ಕರ್ನಾಟಕ

karnataka

Raj Thackeray: 'ಬಿಜೆಪಿ ಸೇರಲು ಆಹ್ವಾನ ಬಂದಿತ್ತು'- ಎಂಎನ್​ಎಸ್​ ಮುಖ್ಯಸ್ಥ ರಾಜ್​ ಠಾಕ್ರೆ

By

Published : Aug 14, 2023, 7:24 PM IST

MNS chief Raj Thackeray: ತಮಗೆ ಬಿಜೆಪಿಯಿಂದ ಪಕ್ಷ ಸೇರ್ಪಡೆಯ ಆಹ್ವಾನ ಬಂದಿತ್ತು ಎಂದು ಎಂಎಸ್​ಎಸ್​ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.

'I got offer to join BJP', confirms MNS chief Raj Thackeray
'I got offer to join BJP', confirms MNS chief Raj Thackeray

ಮುಂಬೈ : ಬಿಜೆಪಿ ಸೇರಲು ತಮಗೆ ಪಕ್ಷ ಆಹ್ವಾನ ನೀಡಿತ್ತು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಅಧ್ಯಕ್ಷ ರಾಜ್ ಠಾಕ್ರೆ ಸೋಮವಾರ ದೃಢಪಡಿಸಿದ್ದಾರೆ. ಪಕ್ಷದ ಸಭೆಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ ಅವರ ಸೋದರಸಂಬಂಧಿ ರಾಜ್ ಠಾಕ್ರೆ, ಯಾರು ಯಾವಾಗ ಈ ಪ್ರಸ್ತಾಪ ಮಾಡಿದ್ದರು ಎಂಬುದನ್ನು ಮಾತ್ರ ಬಹಿರಂಗಪಡಿಸಲಿಲ್ಲ.

ಆದರೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆ ಬಣ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್​ಸಿಪಿ) ಗುಂಪು ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರದ ಶಿವಸೇನೆ-ಬಿಜೆಪಿ ಸರ್ಕಾರದ ಭಾಗವಾಗಿರುವುದರಿಂದ ತಾವು ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ತಿಳಿಸಿದರು.

"ಶಿಂಧೆ ಮತ್ತು ಅಜಿತ್ ಪವಾರ್ ಸರ್ಕಾರದ ಭಾಗವಾಗಿರುವಾಗ ಅಜಿತ್ ಪವಾರ್ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸದ ಕಾರಣ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ನನಗೆ ಸಾಧ್ಯವಾಗಲಿಲ್ಲ" ಎಂದು ರಾಜ್ ಠಾಕ್ರೆ ಹೇಳಿದರು. ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್ ಅವರ ಆಶೀರ್ವಾದದೊಂದಿಗೆ ಅಜಿತ್ ಪವಾರ್ ಬಿಜೆಪಿಗೆ ಹೋಗಿದ್ದಾರೆ ಮತ್ತು ಶೀಘ್ರದಲ್ಲೇ ಎನ್​ಸಿಪಿಯ ಉಳಿದ ಬಣವೂ ಅಜಿತ್ ಪವಾರ್ ಅವರೊಂದಿಗೆ ಸೇರಲಿದೆ ಎಂದು ಅವರು ಪ್ರತಿಪಾದಿಸಿದರು.

2014 ರಿಂದ ಶರದ್ ಪವಾರ್ ಯಾವಾಗಲೂ 'ನರೇಂದ್ರ ಮೋದಿ ಪರ' ನಿಲುವನ್ನು ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಅಜಿತ್ ಪವಾರ್ ಗುಂಪಿನ ನಂತರ ಶರದ್ ಪವಾರ್ ಬಣವೂ ರಾಜ್ಯ ಸರ್ಕಾರದ ಭಾಗವಾಗಲಿದೆ ಎಂದು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ನುಡಿದರು.

ಆಡಳಿತಾರೂಢ ಶಿವಸೇನೆ ಮುಖಂಡ ಸಂಜಯ್ ಶಿರ್ಸಾಟ್​ ಮತ್ತು ಇತರ ಹಲವಾರು ಮುಖಂಡರು ಬಿಜೆಪಿ ಪ್ರಸ್ತಾಪದ ಬಗ್ಗೆ ರಾಜ್ ಠಾಕ್ರೆ ಅವರ ಹೇಳಿಕೆಗಳನ್ನು ಸ್ವಾಗತಿಸಿದ್ದು, ರಾಜ್ ಠಾಕ್ರೆ ಬಿಜೆಪಿಗೆ ಬಂದರೆ ಅದು ಎಂಎನ್ಎಸ್ ಮತ್ತು ಅಧಿಕಾರದಲ್ಲಿರುವ ಮೂರು ಪಕ್ಷಗಳ ಮೈತ್ರಿಕೂಟಕ್ಕೆ ಪ್ರಯೋಜನಕಾರಿಯಾಗಲಿದೆ ಎಂದಿದ್ದಾರೆ. ಆದರೆ ಶರದ್ ಪವಾರ್ ಅವರ ಮೊಮ್ಮಗ ಎನ್​ಸಿಪಿ ಶಾಸಕ ರೋಹಿತ್ ಪವಾರ್ ರಾಜ್​ ಠಾಕ್ರೆ ಅವರ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ.

2024 ರ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳ ತಯಾರಿಯ ಬಗ್ಗೆ ಪಕ್ಷದ ಕಾರ್ಯಕರ್ತರು ಮತ್ತು ನಾಯಕರನ್ನು ಉದ್ದೇಶಿಸಿ ಮಾತನಾಡಿದ್ದೇನೆ ಎಂದ ಅವರು, ರಾಜ್ಯದ ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ನೋಡಿದರೆ ಚುನಾವಣೆಗಳು ಶೀಘ್ರದಲ್ಲೇ ನಡೆಯುವ ಸಾಧ್ಯತೆ ಕಾಣುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ರಾಜ್ ಠಾಕ್ರೆ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರೂ ಅವರು ಯಾವುದೇ ಸದನದ ಸದಸ್ಯರಾಗಿಲ್ಲ. ಅವರ ರಾಜಕೀಯ ಪಕ್ಷ ಎಂಎನ್​ಎಸ್​ ಮರಾಠಾ ಪರ ಎಂದು ಗುರುತಿಸಿಕೊಂಡಿದೆ. ರಾಜ್ ಠಾಕ್ರೆ ಮಹಾರಾಷ್ಟ್ರದ ಜನರ ಹಕ್ಕುಗಳ ಬಗ್ಗೆ ಧ್ವನಿ ಎತ್ತಿದ್ದಾರೆ. 2012 ರಲ್ಲಿ ಬಾಳ್ ಠಾಕ್ರೆ ನಿಧನರಾದಾಗ, ಎಂಎನ್ಎಸ್ ಶಿವಸೇನೆಯೊಂದಿಗೆ ಒಗ್ಗಟ್ಟಿನಿಂದ ನಿಂತಿತ್ತು.

ಇದನ್ನೂ ಓದಿ : Inflation: ಆಹಾರ ವಸ್ತುಗಳ ಬೆಲೆಯೇರಿಕೆಯಿಂದ ಚಿಲ್ಲರೆ ಹಣದುಬ್ಬರ ಶೇ 7.44ಕ್ಕೆ ಏರಿಕೆ!

ABOUT THE AUTHOR

...view details