ಕರ್ನಾಟಕ

karnataka

ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ಸೇರಿದ ತ್ಯಾಜ್ಯ.. ಬಂತು ಆತಂಕಕಾರಿ ವರದಿ

By

Published : Nov 27, 2021, 3:30 PM IST

ಅರ್ಕಾವತಿ ನದಿ ಪಾತ್ರದ ಕೆರೆಗಳು ಕಲುಷಿತಗೊಳ್ಳುತ್ತಿದೆ. ಕೆರೆ ನೀರಿನಲ್ಲಿ ಅಪಾಯಕಾರಿ ಫ್ಲೋರೈಡ್​ ಅಂಶ ಪತ್ತೆಯಾಗಿದೆ ಮತ್ತು ಬಳಕೆಗೆ ಯೋಗ್ಯವಲ್ಲದ ನೀರು ಎಂಬ ಆತಂಕಕಾರಿ ವರದಿ ಬಂದಿದೆ.

fluoride found in lakes of doddaballapur
ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ಸೇರಿದ ತ್ಯಾಜ್ಯ

ದೊಡ್ಡಬಳ್ಳಾಪುರ(ಬೆಂಗಳೂರು): 20 ವರ್ಷಗಳ ನಂತರ ಅರ್ಕಾವತಿ ನದಿ ಪಾತ್ರದ ಕೆರೆಗಳು ತುಂಬಿ ಹರಿಯುತ್ತಿದೆ. ಆದ್ರೆ ನದಿ ಪಾತ್ರದ ಕೆರೆಗಳಿಗೆ ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ಒಳಚರಂಡಿ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಸೇರಿ ಕೆರೆಯ ಬಣ್ಣ ಕಪ್ಪು ಬಣ್ಣಕ್ಕೆ ತಿರುಗಿದೆ. ಅಲ್ಲದೇ, ಕೆರೆ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿದಾಗ ಅಪಾಯಕಾರಿ 2.10ರಷ್ಟು ಫ್ಲೋರೈಡ್ ಪ್ರಮಾಣ ಪತ್ತೆಯಾಗಿದೆ ಮತ್ತು ಬಳಕೆಗೆ ಯೋಗ್ಯವಲ್ಲದ ನೀರು ಎಂಬ ಆತಂಕಕಾರಿ ವರದಿ ಬಂದಿದೆ.

ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ಸೇರಿದ ತ್ಯಾಜ್ಯ - ಸ್ಥಳೀಯರ ಆಕ್ರೋಶ

ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ನಗರದ ತ್ಯಾಜ್ಯ ನೀರನ್ನು ಒಳಚರಂಡಿ ವ್ಯವಸ್ಥೆಯ ಮೂಲಕ ಅರ್ಕಾವತಿ ನದಿಪಾತ್ರದ ಚಿಕ್ಕತುಮಕೂರು ಕೆರೆಗೆ ಬೀಡಲಾಗುತ್ತಿದೆ. ಒಳಚರಂಡಿ ನೀರು ಶುದ್ಧೀಕರಣವಾಗದೆ ನೇರವಾಗಿ ಚಿಕ್ಕತುಮಕೂರು ಕೆರೆಗೆ ಸೇರುತ್ತಿದೆ. ಈ ಕೆರೆಯ ನೀರು ಕೋಡಿ ಬಿದ್ದು ದೊಡ್ಡತುಮಕೂರು ಕೆರೆಯನ್ನು ಸೇರುತ್ತಿದೆ. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಸಹ ದೊಡ್ಡತುಮಕೂರು ಕೆರೆಯನ್ನು ಸೇರುತ್ತಿದೆ.

ಈ ವರ್ಷ ಉತ್ತಮ ಮಳೆಯಿಂದ 20 ವರ್ಷಗಳ ನಂತರ ದೊಡ್ಡತುಮಕೂರು ಕೆರೆ ಕೋಡಿ ಬಿದ್ದಿದೆ. ಆದರೆ ಕೆರೆ ಕೋಡಿ ಬಿದ್ದಿರುವ ಖುಷಿ ಗ್ರಾಮಸ್ಥರಿಗೆ ಇಲ್ಲ. ಕೆರೆಯ ನೀರು ಕಪ್ಪು ಬಣ್ಣಕ್ಕೆ ತಿರುಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಕೆರೆ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದರಿಂದ ಆತಂಕಕ್ಕೆ ಒಳಗಾದ ದೊಡ್ಡತುಮಕೂರು ಗ್ರಾಮ ಪಂಚಾಯತ್​ ಕೆರೆಯ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿಯಲ್ಲಿ ಕೆರೆ ನೀರಿನಲ್ಲಿ ಫ್ಲೋರೈಡ್ ಆಂಶ 2.10ರಷ್ಟು ಇದೆ. ನೀರು ವಾಸನೆಯಿಂದ ಕೂಡಿದ್ದು, ಮಲೀನವಾಗಿದೆ. ಇದು ಬಳಕೆಗೆ ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ.

ಇದನ್ನೂ ಓದಿ:Video - ಹಾವು ಹಿಡಿದು ವೃದ್ಧನ ಸಾಹಸ: ಐದಕ್ಕೂ ಹೆಚ್ಚು ಬಾರಿ ಕಚ್ಚಿದ ಸರ್ಪ

ದೊಡ್ಡಬಳ್ಳಾಪುರ ನಗರಸಭೆಯ ಒಳಚರಂಡಿ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಶುದ್ಧೀಕರಣ ಮಾಡಿ ಕೆರೆಗೆ ಬಿಡಿ, ಇಲ್ಲವಾದಲ್ಲಿ ಮುಂಬರುವ ವಿಧಾನ ಪರಿಷತ್ ಚುನಾವಣೆಯನ್ನು ಬಹಿಷ್ಕರಿಸುವ ಎಚ್ಚರಿಕೆಯನ್ನು ದೊಡ್ಡತುಮಕೂರು ಪಂಚಾಯತ್ ಸದಸ್ಯರು ನೀಡಿದ್ದಾರೆ.

ABOUT THE AUTHOR

...view details