ಕರ್ನಾಟಕ

karnataka

ಐಎಸ್‌ಐ ಪರ ಗೂಢಚಾರಿಕೆ, ಭಾರತೀಯ ಸೇನೆಯ ಗೌಪ್ಯ ಮಾಹಿತಿ ರವಾನೆ: ಆಟೋ ಚಾಲಕ ಸೇರಿ ಇಬ್ಬರ ಸೆರೆ

By PTI

Published : Nov 26, 2023, 8:24 PM IST

Suspected of spying for ISI: ಉತ್ತರ ಪ್ರದೇಶದಲ್ಲಿ ಪಾಕಿಸ್ತಾನದ ಐಎಸ್‌ಐ ಪರ ಗೂಢಚಾರಿಕೆ ಮಾಡುತ್ತಿದ್ದ ಇಬ್ಬರು ಶಂಕಿತರನ್ನು ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.

UP ATS arrests two men suspected of spying for ISI
ಐಎಸ್‌ಐ ಪರ ಗೂಢಚಾರಿಕೆ, ಭಾರತೀಯ ಸೇನೆಯ ಗೌಪ್ಯ ಮಾಹಿತಿ ರವಾನೆ: ಆಟೋ ಚಾಲಕ ಸೇರಿ ಇಬ್ಬರ ಸೆರೆ

ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಪೊಲೀಸರು ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಭಯೋತ್ಪಾದಕ ಸಂಘಟನೆಗೆ ಹಣಕಾಸಿಗಾಗಿ ಗೂಢಚಾರಿಕೆ ಮಾಡುತ್ತಿದ್ದ ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ. ಪಂಜಾಬ್‌ನ ಭಟಿಂಡಾ ಮೂಲದ ಅಮೃತ್ ಗಿಲ್ ಅಲಿಯಾಸ್ ಅಮೃತ್ ಪಾಲ್ (25) ಮತ್ತು ಗಾಜಿಯಾಬಾದ್‌ನ ಭೋಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಫರೀದ್‌ನಗರ ನಿವಾಸಿ ರಿಯಾಜುದ್ದೀನ್ (36) ಎಂಬುವವರೇ ಬಂಧಿತರು. ಇದರಲ್ಲಿ ಅಮೃತ್ ಗಿಲ್‌ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಎಟಿಎಸ್ ತಂಡಕ್ಕೆ ಕೆಲವರು ಅನುಮಾನಾಸ್ಪದ ಮೂಲಗಳಿಂದ ಹಣವನ್ನು ಪಡೆಯುತ್ತಿದ್ದಾರೆ. ಈ ಹಣವನ್ನು ಭಯೋತ್ಪಾದಕ ಚಟುವಟಿಕೆಗಳು ಮತ್ತು ಬೇಹುಗಾರಿಕೆಗೆ ಬಳಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿತ್ತು. ಇದರ ಆಧಾರದ ಮೇಲೆ ನವೆಂಬರ್ 23ರಂದು ಬಟಿಂಡಾದಲ್ಲಿ ಅಮೃತ್ ಗಿಲ್​ನನ್ನು ಬಂಧಿಸಲಾಗಿದೆ. ರಿಯಾಜುದ್ದೀನ್​ನನ್ನು ವಿಚಾರಣೆಗಾಗಿ ಎಟಿಎಸ್ ಪ್ರಧಾನ ಕಚೇರಿಗೆ ರವಾನಿಸಿ, ಭಾನುವಾರ ಅರೆಸ್ಟ್ ಮಾಡಲಾಗಿದೆ. ಇವರಿಬ್ಬರು ಹಣಕ್ಕಾಗಿ ಐಎಸ್‌ಐಗೆ ಸೂಕ್ಷ್ಮ ಹಾಗೂ ಗೌಪ್ಯ ಮಾಹಿತಿಯನ್ನು ರವಾನಿಸುತ್ತಿದ್ದರು ಎಂದು ಎಟಿಎಸ್ ತಿಳಿಸಿದೆ.

ತನಿಖೆಯ ನಂತರ, ರಿಯಾಜುದ್ದೀನ್, ಇಜಾರುಲ್ ಹಕ್ ಮತ್ತು ಇತರರ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಪೈಕಿ ಇಜಾರುಲ್ ಹಕ್ ಈಗಾಗಲೇ ಬಿಹಾರ ಜೈಲಿನಲ್ಲಿದ್ದಾನೆ. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಟಿಎಸ್ ತಂಡ ಈತನನ್ನು ಲಖನೌಗೆ ಕರೆತರಲಿದೆ. ಅಲ್ಲದೇ, ರಿಯಾಜುದ್ದೀನ್​ನ ಬ್ಯಾಂಕ್ ಖಾತೆಗಳ ಪರಿಶೀಲನೆ ವೇಳೆ, 2022ರ ಮಾರ್ಚ್​ ಹಾಗೂ ಏಪ್ರಿಲ್​ ತಿಂಗಳ ನಡುವೆ 70 ಲಕ್ಷ ರೂ. ಹಣ ವಿವಿಧ ಖಾತೆಗಳಿಗೆ ವರ್ಗಾವಣೆಯಾಗಿರುವುದು ಕಂಡುಬಂದಿದೆ.

ಐಎಸ್‌ಐಗೆ ಮಾಹಿತಿ ನೀಡುತ್ತಿದ್ದ ಅಮೃತ್ ಗಿಲ್‌ಗೆ ಹಣ ರವಾನಿಸಲಾಗುತ್ತಿತ್ತು. ಈತ ಭಾರತೀಯ ಸೇನೆಯ ಟ್ಯಾಂಕ್‌ಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾನೆ. ರಿಯಾಜುದ್ದೀನ್ ಮತ್ತು ಹಕ್ ರಾಜಸ್ಥಾನದಲ್ಲಿ ವೆಲ್ಡಿಂಗ್ ಕೆಲಸ ಮಾಡುವಾಗ ಭೇಟಿಯಾಗಿ ಅಂದಿನಿಂದ ಇಬ್ಬರೂ ಪರಸ್ಪರ ಸಂಪರ್ಕದಲ್ಲಿದ್ದರು. ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಪರ ಕೆಲಸ ಮಾಡುತ್ತಿದ್ದರು.

ಗಿಲ್ ಪಾಕಿಸ್ತಾನದ ಐಎಸ್‌ಐ ಏಜೆಂಟ್‌ಗಳೊಂದಿಗೆ ಸಂಪರ್ಕ ಹೊಂದಿದ್ದ. ಭಾರತೀಯ ಸೇನೆಗೆ ಸಂಬಂಧಿಸಿದ ಸೂಕ್ಷ್ಮ ಮತ್ತು ನಿರ್ಬಂಧಿತ ಮಾಹಿತಿಯನ್ನು ಕಳುಹಿಸುತ್ತಿದ್ದ ಎಂಬುದು ವಿಚಾರಣೆ ವೇಳೆ ಬಯಲಾಗಿದ್ದು, ಪ್ರಾಥಮಿಕ ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಈ ಕೆಲಸಕ್ಕೆ ಪ್ರತಿಯಾಗಿ, ರಿಯಾಜುದ್ದೀನ್ ಮತ್ತು ಹಕ್ ಸಹಾಯದಿಂದ ಗಿಲ್​ಗೆ ಹಣಕಾಸಿನ ನೆರವು ಸಿಗುತ್ತಿತ್ತು ಎಂದು ಎಟಿಎಸ್ ಮಾಹಿತಿ ನೀಡಿದೆ.

ಇದನ್ನೂ ಓದಿ:ಅಕ್ರಮ ಮರಳು ದಂಧೆಕೋರರ ಅಟ್ಟಹಾಸ: ಕಂದಾಯ ಅಧಿಕಾರಿ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ

ABOUT THE AUTHOR

...view details