ಕರ್ನಾಟಕ

karnataka

ಪೋಪ್ ಫ್ರಾನ್ಸಿಸ್ ಶೀಘ್ರ ಗುಣಮುಖರಾಗಲಿ: ಪ್ರಧಾನಿ ಮೋದಿ ಟ್ವೀಟ್

By

Published : Mar 31, 2023, 10:43 AM IST

ಪೋಪ್ ಫ್ರಾನ್ಸಿಸ್ ಅವರ ಉತ್ತಮ ಆರೋಗ್ಯ ಮತ್ತು ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

Pope and PM Modi
ಪೋಪ್ ಫ್ರಾನ್ಸಿಸ್ ಹಾಗೂ ಪೋಪ್ ಫ್ರಾನ್ಸಿಸ್

ನವದೆಹಲಿ/ರೋಮ್​: "ಉಸಿರಾಟದ ತೊಂದರೆಯಿಂದ ಬುಧವಾರ ರೋಮ್‌ನ ಜೆಮೆಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಪೋಪ್ ಫ್ರಾನ್ಸಿಸ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ" ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ. ಕ್ಲಿನಿಕಲ್ ತಪಾಸಣೆಯಲ್ಲಿ ಪೋಪ್ ಫ್ರಾನ್ಸಿಸ್ ಅವರಿಗೆ ಬ್ರಾಂಕೈಟಿಸ್(ಉಸಿರಾಟದ ಸೋಂಕು) ಇರುವುದು ಗೊತ್ತಾಗಿತ್ತು. ಬಳಿಕ ಪ್ರತಿಜೀವಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರೋಮ್‌ನಲ್ಲಿ ವೈದ್ಯರು ಹೇಳಿದ್ದರು.

"ಪೋಪ್ ಫ್ರಾನ್ಸಿಸ್ ಅವರ ಉತ್ತಮ ಆರೋಗ್ಯ ಮತ್ತು ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ" ಎಂದು ಮೋದಿ ಟ್ವೀಟ್‌ನಲ್ಲಿ ಹಾರೈಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ಪೋಪ್ ಫ್ರಾನ್ಸಿಸ್ ಅವರ ಚೇತರಿಕೆಗೆ ಪ್ರಾರ್ಥಿಸುವಂತೆ ಕೇಳಿಕೊಂಡಿದ್ದಾರೆ. ಬ್ರಾಂಕೈಟಿಸ್ ಸೋಂಕಿಗೆ ಇಂಟ್ರಾವೆನಸ್ ಪ್ರತಿಜೀವಕಗಳನ್ನು ನೀಡಿದ ನಂತರ ಫ್ರಾನ್ಸಿಸ್ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಪೋಪ್​ ಆಸ್ಪತ್ರೆಯಿಂದ ಬಿಡುಗಡೆಯಾಗಬಹುದು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ.

"86 ವರ್ಷದ ಪೋಪ್ ಫ್ರಾನ್ಸಿಸ್ ರಾತ್ರಿ ಚೆನ್ನಾಗಿ ನಿದ್ರಿಸಿದ್ದಾರೆ. ಬೆಳಗ್ಗೆ ಪ್ರಾರ್ಥನೆ ಮಾಡಿ ಉಪಹಾರ ಸೇವಿಸಿದರು. ನಂತರ ಅವರು ಕೆಲವು ಪತ್ರಿಕೆಗಳನ್ನು ಓದಿದರು. ಆರೋಗ್ಯ ಕ್ರಮೇಣ ಸುಧಾರಿಸುತ್ತಿದೆ ಮತ್ತು ಯೋಜಿತ ಚಿಕಿತ್ಸೆಗಳು ಮುಂದುವರೆದಿದೆ" ಎಂದು ವ್ಯಾಟಿಕನ್ ವಕ್ತಾರ ಮ್ಯಾಟಿಯೊ ಬ್ರೂನಿ ಹೇಳಿದರು.

ಪೋಪ್ ಫ್ರಾನ್ಸಿಸ್ ತಮ್ಮ ಅಧಿಕೃತ ಟ್ವಿಟರ್​​ನಲ್ಲಿ ವಿಶ್ವ ನಾಯಕರುಗಳ ಹಾರೈಕೆಗಾಗಿ ಧನ್ಯವಾದ ತಿಳಿಸಿದ್ದಾರೆ. "ನಿಮ್ಮ ಪ್ರಾರ್ಥನೆಗಾಗಿ ನಾನು ಕೃತಜ್ಞತೆ ವ್ಯಕ್ತಪಡಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಫ್ರಾನ್ಸಿಸ್ ಅವರನ್ನು ಬುಧವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಡೈವರ್ಟಿಕ್ಯುಲೈಟಿಸ್‌ನಿಂದ ಬಳಲುತ್ತಿದ್ದಾರೆ. ಇದು ಕರುಳಿನ ಉರಿಯೂತ ಅಥವಾ ಸೋಂಕನ್ನು ಉಂಟುಮಾಡುವ ಸಾಮಾನ್ಯ ಸ್ಥಿತಿಯಾಗಿದೆ. ಯುವಕನಾಗಿದ್ದಾಗ ತೀವ್ರವಾದ ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರ ಶ್ವಾಸಕೋಶದ ಭಾಗವನ್ನು ತೆಗೆದುಹಾಕಲಾಗಿತ್ತು. ಅವರು ಸಾಮಾನ್ಯವಾಗಿ ವಾಕಿಂಗ್ ಸ್ಟಿಕ್ ಅನ್ನು ಬಳಸುತ್ತಿದ್ದರು ಮತ್ತು ಕೆಲವೊಮ್ಮೆ ಅವರ ಬಲ ಮೊಣಕಾಲಿನ ನೋವಿನಿಂದ ಗಾಲಿಕುರ್ಚಿಯನ್ನು ಬಳಸುತ್ತಾರೆ. ಫ್ರಾನ್ಸಿಸ್ ತನ್ನ ಬಲ ಮೊಣಕಾಲಿನ ಮುರಿತದ ಕಾರಣದಿಂದಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಗಾಲಿಕುರ್ಚಿಯನ್ನು ಬಳಸಿದ್ದಾರೆ.

ಪ್ರಸಕ್ತ ವರ್ಷದ ಈ ಸಮಯ ಪೋಪ್ ಅವರಿಗೆ ಅತ್ಯಂತ ಜನನಿಬಿಡ ಸಮಯ. ಮುಂದಿನ ಈಸ್ಟರ್ ವಾರಾಂತ್ಯಕ್ಕೆ ಮುಂಚಿತವಾಗಿ ಅನೇಕ ಕಾರ್ಯಕ್ರಮ ಮತ್ತು ಸೇವೆಗಳನ್ನು ನಿಗದಿಪಡಿಸಲಾಗಿದೆ. ಅಲ್ಲದೇ ಈ ವಾರಾಂತ್ಯದಲ್ಲಿ ಭಾನುವಾರ ಪ್ರಾರ್ಥನೆ, ಬಳಿಕ ಮುಂದಿನ ವಾರ ಪವಿತ್ರ ವಾರ ಮತ್ತು ಈಸ್ಟರ್ ಆಚರಣೆ ನಿಗದಿಪಡಿಸಲಾಗಿದೆ. ಅಲ್ಲದೇ ಪೋಪ್ ಏಪ್ರಿಲ್‌ನಲ್ಲಿ ಹಂಗೆರಿಗೆ ಭೇಟಿ ನೀಡಲಿದ್ದಾರೆ.

ಬ್ರಾಂಕೈಟಿಸ್ ಎಂದರೇನು?:ಶ್ವಾಸಕೋಶದ ಕೊಳವೆ ಅಧಿಕವಾಗಿ ಉಬ್ಬಿಕೊಂಡು ಉಸಿರಾಟದ ಸಮಸ್ಯೆ ಉಂಟಾಗುವುದು. ಶ್ವಾಸಕೋಶದ ಕೊಳವೆಯಲ್ಲಿ ಲೋಳೆಯ ಉತ್ಪಾದನೆಯು ಹೆಚ್ಚುವುದರ ಮೂಲಕ ಉಸಿರನ್ನು ತೆಗೆದುಕೊಳ್ಳಲು ಕಷ್ಟವಾಗುವುದು. ಅಲ್ಲದೇ ಲೋಳೆಯಂತಹ ಕಫದ ಉತ್ಪತ್ತಿ ತೀವ್ರವಾಗಿರುತ್ತದೆ.

ಇದನ್ನೂ ಓದಿ:ಸೆನ್ಸ್​ಲೆಸ್​ ರಷ್ಯಾ ಉಕ್ರೇನ್​ ಯುದ್ಧ ನಿಲ್ಲಿಸಿ: ಪೋಪ್​ ಫ್ರಾನ್ಸಿಸ್​ ಕ್ರಿಸ್​ಮಸ್​ ಶಾಂತಿ ಸಂದೇಶ

ABOUT THE AUTHOR

...view details