ಕರ್ನಾಟಕ

karnataka

ಪರಿಷತ್ ಚುನಾವಣೆ: ಮೈಸೂರಿನಲ್ಲಿ ಮೂರೂ ಪಕ್ಷದ ಅಭ್ಯರ್ಥಿಗಳು ಕೋಟ್ಯಧಿಪತಿಗಳೇ

By

Published : Nov 24, 2021, 11:57 AM IST

ಪರಿಷತ್ ಚುನಾವಣೆ
ಪರಿಷತ್ ಚುನಾವಣೆ ()

Legislative Council Election; ಮೈಸೂರು ವಿಧಾನ ಪರಿಷತ್ ಚುನಾವಣಾ ಕಣದಲ್ಲಿರುವ ಮೂರು ಪಕ್ಷದ ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದು, ಪರಿಷತ್​ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಅವರು ನೀಡಿರುವ ಆಸ್ತಿ ವಿವರದ ಮಾಹಿತಿ ಇಲ್ಲಿದೆ ನೋಡಿ.

ಮೈಸೂರು: ದಿನದಿಂದ ದಿನಕ್ಕೆ ವಿಧಾನ ಪರಿಷತ್ ಚುನಾವಣೆ ಕಾವು ರಂಗೇರುತ್ತಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಅಖಾಡಕ್ಕೆ ಧುಮುಕಿದ್ದಾರೆ. ಈ ಮೂರು ಪಕ್ಷಗಳ ಅಭ್ಯರ್ಥಿಗಳು ತಮ್ಮ ನಾಮಪತ್ರದಲ್ಲಿ ಆಸ್ತಿ ಘೋಷಣೆ ಮಾಡಿದ್ದು, ಈ ಮೂಲಕ ಮೂರೂ ಪಕ್ಷಗಳ ಅಭ್ಯರ್ಥಿಗಳು ಕೋಟ್ಯಧಿಪತಿಗಳೇ ಆಗಿರುವುದು ಕಂಡುಬಂದಿದೆ.

ಜೆಡಿಎಸ್ ಅಭ್ಯರ್ಥಿ ಸಿ.ಎನ್.‌ಮಂಜೇಗೌಡ (56) ಒಟ್ಟು 5.30 ಕೋಟಿ ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಬಳಿ 40 ಲಕ್ಷದ ಆಡಿ ( ಕ್ಯೂ7), 30 ಲಕ್ಷದ ಬಿಎಂಡಬ್ಲ್ಯೂ (3 ಸಿರೀಸ್) 22 ಲಕ್ಷದ ಹೊಂಡೈ ಕ್ರೇಟಾ, 5.5 ಲಕ್ಷದ ಷೆವ್ರೊಲೆ ಬೀಟ್, 24 ಲಕ್ಷದ ಟೊಯೋಟಾ ಫಾರ್ಚುನರ್ ಕಾರು, ಬೊಲೇರೋ ಪಿಕ್ ಅಪ್ ವಾಹನ, ಮಹೇಂದ್ರ ಮ್ಯಾಕ್ಸಿ ಟ್ರಕ್, ಟಾಟಾ 407 ವಾಟರ್ ಟ್ಯಾಂಕರ್, 2 ಬೈಕ್ ಗಳು ಹಾಗೂ ಪತ್ನಿ ಹೆಸರಲ್ಲಿ ಹೊಂಡೈ ವೆರ್ನಾ ಕಾರು ಇದೆ. ನಾಗಮ್ಮ ಚಾರಿಟಬಲ್ ಟ್ರಸ್ಟ್​ನಿಂದ‌ ನಡೆಸುತ್ತಿರುವ ಕಲ್ಯಾಣ ಮಂಟಪದಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಪ್ರಕರಣ ದಾಖಲಾಗಿ, ಆರೋಪ ಪಟ್ಟಿಯು ಸಲ್ಲಿಕೆಯಾಗಿದೆ.

ಬಿಜೆಪಿ ಅಭ್ಯರ್ಥಿ ಆರ್.ರಘು ಕೌಟಿಲ್ಯ (54) ಅವರು 11.5 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ. ಅದರಲ್ಲಿ ಪುತ್ರಿ ಆರ್.ವರ್ಣಿಕಾ ಹಾಗೂ ಪುತ್ರ ಆರ್.ಕೌಟಿಲ್ಯ ಅವರ ಪಾಲೂ ಇದೆ. 4 ನಿವೇಶನ, ಕೌಟಿಲ್ಯ ಭವನ, 2 ವಸತಿ ಕಟ್ಟಡ ಸೇರಿದಂತೆ 13.78 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. 8.82 ಕೋಟಿ ಸಾಲವಿದೆ. ಪಶುಸಂಗೋಪನೆ ವೃತ್ತಿಯನ್ನು ಪ್ರಮಾಣ ಪತ್ರದಲ್ಲಿ ತೋರಿಸಿದ್ದಾರೆ. ಎಂಎ ವ್ಯಾಸಂಗ ಮಾಡಿದ್ದು, ಒಂದು ಬೈಕ್, ಒಂದು ಕಾರು ಹಾಗೂ ರಿವಾಲ್ವಾರ್ ಹೊಂದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಡಾ. ಡಿ.ತಿಮ್ಮಯ್ಯ (76) ಅವರು ಪತ್ನಿ ಪಾಲು ಸೇರಿ 2.16 ಕೋಟಿ ಚರಾಸ್ತಿ ಹಾಗೂ 7. 5 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ನಿವೃತ್ತ ಆರೋಗ್ಯಾಧಿಕಾರಿ ಹಾಗೂ ಲ್ಯಾಂಡ್ ಡೆವಲಪರ್, ಮೈಸೂರು ಮತ್ತು ಹುಣಸೂರು ತಾಲೂಕಿನಲ್ಲಿ ಕೃಷಿ ಭೂಮಿ ಹಾಗೂ ಕೃಷಿಯೇತರ ಭೂಮಿ ಹೊಂದಿದ್ದಾರೆ. ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ 13 ಲಕ್ಷ ಚರಾಸ್ತಿ ಹಾಗೂ 6.43 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, 9 ಲಕ್ಷ ಸಾಲ ಮಾಡಿದ್ದಾರೆ.

ABOUT THE AUTHOR

...view details