ನವದೆಹಲಿ:ಇಟಲಿ ರಾಜಧಾನಿ ರೋಮ್ನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಭಾಗಿಯಾಗಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಅಫ್ಘಾನಿಸ್ತಾನ ಭಯೋತ್ಪಾದಕರ ಮೂಲವಾಗುತ್ತಿದ್ದು, ಅದನ್ನೆಲ್ಲ ತಡೆಯಬೇಕಾದ ಅನಿವಾರ್ಯತೆ ಇದೆ ಎಂದು ಒತ್ತಿ ಹೇಳಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಶೃಂಗಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಫ್ಘಾನ್ ಅನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡ ಬಳಿಕ ಅಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಮೇಲೆ ಹೆಚ್ಚಿನ ಬೆಳಕು ಚೆಲ್ಲಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಕೂಡ ಮಾಡಿದ್ದಾರೆ.
ಜಿ-20 ಪ್ರಭಾವಿ ನಾಯಕರ ಶೃಂಗಸಭೆಯಲ್ಲಿ ವರ್ಚುಯಲ್ ಮೂಲಕ ಭಾಗಿಯಾಗಿದ್ದ ನಮೋ, ಅಫ್ಘಾನ್ ದೇಶದಲ್ಲಿ ಇದೀಗ ಬದಲಾವಣೆ ತರುವ ಅವಶ್ಯಕತೆ ಇದ್ದು, ಅಲ್ಲಿನ ನಾಗರಿಕರಿಗೆ ಮಾನವೀಯತೆ ದೃಷ್ಟಿಯಿಂದ ನೆರವು ನೀಡಬೇಕಾಗಿದೆ ಎಂದು ಒತ್ತಿ ಹೇಳಿದರು.
ಇದನ್ನೂ ಓದಿರಿ:ಶಾರುಖ್ ಪುತ್ರನಿಗೆ ಬೇಲ್ ಕೊಡಿಸಲು ಧಾರವಾಡದ ವಕೀಲ ಫೇಲ್.. ಕ್ರಿಮಿನಲ್ ಲಾಯರ್ ಅಮಿತ್ ದೇಸಾಯಿಗೆ ಮಣೆ
ಅಫ್ಘಾನಿಸ್ತಾನದಲ್ಲಿ ಉದ್ಭವವಾಗಿರುವ ಬಿಕ್ಕಟ್ಟು ಸುಧಾರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮಹತ್ವದ ನಿರ್ಣಯ ಕೈಗೊಳ್ಳಬೇಕಾಗಿದ್ದು, ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದ ಪ್ರಕ್ರಿಯೆ ಕೂಡ ಅಗತ್ಯವಾಗಿದೆ ಎಂದು ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಈ ಹಿಂದೆ ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಕೆಲವೊಂದು ದೇಶಗಳಿಗೆ ಭಯೋತ್ಪಾದನೆ ರಾಜಕೀಯ ಆಯುಧವಾಗಿ ಬಳಕೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಭಯೋತ್ಪಾದನೆ ಅವರಿಗೇ ಮಾರಕವಾಗಲಿದೆ. ಅಫ್ಘಾನಿಸ್ತಾನದ ಉಗ್ರರು ಹಾಗೂ ಅಲ್ಲಿನ ಭೂಮಿ ಬಳಕೆ ಮಾಡಿಕೊಳ್ಳಬೇಡಿ ಎಂದು ಸೂಚನೆ ನೀಡಿದ್ದರು.