ಕರ್ನಾಟಕ

karnataka

ಹೊಸ ಹಿಟ್ ಅಂಡ್ ರನ್‌ ಕಾನೂನು ವಿರೋಧಿಸಿ ಬೃಹತ್ ವಾಹನ ಚಾಲಕರ ಮುಷ್ಕರ: ಪೆಟ್ರೋಲ್, ಡೀಸೆಲ್ ಕೊರತೆ ಭೀತಿ

By ETV Bharat Karnataka Team

Published : Jan 2, 2024, 11:00 PM IST

Truckers strike against new hit-and-run law: ಹೊಸ ಭಾರತೀಯ ನ್ಯಾಯ ಸಂಹಿತೆ ಕಾನೂನಿನಲ್ಲಿ ಹಿಟ್ ಅಂಡ್ ರನ್‌ ಪ್ರಕರಣಕ್ಕೆ ಸಂಬಂಧಿಸಿದ ನಿಬಂಧನೆಗಳ ವಿರುದ್ಧ ದೇಶಾದ್ಯಂತ ಬೃಹತ್ ವಾಹನ ನಿರ್ವಾಹಕರು ಮುಷ್ಕರ ಕೈಗೊಂಡಿದ್ದಾರೆ.

Truckers continue strike on 2nd day across India against new hit-and-run law
ಹೊಸ ಹಿಟ್ ಅಂಡ್ ರನ್‌ ಕಾನೂನು ವಿರೋಧಿಸಿ ಬೃಹತ್ ವಾಹನ ಚಾಲಕರ ಮುಷ್ಕರ: ಪೆಟ್ರೋಲ್, ಡೀಸೆಲ್ ಕೊರತೆ ಭೀತಿ

ನವದೆಹಲಿ: ಇತ್ತೀಚೆಗೆ ಸಂಸತ್ತು ಅಂಗೀಕರಿಸಿದ ಹೊಸ ಹಿಟ್ ಅಂಡ್ ರನ್ ಕುರಿತ ವಿಧೇಯಕ ವಿರೋಧಿಸಿ ಭಾರಿ ವಾಹನ ನಿರ್ವಾಹಕರು ಸೋಮವಾರದಿಂದ ನಡೆಸುತ್ತಿರುವ ಮುಷ್ಕರವು ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಅನೇಕ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆಯು ರಸ್ತೆಗೆ ಇಳಿಯದೇ ಇರುವುದರಿಂದ ಜನ ಜೀವನದ ಮೇಲೆ ಪರಿಣಾಮ ಬೀರಿದೆ. ಅಲ್ಲದೇ, ಮುಷ್ಕರದಿಂದಾಗಿ ಇಂಧನ ಕೊರತೆ ಉಂಟಾಗುವ ಊಹಾಪೋಹಗಳು ಹರಿದಾಡುತ್ತಿವೆ. ಹೀಗಾಗಿ ಪೆಟ್ರೋಲ್ ಪಂಪ್‌ಗಳಲ್ಲಿ ಸರತಿ ಸಾಲಿನಲ್ಲಿ ಜನರು ನಿಂತು ಪೆಟ್ರೋಲ್​ ಹಾಗೂ ಡೀಸೆಲ್ ಹಾಕಿಸಿಕೊಳ್ಳುತ್ತಿದ್ದಾರೆ.

ವಸಾಹತುಶಾಹಿ ಕಾಲದ ಭಾರತೀಯ ದಂಡ ಸಂಹಿತೆ (IPC) ಕಾನೂನು ಬದಲಿಗೆ ಸಂಸತ್ತು ಇತ್ತೀಚೆಗೆ ಭಾರತೀಯ ನ್ಯಾಯ ಸಂಹಿತೆ (BNS) ಅಂಗೀಕರಿಸಿದೆ. ಇದರಲ್ಲಿನ ಹಿಟ್ ಅಂಡ್ ರನ್‌ ಪ್ರಕರಣಕ್ಕೆ ಸಂಬಂಧಿಸಿದ ನಿಬಂಧನೆಗಳ ವಿರುದ್ಧ ದೇಶಾದ್ಯಂತ ಬೃಹತ್ ವಾಹನ ನಿರ್ವಾಹಕರಿಂದ ಆಕ್ರೋಶ ವ್ಯಕ್ತವಾಗಿದೆ. ಹೊಸ ಕಾನೂನಿನ ಪ್ರಕಾರ, ನಿರ್ಲಕ್ಷ್ಯದ ಚಾಲನೆಯಿಂದ ಗಂಭೀರವಾದ ರಸ್ತೆ ಅಪಘಾತವನ್ನು ಉಂಟುಮಾಡುವ ಮತ್ತು ಪೊಲೀಸರಿಗೆ ಅಥವಾ ಆಡಳಿತದ ಯಾವುದೇ ಅಧಿಕಾರಿಗೆ ತಿಳಿಸದೆ ಓಡಿಹೋದ ಚಾಲಕರಿಗೆ 10 ವರ್ಷಗಳವರೆಗೆ ಶಿಕ್ಷೆ ಅಥವಾ 7 ಲಕ್ಷ ರೂ.ಗಳವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ.

ಆದ್ದರಿಂದ ಬೃಹತ್ ವಾಹನ ನಿರ್ವಾಹಕರು ಜನವರಿ 1ರಿಂದ ಮೂರು ದಿನಗಳ ಮುಷ್ಕರ ನಡೆಸುತ್ತಿದ್ದಾರೆ. ಮುಷ್ಕರವು ಇಂಧನ ಪೂರೈಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಖಿಲ ಭಾರತ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್ ಹೇಳಿದೆ. ಆದರೂ, ಜನ ಜೀವನದ ಮೇಲೆ ಇದು ಪರಿಣಾಮ ಬೀರಿದೆ. 2ನೇ ದಿನವೂ ದೇಶಾದ್ಯಂತ ಮುಷ್ಕರ ಮುಂದುವರೆದ್ದು, ಪ್ರತಿಭಟನಾನಿರತರು ಹೊಸ ಕಾನೂನನ್ನು ತಕ್ಷಣವೇ ಹಿಂಪಡೆಯಬೇಕು. ಈ ಕಾನೂನಿನಿಂದ ಚಾಲಕರಿಗೆ ಕಿರುಕುಳ ಉಂಟಾಗಲಿದೆ ಎಂದು ಆರೋಪಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮುಷ್ಕರದ ಜೋರಾಗಿದೆ. ಮುಷ್ಕರದ ಮೊದಲ ದಿನವಾದ ಸೋಮವಾರ 1.20 ಲಕ್ಷ ಹೆವಿ ವಾಹನ ನಿರ್ವಾಹಕರಲ್ಲಿ ಶೇ.70ರಷ್ಟು ನಿರ್ವಾಹಕರು ರಸ್ತೆಯಿಂದ ಹೊರಗುಳಿದಿದ್ದರು.

ಆಲ್ ಇಂಡಿಯಾ ಮೋಟಾರ್ ಮತ್ತು ಗೂಡ್ಸ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಶನ್ ಅಧ್ಯಕ್ಷ ರಾಜೇಂದ್ರ ಕಪೂರ್ ಮಾತನಾಡಿ, ಈ ಹೊಸ ಕಾನೂನು ಕುರಿತು ಯಾರೊಂದಿಗೂ ಚರ್ಚೆ ನಡೆಸಿಲ್ಲ. ಈ ಬಗ್ಗೆ ಯಾರನ್ನೂ ಕೇಳಿಲ್ಲ. ಕಾನೂನು ರೂಪಿಸುವ ಮೊದಲೇ ಸಭೆಗಳು ಮತ್ತು ಸಮಾಲೋಚನೆಗಳು ಇರಬೇಕಿತ್ತು. ನಮ್ಮ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿದ ನಂತರ ಈ ಕಾನೂನು ಜಾರಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಸರ್ಕಾರಕ್ಕೆ ನಮ್ಮ ಏಕೈಕ ಬೇಡಿಕೆಯಾಗಿದೆ ಎಂದು ತಿಳಿಸಿದರು.

ಇದರ ನಡುವೆಯೇ ಮುಷ್ಕರದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗಬಹುದು ಎಂಬ ಊಹಾಪೋಹಗಳ ಎದ್ದಿವೆ. ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಪ್ರತಿಭಟನೆಯಲ್ಲಿ ಪೆಟ್ರೋಲ್, ಡೀಸೆಲ್, ಟ್ಯಾಂಕರ್ ಚಾಲಕರು ಭಾಗವಹಿಸಿದ್ದಾರೆ. ಮಹಾರಾಷ್ಟ್ರ, ಮಧ್ಯಪ್ರದೇಶ, ತೆಲಂಗಾಣ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಇತರ ರಾಜ್ಯಗಳಲ್ಲೂ ಜನರು ಸಾಲುಗಟ್ಟಿರುವ ಘಟನೆಗಳು ವರದಿಯಾಗಿವೆ.

ಇದನ್ನೂ ಓದಿ:ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ನಾಲ್ವರ ಗುಂಡಿಕ್ಕಿ ಹತ್ಯೆ, 5 ಜಿಲ್ಲೆಗಳಲ್ಲಿ ಕರ್ಫ್ಯೂ

ABOUT THE AUTHOR

...view details