ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬಳಿ ಇಂದು ನಡೆದ ಖಾಸಗಿ ಬಸ್ ದುರಂತದಲ್ಲಿ 5 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ಹಲವಾರು ಜನರಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ನಡೆದ ಅಪಘಾತಗಳಲ್ಲಿ ಹಲವು ಜನರು ಬಲಿಯಾದ ದುರಂತಗಳ ಪಟ್ಟಿ ಇಲ್ಲಿದೆ.
ಕೋಲಾರ- 09 ಸೆಪ್ಟೆಂಬರ್ 2014..ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಶ್ರೀರಂಗಾಪುರ ಎಂಬಲ್ಲಿ ಕೆಎಸ್ಆರ್ಟಿಸಿ ಮತ್ತು ಮರಳು ತುಂಬಿದ್ದ ಲಾರಿ ಡಿಕ್ಕಿಯಾಗಿ 13 ಮಂದಿ ಸಾವನ್ನಪ್ಪಿದ್ದರು. ಘಟನೆಯಲ್ಲಿ 9 ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಇನ್ನುಳಿದವರು ಆರ್ ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಅಸುನೀಗಿದ್ದರು.
ಉತ್ತರಕನ್ನಡ- 25 ಮೇ 2017..ಉತ್ತರ ಕನ್ನಡ ಜಿಲ್ಲೆಯ ಅನ್ನಬೀಲು ಕ್ರಾಸ್ ಬಳಿ ವೇಗವಾಗಿ ಬಂದ ಖಾಸಗಿ ಬಸ್ ಮತ್ತು ವ್ಯಾನ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ 8 ಜನರು ಸಾವನ್ನಪ್ಪಿದ್ದರು. ಅಲ್ಲದೇ ಇದರಲ್ಲಿ 22 ಜನರು ಗಾಯಗೊಂಡಿದ್ದರು.
ಮೈಸೂರು-14 ಮಾರ್ಚ್ 2018..ಬಸ್ ಓವರ್ಟೇಕ್ ಮಾಡಲು ಹೋಗಿ ಎದುರಿಗೆ ಬಂದ ಇನ್ನೊಂದು ಬಸ್ಗೆ ಗುದ್ದಿದ ಪರಿಣಾಮ 4 ಮಂದಿ ಸಾವನ್ನಪ್ಪಿ 45 ಮಂದಿ ಗಾಯಗೊಂಡ ಘಟನೆ ಜಿಲ್ಲೆಯ ಚಿಕ್ಕಹಳ್ಳಿ ಬಳಿಯ ರಾಷ್ಟ್ರಿಯ ಹೆದ್ದಾರಿ 766ರಲ್ಲಿ ನಡೆದಿತ್ತು. ಈ ವೇಳೆ 2 ಬಸ್ಗಳ ಮಧ್ಯೆ ಕಾರು ಸಿಲುಕಿಕೊಂಡು ಅದರಲ್ಲಿದ್ದವರೆಲ್ಲರ ಪ್ರಾಣಪಕ್ಷಿ ಹಾರಿಹೊಗಿತ್ತು.
ತುಮಕೂರು- 21 ಮೇ 2018..ಈ ಹಿಂದೆಯೂ ಕೂಡ ತುಮಕೂರು ಜಿಲ್ಲೆಯಲ್ಲಿ ನಿಂತಿದ್ದ ವಾಹನಕ್ಕೆ ಬಸ್ ಡಿಕ್ಕಿಯಾಗಿ ಪಲ್ಟಿಯಾದ ಕಾರಣ ಅದರಲ್ಲಿದ್ದ 20 ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು.
ಕಲಬುರ್ಗಿ- 2 ಜೂನ್ 2018..ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಹೊರವಲಯದಲ್ಲಿ ಭಾರಿ ಮಳೆಯಿಂದಾಗಿ ಎರಡು ಬಸ್ಗಳ ಮಧ್ಯೆ ನಡೆದ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿ, 10 ಮಂದಿ ಗಾಯಗೊಂಡಿದ್ದರು.
ತುಮಕೂರು-27 ಆಗಸ್ಟ್ 2018..ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಎಂಬಲ್ಲಿ ಎನ್ಎಚ್ 48 ರಲ್ಲಿ ಖಾಸಗಿ ಬಸ್ ಮತ್ತು ಕೆಎಸ್ಆರ್ಟಿಸಿ ಬಸ್ ಮಧ್ಯೆ ಡಿಕ್ಕಿಯಾಗಿ ನಾಲ್ವರು ಪ್ರಯಾಣಿಕರು ಜೀವ ಕಳೆದುಕೊಂಡಿದ್ದರು.
ಬೆಂಗಳೂರು-12 ಸೆಪ್ಟೆಂಬರ್ 2018..ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯ ಯಮಲೂರು-ದೊಡ್ಡನೆಕುಂದಿ ರಸ್ತೆಯಲ್ಲಿ ಬಿಎಂಟಿಸಿ ಬಸ್ಗೆ ಕಾರು ಡಿಕ್ಕಿಯಾಗಿ 4 ಮಂದಿ ಸಾವನ್ನಪ್ಪಿ, ಒಬ್ಬರು ಗಾಯಗೊಂಡಿದ್ದರು.