ಕರ್ನಾಟಕ

karnataka

ಮರಾಠ ಮೀಸಲಾತಿಗೆ ಸಿಎಂ ಶಿಂಧೆ ಭರವಸೆ: ಮನೋಜ್​ ಜಾರಂಗೆ 16 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

By ETV Bharat Karnataka Team

Published : Sep 14, 2023, 10:57 PM IST

ಮರಾಠ ಮೀಸಲಾತಿಗಾಗಿ ಹೋರಾಟಗಾರ ಮನೋಜ್​ ಜಾರಂಗೆ ಅವರು ನಡೆಸುತ್ತಿದ್ದ 16 ದಿನಗಳ ಉಪವಾಸ ಸತ್ಯಾಗ್ರಹ ಇಂದು ಕೊನೆಗೊಂಡಿತು. ಸರ್ಕಾರ ಮೀಸಲಾತಿ ಭರವಸೆ ನೀಡಿದ ಬಳಿಕ ಧರಣಿ ಕೈಬಿಟ್ಟರು.

ಉಪವಾಸ ಸತ್ಯಾಗ್ರಹ ಅಂತ್ಯ
ಉಪವಾಸ ಸತ್ಯಾಗ್ರಹ ಅಂತ್ಯ

ಜಲ್ನಾ (ಮಹಾರಾಷ್ಟ್ರ):ಮರಾಠಾ ಮೀಸಲಾತಿಯ ಬೇಡಿಕೆಗಾಗಿ ಜಲ್ನಾದಲ್ಲಿ ಕಳೆದ 16 ದಿನಗಳಿಂದ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹ ಕೊನೆಗೊಂಡಿದೆ. ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ನೀಡದ ಭರವಸೆ ಮೇರೆಗೆ ಧರಣಿ ನಡಸುತ್ತಿದ್ದ ಮನೋಜ್ ಜಾರಂಜ್ ಅವರು ಉಪವಾಸವನ್ನು ಹಿಂಪಡೆದಿದ್ದಾರೆ. ಸಿಎಂ ಶಿಂಧೆ ಅವರ ಕೈಯಿಂದ ಮನೋಜ್​ ಅವರು ಜ್ಯೂಸ್​ ಕುಡಿಯುವ ಮೂಲಕ ಉಪವಾಸ ಕೊನೆಗೊಂಡಿತು.

ಈ ವೇಳೆ ಮಾತನಾಡಿದ ಮನೋಜ್ ಜಾರಂಗೆ, ಮರಾಠ ಮೀಸಲಾತಿ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು. ಸಮಸ್ಯೆ ಬಗೆಹರಿಸುವ ಬಗ್ಗೆ ಸಿಎಂ ಏಕನಾಥ್​ ಶಿಂಧೆ ಅವರು ಭರವಸೆ ನೀಡಿದ್ದಾರೆ. ಹೀಗಾಗಿ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯಲಾಗಿದೆ. ಉಪವಾಸ ಹಿಂಪಡೆದರೂ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.

ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವ ಸಾಮರ್ಥ್ಯ ರಾಜ್ಯದಲ್ಲಿ ಯಾರಿಗಾದರೂ ಇದ್ದರೆ ಅದು ಏಕನಾಥ್ ಶಿಂಧೆ ಅವರಲ್ಲಿ ಮಾತ್ರ. ಹೀಗಾಗಿ ನಾನು ಅವರ ಮಾತನ್ನು ಆಲಿಸಿ, ನಂಬಿ ಉಪವಾಸ ಧರಣಿ ಮುಗಿಸುತ್ತಿದ್ದೇನೆ ಎಂದು ಸಿಎಂ ಏಕನಾಥ ಶಿಂಧೆ ಅವರನ್ನು ಮನೋಜ್ ಜಾರಂಗೆ ಪಾಟೀಲ್​ ಶ್ಲಾಘಿಸಿದರು.

ಮೀಸಲಾತಿಗೆ ಸರ್ಕಾರ ಬದ್ಧ:ಮರಾಠ ಮೀಸಲಾತಿಗೆ ಸರ್ಕಾರ ಬದ್ಧವಾಗಿದೆ. ಮೀಸಲಾತಿ ನೀಡುವುದು ಸರ್ಕಾರದ ದೃಢ ನಿಲುವಾಗಿದೆ ಎಂದು ಮುಖ್ಯಮಂತ್ರಿ ಏಕನಾಥ್​ ಶಿಂಧೆ ಹೇಳಿದರು. ಡಿಸಿಎಂ ಫಡ್ನವೀಸ್ ಅವರು ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಿದ್ದಾರೆ. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ಅದು ವಿಚಾರಣೆಯಲ್ಲಿದೆ. ಮರಾಠ ಸಮುದಾಯಕ್ಕೆ ಮೀಸಲಾತಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಕೇಸ್​ ಸುಪ್ರೀಂ ಕೋರ್ಟ್‌ನಲ್ಲಿದ್ದರೂ ಮರಾಠ ಸಮುದಾಯದ ಮಕ್ಕಳಿಗೆ ಉದ್ಯೋಗ ಮೀಸಲಾತಿ ನೀಡಿದೆ ಎಂದು ಅವರು ಹೇಳಿದರು.

ಮರಾಠ ಸಮುದಾಯ, ಸರ್ಕಾರ ಒಟ್ಟಾಗಿ ಕೆಲಸ:ರದ್ದಾದ ಮೀಸಲಾತಿಯನ್ನು ಮರಳಿ ಪಡೆಯಲು ಸರ್ಕಾರ ಶ್ರಮಿಸಲಿದೆ. ಹೋರಾಟಗಾರರ ಮೇಲೆ ಹಾಕಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ. ನ್ಯಾಯಾಲಯಗಳಲ್ಲಿ ಮೀಸಲಾತಿ ಸಿಗಬೇಕು ಎಂಬುದು ಸರ್ಕಾರದ ನಿಲುವಾಗಿದೆ. ಮೀಸಲಾತಿ ಅಂತರವನ್ನು ಕಡಿತ ಮಾಡಲು ಮರಾಠ ಸಮುದಾಯ ಮತ್ತು ಸರ್ಕಾರ ಒಟ್ಟಾಗಿ ಕೆಲಸ ಮಾಡಲಿದೆ ಎಂದು ಮುಖ್ಯಮಂತ್ರಿಗಳು ಇದೇ ವೇಳೆ ಹೇಳಿದರು.

ಜ್ಯೂಸ್​ ಕುಡಿಸಿದ ಸಿಎಂ:ಮರಾಠ ಮೀಸಲಾತಿಗಾಗಿ ಜಲ್ನಾದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಮನೋಜ್ ಜಾರಂಗೆ ಅವರ ಬಳಿಗೆ ಬಂದ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಮತ್ತು ಕೆಲ ಸಚಿವರು ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರು. ಹೋರಾಟಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು. ಮಾತುಕತೆಯ ಬಳಿಕ ಧರಣಿ ಕೈಬಿಡಲು ಮನೋಜ್ ಜಾರಂಗೆ ಅವರು ಒಪ್ಪಿದ ಬಳಿಕ, ಸಿಎಂ ಶಿಂಧೆ ಅವರು ತಮ್ಮ ಕೈಯಿಂದಲೇ ಮನೋಜ್ ಅವರಿಗೆ ಜ್ಯೂಸ್​ ಕುಡಿಸಿದರು.

ಇದನ್ನೂ ಓದಿ:ಕೇರಳದಲ್ಲಿ ಬೀಡುಬಿಟ್ಟ ಪುಣೆ ವೈರಾಲಜಿ ತಂಡ..ನಿಫಾ ಸೋಂಕಿತರ ಚಿಕಿತ್ಸೆಗೆ ಮೊನೊಕ್ಲೋನಲ್ ಆ್ಯಂಟಿಬಾಡಿ ಸಿದ್ಧ: ಸರ್ಕಾರ

ABOUT THE AUTHOR

...view details