ಕರ್ನಾಟಕ

karnataka

ಭಾರತಕ್ಕೆ ವಿಶ್ವಖ್ಯಾತಿ ತಂದ ಜಿ20 ಶೃಂಗದಿಂದ 400 ಕೋಟಿ ರೂಪಾಯಿ ವಹಿವಾಟು ನಷ್ಟ!

By ETV Bharat Karnataka Team

Published : Sep 11, 2023, 5:47 PM IST

ಜಿ20 ಶೃಂಗಸಭೆಯಿಂದ ಭಾರತ ವಿಶ್ವಖ್ಯಾತಿ ಗಳಿಸಿದ್ದರೂ, ನಿರ್ಬಂಧಗಳಿಂದಾಗಿ ಅಂಗಡಿಗಳು, ಮಾರುಕಟ್ಟೆಗಳ ವಹಿವಾಟು ನಷ್ಟಕ್ಕೀಡಾಗಿದೆ. ಕೂಲಿ ಕಾರ್ಮಿಕರು ಕೂಡ ಮೂರು ದಿನ ಸಂಕಷ್ಟ ಎದುರಿಸಿದ್ದಾರೆ.

ಜಿ20 ಶೃಂಗದಿಂದ ಉದ್ಯಮ ನಷ್ಟ
ಜಿ20 ಶೃಂಗದಿಂದ ಉದ್ಯಮ ನಷ್ಟ

ನವದೆಹಲಿ:ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆ ಅದ್ಭುತ ಯಶಸ್ಸು ಸಾಧಿಸಿ, ದೇಶಕ್ಕೆ ಹೆಸರು ತಂದಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 2 ದಿನ ನಡೆದ ವಿಶ್ವ ನಾಯಕರಿದ್ದ ಸಭೆಗಾಗಿ ಸರ್ಕಾರ 2700 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಮಾಹಿತಿ ಸಿಕ್ಕಿದೆ. ಇಷ್ಟೆಲ್ಲದರ ನಡುವೆ ಸಂಕಷ್ಟ ಅನುಭವಿಸಿದ್ದು ಮಾತ್ರ ಶ್ರೀಸಾಮಾನ್ಯ. ಸಭೆಗಾಗಿ ಸರ್ಕಾರ 3 ದಿನ 'ಭಾರತ ಮಂಟಪ' ಸುತ್ತಮುತ್ತಲಿನ ಪ್ರದೇಶವನ್ನು ಬಂದ್​ ಮಾಡಿಸಿದ್ದರಿಂದ ವ್ಯಾಪಾರ ವಹಿವಾಟು ನಡೆಯದೇ 400 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಶೃಂಗಸಭೆಯ ಹಿನ್ನೆಲೆಯಲ್ಲಿ ದೆಹಲಿಯ ಹಲವು ಪ್ರದೇಶಗಳನ್ನು ಸಂಚಾರ ಮತ್ತು ವ್ಯಾಪಾರವನ್ನು ಮೂರು ದಿನಗಳವರೆಗೆ ನಿರ್ಬಂಧಿಸಲಾಗಿತ್ತು. ಹೀಗಾಗಿ ಅಂಗಡಿಗಳು, ರೆಸ್ಟೋರೆಂಟ್‌ಗಳು, ಮಾರುಕಟ್ಟೆಗಳು ಮತ್ತು ಮಾಲ್‌ಗಳು ಭಾರಿ ನಷ್ಟವನ್ನು ಅನುಭವಿಸಿವೆ. ಮಾಧ್ಯಮ ವರದಿಯೊಂದರ ಪ್ರಕಾರ, ಅಂದಾಜು 400 ಕೋಟಿ ರೂಪಾಯಿ ನಷ್ಟವಾಗಿದೆ. ಸುಮಾರು 9 ಸಾವಿರ ವಿತರಣಾ ಕೆಲಸಗಾರರು ಇದರಿಂದ ತೊಂದರೆಗೀಡಾಗಿದ್ದಾರೆ ಎಂದು ಹೇಳಲಾಗಿದೆ.

ಬಿಕೋ ಎನ್ನುತ್ತಿದ್ದ ಅಂಗಡಿಗಳು :ದೆಹಲಿಯ ಪ್ರಗತಿ ಮೈದಾನದ ಸುತ್ತಮುತ್ತಲಿನ ಅಂಗಡಿಕಾರರು ಮಾತ್ರವಲ್ಲ, ಭದ್ರತಾ ಕಾರಣಗಳಿಗಾಗಿ ನಿಯಂತ್ರಿತ ಪ್ರದೇಶದ ಹೊರಗಿನ ಅನೇಕ ಅಂಗಡಿಗಳೂ ಅರ್ಧದಷ್ಟು ಮುಚ್ಚಿದ್ದವು. ಟ್ರಾಫಿಕ್ ಕಂಟ್ರೋಲ್​ ಮಾಡಿದ್ದರಿಂದ ಜನರು ಹೊರಗೆ ಬರುವುದು ಕಡಿಮೆಯಾಗಿತ್ತು. ಹೀಗಾಗಿ ಅಂಗಡಿ ಮುಂಗಟ್ಟುಗಳು ಬಿಕೋ ಎನ್ನುತ್ತಿದ್ದವು.

ನವದೆಹಲಿ ವರ್ತಕರ ಸಂಘದ ಅಧ್ಯಕ್ಷ ಅತುಲ್ ಭಾರ್ಗವ ಮಾತನಾಡಿ, ಮೂರು ದಿನಗಳಲ್ಲಿ ಇಲ್ಲಿನ ವ್ಯಾಪಾರಿಗಳು ಸುಮಾರು 300 ರಿಂದ 400 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ನಾವು ಕಾರ್ಯಕ್ರಮಕ್ಕಾಗಿ ಎದುರು ನೋಡುತ್ತಿದ್ದೆವು. ಭದ್ರತೆಯು ಪ್ರಧಾನವಾಗಿದ್ದರಿಂದ ಇದಕ್ಕೆ ಸಹಕರಿಸಿದೆವು. ದೇಶಕ್ಕೆ ಬಂದ ವಿಶ್ವದ ಅತಿಥಿಗಳು ಅಷ್ಟೇ ಗೌರವಯುತವಾಗಿ ಹಿಂತಿರುಗಬೇಕು ಎಂದು ನಾವೂ ಕೂಡ ಬೆಂಬಲಿಸಿದ್ದೇವೆ ಎಂದು ಅವರು ಹೇಳಿದರು.

ಜಿ20 ಶೃಂಗಸಭೆಗಾಗಿ ನವದೆಹಲಿಯ ಎಲ್ಲಾ ವಾಣಿಜ್ಯ ಘಟಕಗಳನ್ನು ಸೆಪ್ಟೆಂಬರ್ 8 ರಿಂದ 10 ರ ನಡುವೆ ಮುಚ್ಚಲಾಗಿತ್ತು. ಇ ಕಾಮರ್ಸ್​, ಫುಡ್​ ಡೆಲಿವರಿಯನ್ನು 50 ಪ್ರತಿಶತದಷ್ಟು ಕಡಿತ ಮಾಡಲಾಗಿತ್ತು. ವಿಶ್ವ ನಾಯಕರು ಭಾಗವಹಿಸಿದ್ದ ದೊಡ್ಡ ಕಾರ್ಯಕ್ರಮ ಸಾಮಾನ್ಯ ವಹಿವಾಟಿನ ಮೇಲೆ ಪರಿಣಾಮ ಬಿದ್ದಿದ್ದಂತೂ ಸುಳ್ಳಲ್ಲ.

ಗುರುಗಾಂವ್​ನಲ್ಲೂ ಎಫೆಕ್ಟ್​:ಜಿ20 ಶೃಂಗಸಭೆಯ ನಿರ್ಬಂಧಗಳು ದೆಹಲಿ ಮಾತ್ರವಲ್ಲದೇ, ನಗರದಾಚೆಗಿನ ಗುರುಗಾಂವ್​​ಗೂ ಎಫೆಕ್ಟ್​ ನೀಡಿದ್ದವು. ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ಸರಕುಗಳು ದೆಹಲಿಯಿಂದ ಗುರುಗ್ರಾಮಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಇದಲ್ಲದೇ, ದೆಹಲಿಯ ಪ್ರಮುಖ ಮಾರುಕಟ್ಟೆಗಳಾದ ಖಾನ್ ಮಾರ್ಕೆಟ್, ಕನ್ನಾಟ್ ಪ್ಲೇಸ್ ಮತ್ತು ಜನಪಥ್ ಮುಂತಾದ ಮಾರುಕಟ್ಟೆಗಳು ಮುಚ್ಚಿದ್ದರಿಂದ ವಹಿವಾಟಿಗೆ ತೊಂದರೆ ಉಂಟಾಯಿತು.

ಈ ಮಾರುಕಟ್ಟೆಗಳು ಶಾಪಿಂಗ್ ಮತ್ತು ಆಹಾರ ವಿತರಣೆಯ ಪ್ರಮುಖ ಕೇಂದ್ರಗಳಾಗಿವೆ. ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರವಾಸಿಗರು ಭೇಟಿ ನೀಡುವ ಸ್ಥಳವೂ ಇದಾಗಿತ್ತು. ಇದು ಅಂಗಡಿಕಾರರಿಗೆ ಉತ್ತಮ ಗಳಿಕೆಯ ಅವಕಾಶವಿತ್ತು. ಆದರೆ, ಮಾರುಕಟ್ಟೆಗಳನ್ನು ಬಂದ್​ ಮಾಡಿದ್ದರಿಂದ ಈ ಅವಕಾಶ ತಪ್ಪಿದಂತಾಗಿದೆ.

ಇದನ್ನೂ ಓದಿ:18ನೇ ಜಿ-20 ಶೃಂಗಸಭೆ: ಆಡಿಕೊಂಡವರೇ, ಹೊಗಳುವಂತೆ ಶೃಂಗಸಭೆ ಮುನ್ನಡೆಸಿದ ಭಾರತ!

ABOUT THE AUTHOR

...view details