ಕರ್ನಾಟಕ

karnataka

ಇಂದು ದೆಹಲಿಯಲ್ಲಿ ಎನ್​ಡಿಎ ಮೈತ್ರಿಕೂಟದ ಸಭೆ: ಯಾರೆಲ್ಲ ಭಾಗಿ?

By

Published : Jul 18, 2023, 10:09 AM IST

ಎನ್​ಡಿಎ ಮೈತ್ರಿಕೂಟದ ಸಭೆ ಇಂದು ದೆಹಲಿಯಲ್ಲಿ ನಡೆಯಲಿದೆ. ಸುಮಾರು 38 ಪಕ್ಷಗಳು ಸಭೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದ್ದಾರೆ.

38-parties-participating-nda-alliance-meeting-in-delhi-today
ಇಂದು ದೆಹಲಿಯಲ್ಲಿ ಎನ್​ಡಿಎ ಮೈತ್ರಿಕೂಟದ ಸಭೆ :38 ಪಕ್ಷಗಳು ಭಾಗಿ.. ಜೆಪಿ ನಡ್ಡಾ

ನವದೆಹಲಿ : ದೆಹಲಿಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್​ಡಿಎ) ಸಭೆ ಇಂದು ಸಂಜೆ ನಡೆಯಲಿದ್ದು, ಸುಮಾರು 38 ಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಸೋಮವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾರ್ಥಕ್ಕಾಗಿ ವಿರೋಧ ಪಕ್ಷಗಳು ಸಭೆ ನಡೆಸುತ್ತಿವೆ. ತಮ್ಮ ಮೇಲಿನ 20 ಲಕ್ಷ ಕೋಟಿಗೂ ಅಧಿಕ ಭ್ರಷ್ಟಾಚಾರ ಪ್ರಕರಣವನ್ನು ಮುಚ್ಚಿಹಾಕಲು ಅವರು ಒಗ್ಗಟ್ಟಾಗಿದ್ದಾರೆ ಎಂದು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರವನ್ನು ಜನರು ಮತ್ತೆ ಚುನಾಯಿಸುತ್ತಾರೆ. ಈ ಬಗ್ಗೆ ದೇಶ ನಿರ್ಧಾರ ಮಾಡಿದೆ ಎಂದರು.

ಅಮಿತ್​ ಶಾ ಮತ್ತು ನಡ್ಡಾರನ್ನು ಭೇಟಿಯಾದ ಚಿರಾಗ್ ಪಾಸ್ವಾನ್ :ಲೋಕ ಜನಶಕ್ತಿ (ರಾಮ್​ ವಿಲಾಸ್​) ಪಕ್ಷದ ನಾಯಕ ಚಿರಾಗ್​ ಪಾಸ್ವಾನ್​ ಅವರು ಎನ್​ಡಿಎ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಜೆ.ಪಿ ನಡ್ಡಾ ಹೇಳಿದರು. ಇದಕ್ಕೂ ಮೊದಲು ಪಾಸ್ವಾನ್​ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರನ್ನು ಭೇಟಿಯಾಗಿದ್ದರು. ಈ ಬಗ್ಗೆ ಟ್ವೀಟ್​ ಮಾಡಿರುವ ನಡ್ಡಾ, ನಾನು ಚಿರಾಗ್​ ಪಾಸ್ವಾನ್‌ಜೀ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದೆ. ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಮೈತ್ರಿಕೂಟವನ್ನು ಸೇರಲು ಒಪ್ಪಿದ್ದಾರೆ. ಅವರಿಗೆ ಎನ್​ಡಿಎ ಕುಟುಂಬಕ್ಕೆ ಸ್ವಾಗತ ಎಂದಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಬಿಹಾರದಲ್ಲಿ ತಮ್ಮ ಪಾಲಿನ ಸ್ಥಾನಗಳನ್ನು ಅಂತಿಮಗೊಳಿಸಲು ಬಿಜೆಪಿ ಜೊತೆ ಮಾತುಕತೆ ಪಾಸ್ವಾನ್ ನಡೆಸಿದರು.

ಚಿರಾಗ್​ ಪಾಸ್ವಾನ್ ಟ್ವೀಟ್ ಮಾಡಿ, ಮೈತ್ರಿ ವಿಷಯಕ್ಕೆ ಸಂಬಂಧಿಸಿದಂತೆ ಅಮಿತ್​ ಶಾ ಅವರೊಂದಿಗೆ ಸಕಾರಾತ್ಮಕ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ. ಅಮಿತ್ ಶಾ ಟ್ವೀಟ್​ ಮಾಡಿ, ಬಿಹಾರದ ರಾಜಕೀಯದ ಬಗ್ಗೆ ನಾನು ಮತ್ತು ಪಾಸ್ವಾನ್ ಚರ್ಚೆ ನಡೆಸಿದೆವು ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಕೇಂದ್ರ ಸಚಿವ ನಿತ್ಯಾನಂದ ರೈ ಎರಡು ಬಾರಿ ಪಾಸ್ವಾನ್​ ಅವರನ್ನು ಭೇಟಿಯಾಗಿದ್ದರು.

ಇನ್ನೊಂದೆಡೆ, ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷವು ಈಗಾಗಲೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಇದು ಚಿರಾಗ್ ಪಾಸ್ವಾನ್​ ಅವರ ಚಿಕ್ಕಪ್ಪ, ಕೇಂದ್ರ ಸಚಿವ ಪಶುಪತಿಕುಮಾರ್ ಪರಾಸ್​ ಮುನ್ನಡೆಸುವ ಪಕ್ಷವಾಗಿದೆ. ಚಿರಾಗ್ ಮತ್ತು ಪರಾಸ್​ ನಡುವೆ ಹಾಜಿಪುರ ಲೋಕಸಭಾ ಸ್ಥಾನಕ್ಕೆ ಪೈಪೋಟಿ ಇದ್ದು, ಈ ಬಗ್ಗೆ ಸಮನ್ವಯ ಸಾಧಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.

ಎನ್​ಡಿಎ ಸಭೆಯಲ್ಲಿ ಭಾಗಿಯಾಗುವ ಪಕ್ಷಗಳ ವಿವರ : ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್ ಬಣ), ಒ.ಪಿ. ರಾಜ್‌ಭರ್ ನೇತೃತ್ವದ ಎಸ್‌ಬಿಎಸ್‌ಪಿ, ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ), ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಎನ್‌ಸಿಪಿಯ ಅಜಿತ್ ಪವಾರ್ ನೇತೃತ್ವದ ಬಣ, ಉತ್ತರ ಪ್ರದೇಶದಲ್ಲಿ ಓಪಿ ರಾಜ್‌ಭರ್ ನೇತೃತ್ವದ ಎಸ್‌ಬಿಎಸ್‌ಪಿ, ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ), ಜನಸೇನಾ ನಾಯಕ ಪವನ್​ ಕಲ್ಯಾಣ್, ಆರ್​ಎಲ್​ಜೆಡಿ ಪಕ್ಷದ ನಾಯಕ ಕುಶ್ವಾಹ, ತಮಿಳುನಾಡಿನ ಎಐಎಡಿಎಂಕೆ ಸೇರಿದಂತೆ ಹಲವು ಪಕ್ಷಗಳು ಸಭೆಯಲ್ಲಿ ಭಾಗವಹಿಸಲಿವೆ.

ಇದನ್ನೂ ಓದಿ :ದೇಶದ ಸಂವಿಧಾನ ಉಳಿಸಲು ಕೇಂದ್ರದ ಪ್ರತಿಪಕ್ಷಗಳ ನಾಯಕರ ಸಭೆ ನಡೆಯುತ್ತಿದೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ABOUT THE AUTHOR

...view details