ಕರ್ನಾಟಕ

karnataka

ಕೋವಿಡ್ 3ನೇ ಅಲೆ ಸಾಧ್ಯತೆ : ಕ್ರಿಯಾ ಯೋಜನೆ, ಸಿದ್ಧತೆಗಳ ವರದಿ ಕೇಳಿದ ಹೈಕೋರ್ಟ್

By

Published : May 12, 2021, 7:04 PM IST

Updated : May 12, 2021, 7:24 PM IST

ಕೋವಿಡ್ 3ನೇ ಅಲೆ ಎದುರಿಸಲು ಸರ್ಕಾರ ಈಗಿಂದಲೇ ಸಿದ್ಧಗೊಳ್ಳಬೇಕು. ಅಗತ್ಯವಿರುವ ಬೆಡ್, ಔಷಧಿ, ಆಕ್ಸಿಜನ್, ವೈದ್ಯಕೀಯ ಸಿಬ್ಬಂದಿ ಎಷ್ಟು ಬೇಕೆಂದು ಅಂದಾಜು ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎದುರಾಗಬಹುದಾದ ಕೋವಿಡ್ 3ನೇ ಅಲೆ ಎದುರಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿ, ವರದಿ ಸಲ್ಲಿಸುವಂತೆ ಹೈಕೋರ್ಟ್​ ನಿರ್ದೇಶಿಸಿದೆ.

ನ್ಯಾಯಾಲಯ
ನ್ಯಾಯಾಲಯ

ಬೆಂಗಳೂರು: ಕೋವಿಡ್ ಮೂರನೇ ಅಲೆ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸರ್ಕಾರ ಅದನ್ನು ಹೇಗೆ ನಿಭಾಯಿಸಲಿದೆ, ಸಿದ್ಧತೆಗಳೇನು ಎಂಬ ಬಗ್ಗೆ ಎರಡು ವಾರಗಳಲ್ಲಿ ಕ್ರಿಯಾ ಯೋಜನೆ ರೂಪಿಸಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ಹಿರಿಯ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠ ಸರ್ಕಾರಕ್ಕೆ ಈ ನಿರ್ದೇಶನ ನೀಡಿದೆ.

ಕೆಲ ಕಾಲ ಅರ್ಜಿಗಳ ವಿಚಾರಣೆ ನಡೆಸಿದ ಪೀಠ, ಕೋವಿಡ್ ಸವಾಲುಗಳನ್ನು ಎದುರಿಸಲು ಸಾಕಷ್ಟು ತಯಾರಿ ಬೇಕು. ಹೀಗಾಗಿ, ಕೋವಿಡ್ 3ನೇ ಅಲೆ ಎದುರಿಸಲು ಸರ್ಕಾರ ಈಗಿಂದಲೇ ಸಿದ್ಧಗೊಳ್ಳಬೇಕು.

ಅದಕ್ಕಾಗಿ ಅಗತ್ಯವಿರುವ ಬೆಡ್, ಔಷಧಿ, ಆಕ್ಸಿಜನ್, ವೈದ್ಯಕೀಯ ಸಿಬ್ಬಂದಿ ಎಷ್ಟು ಬೇಕೆಂದು ಅಂದಾಜು ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎದುರಾಗಬಹುದಾದ ಕೋವಿಡ್ 3ನೇ ಅಲೆ ಎದುರಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿ, ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.

ಇದಕ್ಕೂ ಮುನ್ನ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ರಾಜ್ಯದಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು 45,754 ಬೆಡ್‌ಗಳು, 5,035 ಐಸಿಯು ಬೆಡ್‌ಗಳು, 4,109 ವೆಂಟಿಲೇಟರ್ ಬೆಡ್​ಗಳು ಲಭ್ಯ ಇವೆ. ಹಾಗಿದ್ದೂ ಕೇಂದ್ರದ ಯೋಜನೆಯಂತೆ 66,333 ಆಕ್ಸಿಜನ್ ಬೆಡ್​ಗಳು ಹಾಗೂ 13,969 ಐಸಿಯು ಬೆಡ್‌ ಹಾಗೂ 8,332 ವೆಂಟಿಲೇಟರ್ ಬೆಡ್ ಬೇಕಿವೆ ಎಂದರು.

ಅಂಕಿ-ಅಂಶ ಪರಿಶೀಲಿಸಿದ ಪೀಠ, ರಾಜ್ಯದಲ್ಲಿ ಅಗತ್ಯಕ್ಕಿಂತ ಸಾಕಷ್ಟು ಬೆಡ್ ಕೊರತೆ ಇದೆ ಎಂದು ಅಭಿಪ್ರಾಯಪಟ್ಟಿತಲ್ಲದೇ, ಮೂರನೇ ಅಲೆ ಎದುರಿಸುವ ಕುರಿತು ವಿವರಣೆ ಕೇಳಿತು.

Last Updated : May 12, 2021, 7:24 PM IST

ABOUT THE AUTHOR

...view details