ಕರ್ನಾಟಕ

karnataka

ಕೆಂಪು ಕೋಟೆಯಲ್ಲಿ ನಾಳೆ 9ನೇ ಬಾರಿಗೆ ಪ್ರಧಾನಿ ಮೋದಿ ಭಾಷಣ: ಡ್ರೋನ್ ನಿಗ್ರಹ ವ್ಯವಸ್ಥೆ

By

Published : Aug 14, 2022, 8:34 PM IST

Updated : Aug 14, 2022, 9:22 PM IST

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿ ಮಾತನಾಡಲಿದ್ದಾರೆ. ಆದ್ದರಿಂದ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

Security beefed up in Delhi, anti drone system   near Red Fort
ಕೆಂಪು ಕೋಟೆಯಲ್ಲಿ ನಾಳೆ ಮೋದಿ 9ನೇ ಬಾರಿಗೆ ಭಾಷಣ: ತೀವ್ರ ಕಟ್ಟೆಚ್ಚರ, ಡ್ರೋನ್ ನಿಗ್ರಹ ವ್ಯವಸ್ಥೆ ಸ್ಥಾಪನೆ

ನವದೆಹಲಿ: ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೆಹಲಿಯ ಕೆಂಪು ಕೋಟೆಯ ಬಳಿ ಡ್ರೋನ್ ನಿಗ್ರಹ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಈ ವ್ಯವಸ್ಥೆಯು ಸುಮಾರು 4 ಕಿಮೀ ವ್ಯಾಪ್ತಿಯೊಳಗೆ ಒಂದೇ ಸಮಯದಲ್ಲಿ ಅನೇಕ ಡ್ರೋನ್‌ಗಳನ್ನು ಪತ್ತೆಹಚ್ಚುವ ಮತ್ತು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.

ಇಡೀ ದೇಶ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲು ಸಜ್ಜಾಗಿರುವ ಬೆನ್ನಲ್ಲೇ ಭಯೋತ್ಪಾದಕರ ದಾಳಿ ಭೀತಿ ಕೂಡ ಎದುರಾಗಿದೆ. ಈ ಸಂಬಂಧ ಈಗಾಗಲೇ ಗುಪ್ತಚರ ಇಲಾಖೆ (ಇಂಟಲಿಜೆನ್ಸ್ ಬ್ಯೂರೋ) ಐದು ಹೊಸ ಎಚ್ಚರಿಕೆಗಳನ್ನು ನೀಡಿದೆ. ಸ್ವಾತಂತ್ರ್ಯ ದಿನಾಚರಣೆಯ ಮೊದಲು ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಇತರ ಹಲವಾರು ನಗರಗಳಲ್ಲಿ ಸಂಭವನೀಯ ಭಯೋತ್ಪಾದಕ ದಾಳಿಗಳ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.

ಪ್ರಮುಖವಾಗಿ ಸೋಮವಾರ ಕೆಂಪು ಕೋಟೆಯಲ್ಲಿ ನಡೆಯಲಿರುವ ಧ್ವಜಾರೋಹಣ ಸಮಾರಂಭದ ವೇಳೆ ಭಯೋತ್ಪಾದಕರು ಐಇಡಿಗಳನ್ನು ಬಳಸಬಹುದೆಂಬ ಎಚ್ಚರಿಕೆಯನ್ನೂ ಕೊಟ್ಟಿದೆ. ಏತನ್ಮಧ್ಯೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಶಂಕಿತನನ್ನು ಭಯೋತ್ಪಾದಕ ನಿಗ್ರಹ ದಳ ಬಂಧಿಸಿದೆ. ಹೀಗಾಗಿ ಹೈ ಅಲರ್ಟ್ ವಹಿಸಲಾಗುತ್ತಿದೆ.

ಕೆಂಪು ಕೋಟೆ ಬಳಿ ಹದ್ದಿನ ಕಣ್ಣಿಡಲಾಗಿದ್ದು, 400 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ವೈಮಾನಿಕ ಉಪಕರಣಗಳು ಮತ್ತು ಡ್ರೋನ್‌ಗಳು ಸೇರಿದಂತೆ ಮಾನವಸಹಿತ ಅಥವಾ ಮಾನವರಹಿತವಾಗಿ ವಸ್ತುಗಳಿಂದ ಯಾವುದೇ ಬೆದರಿಕೆಯನ್ನು ಎದುರಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಒಂದು ದಿನ ಮುಂಚಿತವಾಗಿಯೇ ಡ್ರೋನ್ ನಿಗ್ರಹ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಈ ವ್ಯವಸ್ಥೆ ಮತ್ತು ಅದರ ಪಕ್ಕದಲ್ಲಿ ಸ್ಥಾಪಿಸಲಾದ ಜಾಮರ್‌ನ ಸಹಾಯದಿಂದ ಡ್ರೋನ್‌ಗಳನ್ನು ಪತ್ತೆಹಚ್ಚುವ ಮತ್ತು ನಿಷ್ಕ್ರಿಯಗೊಳಿಸಲು ಸಾಧ್ಯವಾಗಲಿದೆ ಎಂದು ಡಿಆರ್‌ಡಿಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಳಿಪಟಗಳಿಗೂ ನಿರ್ಬಂಧ: ಅಲ್ಲದೇ, ತಾಂತ್ರಿಕತೆಯನ್ನು ಬಳಸಿಕೊಂಡು ಭಯೋತ್ಪಾದಕರು ಹಾರುವ ವಸ್ತುಗಳ ಕೆಂಪು ಕೋಟೆಯ ಮೇಲೆ ದಾಳಿ ಮಾಡಬಹುದು ಎಂಬ ಎಚ್ಚರಿಕೆ ಹಿನ್ನೆಲೆಯಲ್ಲೂ ಕೆಂಪುಕೋಟೆ ಬಳಿ ಗಾಳಿಪಟ ಸೇರಿದಂತೆ ಯಾವ ವಸ್ತುಗಳನ್ನೂ ಹಾರಿಸದಂತೆ ದೆಹಲಿ ಪೊಲೀಸರು ನಿಷೇಧ ಹೇರಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಗಾಳಿಪಟ ಕ್ಯಾಚರ್ಸ್​ಅನ್ನು ಅಗತ್ಯ ಉಪಕರಣಗಳೊಂದಿಗೆ ನಿಯೋಜಿಸಲಾಗಿದೆ. ಅವರು ಗಾಳಿಪಟಗಳು, ಬಲೂನ್​ಗಳು ಮತ್ತು ಚೈನೀಸ್ ಲ್ಯಾಂಟರ್ನ್​ಗಳು ಸಮಾರಂಭದ ಪ್ರದೇಶವನ್ನು ತಲುಪದಂತೆ ತಡೆಯುತ್ತಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಂಪು ಕೋಟೆಯಲ್ಲಿ ಮೋದಿ 9ನೇ ಬಾರಿಗೆ ಭಾಷಣ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಾಳೆ (ಆಗಸ್ಟ್ 15) ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿ ಮಾತನಾಡಲಿದ್ದಾರೆ. ಇದು ಕೆಂಪು ಕೋಟೆಯಲ್ಲಿ ಮೋದಿ ಅವರು ಮಾಡುವ ಸತತ 9ನೇ ಭಾಷಣವಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಅಮೃತ ಮಹೋತ್ಸವ ನಿಮಿತ್ತ ಹರ್​ ಘರ್​ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಿಂದ ಕಳೆದ ಎರಡು ದಿನಗಳಿಂದಲೂ ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ.

2020ರಿಂದ ಕೊರೊನಾ ಕರಿಛಾಯೆ ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳ ಮೇಲೆ ಬೀರಿತ್ತು. ಇದೀಗ ಕೋವಿಡ್​​​ ಹಾವಳಿಯಿಂದ ಹೊರಬರುತ್ತಿರುವ ಸಮಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯು ಆಚರಿಸಲಾಗುತ್ತಿದೆ.

ಇದನ್ನೂ ಓದಿ:ಜೈಶ್-ಎ-ಮೊಹಮ್ಮದ್ ಸಂಘಟನೆ ಜೊತೆ ನಂಟು: ಕಾನ್ಪುರದಲ್ಲಿ ಶಂಕಿತ ಉಗ್ರನ ಸೆರೆ, ಹೈಅಲರ್ಟ್

Last Updated : Aug 14, 2022, 9:22 PM IST

ABOUT THE AUTHOR

...view details