ಕರ್ನಾಟಕ

karnataka

7ನೇ ತರಗತಿವರೆಗೆ ಮನೆಯಲ್ಲೇ ಓದಿ ಸಾಧನೆಯ ಶಿಖರವೇರಿದ ಡಾ. ಶೇಖ್ ಜಹೇದಾ ಬೇಗಂ..

By ETV Bharat Karnataka Team

Published : Sep 12, 2023, 6:40 PM IST

ಒಂದು ಲಕ್ಷದ ಪುಟಗಳ ಪುಸ್ತಕವನ್ನು ರಚಿಸುವ ಮೂಲಕ ತೆಲಂಗಾಣದ ಡಾ. ಶೇಖ್ ಜಹೇದಾ ಬೇಗಂ ಗಿನ್ನಿಸ್ ದಾಖಲೆ ಬರೆದಿದ್ದಾರೆ. ಅವರ ಯಶೋಗಾಥೆ ಕುರಿತು ವರದಿ ಇಲ್ಲಿದೆ..

Dr Sheikh Zaheda Begum
ಡಾ. ಶೇಖ್ ಜಹೇದಾ ಬೇಗಂ...

ಹೈದರಾಬಾದ್​ (ತೆಲಂಗಾಣ):ಸಮಾಜ ಎಷ್ಟೇ ಮುಂದುವರೆದಿದ್ದರೂ ಮಹಿಳೆಯರು ಇನ್ನೂ ಕೆಲ ಕಟ್ಟುಪಾಡುಗಳನ್ನು ಎದುರಿಸಬೇಕಾಗಿದೆ. ಅದರಲ್ಲೂ, ಮುಸ್ಲಿಂ ಕುಟುಂಬಗಳಲ್ಲಿ ಮಹಿಳೆಯರು ಮನೆಯಲ್ಲೇ ಕಷ್ಟಪಡುವ ಪರಿಸ್ಥಿತಿ ಇದೆ. ಇಂತಹ ಸಂದರ್ಭಗಳ ನಡುವೆಯೂ ತೆಲಂಗಾಣದ ಡಾ.ಶೇಖ್ ಜಹೇದಾ ಬೇಗಂ ಎಂಬುವರು ಅಮೋಘ ಸಾಧನೆ ಮಾಡಿದ್ದಾರೆ. ಐದು ಪದವಿಗಳು, ಮೂರು ಸ್ನಾತಕೋತ್ತರ ಪದವಿ, ಪಿಎಚ್​ಡಿ ಹಾಗೂ ಹತ್ತು ದೇಶಗಳಲ್ಲಿ ವಿಷಯ ಮಂಡನೆ ಮಾಡಿರುವ ಅವರು ಇತ್ತೀಚೆಗಷ್ಟೇ ಗಿನ್ನೆಸ್​​ ದಾಖಲೆಯನ್ನೂ ಮಾಡಿದ್ದಾರೆ.

ಒಂದು ಲಕ್ಷ ಪುಟಗಳ ಪುಸ್ತಕವನ್ನು ಡಾ.ಶೇಖ್ ಜಹೇದಾ ಬೇಗಂ ರಚಿಸಿದ್ದು, ಇದು ಗಿನ್ನೆಸ್​ ದಾಖಲೆಯ ಪುಟವನ್ನು ಸೇರಿದೆ. ಪ್ರಸ್ತುತ ಹೈದರಾಬಾದ್​ನ ಹಯಾತ್‌ನಗರ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ತಮ್ಮ ಜೀವನ ಪಯಣವನ್ನು ತಮ್ಮ ಮಾತಿನಲ್ಲೇ ವಿವರಿಸಿದ್ದಾರೆ.

''ನಮ್ಮದು ನಲ್ಗೊಂಡ ಜಿಲ್ಲೆಯ ಹಜಾರಿಗುಡೆಂ ಗ್ರಾಮ. ಸಾಂಪ್ರದಾಯಿಕ ಮುಸ್ಲಿಂ ಕುಟುಂಬ ನಮ್ಮದು. ನಾವು ನಾಲ್ಕು ಜನ ಹೆಣ್ಣು ಮಕ್ಕಳು. ಮಹಿಳೆಯರು ಹೊರಗೆ ಹೋಗುವುದನ್ನು ನಮ್ಮ ಮನೆಯಲ್ಲಿ ಒಪ್ಪುವುದಿಲ್ಲ. ಹೀಗಾಗಿ ನನಗೆ 7ನೇ ತರಗತಿವರೆಗೆ ಮನೆಯಲ್ಲೇ ಪಾಠ ಮಾಡಿದ್ದರು. ನನ್ನ ತಂದೆ ದಸ್ತಗಿರಿ ಅವರಿಗೆ ಸರ್ಕಾರಿ ನೌಕರಿ ಸಿಕ್ಕ ನಂತರ ನನ್ನನ್ನು ಶಾಲೆಗೆ ಸೇರಿಸಲಾಯಿತು. ಚಿಕ್ಕ ಸೈಕಲ್​ನಲ್ಲಿ ಶಾಲೆಗೆ ಹೋಗುತ್ತಿದ್ದೆ. ಇದೀಗ ನಾನು ಉಸ್ಮಾನಿಯಾ ವಿವಿ ಕ್ಯಾಂಪಸ್‌ನಲ್ಲಿದ್ದುಕೊಂಡೇ ಬಿಎ, ಬಿ.ಇಡಿ, ಎಲ್​ಎಲ್​ಬಿ ಹಾಗೂ ಉರ್ದು, ಹಿಂದಿ ಭಾಷೆ ಸೇರಿ ಐದು ಪದವಿಗಳು, ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಎಲ್​ಎಲ್​ಎಂ ಹಾಗೂ ಎಂ.ಇಡಿ ಪೂರೈಸಿದ್ದೇನೆ. ರಾಜಕೀಯ ವಿಜ್ಞಾನದಲ್ಲಿ ಪಿಎಚ್.ಡಿ ಮುಗಿಸಿದ್ದೇನೆ. ನೆಟ್​ ಪರೀಕ್ಷೆ ಬರೆದು ಸರ್ಕಾರಿ ನೌಕರಿ ಪಡೆದಿರುವೆ'' ಎಂದು ಶೇಖ್ ಜಹೇದಾ ಬೇಗಂ ತಮ್ಮ ವ್ಯಾಸಂಗದ ಬಗ್ಗೆ ವಿವರಣೆ ನೀಡಿದ್ದಾರೆ.

ಮೊದಲು ಮಹಿಳಾ ಸಬಲೀಕರಣ ವಿಷಯ ಆಯ್ಕೆ ಮಾಡಿಕೊಂಡಿದ್ದೆ.. :''ಪಿಎಚ್‌ಡಿಯಲ್ಲಿ ಮಹಿಳಾ ಸಬಲೀಕರಣದ ವಿಷಯವನ್ನು ನಾನು ಮೊದಲಿಗೆ ಆಯ್ಕೆ ಮಾಡಿಕೊಂಡಿದ್ದೆ. ಆದರೆ, ಅನಿರೀಕ್ಷಿತವಾಗಿ 2011ರ ಮುಂಬೈ ಭಯೋತ್ಪಾದಕ ದಾಳಿ ನನ್ನ ಚಿತ್ತ ಬದಲಿಸಿತು. ಭಯೋತ್ಪಾದಕರು ಚಿಕ್ಕ ದೋಣಿಯಲ್ಲಿ ಬಂದು ಈ ದಾಳಿ ನಡೆಸಿದ್ದು ಅಚ್ಚರಿ ಎನಿಸಿತು. ಹೀಗಾಗಿ ಕರಾವಳಿ ಪ್ರದೇಶಗಳ ಬಗ್ಗೆ ಸಂಶೋಧನೆ ಮಾಡಬೇಕೆಂದು ನಿರ್ಧರಿಸಿ, 'ಕರಾವಳಿ ಪ್ರದೇಶಗಳ ಸಂರಕ್ಷಣೆ - ಕರಾವಳಿ ರಕ್ಷಣಾ ಪಡೆಯ ಪಾತ್ರ' ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧ ಮಂಡಿಸಿದ್ದೆ. 2016ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಎಂಜಿನಿಯರಿಂಗ್ ಮ್ಯಾನೇಜ್‌ಮೆಂಟ್ ಮಾಹಿತಿ ತಂತ್ರಜ್ಞಾನ ಮತ್ತು ಜೀವ ವಿಜ್ಞಾನಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ನಾನು ಇದೇ ವಿಷಯದ ಕುರಿತು ಪ್ರಸ್ತುತಿ ನೀಡಿ ಬಹುಮಾನ ಪಡೆದಿದ್ದೇನೆ. ಇದಲ್ಲದೇ, ಜಪಾನ್, ಆಸ್ಟ್ರೇಲಿಯಾ, ಶ್ರೀಲಂಕಾ, ಮಲೇಷ್ಯಾ ಮತ್ತು ದುಬೈ ಸೇರಿ ನಾನು ಹತ್ತು ದೇಶಗಳ ಸಮ್ಮೇಳನಗಳಲ್ಲಿ ಭಾಗವಹಿಸಿದ್ದೇನೆ'' ಎಂದು ತಿಳಿಸಿದರು.

ಆನ್​​ಲೈನ್​ ಪ್ರಸ್ತುತಿ ಕಾರ್ಯಕ್ರಮವೇ ನನಗೆ ಸ್ಪೂರ್ತಿ:''2020ರಲ್ಲಿ ಇಎಸ್​ಎನ್​ ಪ್ರಕಾಶನ ಸಂಸ್ಥೆಯ ಏಕಕಾಲದಲ್ಲಿ 150 ಗಂಟೆಗಳ ಆನ್‌ಲೈನ್ ಪ್ರಸ್ತುತಿ ಕಾರ್ಯಕ್ರಮ ಆಯೋಜಿಸಿತ್ತು. ನಾನು ಕೂಡ ಅದರಲ್ಲಿ ಭಾಗವಹಿಸಿದ್ದೆ. ಅದೊಂದು ದಾಖಲೆಯೇ ಆಗಿತ್ತು. ಇದರಿಂದ ನಾನು ಸ್ಫೂರ್ತಿ ಪಡೆದು ಜಗತ್ತಿನ ಅತಿ ದೊಡ್ಡ ಪುಸ್ತಕ ರಚಿಸಲು ಸಾಧ್ಯವಾಯಿತು. ಇದರಲ್ಲಿ ಎಂಟು ಲೇಖಕರು ಇದ್ದು, ತೆಲುಗು ರಾಜ್ಯಗಳಿಂದ ನಾನೊಬ್ಬಳೆ. ಮಹಿಳಾ ಸಬಲೀಕರಣ, ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತು ಲೇಖನಗಳನ್ನು ಬರೆದಿದ್ದು, ಇತರರ ಲೇಖನಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ನಾನು ಬರಹಗಾರ್ತಿ ಮತ್ತು ಸಂಪಾದಕಿಯಾಗಿ ಎರಡು ಪಾತ್ರಗಳನ್ನು ನಿರ್ವಹಿಸಿದ್ದು, ಒಟ್ಟು ಒಂದು ಲಕ್ಷ ಪುಟಗಳಿರುವ ಪುಸ್ತಕಕ್ಕೆ 'ವರ್ಲ್ಡ್ 2023' ಎಂದು ಹೆಸರಿಟ್ಟಿದ್ದೇವೆ. ನಮ್ಮ ಶ್ರಮದ ಫಲವಾಗಿ ಇತ್ತೀಚಿಗೆ ಗಿನ್ನಿಸ್ ದಾಖಲೆ ಪಡೆದದ್ದು ಅವಿಸ್ಮರಣೀಯ ಕ್ಷಣ'' ಎಂದರು.

ಹಲವು ಸವಾಲುಗಳ ನಡುವೆ ಸಾಧನೆ:''ನಾನು ಬಾಲ್ಯದಿಂದಲೂ ಹಲವು ಸವಾಲುಗಳನ್ನು ಎದುರಿಸಿದ್ದೇನೆ. ಅದಕ್ಕೆ ದೊಡ್ಡ ಮಟ್ಟದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಹುಟ್ಟಿತ್ತು. ನೌಕರಿ ಮಾಡುತ್ತಲೇ ಓದಿದ್ದರೂ ಯಾರ ಮೇಲೂ ಅವಲಂಬಿತವಾಗಿಲ್ಲ. ಈಗ ನಾನು ಕೆಲ ಎನ್‌ಜಿಒಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ. ಏಷ್ಯಾ ಅರಬ್ ಶೃಂಗಸಭೆಯಲ್ಲಿ 'ಸೂಪರ್ ವುಮೆನ್' ಎಂಬ ಪ್ರಶಸ್ತಿ ಸೇರಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದೇನೆ. ಇತ್ತೀಚೆಗಷ್ಟೇ ತೆಲಂಗಾಣ ಸರ್ಕಾರವು ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿದೆ. ಪುಟ್ಟ ಹಳ್ಳಿಯಿಂದ ಬಂದ ನನ್ನಂದಿ ಒಬ್ಬರಾದರೂ ಸ್ಫೂರ್ತಿ ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ'' ಎಂದು ಡಾ.ಶೇಖ್ ಜಹೇದಾ ಬೇಗಂ ಹೇಳಿದರು.

ಇದನ್ನೂ ಓದಿ:ಒಂದು ದಿನ ಕೂಲಿ ಕೆಲಸ.. ಇನ್ನೊಂದು ದಿನ ಕಾಲೇಜು.. ಕೆಮಿಸ್ಟ್ರಿಯಲ್ಲಿ ಪಿಎಚ್​ಡಿ.. ಬಡತನದಲ್ಲಿ ಅರಳಿದ ಭಾರತಿ ಈಗ ​ಡಾಕ್ಟರ್!

ABOUT THE AUTHOR

...view details