ಕರ್ನಾಟಕ

karnataka

ಕೇಂದ್ರದಲ್ಲಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೇರಿದರೆ ದೇಶಕ್ಕೆ ದೊಡ್ಡ ಅಪಾಯ: ಕೇರಳ ಸಿಎಂ ಪಿಣರಾಯಿ ವಿಜಯನ್

By ETV Bharat Karnataka Team

Published : Oct 8, 2023, 9:05 PM IST

ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಮತ್ತು ಸಂಘ ಪರಿವಾರವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್​ ಟೀಕಿಸಿದರು.

ಕೇರಳ ಸಿಎಂ ವಿಜಯನ್
ಕೇರಳ ಸಿಎಂ ವಿಜಯನ್

ಕಣ್ಣೂರು (ಕೇರಳ):ಬಿಜೆಪಿ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶಕ್ಕೆ ದೊಡ್ಡ ಆಪತ್ತು ಎದುರಾಗಲಿದೆ. ನಂತರ ಜನರು ಪಶ್ಚಾತ್ತಾಪ ಪಡುವುದರಲ್ಲಿ ಅರ್ಥವಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಉತ್ತರ ಕೇರಳ ಜಿಲ್ಲೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶದಲ್ಲಿನ ವೈವಿಧ್ಯತೆಯನ್ನು ನಾಶಪಡಿಸಲು ಮತ್ತು ಧರ್ಮದ ಆಧಾರದ ಮೇಲೆ ರಾಷ್ಟ್ರವನ್ನು ರಚಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.

ಗೋವು, ಆಹಾರ ಮತ್ತು ಒಂದು ಕೋಮಿನ ನಾಗರಿಕರನ್ನು ದೇಶದ ಶತ್ರುಗಳೆಂದು ಬಿಂಬಿಸುವ ಮೂಲಕ, ಕೋಮು ಸಂಘರ್ಷಕ್ಕೆ ಕಾರಣವಾಗುತ್ತಿದೆ. ಧರ್ಮ, ಜಾತಿ ಅಥವಾ ಪಂಥದ ಹೊರತಾಗಿ ಪ್ರತಿಯೊಬ್ಬರೂ ಕಾನೂನಿನ ಮುಂದೆ ಸಮಾನ ರಕ್ಷಣೆಗೆ ಅರ್ಹರಾಗಿದ್ದಾರೆ. ಆದರೆ, ಬಿಜೆಪಿ, ಸಂಘಪರಿವಾರ ಅದನ್ನು ಬದಲಾಯಿಸಲು ಹೊರಟಿದೆ ಎಂದು ಕೇರಳ ಸಿಎಂ ಆಪಾದಿಸಿದರು.

ಜನರ ಮನಸ್ಥಿತಿಯೂ ಬದಲಾಗಿದೆ:ಬಿಜೆಪಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಭಯ ಮತ್ತು ಆತಂಕವನ್ನು ಸೃಷ್ಟಿಸಿದೆ. ಹೀಗಾಗಿ ಒಂದು ವೇಳೆ ಬಿಜೆಪಿ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ದೇಶವು ದುಸ್ತರವಾದ ಅಪಾಯವನ್ನು ಎದುರಿಸಲಿದೆ. ನಂತರ ಜನರು ವಿಷಾದ ವ್ಯಕ್ತಪಡಿಸುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ ಎಂದು ಅವರು ಹೇಳಿದರು.

ದೇಶವು ನಿಜ ಏನೆಂಬುದನ್ನ ಅರಿತುಕೊಂಡಿದೆ. ಮುಂದಾಗುವ ಅಪಾಯವನ್ನು ತಪ್ಪಿಸಬೇಕಾಗಿದೆ ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ. ಬಿಜೆಪಿಯನ್ನು ಸೋಲಿಸುವ ಮತ್ತು ಅದು ಮುಂದೆ ಮತ್ತೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವ ಉದ್ದೇಶದಿಂದ ಜಾತ್ಯತೀತ ಮನೋಭಾವದ ಎಲ್ಲ ಪಕ್ಷಗಳು ಒಂದಾಗಿವೆ. ಜನರ ಏಕೀಕೃತ ಕೂಟವನ್ನು ರಚಿಸಲಾಗಿದೆ. ಮೂರನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬರಲಾರೆವು ಎಂಬುದು ಬಿಜೆಪಿಗೂ ಗೊತ್ತಿದೆ ಎಂದರು.

ತನಿಖಾ ಸಂಸ್ಥೆಗಳಿಂದ ದಾಳಿ:ಇತ್ತೀಚೆಗೆ ಕೇಂದ್ರ ಸರ್ಕಾರ ಕೆಲ ಗಂಭೀರ ನಿರ್ಧಾರಗಳನ್ನು ತೆಗೆದುಕೊಂಡ ಬಳಿಕ ಜನರಿಗೆ ಈ ಬಗ್ಗೆ ಅರಿವು ಮೂಡಿದೆ. ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ವಿವಿಧ ಕೇಂದ್ರೀಯ ತನಿಖಾ ಸಂಸ್ಥೆಗಳು ಇತ್ತೀಚೆಗೆ ನಡೆಸಿದ ದಾಳಿಗಳು, ಬದಲಾದ ಪರಿಸ್ಥಿತಿಗಳಿಗೆ ಬಿಜೆಪಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಪ್ರತೀಕ ಎಂದು ಸಿಎಂ ವಿಜಯನ್ ಅಭಿಪ್ರಾಯಪಟ್ಟರು.

ಇಂಥದ್ದೇ ಇನ್ನಷ್ಟು ಕ್ರಮಗಳು ಮುಂದೆ ಜರುಗಬಹುದು. ಹೀಗಾಗಿ ಜನರು ಬಿಜೆಪಿಯನ್ನು ತಿರಸ್ಕರಿಸಲು ಮನಸ್ಸು ಮಾಡಿದ್ದಾರೆ. ಬಿಜೆಪಿಯ ಮನಸ್ಥಿತಿಯನ್ನು ಬದಲಿಸಲು ಸಾಧ್ಯವಿಲ್ಲ. ಕೋಮು ಪಕ್ಷಗಳನ್ನು ಸೋಲಿಸಲು ಏಕೀಕೃತ ರಂಗವು ಪ್ರಬಲವಾಗಿದೆ. ಅದನ್ನು ಮತ್ತಷ್ಟು ಬಲಗೊಳಿಸಬೇಕಿದೆ ಎಂದು ಕೇರಳ ಸಿಎಂ ಹೇಳಿದರು.

ಇದನ್ನೂ ಓದಿ:10, 12 ನೇ ಕ್ಲಾಸ್​ ವಿದ್ಯಾರ್ಥಿಗಳಿಗೆ ಎರಡು ಮುಖ್ಯ ಪರೀಕ್ಷೆ ಕಡ್ಡಾಯವಲ್ಲ: ಕೇಂದ್ರ ಶಿಕ್ಷಣ ಸಚಿವ ಪ್ರಧಾನ್​

ABOUT THE AUTHOR

...view details