ಕರ್ನಾಟಕ

karnataka

ರಂಜಾನ್ ಮಾಸ ಆರಂಭ: ಪ್ರಧಾನಿ ಮೋದಿ ಶುಭಾಶಯ

By

Published : Mar 24, 2023, 9:50 AM IST

ಪ್ರಧಾನಿ ನರೇಂದ್ರ ಮೋದಿ ಅವರು ರಂಜಾನ್ ತಿಂಗಳ ಆರಂಭದ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಹಾರೈಸಿದ್ದಾರೆ.

Prime Minister Narender Modi
ಪ್ರಧಾನಿ ಮೋದಿ

ನವದೆಹಲಿ:ರಂಜಾನ್ ಮಾಸಾರಂಭದ ಪ್ರಯುಕ್ತ ಪ್ರಧಾನಿ ಮೋದಿ ಮುಸ್ಲಿಮರಿಗೆ ಶುಭಾಶಯ ತಿಳಿಸಿದ್ದಾರೆ. "ಸಮಸ್ತ ಮುಸ್ಲಿಮರಿಗೆ ರಂಜಾನ್ ಮಾಸದ ಶುಭಾಶಯಗಳು. ಈ ಪವಿತ್ರ ತಿಂಗಳು ಸಮಾಜದಲ್ಲಿ ಹೆಚ್ಚಿನ ಏಕತೆ ಮತ್ತು ಸಾಮರಸ್ಯವನ್ನು ಹೊತ್ತು ತರಲಿ. ಇದು ಬಡವರ ಸೇವೆಯ ಮಹತ್ವವನ್ನು ಪುನರುಚ್ಚರಿಸಲಿ" ಎಂದು ಟ್ವೀಟ್ ಮಾಡಿದ್ದಾರೆ.

ಮುಸ್ಲಿಮರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ರಂಜಾನ್ ಕೂಡ ಒಂದು. ಧಾರ್ಮಿಕ ಬಾಂಧವ್ಯವನ್ನು ಬಲಪಡಿಸುವ ಹಾಗೂ ಇತರರೊಂದಿಗೆ ದಯೆ ತೋರಿ ಬಾಳುವ ದಿನವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್ 22 ರಂದು ರಂಜಾನ್ ಮಾಸ ಪ್ರಾರಂಭವಾಗಿದ್ದು, ಏ. 21 ರಂದು ಕೊನೆಗೊಳ್ಳುತ್ತದೆ. 29 ರಿಂದ 30 ದಿನಗಳವರೆಗೆ ಈ ಮಾಸ ಇರುತ್ತದೆ. ಮುಂದಿನ ಚಂದ್ರ ದರ್ಶನ ರಂಜಾನ್ ಅಂತ್ಯವನ್ನು ಸೂಚಿಸುತ್ತದೆ.

ರಂಜಾನ್​ನಲ್ಲಿ ಚಂದ್ರನ ದರ್ಶನ: ಚಂದ್ರನ ದರ್ಶನ ರಂಜಾನ್ ತಿಂಗಳ ಆರಂಭ ಮತ್ತು ಅಂತ್ಯವನ್ನು ಸೂಚಿಸುತ್ತದೆ. ರಂಜಾನ್ ಉಪವಾಸದ ಅವಧಿಯ ಆರಂಭಕ್ಕೂ ಮುನ್ನ ಜನರು ಮತ್ತು ಧಾರ್ಮಿಕ ಮುಖಂಡರು ಅರ್ಧಚಂದ್ರನಿಗಾಗಿ ರಾತ್ರಿ ಆಕಾಶವನ್ನು ನೋಡುತ್ತಾರೆ. ಇದು ಅನೇಕ ವರ್ಷಗಳಿಂದ ನಡೆದು ಬಂದಿರುವ ಸಂಪ್ರದಾಯ.

ಉಪವಾಸ ಮಾಡುವುದೇಕೆ?: ರಂಜಾನ್ ಉಪವಾಸವನ್ನು ಆರಾಧನೆಯ ಕ್ರಮವಾಗಿ ಪರಿಗಣಿಸಲಾಗಿದೆ. ಈ ತಿಂಗಳಿಡೀ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ಅಲ್ಲದೇ ನಿರ್ಗತಿಕರು ಮತ್ತು ಬಡವರಿಗೆ ಸಹಾಯ ಮಾಡುವುದು ಮುಸ್ಲಿಂ ಜನರ ಮುಖ್ಯ ಕರ್ತವ್ಯವೂ ಆಗಿದೆ. ಈ ಸಹಾಯವನ್ನು ಜಕತ್ ಎಂದು ಕರೆಯುತ್ತಾರೆ. ಉಪವಾಸದ ಅವಧಿಯಲ್ಲಿ ಸಂಪೂರ್ಣ ಪವಿತ್ರ ಕುರಾನ್ ಗ್ರಂಥ ಓದಬೇಕು. ಈ ಅವಧಿಯಲ್ಲಿ ತಾಳ್ಮೆ ಅಗತ್ಯ. ಕೆಟ್ಟ ಅಭ್ಯಾಸಗಳನ್ನು ತ್ಯಜಿಸಬೇಕು.

ಉಪವಾಸದಲ್ಲಿ ಕಟ್ಟುನಿಟ್ಟಿನ ನಿಯಮಗಳು:ಈ ತಿಂಗಳಿನಲ್ಲಿ ರೋಜಾ ಹಿಡಿಯುವರು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಬೇಕು. ರೋಜಾ ಎಂದರೆ ಉಪವಾಸ ಮಾಡುವವರು ಎಂದರ್ಥ. ಈ ಸಮಯದಲ್ಲಿ ಕೆಟ್ಟ ಆಲೋಚನೆಗಳನ್ನು ಮನಸ್ಸಿನಲ್ಲಿ ತರಬಾರದು. ಇದನ್ನು ಕಿವಿ, ನಾಲಿಗೆ ಹಾಗೂ ಕಣ್ಣು ಉಪವಾಸ ಎನ್ನುತ್ತಾರೆ.

ಬುಧವಾರ ಸೂರ್ಯಾಸ್ತದೊಂದಿಗೆ ರಂಜಾನ್‌ ಆಚರಣೆಗೆ ಚಾಲನೆ ದೊರೆತಿದೆ. ತಿಂಗಳ ಪೂರ್ತಿ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸವಿದ್ದು, ಬಳಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಕುರಾನ್‌ ಪಠಣವಲ್ಲದೇ, ಬಡವರಿಗೆ ದಾನ ಮಾಡುವುದು ವಿಶೇಷ. ಉಕ್ರೇನ್‌–ರಷ್ಯಾ ಯುದ್ದದಿಂದ ಬೆಲೆ ಏರಿಕೆ ಬಿಸಿಯ ನಡುವೆ ಹಬ್ಬದ ಆಚರಣೆ ಪ್ರಾರಂಭವಾಗಿದೆ. ಟರ್ಕಿ ಹಾಗೂ ಸಿರಿಯಾಗಳಲ್ಲಿ ಸಂಭವಿಸಿದ ಭೂಕಂಪದಿಂದ ಆ ರಾಷ್ಟ್ರಗಳ ಜನಜೀವನವೇ ಅಸ್ತವ್ಯಸ್ತಗೊಂಡಿದೆ. ಈ ಎಲ್ಲ ವಿದ್ಯಮಾನಗಳು ರಂಜಾನ್‌ನ ಸಂಭ್ರಮವನ್ನು ಕಡಿಮೆಗೊಳಿಸಿವೆ ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ:ಪ್ರಾರ್ಥನೆ ಬಳಿಕ ಶ್ರೀಗಳ ಆಶೀರ್ವಾದ ಪಡೆದ ಮುಸ್ಲಿಮರು.. ಸೌಹಾರ್ದತೆಗೆ ಸಾಕ್ಷಿಯಾದ ಮೂರುಸಾವಿರ ಮಠ

ABOUT THE AUTHOR

...view details