ಬೆಂಗಳೂರು: ಲಾಕ್ ಡೌನ್ ಘೋಷಣೆಯಾದ ದಿನದಿಂದಲೂ ಕೊಳಚೆ ಪ್ರದೇಶದಲ್ಲಿ ವಾಸಿಸುವ ನೂರಾರು ಮಕ್ಕಳಿಗೆ ಉಚಿತವಾಗಿ ಬನ್, ರಸ್ಕ್ ಹಾಗೂ ಬಿಸ್ಕತ್ಗಳನ್ನು ವಿತರಿಸುವ ಮೂಲಕ ಇಲ್ಲೊಬ್ಬರು ಮಾನವೀಯತೆ ಮೆರೆದಿದ್ದಾರೆ.
ಸ್ಲಂ ಮಕ್ಕಳಿಗೆ ಬನ್, ರಸ್ಕ್, ಬಿಸ್ಕತ್ ವಿತರಿಸುವ ವ್ಯಕ್ತಿ: ಸಾರ್ವಜನಿಕರಿಂದ ಮೆಚ್ಚುಗೆ
ಲಾಕ್ಡೌನ್ ಹಿನ್ನೆಲೆ ಅನೇಕರು ಸಂಕಷ್ಟ ಎದುರಿಸುತ್ತಿದ್ದು, ಕೊಳಚೆ ಪ್ರದೇಶದಲ್ಲಿ ವಾಸಿಸುವ ನೂರಾರು ಮಕ್ಕಳಿಗೆ ಬನ್, ರಸ್ಕ್ ಹಾಗೂ ಬಿಸ್ಕತ್ಗಳನ್ನು ವಿತರಿಸುವ ಮೂಲಕ ವ್ಯಕ್ತಿಯೊಬ್ಬರು ಮಾನವೀಯತೆ ಮೆರೆಯುತ್ತಿದ್ದಾರೆ.
ಗಿರಿನಗರ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ವಾಸಿಸುತ್ತಿರುವ ಸಂತೋಷ್ ಎಂಬುವರು ನಿತ್ಯ ಠಾಣೆಗೆ ಬಂದು ಪೊಲೀಸರ ಮುಖಾಂತರ ಮಕ್ಕಳಿಗೆ ತಿನಿಸುಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ. ಆರಂಭದಲ್ಲಿ ಪೊಲೀಸರಿಗೆ ಪ್ರತಿದಿನ ಅಡುಗೆ ಮಾಡಿ ವಿತರಿಸುತ್ತಿದ್ದ ಸಂತೋಷ್ ಅವರು ತದನಂತರ ಮಕ್ಕಳಿಗೆ ಬಿಸ್ಕತ್, ಬನ್, ರಸ್ಕ್ ನೀಡುತ್ತಿದ್ದಾರೆ.
ಇನ್ನು ಇವರು ನೀಡುತ್ತಿರುವ ತಿನಿಸುಗಳನ್ನು ತೆಗೆದುಕೊಂಡ ಪೊಲೀಸರು, ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ಚಾಮುಂಡಿ ನಗರ, ಜನಶಕ್ತಿ ನಗರ ಹಾಗೂ ಹಿರಣಗುಡ್ಡ ಸ್ಲಂ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ಪೊಲೀಸರು ವಿತರಣೆ ಮಾಡುತ್ತಿದ್ದಾರೆ. ಲಾಕ್ ಡೌನ್ ನಿಂದ ಹಸಿವಿನಿಂದ ಬಳಲುತ್ತಿರುವ ಮಕ್ಕಳಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿರುವ ಸಂತೋಷ್ ಅವರ ಕೆಲಸ ನಿಜಕ್ಕೂ ಶ್ಲಾಘನೀಯ.