ಕರ್ನಾಟಕ

karnataka

ಮನೀಶ್ ಸಿಸೋಡಿಯಾ ಜೈಲು ಸೇರಿ 6 ತಿಂಗಳು: ಶಾಸಕರ ವೇತನಕ್ಕಾಗಿ ಹೊಸ ಬ್ಯಾಂಕ್​ ಖಾತೆಗೆ ಕೋರ್ಟ್​ ಅನುಮತಿ

By ETV Bharat Karnataka Team

Published : Aug 25, 2023, 9:51 PM IST

ದೆಹಲಿ ಶಾಸಕ, ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರಿಗೆ ತಮ್ಮ ಶಾಸಕರ ವೇತನ ಪಡೆಯುವ ನಿಟ್ಟಿನಲ್ಲಿ ಹೊಸ ಬ್ಯಾಂಕ್​ ಖಾತೆ ತೆರೆಯಲು ನ್ಯಾಯಾಲಯ ಅನುಮತಿಸಿದೆ.

Manish Sisodia
ಮನೀಶ್ ಸಿಸೋಡಿಯಾ

ನವದೆಹಲಿ: ವಿವಾದಿತ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಸೇರಿರುವ ಆಮ್​ ಆದ್ಮಿ ಪಕ್ಷದ ನಾಯಕ, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ತಮ್ಮ ವೇತನ ಪಡೆಯಲು ಹೊಸ ಬ್ಯಾಂಕ್​ ಖಾತೆ ತೆರೆಯಲು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಶುಕ್ರವಾರ ಅನುಮತಿ ನೀಡಿದೆ. ಅಲ್ಲದೇ, ಈ ಖಾತೆಯಿಂದ ಹಣವನ್ನು ಹಿಂಪಡೆಯಲು ನ್ಯಾಯಾಲಯದ ಅನುಮತಿ ಪಡೆಯಬೇಕಾಗಿಲ್ಲ ಎಂದು ಕೋರ್ಟ್​ ತಿಳಿಸಿದೆ.

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ಎದುರಿಸುತ್ತಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿ ಸಿಸೋಡಿಯಾ ಅವರ ಅಸ್ತಿತ್ವದಲ್ಲಿರುವ ಬ್ಯಾಂಕ್ ಖಾತೆಯನ್ನು ಇಡಿ ವಶಪಡಿಸಿಕೊಂಡಿದೆ. ಆದ್ದರಿಂದ ತಮ್ಮ ಬ್ಯಾಂಕ್​ ಖಾತೆಯಲ್ಲಿರುವ ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ತಮ್ಮ ಹಣ ಪಡೆಯಲು ಅನುಮತಿ ನೀಡಬೇಕೆಂದು ಸಿಸೋಡಿಯಾ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಪಟ್ಪರ್ ಗಂಜ್ ಕ್ಷೇತ್ರದ ಹಾಲಿ ಶಾಸಕರಾಗಿರುವ ಸಿಸೋಡಿಯಾ ಅವರಿಗೆ ತಮ್ಮ ಶಾಸಕರ ವೇತನ ಪಡೆಯಲು ಹೊಸ ಬ್ಯಾಂಕ್​ ಪಡೆಯಲು ನ್ಯಾಯಾಧೀಶ ಎಂ.ಕೆ.ನಾಗ್ಪಾಲ್ ಅವರು ಅನುಮತಿ ನೀಡಿದರು. ಜೊತೆಗೆ ಹೊಸ ಬ್ಯಾಂಕ್ ಖಾತೆ ತೆರೆಯಲು ನ್ಯಾಯಾಲಯದ ಅನುಮತಿ ಅಗತ್ಯವಿಲ್ಲ. ಆದರೆ, ಅವರ ಹೆಸರಿನಲ್ಲಿ ಹೊಸ ಖಾತೆ ತೆರೆಯಲು ಕೆಲವು ದಾಖಲೆಗಳ ಮೇಲೆ ನ್ಯಾಯಾಲಯದ ದೃಢೀಕರಣದ ಅಡಿಯಲ್ಲಿ ಸಹಿಯನ್ನು ಪಡೆಯಲು ಅನುಮತಿಸಲಾಗಿದೆ ಎಂದು ನ್ಯಾಯಾಧೀಶರು ತಿಳಿಸಿದರು. ಸೆಪ್ಟೆಂಬರ್ 22ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಿದರು.

ಮೂರು ದಿನಗಳ ತನ್ನ ಶಾಸಕರ ಅನುದಾನದಡಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಹಂಚಿಕೆ ಮಾಡಲು ಕೋರ್ಟ್​ ಅನುಮತಿ ಕೊಟ್ಟಿತ್ತು. ಮತ್ತೊಂದೆಡೆ, ತಮ್ಮ ಮನೆಯ ವೆಚ್ಚಕ್ಕಾಗಿ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯ ಚಿಕಿತ್ಸೆಗಾಗಿ ತಮ್ಮ ಸ್ವಂತ ಬ್ಯಾಂಕ್ ಖಾತೆಯಿಂದ ಹಣ ಪಡೆಯಲು ಅನುಮತಿ ನೀಡಬೇಕೆಂದು ನ್ಯಾಯಾಲಯಕ್ಕೆ ಆಪ್​ ನಾಯಕ ಮಾಡಿದ್ದಾರೆ.

ಸಿಸೋಡಿಯಾ ಜೈಲು ಸೇರಿ 6 ತಿಂಗಳು:ದೆಹಲಿ ಮಾಜಿ ಡಿಸಿಎಂ ಆಗಿರುವ ಮನೀಶ್ ಸಿಸೋಡಿಯಾ ಜೈಲು ಸೇರಿ ಇಂದಿಗೆ (ಆ.25) ಆರು ತಿಂಗಳಾಗಿದೆ. ಕಳೆದ ಫೆಬ್ರವರಿ 26ರಂದು ವಿಚಾರಣೆಯ ನಂತರ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತು. ಅಂದಿನಿಂದ ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಇದರೊಂದಿಗೆ ಇಡಿ ಮತ್ತು ಸಿಬಿಐನಿಂದ ಪ್ರತ್ಯೇಕ ತನಿಖೆ ನಡೆಯುತ್ತಿದೆ.

ಮತ್ತೊಂದೆಡೆ, ಸಿಸೋಡಿಯಾ ಜಾಮೀನಿಗಾಗಿ ಕೆಳ ನ್ಯಾಯಾಲಯಗಳಿಂದ ಹಿಡಿದು ದೆಹಲಿ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ವರೆಗೆ ಅರ್ಜಿಗಳನ್ನು ಸಲ್ಲಿಸಲಾಗಿದೆ. ಆದರೆ, ಇಲ್ಲಿಯವರೆಗೆ ಕೆಳ ನ್ಯಾಯಾಲಯ ಮತ್ತು ಹೈಕೋರ್ಟ್‌ನಿಂದ ಸಿಸೋಡಿಯಾ ಅವರಿಗೆ ನಿರಾಸೆ ಮಾತ್ರ ಸಿಕ್ಕಿದೆ. ಇದುವರೆಗೆ ಸಿಸೋಡಿಯಾ ಜಾಮೀನು ಅರ್ಜಿಗಳನ್ನು ಒಟ್ಟು ಐದು ಬಾರಿ ತಿರಸ್ಕರಿಸಲಾಗಿದೆ.

ಇದನ್ನೂ ಓದಿ:Delhi Liquor Scam: ಪತ್ನಿಯ ಚಿಕಿತ್ಸೆಗಾಗಿ ಬ್ಯಾಂಕ್ ಖಾತೆಯಿಂದ ಹಣ ಪಡೆಯಲು ಅನುಮತಿ ಕೋರಿ ಸಿಸೋಡಿಯಾ ಕೋರ್ಟ್​ ಮೊರೆ

ABOUT THE AUTHOR

...view details