ಕರ್ನಾಟಕ

karnataka

NIA raids: ಐಸಿಸ್​ ಉಗ್ರ ಚಟುವಟಿಕೆ ಆರೋಪ.. ತಮಿಳುನಾಡು, ತೆಲಂಗಾಣದ 31 ಕಡೆ ಎನ್​ಐಎ ದಾಳಿ

By ETV Bharat Karnataka Team

Published : Sep 16, 2023, 5:59 PM IST

ದೇಶದಲ್ಲಿ ಐಸಿಸ್​ ಸಂಘಟನೆಯ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪದ ಮೇಲೆ ಎನ್​ಐಎ ಇಂದು ತಮಿಳುನಾಡು, ತೆಲಂಗಾಣದ 31 ಕಡೆಗಳಲ್ಲಿ ನಡೆಸಿದೆ.

ಎನ್​ಐಎ ದಾಳಿ
ಎನ್​ಐಎ ದಾಳಿ

ನವದೆಹಲಿ:ಉಗ್ರಗಾಮಿ ಸಂಘಟನೆಯಾದ ಐಸಿಸ್​​ ಚಟುವಟಿಕೆಗಳು ಮತ್ತು ಸಂಘಟನೆಗೆ ಯುವಕರ ನೇಮಕ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ತಮಿಳುನಾಡು ಮತ್ತು ತೆಲಂಗಾಣದ 31 ಸ್ಥಳಗಳ ಮೇಲೆ ಶನಿವಾರ ದಾಳಿ ನಡೆಸಿತು. ಕಾರ್ಯಾಚರಣೆಯಲ್ಲಿ 60 ಲಕ್ಷ ರೂಪಾಯಿ, 18,200 ಅಮೆರಿಕನ್​ ಡಾಲರ್​, ಹಲವಾರು ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯ ವೇಳೆ ಸಿಕ್ಕ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಹಾರ್ಡ್ ಡಿಸ್ಕ್‌ಗಳಲ್ಲಿನ ಮಾಹಿತಿಯನ್ನು ಪರಿಶೀಲಿಸಲಾಗುವುದು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ವಕ್ತಾರರು ತಿಳಿಸಿದರು. ಇದೇ ವೇಳೆ 60 ಲಕ್ಷ ರೂಪಾಯಿ ಭಾರತೀಯ ಕರೆನ್ಸಿ ಮತ್ತು 18,200 ಅಮೆರಿಕನ್​ ಡಾಲರ್‌ಗಳ ಜೊತೆಗೆ ಅರೇಬಿಕ್ ಮತ್ತು ಸ್ಥಳೀಯ ಭಾಷೆಗಳಲ್ಲಿನ ಪುಸ್ತಕಗಳೂ ಸಹ ಶೋಧದ ಸಮಯದಲ್ಲಿ ಸಿಕ್ಕಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಂಕಿತರ ವಿಚಾರಣೆ:ಎನ್​ಐಎ ತಂಡವು ತಮಿಳುನಾಡಿನ ಚೆನ್ನೈ, ಕೊಯಮತ್ತೂರು ಮತ್ತು ತೆಂಕಶಿಯ ಶಂಕಿತ ಉಗ್ರರ ನಿವಾಸಗಳ ಮೇಲೆ ದಾಳಿ ನಡೆಸಿತು. ಕೆಲವರನ್ನು ವಶಕ್ಕೆ ಪಡದು ಐದು ಗಂಟೆಗಳ ಕಾಲ ಅವರನ್ನು ವಿಚಾರಣೆ ನಡೆಸಿತು. ದಾಳಿ ವೇಳೆ ಇವರುಗಳ ಮನೆಯಲ್ಲಿ ಡಿಜಿಟಲ್ ಸಾಧನಗಳೂ ಸಿಕ್ಕಿವೆ ಎಂದು ಎನ್​ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೊತೆಗೆ ಎಲ್ಲರನ್ನೂ ಸೆಪ್ಟೆಂಬರ್ 20 ರಂದು ಚೆನ್ನೈನಲ್ಲಿರುವ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಕರೆದಿದ್ದಾರೆ.

ಎಲ್ಲೆಲ್ಲಿ ದಾಳಿ:ಎನ್‌ಐಎ ತಂಡ ಕೊಯಮತ್ತೂರಿನ 22 ಸ್ಥಳಗಳು, ಚೆನ್ನೈನ 3 ಮತ್ತು ತಮಿಳುನಾಡಿನ ತೆಂಕಶಿ ಜಿಲ್ಲೆಯ ಕಡಯನಲ್ಲೂರಿನ 1 ಸ್ಥಳದಲ್ಲಿ ಮುಂಜಾನೆ ದಾಳಿ ನಡೆಸಿತು. ಇದರ ಜೊತೆಗೆ ಹೈದರಾಬಾದ್, ಸೈಬರಾಬಾದ್​ ಸೇರಿ ತೆಲಂಗಾಣದ ಐದು ಸ್ಥಳಗಳಲ್ಲಿ ಶೋಧ ನಡೆಸಿತು.

ದೇಶದ ಹಲವೆಡೆಗಳಲ್ಲಿ ಐಸಿಸ್​ ಉಗ್ರ ಸಂಘಟನೆಯ ಚಟುವಟಿಕೆಗಳು ಮತ್ತು ಯುವಕರನ್ನು ಸಂಘಟನೆಗೆ ಸೇರಿಸುತ್ತಿರುವ ಆರೋಪದ ಮೇಲೆ ಎನ್‌ಐಎ ಐಪಿಸಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ- 1967 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದೆ.

ವಾಟ್ಸಾಪ್​, ಟೆಲಿಗ್ರಾಂನಲ್ಲಿ ಮಾಹಿತಿ ವಿನಿಮಯ:ಐಸಿಸ್​ ಉಗ್ರ ಸಂಘಟನೆಯ ನಾಯಕರ ಜೊತೆ ಒಡನಾಟ ಹೊಂದಲು ವಾಟ್ಸ್​ಆ್ಯಪ್​ ಮತ್ತು ಟೆಲಿಗ್ರಾಂಗಳ ಬಳಕೆ ಮಾಡಲಾಗಿದೆ ಎಂಬುದನ್ನು ಎನ್​ಐಎ ತನಿಖೆಯ ವೇಳೆ ಪತ್ತೆ ಮಾಡಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ವಿನಿಮಯವಾಗಿದ್ದನ್ನು ಬಯಲಿಗೆಳೆಯಲಾಗಿದೆ. ಭಾಷಾ ಕಲಿಕೆಯ ಸೋಗಿನಲ್ಲಿ ಸಂಘಟನೆಯ ಚಟುವಟಿಕೆಗಳನ್ನು ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.

ದೇಶದಲ್ಲಿ ಸಾಂವಿಧಾನಿಕವಾಗಿ ಸ್ಥಾಪಿತವಾದ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿರುವ 'ಖಿಲಾಫತ್' ಸಿದ್ಧಾಂತವನ್ನು ಪ್ರಚಾರ ಮಾಡುವಲ್ಲಿ ಐಸಿಸ್ ಪ್ರೇರಿತ ಏಜೆಂಟರು ತೊಡಗಿಕೊಂಡಿದ್ದಾರೆ ಎಂಬುದನ್ನು ಎನ್​ಐಎ ತನಿಖೆಯಲ್ಲಿ ಕಂಡುಹಿಡಿದಿದೆ.

ಐಸಿಎಸ್​ ಸಂಘಟನೆಯ ಶಂಕಿತ ಉಗ್ರರು ಭಯೋತ್ಪಾದಕ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿಸಲು ಯುವಕರನ್ನು ಸಂಘಟನೆಗೆ ನೇಮಿಸಿಕೊಳ್ಳಲು ಸಂಚು ರೂಪಿಸಿದ್ದರು. ಕಳೆದ ವರ್ಷ ಅಕ್ಟೋಬರ್ 23 ರಂದು ಕೊಯಮತ್ತೂರು ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೂ ಐಸಿಸ್​ ನಂಟಿದೆ​ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಸನಾತನ ಧರ್ಮ ನಾಶದ ಮಾತೇಕೆ?, ಅಭಿವ್ಯಕ್ತಿ ಸ್ವಾತಂತ್ರ್ಯ ದ್ವೇಷ ಭಾಷಣವಾಗಬಾರದು: ಮದ್ರಾಸ್​ ಹೈಕೋರ್ಟ್​

ABOUT THE AUTHOR

...view details