ಕರ್ನಾಟಕ

karnataka

ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ವೈಭವ: ಸ್ತಬ್ಧಚಿತ್ರಗಳ ಆಕರ್ಷಣೆ, ವೈಮಾನಿಕ ಶಕ್ತಿ ಪ್ರದರ್ಶನ

By

Published : Jan 26, 2023, 2:12 PM IST

Updated : Jan 26, 2023, 2:42 PM IST

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಳಗ್ಗೆ ಧ್ವಜಾರೋಹಣ ಮಾಡುವ ಮೂಲಕ 74ನೇ ಗಣರಾಜ್ಯೋತ್ಸವಕ್ಕೆ ಚಾಲನೆ ಕೊಟ್ಟರು. ಬಳಿಕ ಕರ್ತವ್ಯ ಪಥದಲ್ಲಿ ಸಂಭ್ರಮ ಹೇಗಿತ್ತು? ಇಲ್ಲಿದೆ ಸಂಪೂರ್ಣ ವರದಿ.

president-droupadi-murmu
ಕರ್ತವ್ಯಪಥದಲ್ಲಿ 74ನೇ ಗಣರಾಜ್ಯೋತ್ಸವದ ವೈಭವ

ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ವೈಭವ

ನವದೆಹಲಿ:ದೇಶಾದ್ಯಂತ ಇಂದು 74ನೇ ಗಣರಾಜ್ಯೋತ್ಸವ ಕಳೆಗಟ್ಟಿತ್ತು. ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರು ಕಳೆದ ವರ್ಷ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿದರು. ಕರ್ತವ್ಯ ಪಥದಲ್ಲಿ ಸಾಂಪ್ರದಾಯಿಕ ಕುಶಾಲುತೋಪು ಸಿಡಿಸಿ ರಾಷ್ಟ್ರಪತಿಗಳಿಗೆ ಗೌರವ ವಂದನೆ ಸಲ್ಲಿಸಲಾಯಿತು.

ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮತ್ತು ವಿದೇಶದಿಂದ ಆಗಮಿಸಿದ ಅತಿಥಿಗಳ ಮುಂದೆ 21 ಗನ್ ವಂದನೆ ಸಲ್ಲಿಸುವುದು ಪದ್ಧತಿ. ಕರ್ತವ್ಯ ಪಥಕ್ಕೆ ಆಗಮಿಸಿದ ರಾಷ್ಟ್ರಪತಿ ಮುರ್ಮು ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬರಮಾಡಿಕೊಂಡರು. ರಾಷ್ಟ್ರಪತಿ ಮುರ್ಮು ಅವರನ್ನು ಅವರ ಅಶ್ವಾರೋಹಿಗಳು, ಅಂಗರಕ್ಷಕರು ರಾಷ್ಟ್ರಪತಿ ಭವನದಿಂದ ಬೆಂಗಾವಲು ನೀಡಿ ಕರೆ ತಂದರು. ರಾಷ್ಟ್ರಪತಿಗಳ ಅಂಗರಕ್ಷಕ ಪಡೆ ಭಾರತೀಯ ಸೇನೆಯ ಅತ್ಯಂತ ಹಿರಿಯ ರೆಜಿಮೆಂಟ್ ಆಗಿದೆ.

ಈಜಿಪ್ಟ್​ ಅಧ್ಯಕ್ಷರು ಮುಖ್ಯ ಅತಿಥಿ:ಈ ಸಲದ ಗಣರಾಜ್ಯೋತ್ಸವದಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್ ಸಿಸಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕರ್ತವ್ಯ ಪಥದಲ್ಲಿ ನಡೆದ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು, ವೈಮಾನಿಕ ಪ್ರದರ್ಶನದಲ್ಲಿ ಈಜಿಪ್ಟ್ ಅಧ್ಯಕ್ಷರು ಭಾಗವಹಿಸಿ ಭಾರತದ ಸೇನಾಶಕ್ತಿ ಮತ್ತು ಪರಂಪರೆಯನ್ನು ಸವಿದರು.

ದೇಶೀಯ ಶಸ್ತ್ರಾಸ್ತ್ರ ಪ್ರದರ್ಶನ:ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಆತ್ಮ ನಿರ್ಭರ ಭಾರತದಡಿ ನಿರ್ಮಿಸಲಾದ ದೇಶೀಯ ಶಸ್ತ್ರಾಸ್ತ್ರಗಳು ಝಳಪಿಸಿದವು. ಕರ್ತವ್ಯ ಪಥದಲ್ಲಿ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ಪ್ರದರ್ಶನ ನಡೆಯಿತು. 'ಮೇಡ್ ಇನ್ ಇಂಡಿಯಾ' 105 ಎಂಎಂ ಇಂಡಿಯನ್ ಫೀಲ್ಡ್ ಗನ್‌, LCH ಪ್ರಚಂದ್, ಕೆ. - 9 ವಜ್ರ ಹೊವಿಟ್ಜರ್‌ಗಳು, ಎಂಬಿಟಿ ಅರ್ಜುನ್, ಕ್ಷಿಪಣಿ ಸಹಿತ ನಾಗ್ ಆ್ಯಂಟಿ ಟ್ಯಾಂಕ್, ಆಕಾಶ್ ವಾಯು ರಕ್ಷಣಾ ಕ್ಷಿಪಣಿಗಳು, ಕ್ವಿಕ್ ರಿಯಾಕ್ಷನ್ ಫೈಟಿಂಗ್ ವೆಹಿಕಲ್‌ಗಳು.

ಸ್ತಬ್ಧಚಿತ್ರಗಳ ಪ್ರದರ್ಶನದ ಮೆರುಗು:ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸ್ತ್ರೀ ಸಬಲೀಕರಣವನ್ನು ಪ್ರತಿಬಿಂಬಿಸುವ ‘ನಾರಿ ಶಕ್ತಿʼ ಸ್ತಬ್ಧಚಿತ್ರ ಗಮನ ಸೆಳೆಯಿತು. ಸತತವಾಗಿ 14 ವರ್ಷಗಳಿಂದ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಂಡ ದೇಶದ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಯನ್ನು ಕರ್ನಾಟಕ ತನ್ನದಾಗಿಸಿಕೊಂಡಿತು. ಇದಲ್ಲದೇ, ವಿವಿಧ ಥೀಮ್​ಗಳ 23 ಸ್ತಬ್ಧಚಿತ್ರಗಳು ಪ್ರದರ್ಶನಗೊಂಡವು.

ಸೇನಾಶಕ್ತಿ ಪ್ರದರ್ಶನ:ವಾಯುಪಡೆ, ನೌಕಾಪಡೆ, ಭೂಪದಾತಿ ದಳದ ಸೈನಿಕರು ಶಿಸ್ತಿನ ಪಥಸಂಚಲನ ನಡೆಸಿ, ಸೇನಾ ಶಕ್ತಿ ಪ್ರದರ್ಶನ ನಡೆಸಿದರು. ಎನ್​ಸಿಸಿಯ ಮಹಿಳಾ ಮತ್ತು ಪುರುಷ ಪಡೆಗಳೂ ಪಥಸಂಚಲನ ನಡೆಸಿದವು. ವಿಶೇಷ ಅಂದರೆ ಈಜಿಪ್ಟ್‌ನ ಸೇನಾ ತುಕಡಿ ಇದೇ ಪ್ರಥಮ ಬಾರಿಗೆ ಕರ್ತವ್ಯ ಪಥದಲ್ಲಿ ಪರೇಡ್​ ನಡೆಸಿತು. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್ ಸಿಸಿ ಅವರು ಈ ಸಲದ ಮುಖ್ಯ ಅತಿಥಿಯಾದ ಕಾರಣ ಈಜಿಪ್ಟ್ ಸೇನಾ ತುಕಡಿ ಪರೇಡ್‌ನಲ್ಲಿ ಭಾಗವಹಿಸಿತು.

144 ಸೈನಿಕರನ್ನು ಒಳಗೊಂಡ ಕರ್ನಲ್ ಮಹಮೂದ್ ಮೊಹಮ್ಮದ್ ಅಬ್ದೆಲ್ ಫತ್ತಾಹ್ ಎಲ್ ಖರಾಸಾವಿ ನೇತೃತ್ವದ ಈಜಿಪ್ಟ್ ಮಿಲಿಟರಿ ತುಕಡಿ ಈಜಿಪ್ಟ್ ಸಶಸ್ತ್ರ ಪಡೆಗಳ ಮುಖ್ಯ ತುಕಡಿಯಾಗಿದೆ. ಭಾರತದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ ಸೇನಾ ಪಡೆ ವಿಶೇಷ ಗೌರವಕ್ಕೆ ಪಾತ್ರವಾಯಿತು. ಈಜಿಪ್ಟನ್​ ಅತ್ಯಂತ ಹಳೆಯ ಪರಂಪರಾಗತ ತುಕಡಿ ಇದಾಗಿದೆ.

ವೈಮಾನಿಕ ಪ್ರದರ್ಶನದ ಝಲಕ್​:ಗಣರಾಜ್ಯೋತ್ಸವದ ವಿಶೇಷ ಆಕರ್ಷಣೆ ಎಂದರೆ, ಭಾರತೀಯ ಮೂರೂ ಪಡೆಗಳ ವೈಮಾನಿಕ ಪ್ರದರ್ಶನ. 50 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳೊಂದಿಗೆ ಅದ್ಭುತವಾದ ಫ್ಲೈಪಾಸ್ಟ್ ಮತ್ತು ವೈಮಾನಿಕ ಪ್ರದರ್ಶನ ನೆರೆದವರನ್ನು ರಂಜಿಸಿದವು. ಮೂರು ಮಿಗ್ - 29, 2 ಅಪಾಚೆ ಹೆಲಿಕಾಪ್ಟರ್‌, ಐವರು ಸಾರಂಗ್ ವಿಮಾನಗಳ ಮೂಲಕ ತ್ರಿವರ್ಣ ಧ್ವಜವನ್ನು ರಚಿಸಿದವು. ಫ್ರಾನ್ಸ್​ನಿಂದ ಪಡೆದಿರುವ ನಾಲ್ಕು ರಫೇಲ್‌ಗಳು ತಮ್ಮ ಝಲಕ್​ ತೋರಿಸಿದವು.

ರಾಜಸ್ತಾನಿ ಪೇಟದಲ್ಲಿ ಮಿಂಚಿದ ಮೋದಿ:ಪ್ರತಿ ವರ್ಷವೂ ವಿವಿಧ ದಿರಿಸಿನಿಂದ ಗಮನ ಸೆಳೆಯುವ ಪ್ರಧಾನಿ ಮೋದಿ ಈ ಬಾರಿ ಬಣ್ಣಬಣ್ಣದ ರಾಜಸ್ಥಾನಿ ಪೇಟವನ್ನು ಧರಿಸಿದ್ದರು. ಇದು ಭಾರತದ ವೈವಿಧ್ಯತೆಯನ್ನು ಸಂಕೇತಿಸಿತು. ಪೇಟದ ಜೊತೆಗೆ ಅವರು ಕಪ್ಪು ಕೋಟ್ ಮತ್ತು ಬಿಳಿ ಪ್ಯಾಂಟ್‌ನ ಬಿಳಿ ಕುರ್ತಾವನ್ನು ಧರಿಸಿದ್ದರು.

ಇದನ್ನೂ ಓದಿ:ದೆಹಲಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಗಮನಸೆಳೆದ 'ಕರ್ನಾಟಕದ ನಾರಿಶಕ್ತಿ'- ವಿಡಿಯೋ

Last Updated :Jan 26, 2023, 2:42 PM IST

ABOUT THE AUTHOR

...view details