ಕರ್ನಾಟಕ

karnataka

ಪ.ಬಂಗಾಳದ ರಿಶ್ರಾ ರೈಲ್ವೆ ನಿಲ್ದಾಣದಲ್ಲಿ ಕಲ್ಲು ತೂರಾಟ: ರೈಲು ಸೇವೆ ಸ್ಥಗಿತ

By

Published : Apr 4, 2023, 7:41 AM IST

ರಿಶ್ರಾ ರೈಲ್ವೆ ನಿಲ್ದಾಣದಲ್ಲಿ ಕಲ್ಲು ತೂರಾಟದ ಘಟನೆ ಸಂಭವಿಸಿದೆ. ಯಾವುದೇ ಅಹಿತಕರ ಘಟನೆ ಅಥವಾ ಹಿಂಸಾಚಾರವನ್ನು ತಡೆಯಲು ಪೊಲೀಸರು ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್)ಯನ್ನು ನಿಯೋಜಿಸಲಾಗಿದೆ - ಸಾರ್ವಜನಿಕ ಸಂಪರ್ಕ ಅಧಿಕಾರಿ ಕೌಶಿಕ್ ಮಿರಾನ್ ಹೇಳಿಕೆ.

stone pelting in West Bengal
ಪ.ಬಂಗಾಳದ ರಿಶ್ರಾ ರೈಲ್ವೆ ನಿಲ್ದಾಣದಲ್ಲಿ ಕಲ್ಲು ತೂರಾಟ

ಹೂಗ್ಲಿ:ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ರಿಶ್ರಾ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಸಂಜೆ ಕಲ್ಲು ತೂರಾಟದ ಘಟನೆ ವರದಿಯಾಗಿದೆ. ರಿಶ್ರಾ ರೈಲು ನಿಲ್ದಾಣದಿಂದ ಹೊರಡುವ ಎಲ್ಲಾ ಸ್ಥಳೀಯ ಮತ್ತು ಮೇಲ್ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ಸ್ಥಗಿತಗೊಳಿಸುವಂತೆ ರೈಲ್ವೆ ಇಲಾಖೆಗೆ ಸೂಚನೆ ನೀಡಲಾಗಿದೆ. "ರಿಶ್ರಾ ರೈಲ್ವೆ ನಿಲ್ದಾಣದಲ್ಲಿ ಕಲ್ಲು ತೂರಾಟದ ಘಟನೆ ಸಂಭವಿಸಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಜನರ ಸುರಕ್ಷತೆಗಾಗಿ, ಹೌರಾ - ಬರ್ಧಮಾನ್ ಮುಖ್ಯ ಮಾರ್ಗದಲ್ಲಿ ಎಲ್ಲ ಸ್ಥಳೀಯ ಮತ್ತು ಮೇಲ್ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ" ಎಂದು ಈಸ್ಟರ್ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೌಶಿಕ್ ಮಿರಾನ್ ಹೇಳಿದ್ದಾರೆ.

ಮೂಲಗಳ ಪ್ರಕಾರ, ಯಾವುದೇ ಅಹಿತಕರ ಘಟನೆ ಅಥವಾ ಹಿಂಸಾಚಾರವನ್ನು ತಡೆಯಲು ಪೊಲೀಸ್ ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್)ಯನ್ನು ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಭಾನುವಾರ ಹೂಗ್ಲಿಯಲ್ಲಿ ನಡೆದ ಭಾರತೀಯ ಜನತಾ ಪಕ್ಷ (ಬಿಜೆಪಿ) ಶೋಭಾ ಯಾತ್ರೆಯ ಸಂದರ್ಭದಲ್ಲಿ ಘರ್ಷಣೆ ಸಂಭವಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ. ನಂತರ ರಾಜ್ಯ ಸರ್ಕಾರ ನಿಷೇಧಾಜ್ಞೆ ಹೊರಡಿಸಿ ಜಿಲ್ಲಾದ್ಯಂತ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ.

"ಕಾನೂನುಬದ್ಧವಾಗಿ ಉದ್ಯೋಗದಲ್ಲಿರುವ ಯಾವುದೇ ವ್ಯಕ್ತಿಗೆ ಅಡಚಣೆ, ಕಿರಿಕಿರಿ ಅಥವಾ ಗಾಯ, ಅಥವಾ ಮಾನವ ಜೀವಕ್ಕೆ ಅಪಾಯ, ಆರೋಗ್ಯ ಅಥವಾ ಸುರಕ್ಷತೆ ಅಥವಾ ಸಾರ್ವಜನಿಕ ನೆಮ್ಮದಿಯ ಭಂಗ ಉಂಟಾದಲ್ಲಿ ಸೆಕ್ಷನ್ 5 (2) ರ ಅಡಿಯಲ್ಲಿ ಆದೇಶದ ಪ್ರಕಾರ ಇಂಡಿಯನ್ ಟೆಲಿಗ್ರಾಫ್ ಆಕ್ಟ್, 1885ರ ಟೆಲಿಕಾಂ ಸೇವೆಗಳ ತಾತ್ಕಾಲಿಕ ಅಮಾನತು (ಸಾರ್ವಜನಿಕ ತುರ್ತು ಅಥವಾ ಸಾರ್ವಜನಿಕ ಸುರಕ್ಷತೆ) ನಿಯಮಗಳು, 2017 ರೊಂದಿಗೆ ನಿಷೇಧಾಜ್ಞೆ ಘೋಷಿಸಲಾಗಿದೆ" ಎಂದು ರಾಜ್ಯ ಸರ್ಕಾರ ಹೇಳಿದೆ.

ಘಟನೆಯ ಹಿನ್ನೆಲೆ: ಗುರುವಾರ ಮುಂಜಾನೆ ರಾಮನವಮಿ ಆಚರಣೆಯ ವೇಳೆ ಹೌರಾದಲ್ಲಿ ಎರಡು ಗುಂಪುಗಳ ಘರ್ಷಣೆ ನಡೆದಿತ್ತು. ಘಟನೆಯಲ್ಲಿ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಮೆರವಣಿಗೆಯಲ್ಲಿ ಗಲಭೆಕೋರರು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳನ್ನು ಧ್ವಂಸಗೊಳಿಸಿದ್ದರು. ಹಿಂಸಾಚಾರದ ನಂತರ ಪಶ್ಚಿಮ ಬಂಗಾಳ ಸರ್ಕಾರ ಶುಕ್ರವಾರ, ಈ ಘಟನೆಯ ತನಿಖೆಯನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಹಸ್ತಾಂತರಿಸಿದೆ. ಇನ್ಸ್​​ಪೆಕ್ಟರ್ ಜನರಲ್ ಆಫ್ ಪೊಲೀಸ್, ಸಿಐಡಿ ಸುನಿಲ್ ಚೌಧರಿ ನೇತೃತ್ವದ ವಿಶೇಷ ತಂಡ ತನಿಖೆ ಆರಂಭಿಸಿದೆ.

ಸುವೇಂದು ಅಧಿಕಾರಿ ಟ್ವೀಟ್​

'ರಾಜ್ಯಾಡಳಿತ ಬೀಚ್​ನಲ್ಲಿ ರಜೆ ಆನಂದಿಸುತ್ತಿದೆ': ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುವೇಂದು ಅಧಿಕಾರಿ ಸೋಮವಾರ ಸಂಜೆ ಹೂಗ್ಲಿ ಜಿಲ್ಲೆಯ ರಿಶ್ರಾ ಪಟ್ಟಣದಲ್ಲಿ ನಡೆದ ಕಲ್ಲು ತೂರಾಟದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿದ ಅವರು "ರಿಶ್ರಾ ರೈಲು ನಿಲ್ದಾಣದ ಬಳಿ ಕಲ್ಲು ತೂರಾಟದ ಬಳಿಕ ಸ್ಥಳೀಯ ಮತ್ತು ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ಬಲವಂತವಾಗಿ ಸ್ಥಗಿತಗೊಳಿಸಲಾಗಿದೆ. ಪಶ್ಚಿಮ ಬಂಗಾಳದ ಮತ್ತು ರಿಶ್ರಾ ಹೊತ್ತಿ ಉರಿಯುತ್ತಿದೆ. ಆದರೆ ಇಡೀ ರಾಜ್ಯಾಡಳಿತ 'ದಿಘಾ' ಬೀಚ್​ನಲ್ಲಿ ರಜೆಯನ್ನು ಆನಂದಿಸುತ್ತಿದೆ" ಎಂದು ಟೀಕಿಸಿದ್ದಾರೆ

ಇದನ್ನೂ ಓದಿ:ರಾಮನವಮಿ ಮೆರವಣಿಗೆ ವೇಳೆ ಹಿಂಸಾಚಾರ.. ಸಂಧ್ಯಾ ಬಜಾರ್ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನ

ABOUT THE AUTHOR

...view details