ಕರ್ನಾಟಕ

karnataka

ಸನಾತನ ಧರ್ಮಕ್ಕೆ ಯಾರ ಪ್ರಮಾಣಪತ್ರವೂ ಬೇಕಿಲ್ಲ: ಮೋಹನ್​ ಭಾಗವತ್​

By

Published : Mar 30, 2023, 12:17 PM IST

Updated : Mar 30, 2023, 1:04 PM IST

ಹರಿದ್ವಾರದ ಪತಂಜಲಿ ಕೇಂದ್ರದಲ್ಲಿ ನಡೆಯುತ್ತಿರುವ ಸನ್ಯಾಸ ದೀಕ್ಷಾ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್​ ಭಾಗವತ್​ ಭಾಗವಹಿಸಿ ಸನಾತನ ಧರ್ಮದ ಮಹತ್ವದ ಬಗ್ಗೆ ಸನ್ಯಾಸ ದೀಕ್ಷೆ ಪಡೆದವರಿಗೆ ತಿಳಿಸಿದರು.

ಮೋಹನ್​ ಭಾಗವತ್​
ಮೋಹನ್​ ಭಾಗವತ್​

ಸನಾತನ ಧರ್ಮದ ಸಾರ ತಿಳಿಸಿದ ಮೋಹನ್ ಭಾಗವತ್​

ಹರಿದ್ವಾರ:ಸನಾತನ ಧರ್ಮಕ್ಕೆ ಯಾರ ಮತ್ತು ಯಾವುದೇ ಪ್ರಮಾಣಪತ್ರ ಬೇಕಿಲ್ಲ. ಅದು ಕಾಲದ ಪರೀಕ್ಷೆಯಲ್ಲಿ ನಿಂತಿದೆ. ಇದೊಂದು "ಟೆಸ್ಟಿಂಗ್​ ಟೈಂ". ಈ ಪರೀಕ್ಷೆಯಲ್ಲಿ ಸನಾತನ ಧರ್ಮ ಗಟ್ಟಿಯಾಗಿ ನಿಲ್ಲುವ ಮೂಲಕ ತನ್ನ ಬಲವನ್ನು ತೋರಿಸಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್​ಎಸ್​ಎಸ್​) ಮುಖ್ಯಸ್ಥ ಮೋಹನ್​ ಭಾಗವತ್​ ಹೇಳಿದರು.

ಇಲ್ಲಿನ ಪತಂಜಲಿಯಲ್ಲಿ ನಡೆಯುತ್ತಿರುವ ‘ಸನ್ಯಾಸ ದೀಕ್ಷಾ’ ಸಮಾರಂಭದ ಎಂಟನೇ ದಿನವಾದ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸನಾತನ ಧರ್ಮದ ಬಗ್ಗೆ ಉಪನ್ಯಾಸ ನೀಡಿದ ಭಾಗವತರು, ಸನಾತನ ಧರ್ಮ ಹಾಗೂ ಜೀವನದಲ್ಲಿ ಕೇಸರಿ ಬಣ್ಣದ ಮಹತ್ವದ ಬಗ್ಗೆ ತಿಳಿಸಿ, ಕೇಸರಿ ಸನ್ಯಾಸ ಎಂಬುದು ಸನಾತನ ಧರ್ಮದ ಸಮಾನಾರ್ಥಕವಾಗಿದೆ ಎಂದು ಹೇಳಿದರು.

ಹಳೆಯ ಸನಾತನ ಧರ್ಮ ತನ್ನ ಬಲದಿಂದಲೇ ಸಾಬೀತಾದ ಧರ್ಮವಾಗಿದೆ. ಅದಕ್ಕೆ ಯಾವುದೇ ಸರ್ಟಿಫಿಕೇಟ್​ ಬೇಕಾಗಿಲ್ಲ. ಕಾಲದ ಎಲ್ಲ ಪರೀಕ್ಷೆಯಲ್ಲೂ ಅದು ತನ್ನ ಸತ್ವವನ್ನು ತೋರಿದೆ. ಇಂಗ್ಲಿಷ್‌ನಲ್ಲಿ ಅದನ್ನು "ಟೈಮ್ ಟೆಸ್ಟೆಡ್​" ಎನ್ನುತ್ತಾರೆ. ಎಲ್ಲ ದಾಳಿ, ಅಡೆತಡೆಗಳನ್ನು ಅದು ದಾಟಿ ಬಂದಿದೆ ಎಂದು ಬಣ್ಣಿಸಿದರು.

ಸನ್ಯಾಸ ಜೀವನಕ್ಕೆ ಕಾಲಿಡಲು ಸಿದ್ಧವಾಗಿರುವ ಯುವಕರನ್ನು ಉದ್ದೇಶಿಸಿ ಮಾತನಾಡಿದ ಭಾಗವತ್ವ ಅವರು, "ಇಂದು ನೀವು ಕೇಸರಿ ವಸ್ತ್ರವನ್ನು ಧರಿಸಿ ಸನಾತನ ಧರ್ಮವನ್ನು ಎತ್ತಿ ಹಿಡಿಯುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಿದ್ದೀರಿ. ಕಾಲ ಕಳೆದಂತೆ ಎಲ್ಲವೂ ಬದಲಾಗುತ್ತದೆ. ಆದರೆ, ನಮ್ಮ ಸನಾತನ ಸಂಪ್ರದಾಯ ಅಥವಾ ಜೀವನ ವಿಧಾನ ಎಂದಿಗೂ ಶಾಶ್ವತವಾಗಿರಲಿದೆ. ಅದು ಎಂದಿಗೂ ಬದಲಾಗುವುದಿಲ್ಲ" ಎಂದು ಹೇಳಿದರು.

"ಉತ್ತಮ ನಡವಳಿಕೆಯ ಮೂಲಕ ಸನಾತನ ಧರ್ಮದ ನಿಜವಾದ ಅರ್ಥವನ್ನು ಜನರಿಗೆ ಅರ್ಥಮಾಡಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಅದನ್ನು ನೀವು ಸಮರ್ಥವಾಗಿ ನಿಭಾಯಿಸಬೇಕು. ಸನಾತನ ಧರ್ಮದ ವ್ಯಾಖ್ಯಾನವನ್ನು ಜನರಿಗೆ ಪ್ರಚುರಪಡಿಸಿ" ಎಂದು ಸಲಹೆ ನೀಡಿದರು.

ಮಹರ್ಷಿ ದಯಾನಂದರ ಕನಸು ನನಸು:ಇದೇ ವೇಳೆ ಮಾತನಾಡಿದ ಪತಂಜಲಿಯ ಬಾಬಾ ರಾಮ್‌ದೇವ್, "ಸನ್ಯಾಸ ಜೀವನಕ್ಕೆ ಸೇರಲು ಪ್ರತಿಜ್ಞೆ ಮಾಡಿದ ಉದಯೋನ್ಮುಖ ಸನ್ಯಾಸಿಗಳನ್ನು ಮತ್ತಷ್ಟು ಬಲಿಷ್ಠರನ್ನಾಗಿ ಮಾಡಲಾಗುವುದು. ಮಹರ್ಷಿ ದಯಾನಂದರ ಕನಸನ್ನು ನನಸಾಗಿಸಲು ನಾವು ಈ ಕಾರ್ಯ ಸಾಧನೆಯಲ್ಲಿ ತೊಡಗಿಸಿಕೊಳ್ಳಬೇಕು. ನಿಮಗಾಗಿ ಕಲಿಕಾ ಕೇಂದ್ರಗಳನ್ನು ಸ್ಥಾಪಿಸುತ್ತೇವೆ" ಎಂದು ಹೇಳಿದರು.

"ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಪತಂಜಲಿ ದೊಡ್ಡ ಬದಲಾವಣೆಯನ್ನು ಮಾಡುತ್ತಿದೆ. ಭಾರತೀಯ ಶಿಕ್ಷಣ ಮಂಡಳಿ, ಪತಂಜಲಿ ಗುರುಕುಲಂ, ಆಚಾರ್ಯಕುಲಂ, ಪತಂಜಲಿ ವಿಶ್ವವಿದ್ಯಾನಿಲಯ, ಪತಂಜಲಿ ಆಯುರ್ವೇದ ಕಾಲೇಜು ಆರಂಭಿಸುವ ಮೂಲಕ ಇದನ್ನು ಸಾಬೀತು ಮಾಡಲಾಗಿದೆ" ಎಂದು ಅವರು ಹೇಳಿದರು.

"ಪತಂಜಲಿ ಮಹರ್ಷಿ ದಯಾನಂದ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಮತ್ತು ಇತರ ಎಲ್ಲ ಕ್ರಾಂತಿಕಾರಿಗಳ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಈ ಕ್ರಾಂತಿಕಾರಿಗಳು ಯಾವಾಗಲೂ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಪ್ರತಿಪಾದಿಸಿದರು. ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ನಂತರವೂ ಇದನ್ನು ಚಾಚುತಪ್ಪದೇ ಪಾಲಿಸಿಕೊಂಡು ಬರಲಾಗುತ್ತಿದೆ" ಎಂದು ರಾಮ್​ದೇವ್​ ಹೇಳಿದರು.

"ದೇಶ ಸ್ವಾತಂತ್ರ್ಯ ಪಡೆದ ನಂತರವೂ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸ್ವಾಯತ್ತತೆ ಇರಲಿಲ್ಲ. ಮೆಕಾಲೆ ಶಿಕ್ಷಣ ಪದ್ಧತಿಯನ್ನು ತೊಡೆದುಹಾಕುವ ಸಮಯ ಬಂದಿದೆ. ಪತಂಜಲಿಯ ಸನ್ಯಾಸಿಗಳು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ಅದು ಮುಂದಿನ ದಿನಗಳಲ್ಲಿ ಸಾಬೀತಾಗಲಿದೆ" ಎಂದು ರಾಮದೇವ್ ಹೇಳಿದರು.

ಇದನ್ನೂ ಓದಿ:ಮಲೆಮಹದೇಶ್ವರ ದೇಗುಲದ ಹುಂಡಿ ಎಣಿಕೆ: 22 ದಿನಕ್ಕೆ 1.82 ಕೋಟಿ ರೂಪಾಯಿ ಸಂಗ್ರಹ

Last Updated : Mar 30, 2023, 1:04 PM IST

ABOUT THE AUTHOR

...view details