ಕರ್ನಾಟಕ

karnataka

ಚಿಕ್ಕೋಡಿ ಜಿಲ್ಲೆ ಘೋಷಿಸದಿದ್ದರೆ ಮತದಾನ ಬಹಿಷ್ಕಾರ: ಜಿಲ್ಲಾ ಹೋರಾಟ ಸಮಿತಿಯಿಂದ ಎಚ್ಚರಿಕೆ

By

Published : Oct 20, 2021, 5:16 PM IST

ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂಬ ಕೂಗು ಕಳೆದ ಎರಡು ದಶಕಗಳಿಂದಲ್ಲೂ ಕೇಳಿ ಬರುತ್ತಿದೆ. ಆದರೆ, ಹೋರಾಟಗಾರರು ನಡೆಸಿದ ಚಳವಳಿ ಈವರೆಗೂ ಫಲ ಕೊಟ್ಟಿಲ್ಲ. ಹೀಗಾಗಿ ಮುಂಬರುವ ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ಮಾಡುವ ಮೂಲಕ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಚಿಕ್ಕೋಡಿ ಜಿಲ್ಲಾ ಹೋರಾಟಗಾರು ಈಗಿನಿಂದಲೇ ತಯಾರಿ ನಡೆಸಿದ್ದಾರೆ.

Chikkodi
ಚಿಕ್ಕೋಡಿ

ಚಿಕ್ಕೋಡಿ: ಸಾಮಾಜಿಕ, ಶೈಕ್ಷಣಿಕ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಹಿಂದುಳಿದ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡದಿದ್ದರೆ, ಮುಂಬರುವ ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಚಿಕ್ಕೋಡಿ ಜಿಲ್ಲಾ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಚಿಕ್ಕೋಡಿ ಉಪವಿಭಾಗದ ಜನರ ಅಭಿಪ್ರಾಯ ಸಂಗ್ರಹಿಸಲು ಸಿದ್ಧತೆ ನಡೆಸಿದ್ದಾರೆ.

ಚಿಕ್ಕೋಡಿ ಜಿಲ್ಲೆ ಘೋಷಣೆಗೆ ಆಗ್ರಹ..

ಕರ್ನಾಟಕ ರಾಜ್ಯದಲ್ಲಿಯೇ ಭೌಗೋಳಿಕ ಹಾಗೂ ವಿಸ್ತೀರ್ಣದಲ್ಲಿ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ವಿಭಜಿಸಿ, ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂಬ ಕೂಗು ಕಳೆದ ಎರಡು ದಶಕಗಳಿಂದಲ್ಲೂ ಕೇಳಿ ಬರುತ್ತಿದೆ.

ಹೋರಾಟದ ರೂಪು-ರೇಷೆಗಳ ಬಗ್ಗೆ ಸಿದ್ಧತೆ

ಆದರೆ, ಹೋರಾಟಗಾರರು ನಡೆಸಿದ ಚಳವಳಿ ಈವರೆಗೂ ಫಲ ಕೊಟ್ಟಿಲ್ಲ. ಹೀಗಾಗಿ ಮುಂಬರುವ ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ಮಾಡುವ ಮೂಲಕ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಚಿಕ್ಕೋಡಿ ಜಿಲ್ಲಾ ಹೋರಾಟಗಾರು ಈಗಿನಿಂದಲೇ ತಯಾರಿ ನಡೆಸಿದ್ದಾರೆ.

ಈ ಬಾರಿ ವಿನೂತನವಾಗಿ ಪ್ರತಿಭಟನೆ ಮಾಡುವ ಮೂಲಕ ಬರುವ ಬಜೆಟ್ ಅಧೀವೇಶನದೊಳಗಾಗಿ ಚಿಕ್ಕೋಡಿ ಜಿಲ್ಲೆ ಘೋಷಣೆ ಆಗಬೇಕೆಂಬ ಧ್ಯೇಯವನ್ನು ಇಟ್ಟುಕೊಂಡು ಹೋರಾಟ ರೂಪರೇಷಗಳ ಬಗ್ಗೆ ಸಿದ್ಧತೆ ನಡೆಸಿದ್ದಾರೆ.

ಯಾರೊಬ್ಬರೂ ಜಿಲ್ಲೆ ರಚನೆಗೆ ಧ್ವನಿ ಎತ್ತುತ್ತಿಲ್ಲ:

ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ತಮ್ಮ ಹಿಡಿತ ಇಟ್ಟುಕೊಂಡಿರುವ ಈ ಭಾಗದ ಎಲ್ಲ ಜನಪ್ರತಿನಿಧಿಗಳಲ್ಲಿಯೂ ಇಚ್ಛಾಶಕ್ತಿ ಕೊರತೆ ಜತೆಗೆ ಸ್ವಹಿತಾಸಕ್ತಿ ಅಡಗಿಕೊಂಡಿದೆ. ಚಿಕ್ಕೋಡಿಯಲ್ಲಿ ಜಾರಕಿಹೊಳಿ, ಕತ್ತಿ ಬ್ರದರ್ಸ್, ಜೊಲ್ಲೆ ಫ್ಯಾಮಿಲಿ, ಪ್ರಭಾಕರ್​​ ಕೋರೆ, ಪ್ರಕಾಶ ಹುಕ್ಕೇರಿ, ಲಕ್ಷ್ಮಣ ಸವದಿ ಹಾಗೂ ಮಹಾಂತೇಶ ಕವಟಗಿಮಟ ತಮ್ಮ ಹಿಡಿತವನ್ನು ಸಾಧಿಸಿದ್ದಾರೆ. ಹೀಗಾಗಿ ಚಿಕ್ಕೋಡಿ ಜಿಲ್ಲೆ ಮಾಡಿದರೆ ತಮ್ಮ ಹಿಡಿತ ತಪ್ಪಲಿದೆ ಎಂಬ ಕಾರಣಕ್ಕೆ ಯಾರೊಬ್ಬರೂ ಚಿಕ್ಕೋಡಿ ಜಿಲ್ಲೆಗೆ ಧ್ವನಿ ಎತ್ತುತ್ತಿಲ್ಲ ಎಂದು ಆರೋಪಿಸಲಾಗಿದೆ.

ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಚಿಕ್ಕೋಡಿ ಜಿಲ್ಲೆಯನ್ನಾಗಿ ಮಾಡುತ್ತೇವೆ ಎಂದು ಭರವಸೆ ಕೊಟ್ಟು ಮತ ಪಡೆದುಕೊಳ್ಳುತ್ತಾರೆ. ಬಳಿಕ ಯಾರೊಬ್ಬರು ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗೆ ಧ್ವನಿ ಎತ್ತಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿ ಮಾಡುತ್ತೇವೆ ಎಂದರು. ಆದರೆ, ಈವರೆಗೆ ಯಾವ ಸರ್ಕಾರಗಳು ಮಾಡಿಲ್ಲ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತ್ಯೇಕ ಚಿಕ್ಕೋಡಿ ಜಿಲ್ಲೆ ಅನಿವಾರ್ಯ:

ಬೆಳಗಾವಿ ಜಿಲ್ಲೆಗೆ ಹೋಲಿಕೆ ಮಾಡಿದರೆ ಚಿಕ್ಕೋಡಿ ಉಪವಿಭಾಗ ಅಭಿವೃದ್ಧಿ ಸೇರಿದಂತೆ ಎಲ್ಲ ವಿಚಾರಗಳಲ್ಲಿ ಹಿಂದುಳಿದಿದೆ. ಚಿಕ್ಕೋಡಿ ಉಪವಿಭಾಗ ಮಹಾರಾಷ್ಟ್ರದ ಗಡಿಗೆ ಹೊಂದಿಕೊಡಿದ್ದರಿಂದ ಬೆಳಗಾವಿಗೆ ಬರಲು 100 ರಿಂದ 150ಕ್ಕೂ ಹೆಚ್ಚಿನ ಕಿ.ಮೀ ದೂರದಿಂದ ಬರಬೇಕು. ಏನಾದರೂ ಸರ್ಕಾರಿ ಕೆಲಸ ಕಾರ್ಯಗಳಿದ್ದರೆ, ಬೆಳಗಾವಿಗೆ ಹೋಗಿ ಬರಲು ಒಂದು ದಿನ ಸಾಕಾಗುವುದಿಲ್ಲ. ಜನರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಚಿಕ್ಕೋಡಿ ಜಿಲ್ಲೆಯಾಗಬೇಕಿದೆ.

ಕರ್ನಾಟಕದ ಜನರ ಹಣ ಮಹಾರಾಷ್ಟ್ರಕ್ಕೆ ಹೋಗುತ್ತಿದೆ:

ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಚಿಕ್ಕೋಡಿ ಉಪವಿಭಾಗದಲ್ಲಿ ದೊಡ್ಡ ಪ್ರಮಾಣದ ಮಾರುಕಟ್ಟೆಗಳಿಲ್ಲ. ಹೀಗಾಗಿ ರೈತರು ಬೆಳೆದ ಎಲ್ಲ ಉತ್ಪನ್ನಗಳು, ಕನ್ನಡಿಗರು ದುಡಿದ ಎಲ್ಲ ಹಣ ಮಹಾರಾಷ್ಟ್ರ ಸರ್ಕಾರದ ಪಾಲಾಗುತ್ತಿದೆ. ಇದಲ್ಲದೇ ಚಿಕ್ಕೋಡಿಯಲ್ಲಿ ಕೈಗಾರಿಕೆಗಳಿಲ್ಲ. ಹೀಗಾಗಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ನಿರುದ್ಯೋಗ ಸಮಸ್ಯೆ ಇರುವ ಕಾರಣಕ್ಕೆ ಉಪವಿಭಾಗದ ಜನರು ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಿದ್ದಾರೆ. ಇದರಿಂದ ಕರ್ನಾಟಕ ಸರ್ಕಾರಕ್ಕೂ ನಷ್ಟ ಆಗುತ್ತಿದೆ. ಆದರೆ, ಈ ಬಗ್ಗೆ ಯಾವೊಬ್ಬ ಜನಪ್ರತಿನಿಧಿಗಳು ಚಿಂತನೆ ಮಾಡುತ್ತಿಲ್ಲ ಎಂಬುವುದು ಹೋರಾಟಗಾರರ ವಾದವಾಗಿದೆ.

ಸರ್ಕಾರಕ್ಕೆ ಸೆಡ್ಡು ಹೊಡೆದು ಜಿಲ್ಲೆ ರಚನೆ ಮಾಡಿಕೊಳ್ಳುವ ಗಟ್ಟಿ ನಾಯಕರಿಲ್ಲ :

ವಿಜಯ ನಗರ ಜಿಲ್ಲೆಯನ್ನು ರಚನೆ ಮಾಡುವಲ್ಲಿ ಸರ್ಕಾರಕ್ಕೆ ಸೆಡ್ಡು ಹೊಡೆದ ಆನಂದ ಸಿಂಗ್‌ ಅವರಂತಹ ರಾಜಕಾರಣಿಗಳು ಚಿಕ್ಕೋಡಿಯಲ್ಲಿಲ್ಲ. ಆನಂದ್ ಸಿಂಗ್‌ ಅವರಂತಹ ನಾಯಕರು ಜಿಲ್ಲೆಯಲ್ಲಿ ಇರಬೇಕು. ಆನಂದ್ ಸಿಂಗ್ ಓರ್ವ ಮಾಣಿಕ್ಯ. ಅಂತಹ ನಾಯಕರ ಅನಿವಾರ್ಯ ಚಿಕ್ಕೋಡಿಗೆ ಅಗತ್ಯವಿದೆ.

ಆದರೆ, ಚಿಕ್ಕೋಡಿಯಲ್ಲಿ ಸ್ವಾರ್ಥ,ಪ್ರತಿಷ್ಠೆ ತುಂಬಿದ ರಾಜಕಾರಣಿಗಳಿದ್ದಾರೆ. ಏನಾದರೂ ಮಾತನಾಡಿದ್ರೆ ತಮ್ಮ ಕುರ್ಚಿಗಳು ಅಲಗಾಡುತ್ತದೆ ಎಂಬ ಆತಂಕ ಇಲ್ಲಿನ ಜನಪ್ರತಿನಿಧಿಗಳಲ್ಲಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಜಿಲ್ಲೆ ಮಾಡುವ ಭರವಸೆ ನೀಡುವ ಇಲ್ಲಿನ ರಾಜಕಾರಿಣಿಗಳು ಚುನಾವಣೆ ಮುಗಿದ ಮೇಲೆ ಕಾಣಿಸುವುದಿಲ್ಲ.

ವಿಜಯ ನಗರ ಜಿಲ್ಲೆಯ ಸಚಿವ ಆನಂದ್ ಸಿಂಗ್ ಅವರನ್ನು ಮಾದರಿಯನ್ನಾಗಿಟ್ಟುಕೊಂಡು ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಠಿಯಿಂದ ಚಿಕ್ಕೋಡಿ ಜಿಲ್ಲೆ ರಚನೆಗೆ ಈ ಭಾಗದ ಎಲ್ಲ ನಾಯಕರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂಬುವುದು ಜನರ ಒತ್ತಾಸೆ.

ಇದನ್ನೂ ಓದಿ:ವಿಜಯನಗರ ಜಿಲ್ಲೆ ರಚನೆಗೆ ನಿರ್ಧಾರ ಬೆನ್ನಲೆ ಚಿಕ್ಕೋಡಿ ಜಿಲ್ಲೆಗೆ ಹೆಚ್ಚಿದ ಬೇಡಿಕೆ

ABOUT THE AUTHOR

...view details