ಕರ್ನಾಟಕ

karnataka

ಮೇಲ್ಮನೆ ಚುನಾವಣೆ ಪ್ರಕಟ : ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ವಿಘ್ನ!?

By

Published : May 11, 2022, 1:05 PM IST

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಯುವುದೇ ಅನುಮಾನವಾಗಿದೆ. ಮೇಲ್ಮನೆ ಚುನಾವಣೆ ಪ್ರಕಟಗೊಂಡ ಹಿನ್ನೆಲೆ ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ವಿಘ್ನ ಎದುರಾದಂತಿದೆ..

Karnataka Cabinet expansion, Bjp high command Secretes, Cabinet expansion again Postponed, Karnataka Cabinet expansion news, ಕರ್ನಾಟಕ ಸಚಿವ ಸಂಪುಟ ವಿಸ್ತರಣೆ, ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ವಿಘ್ನ, ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಸುದ್ದಿ, ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡುವ ಸಾಧ್ಯತೆ,
ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ವಿಘ್ನ

ಬೆಂಗಳೂರು :ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ವಿಘ್ನ?. ರಾಜ್ಯ ಸರಕಾರದ ಮಂತ್ರಿಮಂಡಲ ವಿಸ್ತರಣೆ ಅಥವಾ ಪುನಾರಚನೆಗೆ ಕಸರತ್ತು ನಡೆಯುತ್ತಿರುವಾಗಲೇ ವಿಧಾನಸಭೆಯಿಂದ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಚುನಾವಣೆ ವೇಳಾಪಟ್ಟಿ ಘೋಷಣೆಯಾಗಿರುವುದು ಸಂಪುಟ ವಿಸ್ತರಣೆಗೆ ವಿಘ್ನ ತಲೆದೋರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಆದ್ರೆ, ಅಮಿತ್​ ಶಾ ಭೇಟಿ ನಂತರ ಖಚಿತ ಮಾಹಿತಿ ಹೊರ ಬೀಳಲಿದೆ.

ಸಿಎಂ ಬೊಮ್ಮಾಯಿ ದೆಹಲಿಯಲ್ಲಿದ್ದು, ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಒಪ್ಪಿಗೆ ಪಡೆದು ಬರುತ್ತಾರೆ. ಈ ವಾರದಲ್ಲಿಯೇ ಹೊಸ ಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎನ್ನುವುದು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರುವ ಮಾತು. ಆದರೆ, ದಿಢೀರ್ ಕೇಂದ್ರ ಚುನಾವಣಾ ಆಯೋಗ ಮೇಲ್ಮನೆಗೆ ಚುನಾವಣೆ ದಿನಾಂಕ ಘೋಷಿಸಿರುವುದು ಸಂಪುಟ ವಿಸ್ತರಣೆಯನ್ನೂ ಸಹ ಮುಂದೂಡಲು ರಾಜಕೀಯ ಕಾರಣವಾಗಬಹುದೆಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಚುನಾವಣೆಗಳು, ವಿಧಾನಸಭೆ ಅಧಿವೇಶನ, ಬಜೆಟ್ ಮಂಡನೆ, ಹಬ್ಬ ಹರಿದಿನಗಳು, ಶೂನ್ಯಮಾಸ, ಪಿತೃಪಕ್ಷ, ಆಷಾಢ ಮಾಸ ಸಂದರ್ಭಗಳಲ್ಲಿ ಒಂದಿಲ್ಲೊಂದು ಕಾರಣಗಳ ನೆಪವೊಡ್ಡಿ ಸಚಿವ ಸಂಪುಟ ವಿಸ್ತರಣೆ ಮುಂದೂಡಿದ ನಿದರ್ಶನಗಳು ರಾಜಕಾರಣದಲ್ಲಿ ಸಹಜ ಪ್ರಕ್ರಿಯೆಗಳಾಗಿವೆ. ಯಾವುದೇ ಕ್ಷಣದಲ್ಲಾದರೂ ಮಂತ್ರಿಮಂಡಲ ವಿಸ್ತರಣೆ ನಡೆಯಬಹುದೆಂದು ನಿರೀಕ್ಷಿಸಲಾಗುತ್ತಿರುವ ಸಂದರ್ಭದಲ್ಲಿ ಮಂಗಳವಾರ ಪರಿಷತ್ ಚುನಾವಣೆ ದಿನಾಂಕ ಪ್ರಕಟವಾಗಿರುವುದು ಸಚಿವ ಸ್ಥಾನಾಕಾಂಕ್ಷಿಗಳಲ್ಲಿ ನಿರಾಶೆ ಮೂಡಿಸಿದೆ.

ಓದಿ:ಅಮಿತ್ ಶಾ ಜೊತೆ ಮಧ್ಯಾಹ್ನ ಸಿಎಂ ಸಭೆ: ಸಂಪುಟ ಸರ್ಕಸ್‌ಗೆ ಬೀಳುತ್ತಾ ತೆರೆ?

ಮೇಲ್ಮನೆ ಚುನಾವಣೆ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ನಡೆಸಿದರೆ ಮಂತ್ರಿಸ್ಥಾನ ವಂಚಿತ ಶಾಸಕರು ಅಸಮಾಧಾನಗೊಂಡು ಅಭ್ಯರ್ಥಿಗಳ ಸೋಲಿಗೆ ಕಾರಣವಾದರೆ ಪಕ್ಷಕ್ಕೆ ಮುಜುಗರ. ಇದನ್ನು ತಪ್ಪಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಕ್ಯಾಬಿನೆಟ್ ವಿಸ್ತರಣೆ ಮುಂದೂಡುವ ಸಾಧ್ಯತೆಗಳೇ ಹೆಚ್ಚಾಗಿವೆ ಎನ್ನಲಾಗುತ್ತದೆ.

ಸಂಪುಟ ವಿಸ್ತರಣೆ/ ಪುನಾರಚನೆ ಬಗ್ಗೆ ಹೈಕಮಾಂಡ್ ಚರ್ಚಿಸುವ ಅಪೇಕ್ಷೆಯೊಂದಿಗೆ ಬೊಮ್ಮಾಯಿ ದೆಹಲಿಗೆ ತೆರಳಿದ್ದರು. ಜೆ.ಪಿ.ನಡ್ಡಾ, ಪ್ರಧಾನಿ ಮೋದಿ ಭೇಟಿಗೆ ಕಾಲಾವಕಾಶವನ್ನು ಇದುವರೆಗೆ ನೀಡಿಲ್ಲ. ಆದ್ರೆ, ಸಿಎಂ ಬೊಮ್ಮಾಯಿ ಭೇಟಿಗೆ ಗೃಹ ಸಚಿವ ಅಮಿತ್ ಶಾ ಇಂದು ಮಧ್ಯಾಹ್ನ ಕಾಲಾವಕಾಶ ನೀಡಿದ್ದಾರೆ. ಭೇಟಿ ಬಳಿಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ತಿಳಿಯಲಿದೆ. ಈ ವಿದ್ಯಮಾನವನ್ನು ಗಮನಿಸಿದರೆ ಮೇಲ್ಮನೆ ಚುನಾವಣೆ ನಡೆಯುವ ತನಕ ಸಂಪುಟ ವಿಸ್ತರಣೆ ಅನುಮಾನವಾಗಿದೆ.

ಮಂತ್ರಿಮಂಡಲ ವಿಸ್ತರಣೆ ಮಂದೂಡಲ್ಪಟ್ಟರೆ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬೇಸರದ ಸಂಗತಿಯಾದರೆ, ಸಂಪುಟ ಪುನಾರಚನೆ ವೇಳೆ ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿದ್ದ ಸಚಿವರಿಗೆ ಮತ್ತೊಂದಿಷ್ಟು ದಿನ ಪವರ್​ನಲ್ಲಿರಲು ಕಾಲಾವಕಾಶ ಸಿಕ್ಕಂತಾಗಿದೆ.

ABOUT THE AUTHOR

...view details