ಕರ್ನಾಟಕ

karnataka

ರಾಜ್ಯಸಭೆ ಚುನಾವಣೆ: ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಬಿಜೆಪಿ - ಜೆಡಿಎಸ್ ನಡುವೆ ಮೈತ್ರಿ?

By

Published : May 15, 2022, 7:56 AM IST

ರಾಜ್ಯಸಭೆ ಚುನಾವಣೆ
ರಾಜ್ಯಸಭೆ ಚುನಾವಣೆ ()

ರಾಜ್ಯಸಭೆಯ ನಾಲ್ಕು ಸ್ಥಾನಗಳಲ್ಲಿ ಶಾಸಕರ ಸಂಖ್ಯಾಬಲವನ್ನಾಧರಿಸಿ ಬಿಜೆಪಿ 2 ಹಾಗೂ ಕಾಂಗ್ರೆಸ್ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ನಾಲ್ಕನೇ ಅಭ್ಯರ್ಥಿಯ ಗೆಲುವಿಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್​​ಗೆ ಮತಗಳ ಕೊರತೆ ಉಂಟಾಗಿದೆ. ಹಾಗಾಗಿ ಯಾವುದೇ ಪಕ್ಷವಾದರೂ ನಾಲ್ಕನೇ ಅಭ್ಯರ್ಥಿ ಕಣಕ್ಕಿಳಿಸಲು ಎರಡು ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ.

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆಗಳು, ಸಮಾಲೋಚನಾ ಸಭೆಗಳು ಆರಂಭವಾಗಿವೆ. ನಾಲ್ಕನೇ ಅಭ್ಯರ್ಥಿ ಗೆಲುವಿನ ಬಗ್ಗೆ ಹೆಚ್ಚು ಮಾತುಕತೆ ರಾಜಕೀಯ ಪಕ್ಷಗಳಲ್ಲಿ ನಡೆಯುತ್ತಿದ್ದು, ಗೆಲುವಿಗಾಗಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಏರ್ಪಡುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.

ರಾಜ್ಯಸಭೆಯ ನಾಲ್ಕು ಸ್ಥಾನಗಳಲ್ಲಿ ಶಾಸಕರ ಸಂಖ್ಯಾಬಲವನ್ನಾಧರಿಸಿ ಬಿಜೆಪಿ 2 ಹಾಗೂ ಕಾಂಗ್ರೆಸ್ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ನಾಲ್ಕನೇ ಅಭ್ಯರ್ಥಿಯ ಗೆಲುವಿಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್​​ಗೆ ಮತಗಳ ಕೊರತೆ ಉಂಟಾಗಿದೆ. ಹಾಗಾಗಿ ಯಾವುದೇ ಪಕ್ಷವಾದರೂ ನಾಲ್ಕನೇ ಅಭ್ಯರ್ಥಿ ಕಣಕ್ಕಿಳಿಸಲು ಎರಡು ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

ಸದ್ಯದ ರಾಜಕೀಯ ಪರಿಸ್ಥಿಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳದ್ದು ಒಂದೊಂದು ದಿಕ್ಕಾದರೂ ರಾಜ್ಯಸಭೆ ಚುನಾಚಣೆ ವೇಳೆ ಅಭ್ಯರ್ಥಿ ಗೆಲುವಿಗಾಗಿ ಎರಡು ಪಕ್ಷಗಳು ಸೇರಿಕೊಂಡು ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸುವುದು ಸಾಮಾನ್ಯವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಶತ್ರು ಪಕ್ಷಗಳಾಗಿದ್ದರಿಂದ ಈ ಎರಡು ಪಕ್ಷಗಳ ನಡುವೆ ಹೊಂದಾಣಿಕೆ ಅಸಾಧ್ಯ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಒಂದು ರೀತಿಯ ಕೊಟ್ಟು - ತೆಗೆದುಕೊಳ್ಳುವ ಅಡ್ಜಸ್ಟ್​​ಮೆಂಟ್ ರಾಜಕೀಯ ಇದ್ದು ಈ ಪ್ರಕಾರ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್​ನಿಂದ ಜಂಟಿ ಅಭ್ಯರ್ಥಿ ಸ್ಪರ್ಧಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಗೆಲುವಿಗೆ ಬೇಕು 45 ಮತ:ರಾಜ್ಯಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲುವಿಗೆ ಕನಿಷ್ಟ 45 ಮತಗಳ ಅಗತ್ಯತೆ ಇದೆ. ವಿಧಾನಸಭೆಯಲ್ಲಿ ಬಿಜೆಪಿ 121 ಶಾಸಕರು ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿ ಹೊಂದಿದೆ. ಎರಡು ಅಭ್ಯರ್ಥಿ ಆಯ್ಕೆ ಬಳಿಕ ಬಿಜೆಪಿ ಬಳಿ 32 ಮತಗಳು ಉಳಿಯಲಿವೆ. ಕಾಂಗ್ರೆಸ್ ಪಕ್ಷ 70 ಶಾಸಕರ ಬಲವನ್ನು ಹೊಂದಿದ್ದು ಒಬ್ಬ ಅಭ್ಯರ್ಥಿಯನ್ನ ಸುಲಭವಾಗಿ ಗೆಲ್ಲಿಸಿಕೊಳ್ಳಬಹುದಾಗಿದೆ. ಎರಡನೇ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್ ಸುಮಾರು 20 ಮತಗಳ ಕೊರತೆ ಎದುರಿಸುತ್ತದೆ. ವಿಧಾನಸಭೆಯಲ್ಲಿ 32 ಶಾಸಕರ ಬಲ ಹೊಂದಿರುವ ಜೆಡಿಎಸ್ ಸ್ವಂತ ಬಲದಿಂದ ಒಬ್ಬ ಅಭ್ಯರ್ಥಿಯನ್ನೂ ಗೆಲ್ಲಿಸುವುದು ಕಷ್ಟವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಜಂಟಿ ಅಭ್ಯರ್ಥಿ ನಿಲ್ಲಿಸಿದರೆ ನಾಲ್ಕನೇ ಅಭ್ಯರ್ಥಿ ಗೆಲವು ಸುಲಭವಾಗಲಿದೆ.

ರಾಜ್ಯ ಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಕುರಿತಂತೆ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಾಲಿ ರಾಜ್ಯಸಭೆ ಸದಸ್ಯ ಕೆ.ಸಿ.ರಾಮಮೂರ್ತಿ ಅವರನ್ನು ಪುನರಾಯ್ಕೆ ಮಾಡಲು ಒಲವು ವ್ಯಕ್ತವಾಗಿದೆ. ಮೂರನೇ ಅಭ್ಯರ್ಥಿಗಾಗಿ ಉದ್ಯಮಿ ಪ್ರಕಾಶ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಲೇಹರ್ ಸಿಂಗ್, ಮಾಜಿ ಶಾಸಕ ನಿರ್ಮಲ ಕುಮಾರ ಸುರಾನ ಅವರ ಹೆಸರನ್ನು ಶಿಫಾರಸ್ಸು ಮಾಡಲು ನಿರ್ಧರಿಸಿದೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ಕೇಂದ್ರದ ಮಾಜಿ ಸಚಿವರಾದ ದಿ.ಆಸ್ಕರ್ ಫರ್ನಾಂಡಿಸ್ ಅವರ ಪುತ್ರಿ ರಾಜ್ಯ ಸಭೆಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಬಾರಿ ನಿವೃತ್ತಿಯಾಗುತ್ತಿರುವ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ ಸಹ ಕಾಂಗ್ರೆಸ್ ಪಕ್ಷದಿಂದ ಪುನರಾಯ್ಕೆ ಬಯಸುತ್ತಿದ್ದು, ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಲಿದೆ ಎನ್ನುವುದು ಕುತೂಹಲಕಾರಿಯಾಗಿದೆ.

ಬಿಜೆಪಿ ಬೆಂಬಲ ನೀಡಿದರೆ ಜೆಡಿಎಸ್ ಸಹ ನಾಲ್ಕನೇ ಅಭ್ಯರ್ಥಿಯಾಗಿ ತನ್ನ ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸಲು ಉತ್ಸುಕವಾಗಿದೆ. ಆದರೆ ರಾಜ್ಯಸಭೆಯಲ್ಲಿ ಬಿಜೆಪಿ ತನ್ನ ಸೀಟು ಹೆಚ್ಚು ಮಾಡಿಕೊಳ್ಳುವ ಉದ್ದೇಶದಿಂದ ಜೆಡಿಎಸ್​ಗೆ ಬೆಂಬಲ ನೀಡುವುದು ಅನುಮಾನ.

ಇದನ್ನೂ ಓದಿ: RSS ಕಚೇರಿಯಲ್ಲಿ ಸಿಎಂ, ಬಿಜೆಪಿ ನಾಯಕರ ಸುದೀರ್ಘ ಸಭೆ: ಅಭ್ಯರ್ಥಿ ಆಯ್ಕೆ ಚರ್ಚೆ

ABOUT THE AUTHOR

...view details