ಕರ್ನಾಟಕ

karnataka

ಕಾನೂನು ರೂಪಿಸುವಾಗ ವಿಧಾನ ಮಂಡಲದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿಲ್ಲ: ಓಂ ಬಿರ್ಲಾ ಕಳವಳ

By

Published : Sep 24, 2021, 5:11 PM IST

ಸಂಸದೀಯ ವ್ಯವಸ್ಥೆಯಲ್ಲಿ ಹೊಸ ಕಾನೂನು ರೂಪಿಸುವಾಗ ವಿಸ್ತೃತ ಚರ್ಚೆ ನಡೆಯುವ ಅವಶ್ಯಕತೆ ಇದೆ. ಆದರೆ ಇಂದಿನ ದಿನಗಳಲ್ಲಿ ಚರ್ಚೆ ನಡೆಯದೇ ಮಸೂದೆಗಳು ಅಂಗೀಕಾರವಾಗುವುದಕ್ಕೆ ವಿಧಾನಮಂಡಲದ ಜಂಟಿ ಸದನ ಉದ್ದೇಶಿಸಿ ಮಾತನಾಡಿರುವ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಕಳವಳ ವ್ಯಕ್ತಪಡಿಸಿದ್ದಾರೆ.

Om Birla
Om Birla

ಬೆಂಗಳೂರು:ಹೊಸ ಕಾನೂನು ರಚಿಸುವಾಗ ವಿಧಾನ ಮಂಡಲಗಳಲ್ಲಿ ವ್ಯಾಪಕವಾದ ಚರ್ಚೆ ನಡೆಯುತ್ತಿಲ್ಲ. ಚರ್ಚೆ, ಸಂವಾದಗಳು ಸಂಸದೀಯ ಪ್ರಜಾಪ್ರಭುತ್ವದ ಜೀವಾಳ. ಜನರ ಸಮಸ್ಯೆಗಳ ಬಗ್ಗೆ ಸದನಗಳಲ್ಲಿ ಸೂಕ್ತ ರೀತಿಯಲ್ಲಿ ಚರ್ಚೆ ನಡೆಯಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸದನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುಣಮಟ್ಟದ ಕಲಾಪಗಳು ನಡೆಯುತ್ತಿಲ್ಲ. ಇದು ಬೇಸರದ ಸಂಗತಿ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದರು.

ಕರ್ನಾಟಕದ ವಿಧಾನ ಮಂಡಲದ ವಿಶೇಷ ಜಂಟಿ ಅಧಿವೇಶನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಹೊಸ ಕಾನೂನು ರಚನೆ ಮಾಡುವಾಗ ಜನಪ್ರತಿನಿಧಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಕಾನೂನು ರೂಪಿಸುವಾಗ ನಾವು ಹೆಚ್ಚು ಸಕ್ರಿಯವಾಗಿ ಭಾಗಿಯಾಗಲು ಪ್ರಯತ್ನಿಸಬೇಕು. ಈ ವೇಳೆ ಸದನದಲ್ಲಿ ಯಾವುದೇ ರೀತಿಯ ಗದ್ದಲ, ಅಡಚಣೆ ಇರಬಾರದು ಎಂದು ಸಲಹೆ ನೀಡಿದರು.

ನಾವು ರೂಪಿಸುವ ಕಾನೂನುಗಳ ಬಗ್ಗೆ ವ್ಯಾಪಕ ಚರ್ಚೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಶಾಸಕರು ಹೆಚ್ಚು ಸಕ್ರಿಯವಾಗಿ ಚರ್ಚೆಗಳಲ್ಲಿ ಭಾಗವಹಿಸಬೇಕು ಎಂದು ಅಭಿಪ್ರಾಯಪಟ್ಟಿರುವ ಸ್ಪೀಕರ್​ ಬಿರ್ಲಾ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ದಿನದಿಂದ ದಿನಕ್ಕೆ ಸದೃಢವಾಗುತ್ತಿದೆ ಎಂಬ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.

ಇದನ್ನೂ ಓದಿ:ಮಾಜಿ ಸಿಎಂ ಯಡಿಯೂರಪ್ಪ ಈ ಬಾರಿಯ ಅತ್ಯುತ್ತಮ ಶಾಸಕ.. ಹೊಸ ಸಂಪ್ರದಾಯಕ್ಕೆ ನಾಂದಿ..

ವಿಧಾನಸಭೆ ಹಿರಿಯ ಶಾಸಕ ಯಡಿಯೂರಪ್ಪರನ್ನು ಈ ಸಂದರ್ಭದಲ್ಲಿ ಗೌರವಿಸಿದ್ದು ಹೆಮ್ಮೆಯ ಸಂಗತಿ. ರಾಜ್ಯದ ರೈತರ ಅಭಿವೃದ್ಧಿಗಾಗಿ ಅವರು ನಿರಂತರವಾಗಿ ಶ್ರಮಿಸಿದ್ದಾರೆ ಎಂದು ಬಿರ್ಲಾ ಪ್ರಶಂಸೆ ವ್ಯಕ್ತಪಡಿಸಿದರು. ಜನ ಹಿತ, ಕಲ್ಯಾಣಕ್ಕಾಗಿ ಜನಪ್ರತಿನಿಧಿಗಳು ಹೆಚ್ಚಿನ ಆದ್ಯತೆ ನೀಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಿದಾಗ ಮಾತ್ರ ಅವರಿಗೆ ಮನ್ನಣೆ ಸಿಗುತ್ತದೆ. ವಿಧಾನಮಂಡಲದಲ್ಲಿ ನಡೆಯುವ ಚರ್ಚೆಗಳಲ್ಲಿ ಎಲ್ಲರೂ ಸೌಜನ್ಯ, ಗೌರವ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ABOUT THE AUTHOR

...view details