ಕರ್ನಾಟಕ

karnataka

ಸಣ್ಣದೊಂದು ದೋಷದಿಂದ ಇಸ್ರೋ ನಾಲ್ಕು ವರ್ಷ ಕಾಯಬೇಕಾಯಿತು: ಚಂದ್ರಯಾನ-3 ಚರಿತ್ರೆ ಸೃಷ್ಟಿಗೆ ಮಾಜಿ ಮುಖ್ಯಸ್ಥ ಕೆ ಶಿವನ್ ಹರ್ಷ

By ETV Bharat Karnataka Team

Published : Aug 24, 2023, 6:52 PM IST

K Sivan On Chandrayaan 3 Success: ಸಣ್ಣ ತಪ್ಪಿನಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಚಂದ್ರನ ದಕ್ಷಿಣ ತುದಿಯನ್ನು ತಲುಪಲು ಈ ನಾಲ್ಕು ವರ್ಷ ಕಾಯಬೇಕಾಯಿತು ಎಂದು ಇಸ್ರೋ ಮಾಜಿ ಮುಖ್ಯಸ್ಥ ಕೆ ಶಿವನ್ ಹೇಳಿದ್ದಾರೆ.

ಇಸ್ರೋ ಮಾಜಿ ಮುಖ್ಯಸ್ಥ ಕೆ ಶಿವನ್
ಇಸ್ರೋ ಮಾಜಿ ಮುಖ್ಯಸ್ಥ ಕೆ ಶಿವನ್

ಬೆಂಗಳೂರು: "ಭಾರತದ ನೌಕೆಯು ಚಂದ್ರನ ಕಡೆಗೆ ಹೋಗಿ ಕೌತುಕ ತುಂಬಿರುವ ಅದರ ದಕ್ಷಿಣ ಧ್ರುವದ ಬಳಿ ಇಳಿಯುವ ನಮ್ಮ ಕನಸು ಇದೀಗ ನನಸಾಗಿದೆ" ಎಂದು ಇಸ್ರೋ ಮಾಜಿ ಅಧ್ಯಕ್ಷ ಕೆ ಶಿವನ್ ಹರ್ಷ ವ್ಯಕ್ತಪಡಿಸಿದ್ದಾರೆ. ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾದ ಬಗ್ಗೆ ಗುರುವಾರ ಅವರು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

"ಚಂದ್ರಯಾನ-2 ರಲ್ಲಿ ಕಾಣಿಸಿಕೊಂಡ ಸೂಕ್ಷ್ಮ ಹಾಗೂ ಸಣ್ಣ ದೋಷದಿಂದಾಗಿ ನಾವು ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ಇಲ್ಲದಿದ್ದರೆ, ನಾವು ನಾಲ್ಕು ವರ್ಷಗಳ ಹಿಂದೆಯೇ ಈ ಯಶಸ್ಸನ್ನು ಸಾಧಿಸಿರುತ್ತಿದ್ದೆವು. ಸಣ್ಣ ತಪ್ಪಿನಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ನಾಲ್ಕು ವರ್ಷ ಕಾಯಬೇಕಾಯಿತು. ಆದರೂ ಆ ತಪ್ಪಿನಿಂದ ಸಾಕಷ್ಟು ಪಾಠ ಕಲಿತಿದ್ದೇವೆ. ತಿದ್ದಿಕೊಂಡು ಮುನ್ನುಗ್ಗಿದ್ದೇವೆ. ಅದಕ್ಕೆ ಈ ಚಂದ್ರಯಾನ-3 ಯಶಸ್ವಿಯಾಗಿದೆ" ಎಂದು ಅವರು ಹೇಳಿದರು.

"2019ರಲ್ಲಿಯೇ ಚಂದ್ರಯಾನ-3ರ ತಯಾರಿ ನಡೆದಿತ್ತು. ಆದ ತಪ್ಪುಗಳು ಪುನಾರಾವರ್ತನೆ ಆಗಬಾರದು ಎಂಬ ಕಾರಣದಿಂದ ಆಗಿನಿಂದಲೇ ಅದಕ್ಕೆ ಬೇಕಾದ ಪೂರ್ವ ತಯಾರಿ ನಡೆದಿತ್ತು. ವೈಫಲ್ಯಗಳನ್ನು ತಿದ್ದಿಕೊಳ್ಳುವುದು ಸೇರಿದಂತೆ ಯಾವ ಯಾವ ಮಾರ್ಗಗಳನ್ನು ಅನುಸರಿಸಬೇಕು ಎಂಬುದು ಕೂಡ 2019ರಲ್ಲಿಯೇ ನಿರ್ಧಾರವಾಗಿತ್ತು. ಆ ಪ್ರಯತ್ನದ ಫಲವನ್ನು ಆ. 23 ರಂದು ನೋಡಿದೆವು. ನಾಲ್ಕು ವರ್ಷದ ಹಿಂದಿನ ವೈಫಲ್ಯವನ್ನು ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಯಶಸ್ವಿಯಾಗಿ ಇಳಿಯುವುದರ ಮೂಲಕ ಅಳಿಸಿ ಹಾಕಿದೆ" ಎಂದು ಕೆ ಶಿವನ್ ಕೆಲವು ಹಳೆಯ ಘಟನಾವಳಿಗಳನ್ನು ಸಹ ಮೆಲುಕು ಹಾಕಿದರು.

"ನಿನ್ನೆ (ಬುಧವಾರ) ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್​ ಆಗಿದ್ದರಿಂದ ನನಗೆ ಮತ್ತಷ್ಟು ಕುತೂಹಲತೆ ಮತ್ತು ಖುಷಿ ತರಿಸಿತು. ಹಾಗಾಗಿ ರೋವರ್ ಲ್ಯಾಂಡರ್‌ನಿಂದ ಹೊರಬರುವವರೆಗೂ ನಾನು ನಿಯಂತ್ರಣ ಕೊಠಡಿಯಲ್ಲಿಯೇ ಕುಳಿತಿದ್ದೆ. ವಿಕ್ರಮ್​ ಲ್ಯಾಂಡರ್​ ಚಂದ್ರನ ಮೇಲೆ ಇಳಿದ ನಂತರ ನಾವು ಯಾರು ಕೂಡ ಮನೆಗೆ ಹೋಗಿರಲಿಲ್ಲ. ರೋವರ್ ಲ್ಯಾಂಡರ್‌ನಿಂದ ಹೊರಬಂದು ಚಂದ್ರನ ಮೇಲ್ಮೈ ಮೇಲೆ ಚಲಿಸುವುದನ್ನು ನೋಡಿದ ನಂತರವೇ ನಾವು ಮನೆಗೆ ತೆರಳಿದೆವು. ಆಗ ತಡರಾತ್ರಿಯಾಗಿತ್ತು. ನಮ್ಮ ಎಲ್ಲ ಪ್ರಾರ್ಥನೆ ಕೊನೆಗೂ ಫಲಿಸಿದೆ" ಎಂದು ಕೆ ಶಿವನ್ ಈ ರೀತಿ ಹರ್ಷ ವ್ಯಕ್ತಪಡಿಸಿದರು.

"ಈ ಯಶಸ್ಸಿಗಾಗಿ ಕಳೆದ ನಾಲ್ಕು ವರ್ಷಗಳಿಂದ ನಾವು ಕಾಯುತ್ತಿದ್ದೆವು. ಇದು ನಮಗೆ ಮಾತ್ರ ಇಲ್ಲ, ಇಡೀ ದೇಶಕ್ಕೆ ಸಿಹಿ ಸುದ್ದಿಯಾಗಿದೆ. ಇಡೀ ಭಾರತ ಈ ಕ್ಷಣಕ್ಕಾಗಿ ಕಾಯುತ್ತಿತ್ತು. ಚಂದ್ರಯಾನ-3 ಯಶಸ್ವಿಯಾಗಿದ್ದಕ್ಕೆ ಎಲ್ಲ ಭಾರತೀಯರಿಗೆ ಅಭಿನಂದನೆ ತಿಳಿಸುತ್ತೇನೆ. ಚಂದ್ರಯಾನ-2 ಲ್ಯಾಂಡಿಂಗ್ ದಿನ ಮತ್ತು ನಿನ್ನೆಯನ್ನು ಹೋಲಿಸಿದೆ. ಚಂದ್ರನಿಗೆ ಹೋಗಿ ಅದರ ದಕ್ಷಿಣ ಧ್ರುವದ ಬಳಿ ಇಳಿಯುವ ನನ್ನ ಕನಸು ನನಸಾಯಿತು. ನಿನ್ನೆಯ ಈ ಸಾಫ್ಟ್ ಲ್ಯಾಂಡಿಂಗ್ ನನಗೆ ಬಹಳ ಖುಷಿ ನೀಡಿದೆ" ಎಂದರು.

2019ರಲ್ಲಿಯೇ ಚಂದ್ರಯಾನ-2 ರ ಯೋಜನೆ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಂದಿನ ಇಸ್ರೋ ಅಧ್ಯಕ್ಷ ಕೆ ಶಿವನ್‌ ಸೇರಿ ಹಲವು ಗಣ್ಯರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ನೆರೆದಿದ್ದರು. ಚಂದ್ರಯಾನ -2 ಇನ್ನೇನು ಯಶಸ್ವಿಯಾಯ್ತು ಎನ್ನುವಷ್ಟುರಲ್ಲಿ ವಿಕ್ರಮ್‌ ಲ್ಯಾಂಡರ್‌ ತಾಂತ್ರಿಕ ಸಮಸ್ಯೆಯಿಂದ ಇಸ್ರೋದ ಸಂಪರ್ಕ ಕಳೆದುಕೊಂಡಿತ್ತು. ಏನೇ ಮಾಡಿದರೂ ವಿಕ್ರಮ ಮತ್ತೆ ಸಂಪರ್ಕಕ್ಕೆ ಸಿಗಲೇ ಇಲ್ಲ. ಆ ದಿನ ಇಸ್ರೋದ ಅಧ್ಯಕ್ಷರಾಗಿದ್ದ ಕೆ ಶಿವನ್‌, ಪ್ರಧಾನಿ ನರೇಂದ್ರ ಮೋದಿ ಅವರನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದರು. ಈ ಸನ್ನಿವೇಶ ಭಾರತೀಯರ ಮನಕಲುಕಿತ್ತು. ಈ ಕ್ಷಣವನ್ನು ಕೂಡ ಶಿವನ್​ ಅವರು ಇಂದು ಹಂಚಿಕೊಂಡಿದ್ದಾರೆ.

ಕಳೆದ ಜುಲೈ 14ರಂದು ಆಂಧ್ರ ಪ್ರದೇಶದಲ್ಲಿರುವ ಶ್ರೀಹರಿಕೋಟದ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರ ಚಂದ್ರಯಾನ 3 ಉಪಗ್ರಹವನ್ನು ಉಡ್ಡಯನವನ್ನು ಯಶಸ್ವಿಯಾಗಿ ಮಾಡಲಾಗಿತ್ತು. (ANI)

ಇದನ್ನೂ ಓದಿ:Chandrayaan 3: ಕೌತುಕದಿಂದ ಕೂಡಿರುವ ಚಂದ್ರನ ದಕ್ಷಿಣ ತುದಿಯನ್ನೇ ಇಸ್ರೋ ಆಯ್ಕೆ ಮಾಡಿಕೊಂಡಿದ್ದೇಕೆ? ವೈಜ್ಞಾನಿಕ ಕಾರಣ ನೀಡಿದ ಮುಖ್ಯಸ್ಥ

ABOUT THE AUTHOR

...view details