ಕರ್ನಾಟಕ

karnataka

ಪೇಜಾವರ ಶ್ರೀಗಳ ಕುರಿತು ವಿವಾದಾತ್ಮಕ ಹೇಳಿಕೆ: ಕೊನೆಗೂ ಕ್ಷಮೆಯಾಚಿಸಿದ ನಾದ ಬ್ರಹ್ಮ

By

Published : Nov 15, 2021, 11:24 AM IST

Updated : Nov 15, 2021, 2:11 PM IST

ಪೇಜಾವರ ಶ್ರೀಗಳ ಕುರಿತು ಆಡಿದ ಮಾತಿಗೆ ಭಾರಿ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಹಂಸಲೇಖ ಅವರು ವಿಡಿಯೋ ಮೂಲಕ ಕ್ಷಮೆ ಕೋರಿದ್ದಾರೆ.

hamsalekha
hamsalekha

ಮೈಸೂರು: ಪೇಜಾವರ ಶ್ರೀಗಳ (Pejawar Shri) ಕುರಿತು ನಾದಬ್ರಹ್ಮ ಹಂಸಲೇಖ (Hamasalekha) ಅವರು ಮೈಸೂರಿನ‌ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಇದೀಗ ಸ್ವತಃ ಹಂಸಲೇಖ ಅವರೇ ಕ್ಷಮೆ ಕೇಳಿದ್ದಾರೆ.

ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದೇನು?

ಮೈಸೂರಿನ‌ಲ್ಲಿ ನಡೆದ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ, ಪೇಜಾವರ ಸ್ವಾಮೀಜಿಗಳು (Pejawar Swamiji) ದಲಿತರ ಮನೆಗೆ ವಾಸ ಮಾಡಲು ಹೋಗಿದ್ದಾರೆ ಎಂಬ ಸುದ್ದಿ ಕೇಳಿಬಂದಿತು. ಆದ್ರೆ, ಅವರು ಹೋಗಿ ಕುಳಿತುಕೊಳ್ಳೋಕೆ‌ ಆಗುತ್ತೆ ಅಷ್ಟೇ, ಅವರು ತಿನ್ನುವ ಕೋಳಿ, ಮೊಟ್ಟೆ ತಿನ್ನೋಕೆ ಆಗುತ್ತಾ ?. ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ..? ಲಿವರ್ ಫ್ರೈ ತಿಂತಾರಾ, ಆಗತ್ತಾ..?

ದಲಿತರ ಮನೆಗೆ ಬಲಿತರು ಹೋಗುವುದು ಏನು ದೊಡ್ಡ ವಿಷಯ ಎಂದು ನನಗೆ ಅನಿಸಿತು. ದಲಿತರನ್ನು ಬಲಿತರು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕು. ಅವರ ಮನೆಯಲ್ಲಿ ಊಟ ಹಾಕಬೇಕು. ದಲಿತರು ಮುಟ್ಟಿದ ಲೋಟಗಳನ್ನು ನಾವು ತೊಳೆಯುತ್ತೇವೆ ಎಂದು ಬಲಿತರು ಹೇಳಬೇಕು ಎಂದು ಹಂಸಲೇಖ ತಮ್ಮ ವಾದ ಮಂಡನೆ ಮಾಡಿದ್ದರು.

ಈಗ ಯಾರಿಗೋಸ್ಕರ ಮಾತನಾಡಬೇಕು

ಅಂಬೇಡ್ಕರ್ ಅವರ ಬಗ್ಗೆ ‌ಮಾತನಾಡಿದಾಗ ನನ್ನನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದಾರೆ.‌ ಈಗ ಯಾರಿಗೋಸ್ಕರ ಮಾತನಾಡಬೇಕು. ಯಾರಿಗೋಸ್ಕರ ಬದುಕಬೇಕು ಎಂಬ ಗೊಂದಲದಲ್ಲಿ ನಾವಿದ್ದೇವೆ. ಅದಕ್ಕೆ ಅಂಬೇಡ್ಕರ್ ಅವರು ಹೇಳಿದ್ದು, ನಮ್ಮ ಎಚ್ಚರಿಕೆಯನ್ನು ನಾವು ಯಾವಾಗಲೂ ಎಚ್ಚರವಾಗಿಟ್ಟಿರಬೇಕು.

ಮೈಸೂರಿನ‌ಲ್ಲಿ ನಡೆದ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ

ನಾವು ಪ್ರಜಾಪ್ರಭುತ್ವವನ್ನು ನಂಬಿ ಬಂದಿದ್ದೇವೆ. ನನಗೆ ಭಗವದ್ಗೀತೆ ಎಷ್ಟು ಸಹಾಯ ಮಾಡಿತು ಎನ್ನುವುದಕ್ಕಿಂತ ಬಾಬಾ ಸಾಹೇಬರು ಬರೆದ ಬಡವಗೀತೆ ಸ್ವಾತಂತ್ರ್ಯ ಕೊಟ್ಟಿದೆ. ಅಂಬೇಡ್ಕರ್ ಹೇಳುವಂತೆ, ಯಾರು ಆ್ಯಕ್ಟಿವ್​ ಆಗಿರುತ್ತಾರೋ ಅವರು ಆಡಳಿತಕ್ಕೆ ಬರುತ್ತಾರೆ. ಯಾರು ಆ್ಯಕ್ಟಿವ್ ಇರುವುದಿಲ್ಲವೋ ಅವರು ಆಡಳಿತಕ್ಕೆ ಬರುವುದಿಲ್ಲ ಎಂದು ಸಂವಿಧಾನದಲ್ಲಿ ಬರೆದಿದ್ದಾರೆ. ನಾವು ಇನ್ ಆ್ಯಕ್ಟಿವ್ ಆಗಿದ್ದಕ್ಕೆ ಅವರು ಆ್ಯಕ್ಟಿವ್ ಆಗಿದ್ದಾರೆ ಎಂದು ಹೇಳಿದ್ದರು.

ಕ್ಷಮೆಯಾಚಿಸಿದ ಹಂಸಲೇಖ :

ಪೇಜಾವರ ಶ್ರೀಗಳ ಕುರಿತು ಆಡಿದ ಮಾತಿಗೆ ಭಾರಿ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಹಂಸಲೇಖ ಅವರು ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ. ನನಗೆ ಗೊತ್ತಿದೆ. ಎಲ್ಲ ಮಾತುಗಳಿಗೂ ಅದು ವೇದಿಕೆಯಲ್ಲ. ’’ಆ ವೇದಿಕೆಯಲ್ಲಿ ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಇರಬೇಕಿತ್ತು. ಆದರೆ ತಪ್ಪಾಗಿದೆ. ಅಸ್ಪೃಶ್ಯತೆ ಎಂಬುದು ನಮ್ಮ ದೇಶಕ್ಕೆ ಅಂಟಿದ ಶಾಪ. ಈ ಅನಿಷ್ಠವನ್ನು ತೊಡೆದು ಹಾಕುವುದಕ್ಕೆ ಪೇಜಾವರದಂತಹ ಗುರು-ಹಿರಿಯರು ಅಪಾರ ಪ್ರಯತ್ನ ನಡೆಸುತ್ತಿದ್ದಾರೆ. ಅದರ ಬಗ್ಗೆ ನನಗೆ ಅಪಾರ‌ ಗೌರವವಿದೆ’’ ಎಂದು ಹೇಳಿದ್ದಾರೆ.

’’ನಾನು ಒಬ್ಬ ಸಂಗೀತಗಾರ, ನಮಗ್ಯಾಕೆ ಟ್ರೋಲ್​. ಕಂಟ್ರೋಲ್ ಆಗಿರುವುದು ನಮ್ಮ ಕೆಲಸ. ನನಗೆ ಯಾರಿಗೂ ನೋವು ಕೊಡಲು ಇಷ್ಟವಿಲ್ಲ. ನನ್ನ ಸಂಗೀತದಿಂದ ನನ್ನ ಮಾತು, ಬದುಕು ಕೂಡ ಎಲ್ಲರಿಗೂ ಸುಖ ಕೊಡಬೇಕು. ಎಲ್ಲ ಅನಿಷ್ಟಗಳನ್ನು ತೊಡೆದು ಹಾಕುವ ದಿಸೆಯಲ್ಲಿ ನನ್ನ ಪಾತ್ರ ಇದ್ದರೆ, ಅದನ್ನು ನಾನು ಮಾಡಿಯೇ ಮಾಡುತ್ತೇನೆ’’ ಎಂದು ಹೇಳಿದ್ದಾರೆ.

Last Updated : Nov 15, 2021, 2:11 PM IST

ABOUT THE AUTHOR

...view details