ಕರ್ನಾಟಕ

karnataka

ಅಕ್ರಮ ಹಣ ವರ್ಗಾವಣೆ ಪ್ರಕರಣ: ಪ್ರಕಾಶ್​ ರಾಜ್​ಗೆ ತಮಿಳುನಾಡು ಪೊಲೀಸರಿಂದ ಕ್ಲೀನ್​ ಚಿಟ್​

By ETV Bharat Karnataka Team

Published : Dec 15, 2023, 10:00 PM IST

Actor Prakash Raj: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟ ಪ್ರಕಾಶ್​ ರಾಜ್​ಗೆ ತಮಿಳುನಾಡು ಪೊಲೀಸರಿಂದ ಕ್ಲೀನ್​ ಚಿಟ್​ ಸಿಕ್ಕಿದೆ.

Actor Prakash Raj gets clean chit by tamil nadu police in ponzi scam case
ಅಕ್ರಮ ಹಣ ವರ್ಗಾವಣೆ ಪ್ರಕರಣ: ನಟ ಪ್ರಕಾಶ್​ ರಾಜ್​ಗೆ ತಮಿಳುನಾಡು ಪೊಲೀಸರಿಂದ ಕ್ಲೀನ್​ ಚಿಟ್​

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಬಹುಭಾಷಾ ನಟ ಪ್ರಕಾಶ್​ ರಾಜ್​ಗೆ ರಿಲೀಫ್​ ಸಿಕ್ಕಿದೆ. ತಮಿಳುನಾಡಿನ ತಿರುಚಿರಾಪಳ್ಳಿ ಮೂಲದ ಆಭರಣ ಸಮೂಹವೊಂದರ ವಿರುದ್ಧ 100 ಕೋಟಿ ರೂಪಾಯಿ ಪೋಂಜಿ ಮತ್ತು ವಂಚನೆ ಪ್ರಕರಣದಲ್ಲಿ ಪ್ರಕಾಶ್​ ರಾಜ್​ ಹೆಸರು ಕೇಳಿಬಂದಿತ್ತು. ಈ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿ ನಟನ​ ವಿಚಾರಣೆ ಕೂಡ ನಡೆಸಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರಿಂದ ಕ್ಲೀನ್​ ಚಿಟ್​ ಸಿಕ್ಕಿದೆ.

ವರದಿಗಳ ಪ್ರಕಾರ, ಪ್ರಕಾಶ್​ ರಾಜ್​ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸುಳ್ಳು ಎಂದು ತಿಳಿದುಬಂದಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್​ ಮಾಡಿರುವ ಪ್ರಕಾಶ್​ ರಾಜ್​, "ತಮಿಳು ಅರ್ಥವಾಗದವರಿಗೆ. ನಟ ಪ್ರಕಾಶ್ ರಾಜ್​ರವರಿಗೂ ತಮಿಳುನಾಡಿನ ಪ್ರಣವ್ ಜ್ಯುವೆಲ್ಲರ್ಸ್​ನ ಮೋಸಕ್ಕೂ ಯಾವ ಸಂಬಂಧವೂ ಇಲ್ಲ ಎಂದು ವಿಶೇಷ ತನಿಖಾಧಿಕಾರಿಗಳಿಂದ ಅಧಿಕೃತ ಪ್ರಕಟಣೆ. ನನ್ನನ್ನು ನಂಬಿ, ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು. ಸತ್ಯಮೇವ ಜಯತೇ" ಎಂದು ಬರೆದಿದ್ದಾರೆ.

ತಿರುಚಿರಾಪಳ್ಳಿ ಮೂಲದ ಪಾಲುದಾರಿಕೆ ಸಂಸ್ಥೆಯಾದ ಪ್ರಣವ್ ಜ್ಯುವೆಲ್ಲರ್ಸ್ ವಿರುದ್ಧ ಇಡಿ ತನಿಖೆ ನಡೆಸುತ್ತಿದೆ. ನವೆಂಬರ್ 20ರಂದು ಇಡಿ ಅಧಿಕಾರಿಗಳು ದಾಳಿ ನಡೆಸಿ 23.70 ಲಕ್ಷ ರೂಪಾಯಿಗಳ ನಗದು ಮತ್ತು ಕೆಲವು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು. ರಾಷ್ಟ್ರ ಪ್ರಶಸ್ತಿ ವಿಜೇತ ನಟರಾದ ಪ್ರಕಾಶ್​ ರಾಜ್ ಈ ಜ್ಯುವೆಲ್ಲರ್ಸ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಹೀಗಾಗಿ, ಇಡಿಯು ಪ್ರಕಾಶ್​ ರಾಜ್ ಅವರ ಹೇಳಿಕೆಯನ್ನು ದಾಖಲಿಸಲು ಬಯಸಿ, ಕೆಲವು ಉದ್ದೇಶಿತ ಪಾವತಿಗಳು ಮತ್ತು ಇತರ ಹಣಕಾಸಿನ ವಹಿವಾಟುಗಳ ಬಗ್ಗೆ ತಿಳಿದುಕೊಳ್ಳಲು ವಿಚಾರಣೆಗೆ ಒಳಗಾಗುವಂತೆ ಕಳೆದ ತಿಂಗಳು ನಟನಿಗೆ ಸಮನ್ಸ್​ ಜಾರಿ ಮಾಡಿದ್ದರು.

ಪ್ರಕರಣದ ಹಿನ್ನೆಲೆ: ಜ್ಯುವೆಲ್ಲರ್ಸ್ ಕಂಪನಿ ವಿರುದ್ಧ ತಮಿಳುನಾಡು ಆರ್ಥಿಕ ಅಪರಾಧ ವಿಭಾಗದ ಪೊಲೀಸರು ದಾಖಲಿಸಿದ ಎಫ್‌ಐಆರ್‌ ಆಧಾರದ ಮೇಲೆ ಇಡಿ ತನಿಖೆ ನಡೆಸುತ್ತಿದೆ. ಪೊಲೀಸ್ ದೂರಿನ ಪ್ರಕಾರ, ಪ್ರಣವ್ ಜ್ಯುವೆಲ್ಲರ್ಸ್​ ಹಾಗೂ ಇತರರು ಚಿನ್ನದ ಹೂಡಿಕೆ ಯೋಜನೆಯ ಹೆಸರಲ್ಲಿ ಅಧಿಕ ಲಾಭದ ಭರವಸೆ ಮೇಲೆ ಸಾರ್ವಜನಿಕರಿಂದ 100 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾರೆ ಎಂದು ಇಡಿ ತಿಳಿಸಿದೆ.

ಆದರೆ, ಹೂಡಿಕೆದಾರರಿಗೆ ಅವರ ಹಣವನ್ನು ಹಿಂದಿರುಗಿಸಲು ಪ್ರಣವ್ ಜ್ಯುವೆಲ್ಲರ್ಸ್ ವಿಫಲವಾಗಿದೆ. ಜ್ಯುವೆಲರ್ಸ್ ಸಂಸ್ಥೆ ಮತ್ತು ಇತರ ಸಂಪರ್ಕಿತ ವ್ಯಕ್ತಿಗಳು ಸಾರ್ವಜನಿಕ ಹಣವನ್ನು ಶೆಲ್ ಕಂಪನಿಗಳಿಗೆ ತಿರುಗಿಸುವ ಮೂಲಕ ವಂಚಿಸಿದ್ದಾರೆ. ತನಿಖೆಯ ಸಂದರ್ಭದಲ್ಲಿ ಬ್ಯಾಂಕ್ ಪಾವತಿಗಳ ಬದಲಿಗೆ 100 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಹೊಂದಾಣಿಕೆ ಮತ್ತು ನಕಲಿ ಎಂಟ್ರಿಗಳ ನೀಡಿರುವುದಾಗಿ ತಪ್ಪೊಪ್ಪಿಕೊಳ್ಳಲಾಗಿದೆ. ಈ ಹಿಂದೆ ದಾಳಿ ವೇಳೆ ವಿವರಿಸಲಾಗದ 23.70 ಲಕ್ಷ ರೂ. ನಗದು, 11.60 ಕೆಜಿ ತೂಕದ ಚಿನ್ನದ ಗಟ್ಟಿಗಳು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ಮಾಹಿತಿ ನೀಡಿದೆ.

ಇದನ್ನೂ ಓದಿ:ತೆಲಂಗಾಣ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರಕಾಶ್ ರಾಜ್‌ ಹೇಳಿದ್ದೇನು?

ABOUT THE AUTHOR

...view details