ಕರ್ನಾಟಕ

karnataka

ಶ್ರೀಲಂಕಾ ಪ್ರವಾಸ ಕೈಗೊಂಡ ಭಾರತೀಯ ನೌಕಾಪಡೆ ಕ್ಷಿಪಣಿ ವಾಹಕ ನೌಕೆ ಖಂಜಾರ್..

By

Published : Jul 29, 2023, 6:00 PM IST

ಭಾರತದ ಕ್ಷಿಪಣಿ ​ವಾಹಕ ನೌಕೆ ಖಂಜಾರ್ ಮೂರುದಿನಗಳ ಭೇಟಿಗಾಗಿ ಶ್ರೀಲಂಕಾದ ಟ್ರಿಂಕೋಮಲಿ ಬಂದರಿಗೆ ತೆರಳುತ್ತಿದೆ.

Indian Naval Ship Khanjar visit to Trincomalee in Sri Lanka
ಶ್ರೀಲಂಕಾ ಪ್ರವಾಸ ಕೈಗೊಂಡ ಭಾರತೀಯ ನೌಕಾಪಡೆಯ ಕ್ಷಿಪಣಿ ವಾಹಕ ನೌಕೆ ಖಂಜಾರ್..

ನವದೆಹಲಿ: ಭಾರತದ ಸ್ವದೇಶಿ ನಿರ್ಮಿತ ಕಾರ್ವೆಟ್ ಖುಕ್ರಿ ಕ್ಲಾಸ್ ಕ್ಷಿಪಣಿ ​ವಾಹಕ ನೌಕೆ ಖಂಜಾರ್​ ಜುಲೈ 29 ರಿಂದ 31ವರೆಗೆ ಟ್ರಿಂಕೋಮಲಿ ಬಂದರಿಗೆ ಭೇಟಿ ನೀಡಲಿದೆ ಎಂದು ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್ ಶನಿವಾರ ತಿಳಿಸಿದೆ. ಈ ಪ್ರದೇಶದಲ್ಲಿ ಕಡಲ ಭದ್ರತೆಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ಶ್ರೀಲಂಕಾ ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸಲು ಭಾರತ ಮತ್ತು ಶ್ರೀಲಂಕಾ ನಡುವಿನ ಸಹಕಾರದ ದೃಷ್ಟಿಯಿಂದ ಕಾರ್ವೆಟ್ ಖುಕ್ರಿ ಕ್ಲಾಸ್ ಕ್ಷಿಪಣಿ ​ವಾಹಕ ನೌಕೆ ಖಂಜಾರ್ ಭೇಟಿಯು ಮಹತ್ವದ್ದಾಗಿದೆ.

ಇದೇ ವೇಳೆ ಭಾರತೀಯ ನೌಕಾಪಡೆಯ ಕಮಾಂಡಿಂಗ್ ಆಫೀಸರ್, ಕಮಾಂಡರ್ ಎನ್​ವಿಎಸ್ ಫಣಿ ಕುಮಾರ್ ಅವರು ಈಸ್ಟರ್ನ್ ನೇವಲ್ ಕಮಾಂಡರ್​ರನ್ನು ಭೇಟಿ ಮಾಡಲಿದ್ದಾರೆ. ಇದಲ್ಲದೇ, ವಿಬಿಎಸ್​ಎಸ್​, ಗನ್ನರಿ ಮತ್ತು ಕ್ಷಿಪಣಿ ಕಾರ್ಯಾಚರಣೆಗಳ ಕುರಿತು ವಿವಿಧ ವೃತ್ತಿಪರರೊಂದಿಗೆ ಸಂವಾದಗಳನ್ನು ನಡೆಸಲಾಗುತ್ತಿದೆ. ಇದಕ್ಕೆ ಮಿಲಿಟರಿ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಆಹ್ವಾನವನ್ನು ನೀಡಲಾಗಿದೆ. ನಂತರ, ಜುಲೈ 31 ರಂದು ಟ್ರಿಂಕೋಮಲಿಯಲ್ಲಿ ಶ್ರೀಲಂಕಾ ನೌಕಾಪಡೆಯ ಹಡಗಿನೊಂದಿಗೆ ಸಾಗರ ಸಹಭಾಗಿತ್ವದ ಜಂಟಿ ಸಮರಭ್ಯಾಸವನ್ನು ಸಹ ಯೋಜಿಸಲಾಗಿದೆ.

ಜನರ ನಡುವಿನ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಭಾರತೀಯ ನೌಕಾಪಡೆಯ ಸಾಮರ್ಥ್ಯಗಳ ಬಗ್ಗೆ ಜನರಿಗೆ ಪರಿಚಯಿಸಲು, ಶಾಲಾ ಮಕ್ಕಳು ಖಂಜಾರ್​ ನೌಕೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಇದಲ್ಲದೇ, ಸಾರ್ವಜನಿಕರಿಗೆ ಜುಲೈ 30 ರಂದು ಟ್ರಿಂಕೋಮಲಿ ಬಂದರಿನಲ್ಲಿ ನೌಕೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಈ ನೌಕೆಯಲ್ಲಿ ಯೋಗ ಸೆಷನ್, ಬೀಚ್ ಕ್ಲೀನಿಂಗ್ ಮತ್ತು ವಿಶೇಷ ತರಗತಿಗಳನ್ನು ಸಹ ನಡೆಸಲಾಗುತ್ತದೆ.

ಹಿಂದೂ ಮಹಾಸಾಗರದಲ್ಲಿರುವ ಟ್ರಿಂಕೋಮಲಿ ಬಂದರು ವ್ಯೂಹಾತ್ಮಕವಾಗಿ ಮಹತ್ವವನ್ನು ಹೊಂದಿದೆ. ಇದು ಭಾರತ, ಜಪಾನ್ ಮತ್ತು ಯುಎಸ್ ಸೇರಿದಂತೆ ಹಲವಾರು ದೇಶಗಳಿಗೆ ಮಹತ್ವದ ಸ್ಥಳವಾಗಿದೆ. ಟ್ರಿಂಕೋಮಲಿ ಬಂದರಿನ ಅಭಿವೃದ್ಧಿಗಾಗಿ 2020ರಲ್ಲಿ ಜಪಾನ್ ಎಡಿಬಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್​ನಿಂದ ಅಧ್ಯಯವನ್ನು ಮಾಡಿಸಿತ್ತು.

ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ವಾಗಿರ್ ಇದೇ ವರ್ಷದ ಜೂನ್ 19 ರಿಂದ 22 ರವರೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲು ಕೊಲಂಬೊಗೆ ಭೇಟಿ ನೀಡಿದ್ದನ್ನು ಸ್ಮರಿಸಬಹುದು. ಶ್ರೀಲಂಕಾಕ್ಕೆ ಭಾರತೀಯ ನೌಕಾಪಡೆಯ ನೌಕೆಗಳ ಭೇಟಿಯು ಭಾರತದ ಸಾಗರ ಪ್ರದೇಶದಲ್ಲಿ ಭದ್ರತೆ ಮತ್ತು ಅಭಿವೃದ್ಧಿ ಸಿದ್ಧಾಂತ ಹಾಗೂ ನೆರೆಹೊರೆಯವರು ಮೊದಲು ನೀತಿಗೆ ಅನುಗುಣವಾಗಿ ಇದು ಉಭಯ ದೇಶಗಳ ನೌಕಾಪಡೆಗಳ ನಡುವಿನ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ.

ಇದನ್ನೂ ಓದಿ:Helicopter ditched off: ಆಸ್ಟ್ರೇಲಿಯನ್ ಮಿಲಿಟರಿ ಹೆಲಿಕಾಪ್ಟರ್ ಪತನ.. ನಾಲ್ವರು ಸಿಬ್ಬಂದಿ ನಾಪತ್ತೆ, ಮುಂದುವರೆದ ಶೋಧ ಕಾರ್ಯ

ಮೀನುಗಾರರನ್ನು ರಕ್ಷಿಸಿ, ಸುರಕ್ಷಿತವಾಗಿ ವಾಪಸ್ ಕರೆತಂದ ಖಂಜಾರ್ ನೌಕೆ:ಮತ್ತೊಂದಡೆ, ತಮಿಳುನಾಡು ಕರಾವಳಿಯಿಂದ ಸುಮಾರು 130 ನಾಟಿಕಲ್ ಮೈಲಿ ದೂರದ ಬಂಗಾಳಕೊಲ್ಲಿಯಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರನ್ನು ಭಾರತೀಯ ನೌಕಾಪಡೆಯ ಹಡಗು ಖಂಜಾರ್​ ಸುರಕ್ಷಿತವಾಗಿ ವಾಪಸ್ ಕರೆತಂದಿದೆ. 30 ಗಂಟೆಗಳಿಗೂ ಹೆಚ್ಚು ಕಾಲ ಖಂಜಾರ್ ಕಾರ್ಯಾಚರಣೆ ನಡೆಸಿ ಮೀನುಗಾರರು ಹಾಗೂ ಮೂರು ಮೀನುಗಾರಿಕಾ ಹಡಗುಗಳನ್ನು ರಕ್ಷಿಸಿದೆ.

ABOUT THE AUTHOR

...view details