ಕರ್ನಾಟಕ

karnataka

ಶಿವಮೊಗ್ಗ ಜಿ.ಪಂ.ಆವರಣದಲ್ಲಿ ಮಣ್ಣಿನ ದೀಪ ಮಾರಾಟ: ಮಹಿಳಾ ಸ್ವಸಹಾಯ ಗುಂಪುಗಳಿಗೆ ಪ್ರೋತ್ಸಾಹ

By

Published : Oct 29, 2021, 10:42 AM IST

ಮಣ್ಣಿನ ದೀಪಗಳನ್ನ ತಯಾರು ಮಾಡುವ ಸಂಘಗಳಿಗೆ ಅವುಗಳನ್ನು ಮಾರಾಟ ಮಾಡಲು ಶಿವಮೊಗ್ಗ ಜಿಲ್ಲಾ ಪಂಚಾಯತ್‌ ಉಚಿತವಾಗಿ ಜಾಗ ನೀಡಿದೆ.

Opportunity for sale of deepas in shivamogga jilla panchayat premises
ಶಿವಮೊಗ್ಗ ಜಿ.ಪಂ. ಆವರಣದಲ್ಲಿ ದೀಪ ಮಾರಾಟ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪಂಚಾಯತ್‌ ಮಹಿಳಾ ಸ್ವಸಹಾಯ ಗುಂಪುಗಳಿಗೆ ವಿನೂತನವಾಗಿ ಸಹಾಯ ಹಸ್ತ ಚಾಚಿದೆ.

ಶಿವಮೊಗ್ಗ ಜಿ.ಪಂ. ಆವರಣದಲ್ಲಿ ದೀಪ ಮಾರಾಟ

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ದೀಪಾವಳಿ ಹಬ್ಬದ ಪ್ರಯುಕ್ತ ವಿವಿಧ ಸ್ವ ಸಹಾಯ ಸಂಘದ ಮಹಿಳೆಯರು ತಯಾರಿಸಿದ ನಿಸರ್ಗಸ್ನೇಹಿ ಮಣ್ಣಿನ ದೀಪಗಳನ್ನು ಮಾರಾಟ ಮಾಡಲು ಶಿವಮೊಗ್ಗ ಜಿಲ್ಲಾ ಪಂಚಾಯತ್ ಆವರಣದಲ್ಲಿ ಅವಕಾಶ ನೀಡಲಾಗಿದೆ. ಶಿವಮೊಗ್ಗ ತಾಲೂಕಿನ ಎರಡು ಸ್ವಸಹಾಯ ಗುಂಪುಗಳು ಈಗಾಗಲೇ ಅಂಗಡಿ ತೆರೆದಿದ್ದು, ಮಾರಾಟ ಆರಂಭವಾಗಿದೆ.

ವಿವಿಧ ಮಾದರಿಯ ದೀಪಗಳು ಲಭ್ಯ:

ಜನರು ಜಿಲ್ಲಾ ಪಂಚಾಯತ್ ಅಂಗಡಿಯತ್ತ ಧಾವಿಸುತ್ತಿದ್ದು, ಖರೀದಿ ಮಾಡುತ್ತಿದ್ದಾರೆ. ವಿವಿಧ ಮಾದರಿಯ ದೀಪಗಳು ಈ ಅಂಗಡಿಯಲ್ಲಿ ಲಭ್ಯವಿದೆ. ಗಣೇಶನ ಮೊಗದ ದೀಪಗಳು, ಮೂರು-ನಾಲ್ಕು ಸುತ್ತಿನ ಸ್ತಂಭಗಳ ದೀಪ, ನೀರಿನ ಕುಡಿಕೆ, ಮಣ್ಣಿನ ಲೋಟ, ತಟ್ಟೆಯಾಕಾರದ ಹಣತೆಗಳು, ದೇವರ ವಿಗ್ರಹವಿರುವ ದೀಪಗಳು, ಅದರಲ್ಲೂ ಹೊರ ಕಾಣದಂತೆ ಎಣ್ಣೆ ಸೇರಿಸಬಲ್ಲ ವಿನೂತನ ಮಾದರಿ ಮಣ್ಣಿನ ಹಣತೆಗಳು ಇಲ್ಲಿ ದೊರೆಯುತ್ತಿದೆ.

ಬೇರೆಡೆ ದೀಪಗಳ ದರ ದುಪ್ಪಟ್ಟು:

ಈಗಾಗಲೇ ಶಿವಮೊಗ್ಗದಲ್ಲಿ ಹಣತೆ ಮಾರಾಟ ಆರಂಭವಾಗಿವೆ. ಆದ್ರೆ ಬೆಲೆ ಮಾತ್ರ ದುಪ್ಪಟ್ಟು. ದೊಡ್ಡ ಗಾತ್ರದ ಆನೆಮೊಗವಿರುವ ಕಂಬದ ಹಣತೆ ಜಿಲ್ಲಾ ಪಂಚಾಯತ್‌ ಆವರಣದಲ್ಲಿನ ಅಂಗಡಿಯಲ್ಲಿ ನೂರರಿಂದ ನೂರೈವತ್ತು ರೂಪಾಯಿಗೆ ಸಿಕ್ಕರೆ, ಅದೇ ಹಣತೆ ಬೇರೆ ಕಡೆ ಮುನ್ನೂರು ರೂಪಾಯಿ ಇದೆ. ಚಿಕ್ಕಪುಟ್ಟ ಹಣತೆಗಳೆಲ್ಲ ಇಲ್ಲಿ ಐದು ಹತ್ತು ರೂಪಾಯಿಗೆ ಸಿಗುತ್ತಿವೆ.

ಜಿಲ್ಲಾ ಪಂಚಾಯತ್‌ ಸಿಇಓ ಏನಂತಾರೆ?

ಈ ಕುರಿತು ಮಾತನಾಡಿರುವ ಶಿವಮೊಗ್ಗ ಜಿಲ್ಲಾ ಪಂಚಾಯತ್‌ ಸಿಇಓ ವೈಶಾಲಿ, ಸೃಜನಶೀಲತೆ ಮತ್ತು ಪರಿಶ್ರಮದಿಂದ ಮಹಿಳೆಯರು ತಯಾರಿಸಿದ ಮಣ್ಣಿನ ದೀಪಗಳನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಖರೀದಿಸುವ ಮೂಲಕ ಸ್ವಸಹಾಯ ಮಹಿಳಾ ಗುಂಪುಗಳನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ:ಬೆಳಗಾವಿ: ಅದ್ಧೂರಿ ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡುವಂತೆ ಮಧ್ಯರಾತ್ರಿ ಪ್ರತಿಭಟನೆ

ಸದ್ಯ ಶಿವಮೊಗ್ಗದ ಹಾರನಹಳ್ಳಿ ಗ್ರಾಮದ ಎರಡು ಮಹಿಳಾ ಸ್ವಸಹಾಯ ಗುಂಪುಗಳನ್ನು ಗುರುತಿಸಿ ಅವರಿಗೆ ಜಿ.ಪಂ ಆವರಣದಲ್ಲಿರುವ ಮಳಿಗೆಯಲ್ಲಿ ಮಾರಲು ಅನುವು ಮಾಡಿಕೊಡಲಾಗಿದೆ. ಈ ತರಹ ಯಾರೇ ಇಲಾಖೆಯನ್ನು ಸಂಪರ್ಕಿಸಿದರೂ ಸಹ ಅವರಿಗೆ ವ್ಯವಸ್ಥೆ ಮಾಡಿಕೊಡಲಾಗುವುದು. ಸರ್ಕಾರದ ಮಾರ್ಗಸೂಚಿ ಅನ್ವಯ ಸ್ವಸಹಾಯ ಗುಂಪುಗಳನ್ನು ಸಂಜೀವಿನಿ ಒಕ್ಕೂಟದಡಿ ತರಲಾಗಿದೆ. ಈ ಮೂಲಕ ಗುಂಪುಗಳಿಗೆ ಆರ್ಥಿಕ ನೆರವು ನೀಡಿ ಉತ್ತೇಜನ ನೀಡಲು ಅನುವಾಗುವುದು. ಇದರ ಭಾಗವಾಗಿ ದೀಪಾವಳಿ ಹಬ್ಬದ ಪ್ರಯುಕ್ತ ಜಿಲ್ಲಾ ಪಂಚಾಯತ್‌, ಮಹಿಳಾ ಸ್ವಸಹಾಯ ಗುಂಪುಗಳು ಮಣ್ಣಿನ ಹಣತೆ ತಯಾರಿಕೆಯಲ್ಲಿ ತೊಡಗಿದ್ದರೆ ಉಚಿತವಾಗಿ ಮಳಿಗೆಗಳನ್ನು ತೆರೆಯಬಹುದು. ಸರ್ಕಾರದಿಂದಲೂ ಪ್ರೋತ್ಸಾಹ ನೀಡಲಾಗುತ್ತೆ ಎಂದು ಸಿಇಓ ಹೇಳಿದರು.

ABOUT THE AUTHOR

...view details