ಕರ್ನಾಟಕ

karnataka

ಉದ್ಧವ್​ ಸಿಎಂ ಆಗಿ ಮುಂದುವರೀತಾರೆ, ಅವಕಾಶ ಸಿಕ್ಕರೆ ಬಹುಮತ ಸಾಬೀತು: ಸಂಜಯ್ ರಾವತ್

By

Published : Jun 22, 2022, 10:56 PM IST

ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಬುಧವಾರ ಸುಮಾರು ಒಂದು ಗಂಟೆ ಕಾಲ ಉದ್ಧವ್​ ಠಾಕ್ರೆ ಮತ್ತು ಶರದ್​ ಪವಾರ್​ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಸಂಜಯ್ ರಾವತ್, ಉದ್ಧವ್​ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಹೇಳಿದ್ದಾರೆ.

Shiv Sena leader Sanjay Raut
ಶಿವಸೇನೆ ನಾಯಕ ಸಂಜಯ್ ರಾವತ್

ಮುಂಬೈ/ಗುವಾಹಟಿ: ಶಿವಸೇನೆ ನಾಯಕ ಉದ್ಧವ್​ ಠಾಕ್ರೆ ಮಹಾರಾಷ್ಟ್ರದ ಹಾಲಿ ಮುಖ್ಯಮಂತ್ರಿ ಆಗಿದ್ದಾರೆ, ಅವರು ಮುಖ್ಯಮಂತ್ರಿ ಆಗಿಯೇ ಉಳಿಯುತ್ತಾರೆ ಎಂದು ಪಕ್ಷದ ಹಿರಿಯ ಮುಖಂಡ ಸಂಜಯ್ ರಾವತ್ ಹೇಳಿದರು.

ಮಹಾರಾಷ್ಟ್ರದಲ್ಲಿ ಬುಧವಾರದ ರಾಜಕೀಯ ಬೆಳವಣಿಗೆಗಳ ನಂತರ ಮತ್ತು ಉದ್ಧವ್​ ಠಾಕ್ರೆ ಸಿಎಂ ಅಧಿಕೃತ ನಿವಾಸ ತೊರೆಯುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಧವ್​ ಠಾಕ್ರೆ ಸಿಎಂ ಆಗಿ ಮುಂದುವರೆಯಲಿದ್ದಾರೆ. ಒಂದು ವೇಳೆ ನಮಗೆ ಅವಕಾಶ ಸಿಕ್ಕರೆ, ಸದನದಲ್ಲಿ ನಮ್ಮ ಬಹುಮತವನ್ನೂ ಸಾಬೀತುಪಡಿಸುತ್ತೇವೆ ಎಂದರು.

ಇದಕ್ಕೂ ಮುನ್ನ ಸಂಜೆ ಪಾಲುದಾರ ಪಕ್ಷವಾದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಸುಪ್ರಿಯಾ ಸುಳೆ ಹಾಗೂ ಜಿತೇಂದ್ರ ಅವ್ಹಾದ್ ಉದ್ಧವ್ ಠಾಕ್ರೆ ನಿವಾಸಕ್ಕೆ ಭೇಟಿ ನೀಡಿದರು. ಸುಮಾರು ಒಂದು ಗಂಟೆ ಕಾಲ ಉದ್ಧವ್​ ಮತ್ತು ಪವಾರ್​ ಮಾತುಕತೆ ನಡೆಸಿದರು. ಸಭೆ ನಂತರ ಹೊರಬಂದ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ 'ಥಂಬ್ಸ್ ಅಪ್' ಪ್ರದರ್ಶಿಸಿದರು. ಅಲ್ಲದೇ, ಸಿಎಂ ಉದ್ಧವ್​ ಠಾಕ್ರೆ ಕೂಡ ತಮ್ಮ ಬೆಂಬಲಿಗರನ್ನು ಸ್ವಾಗತಿಸಲು ಹೊರಬಂದರು.

ಬಂಡಾಯ ಶಾಸಕರ ಸಭೆ: ಸರ್ಕಾರದ ವಿರುದ್ಧ ಬಂಡಾಯ ಎದ್ದು ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಾಸಕರು ಕೂಡ ಬುಧವಾರ ಸಂಜೆ ನಡೆಸಿದರು. ಶಾಸಕರು ಬಯಸಿದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಉದ್ಧವ್​ ಠಾಕ್ರೆ ಹೇಳಿಕೆ ಕುರಿತಾಗಿ ಈ ಎಲ್ಲ ಶಾಸಕರು ಸುಮಾರು 50 ನಿಮಿಷಗಳ ಕಾಲ ಚರ್ಚಿಸಿದರು ಎನ್ನಲಾಗಿದೆ.

ಈ ಬಗ್ಗೆ ಬಿಜೆಪಿ ಸಂಸದ ಪಲ್ಲಬ್ ಲೋಚನ್ ದಾಸ್ ಮಾತನಾಡಿ, ಇದು ಶಿವಸೇನೆ ಶಾಸಕರ ಆಂತರಿಕ ವಿಷಯ. ಅವರ ತಮ್ಮ ಪಕ್ಷದ ಬೆಳವಣಿಗೆಗಳ ಬಗ್ಗೆ ಚರ್ಚಿಸಿರಬಹುದು. ಇದರಲ್ಲಿ ನಾವು ಹಸ್ತಕ್ಷೇಪ ಮಾಡಿಲ್ಲ. ಆದರೆ, ಶಾಸಕರಿಗೆ ಯಾವುದೇ ತೊಂದರೆಯಾಗದಂತೆ ನಾವು ಸೌಲಭ್ಯಗಳನ್ನು ಮಾತ್ರ ಒದಗಿಸಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ:ಲಗೇಜುಗಳ ಸಮೇತ ಮುಖ್ಯಮಂತ್ರಿಗಳ ಅಧಿಕೃತ ಬಂಗಲೆ ತೊರೆದ ಉದ್ಧವ್ ಠಾಕ್ರೆ!

ABOUT THE AUTHOR

...view details