ಕರ್ನಾಟಕ

karnataka

ಭಾರತ-ಪಾಕ್‌ ಗಡಿ ಸಮೀಪ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ

By ETV Bharat Karnataka Team

Published : Nov 7, 2023, 12:41 PM IST

Chhatrapati Shivaji statue unveils in Kupwara: ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣಗೊಳಿಸಲಾಗಿದೆ.

Maharashtra CM Eknath Shinde unveils statue of Chhatrapati Shivaji in J&K's Kupwara
ಕಾಶ್ಮೀರ ಗಡಿ ಬಳಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣಗೊಳಿಸಿದ ಮಹಾರಾಷ್ಟ್ರ ಸಿಎಂ ಶಿಂಧೆ

ಶ್ರೀನಗರ(ಜಮ್ಮು ಮತ್ತು ಕಾಶ್ಮೀರ):ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಪ್ರಸಿದ್ಧ ಮರಾಠ ದೊರೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಇಂದು (ಮಂಗಳವಾರ) ಅನಾವರಣಗೊಳಿಸಿದ್ದಾರೆ.

ಗಡಿ ನಿಯಂತ್ರಣ ರೇಖೆ ಬಳಿ 41 ಮರಾಠ ರೈಫಲ್ಸ್‌ನಲ್ಲಿ​ (ಮರಾಠ ಎಲ್​ಐ LI) ಶಿವಾಜಿ ಮಹಾರಾಜರ ಅಶ್ವಾರೋಹಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ಸಮಾರಂಭದಲ್ಲಿ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮಂಗಂಟಿವಾರ್, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್​ ಗವರ್ನರ್​ ಮನೋಜ್​ ಸಿನ್ಹಾ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಶಿಂಧೆ ಮಾತನಾಡಿ, ಕುಪ್ವಾರ ಜಿಲ್ಲೆಯಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

5 ಕೋಟೆಗಳ ಮಣ್ಣು, ನೀರು ಸಂಗ್ರಹ: ಶಿವಾಜಿ ಪ್ರತಿಮೆಯು ಹತ್ತೂವರೆ ಅಡಿ ಎತ್ತರವಿದೆ. ಇದನ್ನು ಅಮ್ಹಿ ಪೋನೆಕರ್​​ ಫೌಂಡೇಶನ್ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಸ್ಮಾರಕ ಸಮಿತಿಯ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಶಿವನೇರಿ, ತೊರ್ನಾ, ರಾಜ್‌ಗಢ, ಪ್ರತಾಪಗಢ ಮತ್ತು ರಾಯಗಢ ಸೇರಿ ಐದು ಕೋಟೆಗಳಿಂದ ಮಣ್ಣು ಮತ್ತು ನೀರು ಸಂಗ್ರಹಿಸಿ ತರಲಾಗಿತ್ತು ಎಂದು ಮೂಲಗಳು ತಿಳಿಸಿವೆ.

2,200 ಕಿ.ಮೀ ಕ್ರಮಿಸಿದ ಪ್ರತಿಮೆ: ಶಿವಾಜಿ ಪ್ರತಿಮೆಯು ಮಹಾರಾಷ್ಟ್ರದಿಂದ ಸುಮಾರು 2,200 ಕಿ.ಮೀ ಕ್ರಮಿಸಿ ಕಳೆದ ವಾರ ಕುಪ್ವಾರ ತಲುಪಿತ್ತು. ಅಕ್ಟೋಬರ್ 20ರಂದು ಮುಂಬೈನಲ್ಲಿರುವ ಮಹಾರಾಷ್ಟ್ರ ರಾಜಭವನಕ್ಕೆ ಅಶ್ವಾರೋಹಿ ಪ್ರತಿಮೆಯನ್ನು ತರಲಾಗಿತ್ತು. ರಾಜ್ಯಪಾಲ ರಮೇಶ್ ಬೈಸ್, ಸಿಎಂ ಏಕನಾಥ್ ಶಿಂಧೆ ಅವರು ಕುಪ್ವಾರಕ್ಕೆ ಹೊರಟ ಪ್ರತಿಮೆ ಹೊತ್ತ ವಾಹನಕ್ಕೆ ಹಸಿರು ನಿಶಾನೆ ತೋರಿದ್ದರು.

ಸೈನಿಕರೊಂದಿಗೆ ಶಿಂಧೆ ದೀಪಾವಳಿ ಆಚರಣೆ:ಸೋಮವಾರ ಶ್ರೀನಗರಕ್ಕೆ ಬಂದಿಳಿದ ಸಿಎಂ ಶಿಂಧೆ ಅವರು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿದರು. ಇದಕ್ಕೂ ಮುನ್ನ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350ನೇ ವಾರ್ಷಿಕೋತ್ಸವದ ನಿಮಿತ್ತ ಕುಪ್ವಾರದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು.

ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಾಗಲೇ ಎರಡು ಶಿವಾಜಿ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಮರಾಠ ರೆಜಿಮೆಂಟ್ ವತಿಯಿಂದ 2022ರ ಜನವರಿಯಲ್ಲಿ ಈ ಪ್ರತಿಮೆಗಳನ್ನು ಅನಾವರಣ ಮಾಡಲಾಗಿದೆ. ಇದರಲ್ಲಿ ಒಂದು ಪ್ರತಿಮೆಯನ್ನು ಗಡಿ ನಿಯಂತ್ರಣ ರೇಖೆ ಬಳಿ ಸಮುದ್ರ ಮಟ್ಟದಿಂದ 14,800 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ.

ಇದನ್ನೂ ಓದಿ:ಛತ್ರಪತಿ ಶಿವಾಜಿಯ ಅಪರೂಪದ 'ವಾಘ್ ನಖ್' ಇಂಗ್ಲೆಂಡ್​ನಿಂದ ಭಾರತಕ್ಕೆ: ಸಂಸ್ಕೃತಿ ಸಚಿವಾಲಯ

ABOUT THE AUTHOR

...view details