, ನಿರ್ದೇಶಕ ಯೋಗರಾಜ್ ಭಟ್ ಸರ್, ಪದ್ಮಾಜಾ ಮೇಡಂ, ಅನಂತ್ ನಾಗ್ ಸರ್ ಸೇರಿದಂತೆ ಇಡೀ ಮುಂಗಾರು ಮಳೆ ಚಿತ್ರತಂಡದವರನ್ನು ಪೂಜಾ ಗಾಂಧಿ ನೆನಪಿಸಿಕೊಂಡರು. ಹಾಗೇ ನಾನು ಹೊಸ ಜೀವನ ಶುರು ಮಾಡಿದ್ದೀನಿ ಅದಕ್ಕೆ ನಿಮ್ಮೆಲ್ಲರ ಹಾರೈಕೆ ಆರ್ಶೀವಾದ ಬೇಕು. ಇಲ್ಲಿವರೆಗೂ ಅದನ್ನು ಕೊಟ್ಟಿದ್ದೀರಾ. ಮುಂದೆಯೂ ನಿಮ್ಮ ಹಾರೈಕೆ ಆರ್ಶೀವಾದ ಹೀಗೆ ಇರಲಿ ಎಂದು ಪೂಜಾ ಗಾಂಧಿ ಕನ್ನಡಿಗರಲ್ಲಿ ಕೇಳಿಕೊಂಡರು. ಸದ್ಯ ಪೂಜಾ ಗಾಂಧಿ ಮುಂಗಾರು ಮಳೆ ಶೂಟಿಂಗ್ ಮನೆಯಲ್ಲಿ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ:ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ವಿಜಯ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟ ಮಳೆ ಹುಡುಗಿ

ABOUT THE AUTHOR

...view details