ಕರ್ನಾಟಕ

karnataka

ಮತದಾರರ ತೀರ್ಪಿಗೆ ಹೆದರಿ ಸರ್ಕಾರ 'ತೈಲ ದರ' ಇಳಿಕೆ ಮಾಡಿದೆ: ಡಿ.ಕೆ.ಶಿವಕುಮಾರ್

By

Published : Nov 4, 2021, 5:19 PM IST

ಮತದಾರರ ತೀರ್ಪಿಗೆ ಹೆದರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್- ಡೀಸೆಲ್​​ ಬೆಲೆ ಕಡಿಮೆ ಮಾಡಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಇಂಧನ ದರ ಇಳಿಕೆ ಅಷ್ಟೇ ಅಲ್ಲ, ಜನತೆಗೆ ಉದ್ಯೋಗ ಸಿಗಬೇಕು. ಗ್ಯಾಸ್, ಸಿಮೆಂಟ್ ಹಾಗು ಕಬ್ಬಿಣದ ಬೆಲೆ ಕೂಡ ಕಡಿಮೆ ಆಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

DK Shivakumar
ಡಿ.ಕೆ.ಶಿವಕುಮಾರ್

ಬೆಂಗಳೂರು: ಮತದಾರರ ತೀರ್ಪಿಗೆ ಸರ್ಕಾರಗಳು ಹೇಗೆ ಹೆದರುತ್ತವೆ ಎಂಬುದಕ್ಕೆ ಉಪಸಮರ ಸಾಕ್ಷಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್- ಡೀಸೆಲ್​​ ಬೆಲೆ ಕಡಿಮೆ ಮಾಡಿವೆ. ತೈಲದ ಮೇಲಿನ ತೆರಿಗೆ ಇಳಿಕೆ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ತೈಲ ದರ ಇಳಿಕೆ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಸದಾಶಿವನಗರದಲ್ಲಿ ಮಾತನಾಡಿದ ಅವರು, ಚುನಾವಣೆಯ ಫಲಿತಾಂಶ ಬರುತ್ತಿದ್ದಂತೆ, ಮತದಾರರ ತೀರ್ಪಿಗೆ ಬೆಳಕು ಬರುತ್ತದೆ ಎಂದು ಹೇಳಿದ್ದೆ. ಪ್ರಜಾಪ್ರಭುತ್ವದಲ್ಲಿ ಮತದಾರರ ತೀರ್ಪಿಗೆ ಎಷ್ಟು ಬೆಲೆ ಇದೆ. ಬಿಜೆಪಿ ಆಡಳಿತ ಇದ್ದರೂ ಕೂಡ ಅವರ ವಿರುದ್ಧ ಮತ ನೀಡಿದ್ದಾರೆ. ಇದನ್ನೇ ನಾವು ಹೇಳಿದ್ದು. ಮತದಾನ ಅಸ್ತ್ರವಾಗಬೇಕು ಎಂದು. ಅದಕ್ಕೆ ಫಲ ಸಿಕ್ಕಿದೆ ಎಂದರು.

ಹೋರಾಟ ಮುಂದುವರೆಸುತ್ತೇವೆ:ಇಂಧನ ದರ ಇಳಿಕೆ ಅಷ್ಟೇ ಅಲ್ಲ, ಜನತೆಗೆ ಉದ್ಯೋಗ ಸಿಗಬೇಕು. ಗ್ಯಾಸ್, ಸಿಮೆಂಟ್ ಹಾಗು ಕಬ್ಬಿಣದ ಬೆಲೆ ಕೂಡ ಕಡಿಮೆಯಾಗಬೇಕು. ಜನರಿಂದ ಸಂಗ್ರಹಿಸಿದ ಹಣವನ್ನು ವಾಪಸ್ ನೀಡಬೇಕು. ಗ್ಯಾಸ್ ಬೆಲೆ ಕಡಿಮೆ ಆಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಕಾಂಗ್ರೆಸ್ ಪಕ್ಷ ನ.14ರಿಂದ ಜನರಿಗೆ ಜಾಗೃತಿ ಮೂಡಿಸುವ ಕೆಲಸ ‌ಮಾಡಲಿದೆ. ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದರು.

ಜನರೇ ಎಚ್ಚರಿಕೆ ನೀಡಿದ್ದಾರೆ:ಕೇಂದ್ರ ಸರ್ಕಾರ 5 ರೂ., ಹಾಗು ರಾಜ್ಯ 7 ರೂ. ಬೆಲೆ ಇಳಿಸಿದೆ. ಈ ರೀತಿ ಮಾಡಿದ್ದನ್ನು ನಾನು ಎಂದೂ ಕಂಡಿರಲಿಲ್ಲ. ಆಡಳಿತ ಸರ್ಕಾರದ ವಿರುದ್ಧವೇ ಜನ ಮತ ನೀಡಿದ್ದಾರೆ. ಅವರ ಸರ್ಕಾರ ಇರುವ ಕಡೆಯೇ ಜನ ಎಚ್ಚರಿಕೆ ಕೊಟ್ಟಿದ್ದಾರೆ. ಅವರ ಆಡಳಿತ ಸರಿಯಿಲ್ಲವೆನ್ನುವುದನ್ನು ತೋರಿಸಿದ್ದಾರೆ ಎಂದರು.

ಸದ್ಯದಲ್ಲೇ ಕರ್ನಾಟಕ ಕತ್ತಲಲ್ಲಿ ಮುಳುಗಲಿದೆ: ಸರ್ಕಾರ ನಡೆಸುವಲ್ಲಿ ಇವರು ವಿಫಲವಾಗಿದ್ದಾರೆ. ಸದ್ಯದಲ್ಲಿಯೇ ಕರ್ನಾಟಕ ಕತ್ತಲಲ್ಲಿ ಮುಳುಗಲಿದೆ ಎಂದು ಡಿಕೆಶಿ ಆತಂಕ ವ್ಯಕ್ತಪಡಿಸಿದರು. ನಾವು ಇದ್ದಾಗ ಹೆಚ್ಚುವರಿ ವಿದ್ಯುತ್ ಇತ್ತು. ಇತರ ರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡಿದ್ದೆವು.

ಒಂದು ವೇಳೆ ವಿದ್ಯುತ್ ಅಭಾವವಾದರೆ, ಬೇರೆ ರಾಜ್ಯ ಮತ್ತು ದೇಶದವರು ಹೂಡಿಕೆ ಮಾಡಲು ಬರುವುದಿಲ್ಲ. ಇನ್ನೂ ಸ್ವಲ್ಪ ದಿನದಲ್ಲಿ ಕರ್ನಾಟಕದಲ್ಲಿ ಕತ್ತಲು ಶುರುವಾಗಲಿದೆ. ನಮ್ಮ ರಾಜ್ಯದಲ್ಲಿ ವಿದ್ಯುತ್​​ ಕೊರತೆಯುಂಟಾಗಬಾರದು. ವಿದ್ಯುತ್​​ ಕಡಿತ ಮಾಡಿದ್ರೆ ಹುಷಾರ್​​ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.

ಮಳೆಯಿಂದಾಗಿ ವಿದ್ಯುತ್ ಸಮಸ್ಯೆ ಸುಧಾರಿಸಿದೆ. ಈಗ ವಿದ್ಯುತ್ ಸಮಸ್ಯೆಯಾಗಲ್ಲ. ಆದರೆ ಮುಂದೆ ಪವರ್ ಕಟ್ ಸಮಸ್ಯೆ ಎದುರಾಗುತ್ತದೆ. ಹಿಂದೆ ಕಲ್ಲಿದ್ದಲು ಸಾಗಾಟಕ್ಕೆ ಅನುಮತಿ ಇರಲಿಲ್ಲ. ನಮಗೆ ಹೆಸರು ಬರುತ್ತದೆ ಎಂದು ಕೊಟ್ಟಿರಲಿಲ್ಲ. ಈಗ ಇವರಿಗೆ ಅನುಮತಿ ಕೊಟ್ಟಿದ್ದಾರೆ. ಆದರೂ ಕಲ್ಲಿದ್ದಲು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಮುಂದೆ ವಿದ್ಯುತ್​​ ಕೊರತೆಯಾಗಲಿದೆ ಎಂದು ಡಿಕೆಶಿ ಆತಂಕ ವ್ಯಕ್ತಪಡಿಸಿದರು.

100 ದಿನ ಪೂರೈಸಿರುವುದಕ್ಕೆ ಸಿಎಂ ಪುಸ್ತಕ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ,ಪುಸ್ತಕಬಿಡುಗಡೆ ಮಾಡಲಿ. ಜನ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ನಾಯಕತ್ವ ಬದಲಾದರೂ ಬಿಜೆಪಿ ಸರ್ಕಾರವೇ ಇರುವುದು. ಸಿಎಂ ಆಗಿ ನೂರು ದಿನ ಆಗುತ್ತಿದೆ. ಪಾಪ ಒಳ್ಳೆಯ ಕೆಲಸ ಮಾಡಿದ್ದಾರೆ. ಅದಕ್ಕೆ ಅವರ ಜಿಲ್ಲೆಯ ಜನ ಶಹಭಾಷ್ ಗಿರಿ ಕೊಟ್ಟಿದ್ದಾರೆ ಎಂದು ಹಾನಗಲ್ ಚುನಾವಣೆ ಸೋಲಿನ ಬಗ್ಗೆ ಡಿಕೆಶಿ ಲೇವಡಿ ಮಾಡಿದರು.

ಇದನ್ನೂ ಓದಿ:100 ದಿನಗಳ ಸಂಭ್ರಮದಲ್ಲಿರುವ ಬೊಮ್ಮಾಯಿ ಸರ್ಕಾರ ಎದುರಿಸಿದ ಸವಾಲು-ಸಂಕಷ್ಟಗಳು ನೂರೆಂಟು

ABOUT THE AUTHOR

...view details